ಜೀವನದಲ್ಲಿ ಪ್ರತಿ ದಿನವೂ ಪ್ರತಿ ಕ್ಷಣವೂ ಹೊಸದೇ…
ನಮ್ಮೆಲ್ಲರದು ಹೋರಾಟದ ಬದುಕು. ಇದು ನಮಗೆ ಮಾತ್ರವಲ್ಲ ಸಕಲ ಜೀವರಾಶಿಗಳಿಗೂ ಅನ್ವಯ ಕಾಡಿನಲ್ಲಿ ಪ್ರಾಣಿಗಳು ಸಮುದ್ರದಲ್ಲಿ ಮೀನುಗಳು ಒಂದನ್ನೊಂದು ತಿಂದು ಬದುಕುವಂತೆ ಎಲ್ಲವೂ ತಮ್ಮ ತಮ್ಮ ಉಳಿವಿಗಾಗಿ ಒಂದಲ್ಲ ಒಂದು ವಿಧದಲ್ಲಿ ಹೋರಾಟವನ್ನು ನಡೆಸುತ್ತಲೇ ಇರಬೇಕಾಗುತ್ತದೆ. ಪ್ರಾಣಿಗಳು ಆಹಾರಕ್ಕಾಗಿ, ತನ್ನನ್ನು ತಾನು ಉಳಿಸಿಕೊಳ್ಳುವುದಕ್ಕಾಗಿ ಮಾತ್ರ. ಹೋರಾಟ ಮಾಡಬೇಕಾಗುತ್ತದೆ. ಅಷ್ಟೇ ಏಕೆ ದೇವಾನುದೇವತೆಗಳೂ ಹೋರಾಟದಿಂದ ಹೊರತಾಗಿರಲಿಲ್ಲ. ಧರ್ಮ ಸ್ಥಾಪನೆಗಾಗಿ ಶ್ರೀಮಹಾವಿಷ್ಣುವು ಭಗವಾನ್ ಶ್ರೀಕೃಷ್ಣ, ಶ್ರೀರಾಮ ಮುಂತಾದ ನಾನಾ ಅವತಾರಗಳನ್ನೆತ್ತಿ ಹೋರಾಟ ಮಾಡಿದರು. ಮಹಾತ್ಮಾ ಗಾಂಧಿ ಸ್ವಾತಂತ್ರ್ಯಕ್ಕಾಗಿ ನೆಲ್ಸನ್ ಮಂಡೇಲಾ ವರ್ಣಭೇದ ತೊಲಗಿಸಲು ಹೀಗೆ ಸಾಕಷ್ಟು ಮಹಾನ್ ವ್ಯಕ್ತಿಗಳು ತಮ್ಮ ಹೋರಾಟದಿಂದ ಸಹಸ್ರಾರು ಜನರಿಗೆ ಬದುಕು ನೀಡಿದ್ದಾರೆ. ಕಷ್ಟಪಟ್ಟು ತಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳುವುದರ ಜತೆಗೆ ಇತರರ ಬದುಕಿಗೂ ಆಧಾರ ಕಲ್ಪಿಸಿದ್ದಾರೆ.
