ಅನುವಾದಕರ ಹೊಸ ತಲೆಮಾರು ಬರಲಿ
ಅನುವಾದಕರುಗಿ ಹೆಸರುವಾಸಿ ಯಾಗಿರುವ ಡಾ.ಪಾರ್ವತಿ ಜಿ.ಐತಾಳ ಕಥಾ ಸಂಕಲನಗಳು, ಕಾವ್ಯ ಕೃತಿಗಳು, ವಿಮರ್ಶಾ ಕೃತಿಗಳನ್ನೂ ಬರೆದವರು . ಕನ್ನಡ ಮತ್ತು ಹಿಂದಿ, ಮಲಯಾಳಂ, ತುಳು, ಇಂಗ್ಲಿಷ್ ಮಧ್ಯೆ ಸೇತುವೆಯಾಗಿರುವ ಇವರು ಈ ಭಾಷೆಗಳ ಕೃತಿಗಳನ್ನು ಅನುವಾದಿಸಿದ್ದಾರೆ. ಅದರಲ್ಲೂ ಮಲಯಾಳಂನ ಹಲವು ಪ್ರಮುಖ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಪಾರ್ವತಿ ಐತಾಳರ ಆತ್ಮಕಥನ ‘ಅಂತರಂಗದ ಸ್ವಗತ’ ಇಂದು ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಸಮ್ಮುಖದಲ್ಲಿ ಅವರು ಮಾತಾಗಿದ್ದಾರೆ. ದಶಕಗಳಿಂದ ಭಾಷಾಂತರ ಕಾರ್ಯದಲ್ಲಿ ತೊಡಗಿದ್ದೀರಿ. ಈ ನಂಟು ಹೇಗೆ ಶುರುವಾಯ್ತು? ನಾನು ಮೂಲ್ಕಿಯ ವಿಜಯಾ ಕಾಲೇಜಿಗೆ ಲೆಕ್ಚರರ್ ಆಗಿ ಸೇರಿದಾಗ(1981) ಅಲ್ಲಿ ನನಗೆ ಸಿಕ್ಕಿದ ಸಾಹಿತಿ ಮಿತ್ರರು ‘ನಿಮಗೆ ಐದು ಭಾಷೆಗಳು ತಿಳಿದಿವೆಯಲ್ಲ, ನೀವು ಅನುವಾದ ಮಾಡಿದರೆ ಅದ್ಭುತಗಳನ್ನು ಸಾಧಿಸಬಲ್ಲಿರಿ’ ಎಂದು ಪ್ರೇರಣೆ ಇತ್ತರು. ಹಾಗೆ ಇಂಗ್ಲಿಷ್ ,ಹಿಂದಿ, ಮಲೆಯಾಳ, ತುಳುಗಳಿಂದ ಕನ್ನಡಕ್ಕೆ ಕತೆ- ಕಾದಂಬರಿ- ನಾಟಕಗಳನ್ನು ಅನುವಾದಿಸತೊಡಗಿದೆ.