ನಾವು ಹುಟ್ಟಿನಿಂದ ಸಾಯುವವರೆಗೂ ನಾನಾ ಬಗೆಯ ಹೋರಾಟ ಮಾಡಬೇಕಾಗುತ್ತದೆ. ಈಗ ತಾನೇ ಜನ್ಮ ತಾಳಿದ ಮಗುವೂ ಸಾವು-ಬದುಕಿನ ನಡುವೆ ಹೋರಾಟ ಆರಂಭಿಸುತ್ತದೆ. ಅನಂತರ ಊಟ ಪಾಠ, ಅಟಗಳಲ್ಲೂ ಹೋರಾಟ ತರಗತಿಯಲ್ಲಿ ಹೆಚ್ಚು ಅಂಕ ಪಡೆಯಬೇಕು, ಆಟದಲ್ಲಿ ಮೆಡಲ್ ಪಡೆಯಬೇಕು, ಓದಿ ಒಳ್ಳೆಯ ಉದ್ಯೋಗ ಪಡೆಯಬೇಕು. ಮನೆ ಕಟ್ಟಬೇಕು, ಮದುವೆ ಆಗಬೇಕು. ಹೀಗೆ ಬದುಕಿನ ಎಲ್ಲಾ ಘಟ್ಟಗಳಲ್ಲೂ ವಿಧ ವಿಧವಾದ ಹೋರಾಟಗಳು ಎಲ್ಲರ ಅನುಭವಕ್ಕೆ ಬಂದೇ ಬರುತ್ತವೆ. ಹೋರಾಟದಲ್ಲಿ ಸಫಲನಾಗದಿದ್ದರೆ ಹತಾಶೆ, ಬೇಸರ ಸಹಜ, ಉದಾಹರಣೆಗೆ ಉನ್ನತ ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ಸಾಕಷ್ಟು ಅಲೆದು, ಕೆಲಸ ದೊರೆಯದೇ ಇದ್ದಾಗ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವವರು ಇದ್ದಾರೆ. ಅದರ ಬದಲು ಉದ್ಯೋಗ ಸಿಗದಿದ್ದರೆ ಏನಂತೆ, ಸ್ವಉದ್ಯೋಗ ಮಾಡಬಲ್ಲೆ ಎಂದು ಉದ್ಯೋಗ ಪಡೆಯುವ ಹೋರಾಟಕ್ಕೆ ತಿರುವು ನೀಡಿದರೆ, ಮುಂದೊಂದು ದಿನ ಹತ್ತಾರು ಜನರಿಗೆ ಉದ್ಯೋಗ ನೀಡಬಲ್ಲ ಉದ್ಯಮಿ ಆದರೂ ಆಗಬಹುದು ಅಲ್ಲವೇ…?
ಕತ್ತಲು ಕಳೆದು ಬೆಳಕು ಬರುವಂತೆ, ನೋವು ಕಳೆದು ನಲಿವು ಪಡೆವಂತೆ, ಬದುಕಿನಲ್ಲಿ ಎದುರಾಗುವ ಅಡೆ-ತಡೆ. ಕಷ್ಟನಷ್ಟಗಳಿಗೆ ಹೆದರದೆ ಭರವಸೆಯೆಂಬ ಬೆಳಕಿನೊಂದಿಗೆ ಮುನ್ನಡೆಯಬೇಕು. ಇನ್ನೇನು ಕ್ಯಾಲೆಂಡರ್ ಹೊಸ ವರ್ಷ ಆರಂಭವಾಗುತ್ತಲಿದೆ. ಬಹುತೇಕ ಎಲ್ಲರೂ ಒಂದೊಂದು ಧೈಯ, ಉದ್ದೇಶ, ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಅವುಗಳನ್ನೆಲ್ಲ ಸಾಧಿಸುವವರೆಗೆ ವಿರಮಿಸದಿರೋಣ, ಪ್ರಯತ್ನವನ್ನು ಮುಂದುವರಿಸೋಣ. ಬದುಕಿನ ಪಯಣದಲ್ಲಿ ಅನಿರೀಕ್ಷಿತವಾಗಿ ಎದುರಾಗುವ ಸಮಸ್ಯೆ, ಜಂಜಾಟ, ದುಃಖಗಳಿಗೆ ಕುಗ್ಗದೆ ಕಷ್ಟ-ಸುಖ, ನೋವು-ನಲಿವು ಕಾಲಚಕ್ರದಂತೆ ಉರುಳುತ್ತಲೇ ಇರುತ್ತವೆ ಎಂದು ಭಾವಿಸಬೇಕು. ಯಾಕೆಂದರೆ ನಮ್ಮ ಬದುಕಿನ ಪಥ ನಾವೆಣಿಸಿದಂತೆ ಹೀಗೆಯೇ ಸಾಗುತ್ತದೆ ಎಂದು ಹೇಳಲಾಗದು. ಹೇಗೆ ಸಾಗಬಹುದು ಎಂದು ಕಲ್ಪಿಸಿಕೊಳ್ಳಲೂ ಆಗದು. ಇಂದು ಅಳಾದವ ಅರಸನಾಗಬಹುದು, ಅಥವಾ ಅರಸನಾಗಿದ್ದವ ಆಳೂ ಆಗಬಹುದು. ಅದನ್ನೇ ಡಿ.ವಿ.ಜಿ.ಯವರು ಕವನದಲ್ಲಿ ಹೇಳಿದ್ದಾರೆ.
ಆವ ಕಡೆ ಹಾರುವುದೊ! ಅವ ಕಡೆ ತಿರುಗುವುದೊ ಆವಾಗಳಾವಕಡೆಗೆರಗುವುದೊ ಹಕ್ಕಿ! ನಾವುಮಂತೆಯೆ ಸೃಷ್ಟಿಕೃತ್ರಿಮದ ಕೈಗೊಂಬೆ! ಜೀವಮಾರ್ಗವನೂಹ್ಯ | ಮಂಕುತಿಮ್ಮ ||
ಆಕಾಶದಲ್ಲಿ ಹಾರುವ ಹಕ್ಕಿ ಯಾವ ಕ್ಷಣದಲ್ಲಿ ಯಾವ ಕಡೆಗೆ ಹಾರುವುದು ಎಂದು ತಿಳಿಯುವುದಿಲ್ಲ, ಎತ್ತ ಕಡೆಗೆ ತಿರುಗುವುದೋ ಗೊತ್ತಾಗುವುದಿಲ್ಲ. ಹಾರುತ್ತಲೇ ಹೇಗೆ ನೆಲಕ್ಕಿಳಿಯುವುದೋ ಎಂದು ಕೂಡ ಗೊತ್ತಾಗುವುದಿಲ್ಲ. ನಮ್ಮ ಬದುಕೂ ಹಾಗೆಯೇ. ಯಾವಾಗ ಖುಷಿಯಿಂದ ಇರುತ್ತೇವೆ. ಯಾವಾಗ ಅಳುತ್ತೇವೆ, ಯಾವಾಗ ಸುಖ ಬರುತ್ತದೆ, ಯಾವಾಗ ದುಃಖ ಬರುತ್ತದೆ ಎಂದು ಹೇಳಲಾಗದು. ಎಲ್ಲವೂ ವಿಧಿಲಿಖಿತದಂತೆ ನಡೆಯುವುದು. ನಮ್ಮ ಬದುಕಿನಲ್ಲಿ ಏನೆಲ್ಲ ಘಟಿಸುವುದು ಎಂದು ಅರಿಯದಿರುವ ನಾವೂ ಸೊತ್ತದ ಬೊಂಬೆಯಂತೆ ಎನ್ನುತ್ತಾ ವಾಸ್ತವ ಸಂಗತಿಯನ್ನು ತಿಳಿಸಿದ್ದಾರೆ.
ಬೆಳಗಾದರೆ ಸಾಕು, ಹಸಿವನ್ನು ನೀಗಿಕೊಳ್ಳಲು ಆಹಾರ ಹುಡುಕುತ್ತಾ ಹಾರಬೇಕು. ಬೇಟೆಗಾರನ ಬಲೆಗೋ, ಕಳ್ಳ ಬೆಕ್ಕಿಗೋ ಅಹಾರವೂ ಆಗಬಹುದು, ಎಷ್ಟು ದೂರ ಸಾಗಿದರೂ ಒಂದು ಕಾಳು ಕೂಡ ಸಿಗದೇ ಹೋಗಬಹುದು, ಎಲ್ಲಿಗೆ ಹಾರುವುದು ಎಂದು ಮೊದಲೇ ನಿರ್ಧರಿಸಿರುವುದಿಲ್ಲ ಅದು ಒಟ್ಟಾರೆಯಾಗಿ ಹೊಟ್ಟೆಪಾಡಿಗಾಗಿ ಹಾರಲೇಬೇಕಾದ ಪರಿಸ್ಥಿತಿ ಅದರದ್ದು ನಮ್ಮದೂ ಹಾಗೆಯೇ ನಾವು ಹಾಕಿದ ಲೆಕ್ಕಾಚಾರಗಳೆಲ್ಲ ಒಮ್ಮೊಮ್ಮೆ ಬುಡಮೇಲಾಗುವುದು. ಇನ್ನೊಮ್ಮೆ ನಾವು ಊಹಿಸಿದ್ದಕ್ಕಿಂತಲೂ ಉತ್ತಮ ರೀತಿಯಲ್ಲಿ ನಡೆಯುವುದು. ಏನೇ ಆದರೂ ಬದುಕಂತೂ ಮುನ್ನಡೆದೇನಡೆಯುತ್ತದೆ. ನನ್ನ ಬದುಕು ಹಾಗಿರಬೇಕು. ಹು