ಮಲಯಾಳಂ ಸಾಹಿತ್ಯಲೋಕದ ಜೊತೆ ನಿಮ್ಮ ಒಡನಾಟ ದೊಡ್ಡದು. ಅಲ್ಲಿನ ಸಾಹಿತ್ಯದ/ಸಾಹಿತಿಗಳ ವಿಶೇಷತೆ ಏನು? ನಾನು ಮಲೆಯಾಳ ಕಲಿತದ್ದು ತೀರಾ ಆಕಸ್ಮಿಕವಾಗಿ. ಕಾಸರಗೋಡು ಕಾಲೇಜಿನಲ್ಲಿ ಓದುತ್ತಿದ್ದಾಗ ಪತ್ರಿಕೆಗಳನ್ನು ಓದುವ ಉದ್ದೇಶದಿಂದ ಗೆಳತಿಯರ ಸಹಾಯ ಪಡೆದು ಓದಲು- ಬರೆಯಲು-ಮಾತನಾಡಲು ಕಲಿತೆ. ಅನಂತರ ಸಾಹಿತ್ಯ ಕೃತಿಗಳನ್ನು ಓದಲು ತೊಡಗಿದೆ. ಮಲೆಯಾಳ ಸಾಹಿತ್ಯಕ್ಕೆ ಕನ್ನಡದ ಅರ್ಧದಷ್ಟು ಕೂಡ ಇತಿಹಾಸವಿಲ್ಲ. ಅದರೆ ಕಡಿಮೆ ಅವಧಿಯಲ್ಲಿ ಅದ್ಭುತ ಬೆಳವಣಿಗೆ ಸಾಧಿಸಿದ ಸಾಹಿತ್ಯವದು. ಹೇಳಿಕೇಳಿ ಕೇರಳ ಅಕ್ಷರಸ್ಪರ ನಾಡು . ಸಾಕಷ್ಟು ಪಾಶ್ಚಾತ್ಯ ಸಾಹಿತ್ಯವನ್ನೂ ಓದಿಕೊಂಡವರೇ ಅಲ್ಲಿ ಹೆಚ್ಚು ಮಂದಿ. ಕಮ್ಯೂನಿಸ್ಟ ಸಿದ್ಧಾಂತದಲ್ಲಿ ನಂಬಿಕೆ ಇಟ್ಟವರು . ಅಲ್ಲಿನ ರಾಜಕೀಯದಲ್ಲೂ ಕಮ್ಯೂನಿಸ್ಟ ಸರಕಾರದ ಆಡಳಿತ ಬಹಳಷ್ಟು ಸಲ ಬಂದಿದೆ. ಅದ್ದರಿಂದ ಅವರಲ್ಲಿ ಎಡಪಂಥೀಯ ಚಿಂತನೆ ಬಲವಾಗಿದೆ. ಅಲ್ಲಿ ಸ್ತ್ರೀವಾದಿ ಚಿಂತನೆ-ದಲಿತ ಸಾಹಿತ್ಯಗಳೂ
ಕನ್ನಡಕ್ಕಿಂತ ಮೊದಲೇ ಬಂದಿವೆ.
ಇದನ್ನೂ ಓದಿ:ರಾಜಕೀಯದಲ್ಲೂ ದಳಪತಿ ಅಧಿಪತಿ?
ಕನ್ನಡದಿಂದ ಮಲಯಾಳಂಗೆ ಅನುವಾದಿಸಿದಾಗ ಸಿಕ್ಕ ಸ್ಪಂದನೆ? ನಾನು ಕನ್ನಡದಿಂದ ಮಲೆಯಾಳಕ್ಕೆ ಮೊದಲು ಅನುವಾದಿಸಿದ ಕೃತಿ ‘ಕನ್ನಡ ಪೆಣ್ ಕಥಗಳ್’ ಅಂತ . ಕನ್ನಡದ ಹನ್ನೆರಡು ಹಿರಿಯ ಲೇಖಕಿಯರ ಒಂದೊಂದು ಕಥೆಗಳನ್ನು ಅವರ ಪರಿಚಯದೊಂದಿಗೆ ಅದರಲ್ಲಿ ಸೇರಿಸಿದ್ದೆ . ಅದರ ಕುರಿತು ಅಲ್ಲಿನ ಅನೇಕ ಪತ್ರಿಕೆಗಳಲ್ಲಿ ಉತ್ತಮ ವಿಮರ್ಶೆಗಳು ಪ್ರಕಟವಾಗಿದ್ದವು . ಅದರ ನಂತರ ನಾನು ಅನುವಾದಿಸಿದ ‘ನಿಸಾರ್ ಕವಿತಗಳ್’ (2018) ಮತ್ತು ‘ಕೆ.