ಹೀಗಿರಬೇಕು ಎಂದು ಆಸೆ ಪಡುತ್ತೇವೆ. ಅಸೆಯನ್ನು ಈಡೇರಿಸಿಕೊಳ್ಳಲೂ ಪ್ರಯತ್ನಿಸುತ್ತೇವೆ. ಆಗ ಉಂಟಾಗುವ ತೊಂದರೆ- ತಾಪತ್ರಯಗಳಿಗೆ ಅಂಜಿ ಅನೇಕರು ಆಸೆಗೆ ತಣ್ಣೀರು ಎರಚುತ್ತಾರೆ. ಕೆಲವೇ ಕೆಲವರು ಎಷ್ಟು ತೊಂದರೆಗಳಾದರೂ ತಾಳ್ಮೆ ವಹಿಸಿ, ಪ್ರಯತ್ನವನ್ನು ಬಿಡದೆ ತಮ್ಮ ಆಸೆಯನ್ನು ಈಡೇರಿಸಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಮುಖ್ಯವಾಗುವುದು ಭರವಸೆ.
ಅದಕ್ಕಾಗಿಯೇ ಹಿರಿಯರು ಭರವಸೆಯೇ ಬದುಕು ಎಂದಿದ್ದಾರೆ
ನಾಳೆ ನಾವು ಬದುಕುತ್ತೇವೆ, ಕುಟುಂಬದೊಂದಿಗೆ ಸಂಸಾರ ಮಾಡುತ್ತೇವೆ ಎಂಬ ಭರವಸೆಯಿಂದಲೇ ನಾವೆಲ್ಲ ದುಡಿಮೆಯ ಒಂದಷ್ಟು ಅಂಶವನ್ನು ನಾಳೆಗಾಗಿ ಕೂಡಿಡುವುದು, ಪುಟ್ಟದಾದರೂ ಸುಂದರವಾದ ಮನೆ ಕಟ್ಟಿಕೊಳ್ಳುವುದು, ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡುವುದು. ನಾಳೆಗಾಗಿ ಯೋಜನೆಯನ್ನು ರೂಪಿಸಿಕೊಳ್ಳುವುದು ಸಹಜ ಸಂಗತಿ.
ಭಗವಂತ ನಮಗೆಲ್ಲರಿಗೂ ನೀಡಿರುವ ಅಮೂಲ್ಯ ಉಡುಗೊರೆಯೇ ಬದುಕು. ಪ್ರತಿಯೊಬ್ಬರ ಜೀವನವೂ ಭಿನ್ನ-ಭಿನ್ನ. ಕಷ್ಟಗಳಲ್ಲಿ ಕುಗ್ಗುವಾಗ, – ನೋವಿನಲ್ಲಿ ಅಳುವಾಗ ಭರವಸೆ ಎಂಬುದು ಬೆಳಕಿನಂತೆ ಸದಾ ನಮ್ಮ ಬಾಳಿಗೆ ದಾರಿದೀಪವಾಗಿದೆ. ಇಂದು ಇಲ್ಲದಿದ್ದರೆ ನಾಳೆಯಾದರೂ ಮಗ ಚೆನ್ನಾಗಿ ಓದುವನು, ಮಗಳಿಗೆ ಮಗು ಹುಟ್ಟಬಹುದು, ಇರಲೊಂದು ಸೂರು ಕಟ್ಟಿಕೊಳ್ಳಬಲ್ಲೆನು ಎಂಬಿತ್ಯಾದಿ ಭರವಸೆಯ ಮಾತುಗಳು ಜೀವನವನ್ನು ಮುನ್ನಡೆಸಲು ಪ್ರೇರೇಪಿಸುವುದು. ಬದುಕಲು ಗಾಳಿ, ನೀರು, ಅನ್ನ-ಆಹಾರದಂತೆ ಭರವಸೆಯೂ ಮುಖ್ಯವಾಗುತ್ತದೆ.
ಒಮ್ಮೆ ಮಳೆಗಾಲ ಬಂದರೂ ಮಳೆಯ ಸುಳಿವೇ ಇರಲಿಲ್ಲ. ಆಗ ಹಿರಿಯರೆಲ್ಲ ‘ಊರ ದೇವಸ್ಥಾನಕ್ಕೆ ಹೋಗಿ ಎಲ್ಲರೂ ಮಳೆಗಾಗಿ ಪ್ರಾರ್ಥಿಸೋಣ’ ಎಂದರು. ಆಗಲಿ ಎಂದು ಊರಿನ ಎಲ್ಲಾ ಜನರು ಒಟ್ಟಾಗಿ ದೇವಸ್ಥಾನದ ಬಳಿ ಸೇರಿದರು.
ಆಗ ಒಬ್ಬ ಸಣ್ಣ ಹುಡುಗಿ ತನ್ನ ಜತೆ ಕೊಡೆ ತಂದಿರುವುದನ್ನು ಗಮನಿಸಿದ ಹಿರಿಯರೊಬ್ಬರು ‘ಯಾಕವ್ವಾ.. ಬಿಸಿಲು ಅಂತ ಕೊಡೆ ತಂದಿದ್ದೀಯಾ’ ಅಂದಾಗ, ‘ಊಹುಂ. ನಾವೆಲ್ಲ ಪ್ರಾರ್ಥನೆ ಮಾಡಿದ ಮೇಲೆ ಮಳೆ ಬರುತ್ತಲ್ವಾ… ಆಗ ಒದ್ದೆಯಾಗಬಾರದು ಅಂತ ಕೊಡೆ ತಂದಿದ್ದೇನೆ’ ಎಂದಳು. ಭರವಸೆಯೆಂದರೆ ಅದು.
ಜೀವನದಲ್ಲಿ ಮುನ್ನಡೆಯುವಾಗ ನಾನಾ ಕಷ್ಟ-ನಷ್ಟಗಳು ಎದುರಾಗಬಹುದು. ಅವುಗಳಿಗೆ ಅಂಜಿ ನಮ್ಮ ಪ್ರಯತ್ನವನ್ನು, ಕೆಲಸವನ್ನು ಅರ್ಧದಲ್ಲಿಯೇ ಕೈ ಬಿಟ್ಟರೆ ನಷ್ಟ ನಮಗೆಯೇ. ಎಷ್ಟೇ ನಷ್ಟಗಳಾದರೂ ಆಶಾಭಾವದಿಂದ, ಭರವಸೆಯಿಂದ ಮುನ್ನಡೆಯುವುದನ್ನು ಕಲಿಯಬೇಕು. ನಮಗೆ ನಾವು ಭರವಸೆಯನ್ನು ತುಂಬಿಕೊಳ್ಳುವುದರ ಜತೆಗೆ ನೊಂದವರ, ಬೆಂದವರ ಬಾಳಿಗೂ ಭರವಸೆಯನ್ನು ತುಂಬುವ ಕಾರ್ಯ ಹೆಚ್ಚಾಗಬೇಕು. ಸುಖ ಬಂದಾಗ ದೇವರ ಬಳಿ ಹೋಗಿ ಪ್ರಾರ್ಥನೆ ಸಲ್ಲಿಸುವುದು ತಡವಾದರೂ ಆಗಬಹುದು, ಆದರೆ ಕಷ್ಟ, ದುಃಖವಾದಾಗ ತಕ್ಷಣ ದೇವರ ಬಳಿ ಹೋಗಿ ಸಂಕಷ್ಟವನ್ನು ತೋಡಿಕೊಳ್ಳುತ್ತೇವೆ. ದೇವರೇ ನಮ್ಮನ್ನು ಸಂಕಷ್ಟದಿಂದ ಪಾರು ಮಾಡು ಎಂದು ಬೇಡಿಕೊಳ್ಳುತ್ತೇವೆ. ಎಲ್ಲವನ್ನೂ ದೇವರ ಮಡಿಲಿಗೆ ಹಾಕಿ, ಎಲ್ಲವನ್ನೂ ಭಗವಂತ ನೋಡಿಕೊಳ್ಳುತ್ತಾನೆ, ಕಷ್ಟದಿಂದ ಪಾರು ಮಾಡುತ್ತಾನೆ ಎಂಬ ಭರವಸೆಯಿಂದ ಇರುತ್ತೇವೆ. ಕಷ್ಟಗಳನ್ನು ಎದುರಿಸುತ್ತೇವೆ.