ವಿ.ತಿರುಮಲೇಶಿಂಡ ಕವಿತಗಳ್ ‘(2021) ಕೃತಿಗಳಿಗೆ ಅಷ್ಟಾಗಿ ಓದುಗರು ಸಿಗಲಿಲ್ಲ . ಇತ್ತೀಚೆಗೆ ಡಿ.ಆರ್.ನಾಗರಾಜ್ ನಾಟಕ ‘ಕತ್ತಲೆ ದಾರಿ ದೂರ’ ವನ್ನು ‘ಭ್ರಾಂತಾಲಯಂ’ ಎಂದು ಅನುವಾದಿಸಿದೆ , ಬಹಳ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಈ ನಡುವೆ ನಾನು ಅನುವಾದಿಸಿದ ಐದು ಕನ್ನಡ ಕಥೆಗಳು ಅಲ್ಲಿನ ಪ್ರಸಿದ್ಧ ಪತ್ರಿಕೆ ‘ ದೇಶಾಭಿಮಾನಿ’ಯ ಒಂದೇ ಸಂಚಿಕೆಯಲ್ಲಿ ಪ್ರಕಟವಾಗಿ ತುಂಬಾ ಮಂದಿ ಮೆಚ್ಚುಗೆ ತಿಳಿಸಿದ್ದಾರೆ. ಕನ್ನಡಕ್ಕೆ ಹೋಲಿಸಿದರೆ ಮಲಯಾಳಂನ ಪೆಣ್ ಅಭಿವ್ಯಕ್ತಿ ಹೆಚ್ಚು ಬೋಲ್ಡ್ ಅಲ್ಲವೇ ?
ಕೇರಳದಲ್ಲಿ ಸ್ತ್ರೀವಾದಿಗಳ ವಿರುದ್ಧವಾದ ಒಂದು ದೊಡ್ಡ ಅಲೆಯಿದೆ. ಕಮಲಾದಾಸ್ ‘ಮೈಸ್ಟೋರಿ’ ಎಂಬ ತಮ್ಮ ಕೃತಿಯಲ್ಲಿ ಹೆಣ್ಣು – ಗಂಡಿನ ನಡುವಣ ಸಂಬಂಧಗಳ ಕುರಿತಾಗಿ ತೆರೆದು ಹೇಳಿದ್ದಕ್ಕೆ ಆಕೆಯನ್ನುವ ‘ಬಿಚ್’ ಎಂದು ಕರೆದು ಕಲ್ಲೆಸೆದವರೂ ಅಲ್ಲಿದ್ದಾರೆ. ಆದ್ದರಿಂದ ಅನೇಕ ಸ್ತ್ರೀವಾದಿಗಳು ತಮ್ಮನ್ನು ಸ್ತ್ರೀವಾದಿಗಳೆಂದು ಕರೆದುಕೊಳ್ಳಲು ಹಿಂಜರಿಯುತ್ತಾರೆ. ಸಾರಾ ಜೋಸೆಫ್, ಸಿತಾರಾರಂತಹ ಲೇಖಕಿಯರು ನಿರ್ಭಯವಾಗಿ ಬರೆಯುತ್ತಾರೆ. ಧರ್ಮವು ಹೇಗೆ ಲಿಂಗ ತಾರತಮ್ಯ ಮಾಡುತ್ತದೆ ಅನ್ನುವುದರ ಕುರಿತೂ ಪ್ರಖರವಾಗಿ ಬರೆದ ಕೃತಿಗಳು ಅಲ್ಲಿವೆ. ಇನ್ನು ಕೆಲವರು ಸೂಚ್ಯವಾಗಿ ಬರೆಯುತ್ತಾರೆ. ಮುಖ್ಯವಾಗಿ ಅಲ್ಲಿನ ಲೇಖಕಿಯರು ಪಾಶ್ಚಾತ್ಯ ಸಿದ್ಧಾಂತಗಳಿಂದ ಪ್ರಭಾವಿತರಾದವರು. ಆ ಸಿದ್ಧಾಂತಗಳನ್ನು ತಮ್ಮ ಪ್ರಾದೇಶಿಕತೆಗೆ ಅನ್ವಯಿಸಿಕೊಂಡು ಬರೆಯುತ್ತಾರೆ.
ಅನುವಾದದ ಕಷ್ಟಗಳು? ಬೈಗುಳದಂತಹ ಸ್ಥಳೀಯ ಪಾರಿಭಾಷಿಕತೆಯನ್ನು ನಿಭಾಯಿಸುವ ಬಗೆ ಹೇಗೆ? ಅನುವಾದದ ಹಿಂದೆ ತುಂಬಾ ಪರಿಶ್ರಮವಿದೆ. ಪ್ರತಿಭೆ ಯೂ ಬೇಕು. ಪದ ಮತ್ತು ಪದಪುಂಜಗಳ ಬಳಕೆ, ಮೂಲದಲ್ಲಿ ವ್ಯಕ್ತವಾದ ಧ್ವನಿಯನ್ನು ಮತ್ತು ಮೂಲದ ಸತ್ವವನ್ನು ಅನುವಾದದಲ್ಲಿ ಉಳಿಸಿಕೊಳ್ಳುವ ಎಚ್ಚರಿಕೆ ಮತ್ತು ಚಾಣಾಕ್ಷತೆಗಳು ಅನುವಾದಕರಲ್ಲಿ ಇರಬೇಕು. ತುಸು ಎಚ್ಚರ ತಪ್ಪಿದರೂ ಅರ್ಥ ವ್ಯತ್ಯಾಸ ಬಂದು ಅನರ್ಥವಾಗುವ ಸಾದ್ಯತೆಯಿದೆ. ಆದ್ದರಿಂದ ನನ್ನ – ದೃಷ್ಟಿಯಲ್ಲಿ ಅನುವಾದ ಅನ್ನುವುದು ತಂತಿಯ ಮೇಲೆ ನಡೆದಂತೆ. ಅದೊಂದು ಧ್ಯಾನ. ಅದೊಂದು ತಪಸ್ಸು
ಅನುವಾದಕರ ಜವಾಬ್ದಾರಿ ಏನು? ಯಾವುದೇ ಭಾಷೆಯ ಸಾಹಿತ್ಯ ಬೆಳೆಯಬೇಕಾದರೆ ಮತ್ತು ಅಲ್ಲಿಗೆ ಹೊಸ ವಿಚಾರಗಳು ಹರಿದು ಬರಬೇಕಾದರೆ ಅದು ಇತರ ಭಾಷೆಗಳಿಂದ ಮಾಡುವ ಅನುವಾದಗಳ ಮೂಲಕವೇ ಆಗಬೇಕು. ಭಾಷೆ ಯೊಂದಿಗೆ ಸಂಸ್ಕೃತಿಯೂ ಹಾಸುಹೊಕ್ಕಾಗಿರು ವುದರಿಂದ ಅನುವಾದದ ಮೂಲಕ ಸಾಂಸ್ಕೃತಿಕ ವಿನಿಮಯವಾಗಿ ಭಾಷಾ ಸೌಹಾರ್ದತೆ ಬೆಳೆಯುತ್ತದೆ. ಲಕ್ಷ್ಯ ಭಾಷೆಯ ಓದುಗರು ಅನುವಾದಕರು ಹೇಳಿದ್ದೇ ಒದ್ದ ಸತ್ಯವೆಂದು ನಂಬುತ್ತಾರೆ. ಅವರ ನಂಬಿಕೆಗೆ ನ್ಯಾಯ ಒದಗಿಸಬೇಕಾದರೆ ಅನುವಾದಕರು ಕೃತಿನಿಷ್ಠರಾಗಿ ಆಳ ಅಧ್ಯಯನದ ಮೂಲಕ ಮೂಲಕ ತಮ್ಮ ಕರ್ತವ್ಯ
ನಿರ್ವಹಿಸಬೇಕು