ಶ್ರದ್ಧಾಕೇಂದ್ರಗಳು ಭಕ್ತಿ-ಪೂಜೆಗೆ ಮಾತ್ರವಲ್ಲ. ನಮ್ಮ ಬದುಕಿಗೆ ಭರವಸೆ ತುಂಬಿ, ಧೈರ್ಯ, ಶಾಂತಿ, ನೆಮ್ಮದಿಯನ್ನು ಕರುಣಿಸಿ ಬದುಕನ್ನು ಹಸನುಗೊಳಿಸುವಂಥವು. ಪುಣ್ಯ ಕ್ಷೇತ್ರದ ತೀರ್ಥ ಪ್ರಸಾದ ಪಡೆದಾಗ, ಅಲ್ಲಿನಪುಷ್ಕರಣಿ, ನದಿಯಲ್ಲಿ ತೀರ್ಥ ಸ್ನಾನ ಮಾಡಿದಾಗ ಮನಸ್ಸಿಗೆ ಹಾಯೆನಿಸಿ ಕಷ್ಟಗಳೆಲ್ಲ ಕೊಚ್ಚಿ ಹೋದಂತೆ ಭಾಸವಾಗುವುದು. ಏನೇ ಕಷ್ಟ ಬರಲಿ ದೇವರು ನನ್ನೊಂದಿಗೆ ಇದ್ದಾನೆ, ಎದುರಿಸುತ್ತೇನೆ ಎಂದು ಆತ್ಮವಿಶ್ವಾಸ ಮೂಡುವುದು. ಹೀಗೆ ವಿವಿಧ ರೀತಿಯಲ್ಲಿ ಕ್ಷೇತ್ರಗಳು ನಂಬಿ ಬಂದವರ ಬಾಳಿಗೆ ಭರವಸೆಯ ಬೆಳಕಾಗಿ ದಾರಿ ತೋರುತ್ತವೆ.
ನಮ್ಮ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದಲ್ಲಿ ಅಭಯದಾನ ಪದ್ದತಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇಲ್ಲಿ ಕ್ಷೇತ್ರದ ಧರ್ಮಾಧಿಕಾರಿಯಾದ ಹೆಗ್ಗಡೆ ಪೀಠದಲ್ಲಿರುವವರು ನಂಬಿ ಬಂದವರಿಗೆ ಅಭಯ ನೀಡುತ್ತಾರೆ. ನೊಂದು ಬಂದವರಿಗೆ ಸಾಂತ್ವನ ನೀಡುತ್ತಾರೆ. ಸಂತೋಷ ಹಂಚುತ್ತಾರೆ. ದುಃಖ, ಕಷ್ಟಗಳು ದೂರವಾಗುವುದು, ಧೈರ್ಯದಿಂದಿರಿ ಎಂದು ಭರವಸೆ ತುಂಬುತ್ತಾರೆ. ನಾನು ಧರ್ಮಾಧಿಕಾರಿಯಾದ ಬಳಿಕ ಈ ಅಭಯದಾನವನ್ನು ದೈವ ಸಂಕಲ್ಪದಂತೆ ಮುಂದುವರಿಸಿಕೊಂಡು ಬಂದೆ. ನಿತ್ಯವೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಭೇಟಿಯಾಗುತ್ತಾರೆ. ತಮ್ಮ ಕಷ್ಟ-ಸುಖ ಹಂಚಿಕೊಳ್ಳುತ್ತಾರೆ. ಪರಿಹಾರ, ಮಾರ್ಗದರ್ಶನ ಕೇಳುತ್ತಾರೆ. ಎಲ್ಲವನ್ನೂ ಆಲಿಸಿ ಶ್ರೀ ಸ್ವಾಮಿ ಇಚ್ಛೆ ಎಂದು ಸಂತೈಸಿ, ಧೈರ್ಯ ತುಂಬಿ ಕಳುಹಿಸಿಕೊಡುತ್ತೇನೆ.
ಒಮ್ಮೆ ದೂರದ ಊರಿಂದ ಕುಟುಂಬವೊಂದು ಬಂದಿತ್ತು. ನನ್ನನ್ನು ಭೇಟಿಯಾಗಿ ‘ಸ್ವಾಮೀ, ನಮ್ಮನ್ನು ನೀವೇ ಕಾಪಾಡಬೇಕು. ಊರಲ್ಲಿ ನಮಗೆ ಉಳಿಗಾಲವಿಲ್ಲ. ಯಾರೋ ಮಾಟ-ಮಂತ್ರ ಮಾಡಿದ್ದಾರೆ. ಅದರಿಂದಾಗಿ ಮನೆಯಲ್ಲಿ ನೆಮ್ಮದಿಯೇ ಇಲ್ಲ. ಗಂಡ ದಿನಾ ಕುಡಿದು ಬಂದು ಹೊಡಿತಾನೆ. ಬಡಿತಾನೆ. ಊಟ ಕೊಟ್ಟರೆ ಬಟ್ಟಲನ್ನೇ ನಮ್ಮ ಮೇಲೆ ಎಸೆಯುತ್ತಾನೆ. ಅಲ್ಲಿ-ಇಲ್ಲಿ ಹೋಗಿ ತಾಯತ, ನೂಲು ಕಟ್ಟಿಸಿ ಆಯಿತು, ಗಂಡ ಇನ್ನೂ ಸರಿ ಹೋಗಿಲ್ಲ. ನೀವೇ ಏನಾದರೂ ದಾರಿ ತೋರಿಸಬೇಕು’ ಎಂದು ಹೆಂಗಸು ಕಣ್ಣೀರಿಡುತ್ತಾ ಹೇಳಿದಳು.
‘ಬಳಿಕ ಆಕೆಯ ಗಂಡನನ್ನು ಮಾತನಾಡಿಸಿದೆ. ಏನು ಕೆಲಸ, ದುಡಿಮೆ ಹಣ, ಖರ್ಚು ಇತ್ಯಾದಿ ವಿಚಾರಿಸಿದಾಗ ಸಾಕಷ್ಟು ವಿಚಾರಗಳು ತಿಳಿಯಿತು. ಆತ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ದಿನವೂ 300ರಿಂದ 400 ರೂ.ವರೆಗೆ ಹಣ ದೊರೆಯುತ್ತಿತ್ತು.
ಶ್ರಮದ ದುಡಿಮೆಯಾದ್ದರಿಂದ ಮೈ-ಕೈ ನೋವೆಂದು ಸಂಜೆ ವೇಳೆ ಮದ್ಯ ಸೇವನೆ ಮಾಡಲಾರಂಭಿಸಿದ್ದು ಮುಂದೆ ಅದು ಚಟವಾಗಿತ್ತು. ಮದ್ಯ ಸೇವನೆಯಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಹೆಂಡತಿ, ಮಕ್ಕಳನ್ನು ಹೊಡೆದು-ಬಡಿದು ಮಾಡುತ್ತಿದ್ದ ಎಂದೆಲ್ಲ ತಿಳಿದು ಬಂತು. ಆಮೇಲೆ ಹೆಂಗಸನ್ನು ಉದ್ದೇಶಿಸಿ, ‘ನೋಡಮ್ಮಾ ನಿಮ್ಮ ಮನೆಗೆ ಯಾವ ಭೂತ-ಪ್ರೇತದ ಬಾಧೆ ಇಲ್ಲ. ಮೂಢನಂಬಿಕೆಯನ್ನು ಮುಂದಿಟ್ಟುಕೊಂಡು ಹಣ ಮಾಡುತ್ತಿದ್ದಾರಷ್ಟೇ. ಮದ್ಯವರ್ಜನ ಶಿಬಿರಕ್ಕೆ ಗಂಡನನ್ನು ಸೇರಿಸು. ಆಮೇಲೆ ಬಂದು ಕಾಣು’ ಎಂದು ಹೇಳಿ ಕಳುಹಿಸಿದೆ. ಅದಾದ ಬಳಿಕ ಏಳೆಂಟು ತಿಂಗಳ ನಂತರ ಅದೇ ಕುಟುಂಬ ನನ್ನ ಎದುರು ಬಂದು ನಿಂತಿತ್ತು. ಮುಖದಲ್ಲಿ ನೆಮ್ಮದಿಯ ಕಳೆ ಕಾಣುತ್ತಿತ್ತು. ಅವರಾಗಿಯೇ ಹಿಂದೆ ಬಂದಿದ್ದನ್ನೂ,ಮದ್ಯವರ್ಜನ ಶಿಬಿರಕ್ಕೆ ಗಂಡನನ್ನು ಸೇರಿಸಲು ಹೇಳಿದ್ದನ್ನೂ ಹೇಳಿ, ‘ಈಗ ನೆಮ್ಮದಿಯಿಂದ ಇದ್ದೇವೆ. ಧರ್ಮಸ್ಥಳದ ಮದ್ಯವರ್ಜನ ಶಿಬಿರದಿಂದಾಗಿ ಗಂಡ ಕುಡಿಯೋದನ್ನು ಬಿಟ್ಟಿದ್ದಾನೆ. ಮಕ್ಕಳೂ ಸ್ಕೂಲಿಗೆ ಹೋಗ್ತಾ ಇದ್ದಾರೆ. ಮನೆಯಲ್ಲಿ ಗಲಾಟೆ ಇಲ್ಲವಾಗಿದೆ. ಗಂಜಿ ಉಂಡುಕೊಂಡು ತಕ್ಕ ಮಟ್ಟಿಗೆ ನೆಮ್ಮದಿಯಿಂದ ಇದ್ದೇವೆ’ ಎಂದು ಸಂತೋಷದಿಂದ ಹೇಳಿಕೊಂಡರು.
ಇಂತಹ ಅನೇಕ ಸಂಗತಿಗಳು ನಡೆದಿವೆ. ಒಂದು ಸಣ್ಣ ಧೈರ್ಯದ ಮಾತು, ಭರವಸೆಯ ನುಡಿ, ಪ್ರೇರಣಾ ವಾಕ್ಯ ಒಬ್ಬರ ಬದುಕನ್ನೇ ಬದಲಾಯಿಸಬಲ್ಲದು. ಅಂತಹ ವಿಚಾರಗಳು ಸಾಕಷ್ಟು ನಡೆದಿವೆ. ನಡೆಯುತ್ತಲೇ ಇವೆ. ಭಾರತೀಯರು ಯುಗಾದಿಯನ್ನು ಹೊಸ ವರ್ಷವನ್ನಾಗಿ ಆಚರಿಸುವವರು. ಬೇವು-ಬೆಲ್ಲ ತಿಂದು ಬೆಳಕು ಹಚ್ಚಿ ಹೊಸ ವರ್ಷಕ್ಕೆ ಮುನ್ನುಡಿ ಬರೆಯುವವರು. ಆದರೆ ವಿಶ್ವದಾದ್ಯಂತ ಆಚರಿಸಲಾಗುವ ಹೊಸ ಕ್ಯಾಲೆಂಡರ್ ವರ್ಷ ಬಂದೇ ಬಿಟ್ಟಿದೆ. ಹಳೆಯ ತಪ್ಪುಗಳನ್ನೆಲ್ಲ ತಿದ್ದಿಕೊಂಡು, ಹೊಸ ಹೊಸ ಸಂಗತಿ, ವಿಚಾರಗಳನ್ನು ಕರೆಯುವ ಆಶಯವಿಟ್ಟುಕೊಂಡು ನಾವು ಉತ್ತಮ ಜೀವನವನ್ನು ನಡೆಸೋಣ. ಬದುಕಿನ ಕಷ್ಟ ಕಾಲದಲ್ಲಿ ಭರವಸೆಯನ್ನು ಕಳೆದುಕೊಳ್ಳದೆ, ಇತರರಿಗೂ ಭರವಸೆಯನ್ನು ತುಂಬುತ್ತಾ ಮುನ್ನಡೆಯೋಣ. ಪ್ರತಿ ದಿನವೂ ಪ್ರತಿ ಕ್ಷಣವೂ, ಹೊಸದೇ. ಸರ್ವರಿಗೂ ಹೊಸ ವರ್ಷವು ಸುಖ-ಶಾಂತಿ-ನೆಮ್ಮದಿಯಿಂದ ಕೂಡಿರಲಿ.