ಕನ್ನಡದಲ್ಲಿ ಸಾಕಷ್ಟು ಅನುವಾದಕರಿಲ್ಲ. ಹೇಗೆ ಹೆಚ್ಚಿಸುವುದು? ಹೌದು. ನಾವು ಭಾಷಾಂತರ ಕುರಿತಾದ ವಿಚಾರ ಸಂಕಿರಣಗಳಲ್ಲಿ ಈ ವಿಷಯದ ಕುರಿತು ಸದಾ ಚಿಂತನೆ ಮಾಡುತ್ತೇವೆ. ಅನುವಾದಕರ ಸಂಖ್ಯೆ ತುಂಬಾ ಕಡಿಮೆಯಿದೆ ಮತ್ತು ಎಲ್ಲ ಜವಾಬ್ದಾರಿ ಅವರ ಮೇಲೆಯೇ ಹೋಗುತ್ತಿವೆ ಅನ್ನುವುದು. ಪ್ರಸ್ತುತ ಅನುವಾದವನ್ನು ಗಂಭೀರವಾಗಿ ತೆಗೆದುಕೊಂಡವರು ವೃದ್ಧಾಪ್ಯ ತಲುಪಿದವರು. ಒಂದು ಹೊಸ ಸಾಲು ಹುಟ್ಟಿಕೊಳ್ಳಬೇಕಾಗಿದೆ. ಎರಡು ಭಾಷೆಗಳ ಮೇಲೆ ಪ್ರಭುತ್ವ ಸಾಧಿಸುವವರು ಕಡಿಮೆ ಮಾಡುತ್ತಿದ್ದಾರೆ. ಬುದ್ಧಿವಂತರೆಲ್ಲ ವಿಜ್ಞಾನ – ತಂತ್ರ ಜ್ಞಾನ ಕಲಿಕೆಗೆ ಮಹಾತ್ವ ಕೊಟ್ಟು ಭಾಷೆಗಳತ್ತ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಇದು ಬಹಳ ಅಪಾಯಕಾರಿ . ಇಂದಿನ ಯುವ ತಲೆಮಾರು ತಮ್ಮ ಮಾತೃಭಾಷೆಯಲ್ಲದ ಇನ್ನೊಂದು ಪ್ರಾದೇಶಿಕ ಭಾಷೆಯನ್ನು ಕಲಿಯುವ ವ್ಯವಸ್ಥೆಯನ್ನು ಸರಕಾರವಾಗಲಿ ದೊಡ್ಡ ದೊಡ್ಡ ಸಂಸ್ಥೆಗಳಾಗಲಿ ಮಾಡುವ ಬಗ್ಗೆ ಚಿಂತಿಸಬೇಕಾಗಿದೆ.
ಯಾವುದು ನಿಮಗೆ ಪ್ರಿಯ, ಸ್ವಂತ ಕೃ ತಿರಚನೆ ಅಥವಾ ಅನುವಾದ? ನನಗೆ ಎರಡೂ ಇಷ್ಟವೇ. ಸ್ವತಂತ್ರವಾಗಿ ಕಥೆಗಳನ್ನು ಬರೆಯುವ ಹಾಗೆ ಮುನ್ನೂರಕ್ಕೂ ಹೆಚ್ಚು ಪುಸ್ತಕ ವಿಮರ್ಶೆಗಳನ್ನು ನಾನು ಮಾಡಿದ್ದೇನೆ. ಅನುವಾದ ಮತ್ತು ವಿಮರ್ಶೆ-ಎರಡೂ ಮಾಡುವುದರಿಂದ ನನ್ನ ಮೇಲೆ ಕೆಲಸದ ಒತ್ತಡ ತುಂಬಾ ಇದೆ. ಆದ್ದರಿಂದ ನಾನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಒತ್ತಡದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ.