ಅಫ್ಘಾನ್ ಮೇಲೆ ಪಾಕ್ ಬಾಂಬ್ ದಾಳಿ ದಾಯಾದಿ ಕಲಹಕ್ಕೆ ಮೂಲವೆಲ್ಲಿ?
ಮಂಗಳವಾರ (ಡಿಸೆಂಬರ್ 24) ಪಾಕಿಸ್ತಾನದ ಯುದ್ಧ ವಿಮಾನಗಳು ಪೂರ್ವ ಆಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದ ನಾಲ್ಕು ಸ್ಥಳಗಳ ಮೇಲೆ ವಾಯುದಾಳಿ ನಡೆಸಿದವು. ಈ ದಾಳಿಯಲ್ಲಿ, ನಿಷೇಧಿತ ಭಯೋತ್ಪಾದಕ ಗುಂಪಾದ ತೆಹೀಕ್ ಇ ತಾಲಿಬಾನ್ ಪಾಕಿಸ್ತಾನ್ಗೆ (ಟಿಟಿಪಿ) ಸಂಬಂಧಿಸಿದ ನೆಲೆಗಳನ್ನು ಗುರಿಯಾಗಿಸಲಾಗಿತ್ತು ಎನ್ನಲಾಗಿದೆ. ಭದ್ರತಾ ಅಧಿಕಾರಿಗಳ ಪ್ರಕಾರ, ಈ ಕಾರ್ಯಾಚರಣೆಯಲ್ಲಿ ಹಲವಾರು ಶಂಕಿತ ಉಗ್ರರು ಸಾವಿಗೀಡಾಗಿದ್ದು, ಹಲವರಿಗೆ ಗಾಯಗಳಾಗಿವೆ. ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದ ಮಧ್ಯಂತರ ಸರ್ಕಾರವೂ ಪಾಕಿಸ್ತಾನಿ ಪಡೆಗಳು ವಾಯುದಾಳಿ ನಡೆಸಿದ್ದನ್ನು ಖಾತ್ರಿಪಡಿಸಿದೆ. ತಾಲಿಬಾನ್ ವಕ್ತಾರರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳೂ ಸೇರಿದಂತೆ 46 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದಿದೆ.
ಮೂಲಗಳ ಪ್ರಕಾರ, ಪಾಕಿಸ್ತಾನಿ ಪಡೆಗಳು ಬೆರ್ನಾಲ್ ಜಿಲ್ಲೆಯ ಮುರ್ಗ ಮತ್ತು ಲಾಮನ್ ಪ್ರದೇಶಗಳಲ್ಲಿದ್ದ ಟಿಟಿಪಿ ನೆಲೆಗಳ ಮೇಲೆ ವಾಯುದಾಳಿ ನಡೆಸಿವೆ. ಇವುಗಳಲ್ಲಿ ಒಂದು ನೆಲೆಯನ್ನು ಟಿಟಿಪಿ ಮುಖ್ಯ ವ್ಯಕ್ತಿಗಳು ಬಳಸುತ್ತಿದ್ದರು ಎನ್ನಲಾಗಿದೆ.
ವಿಶೇಷ ಪ್ರತಿನಿಧಿ ರಾಯಭಾರಿ ಮುಹಮ್ಮದ್ ಸಾದಿಕ್ ನೇತೃತ್ವದ ಪಾಕಿಸ್ತಾನಿ ನಿಯೋಗ ಕಾಬೂಲ್ಗೆ ಭೇಟಿ ನೀಡಿರುವ ದಿನವೇ ಈ ವಾಯುದಾಳಿಗಳು ನಡೆದಿವೆ. ಪಾಕಿಸ್ತಾನದ ಆ ನಿಯೋಗ ಅಫ್ಘಾನಿಸ್ತಾನದ ಮಧ್ಯಂತರ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ ಮತ್ತು ವಿದೇಶಾಂಗ ಸಚಿವ ಅಮಿರ್ ಮುತ್ತಾಕಿ ಅವರನ್ನು ಭೇಟಿಯಾಗಿ, ಒಂದು ವರ್ಷದ ಸುದೀರ್ಘ ಅವಧಿಯ ಬಳಿಕ ರಾಜತಾಂತ್ರಿಕ ಮಾತುಕತೆಯನ್ನು ಪುನರಾರಂಭಿಸುವ ಕುರಿತು ಚರ್ಚೆ ನಡೆಸಿತ್ತು.
ಅಫ್ಘಾನ್ ತಾಲಿಬಾನಿನ ಸಹಯೋಗಿಯಾದ ಪಾಕಿಸ್ತಾನಿ ತಾಲಿಬಾನ್ (ಟಿಟಿಪಿ) ಪಾಕಿಸ್ತಾನ ಸರ್ಕಾರದೊಡೆನೆ ಮಾಡಿಕೊಂಡಿದ್ದ ಕದನ ವಿರಾಮವನ್ನು ನವೆಂಬರ್ 2022ರಲ್ಲಿ ಅಂತ್ಯಗೊಳಿಸಿತು. ಆ ಬಳಿಕ, ಪಾಕಿಸ್ತಾನದಲ್ಲಿ ಹಿಂಸಾಚಾರಗಳು ವ್ಯಾಪಕವಾಗಿ ಹೆಚ್ಚಾದವು. 2023 ಒಂದು ವರ್ಷದಲ್ಲೇ 700ಕ್ಕೂ ಹೆಚ್ಚು ದಾಳಿಗಳು ನಡೆದಿದ್ದು, 1,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು.
ಅಫ್ಘಾನಿಸ್ತಾನದ ತಾಲಿಬಾನ್ ಟಿಟಿಪಿಗೆ ಆಶ್ರಯ ನೀಡುತ್ತಿದೆ ಎಂದು ಪಾಕ್ ಸರ್ಕಾರ ಆರೋಪಿಸಿದೆ. ಕಳೆದ ವರ್ಷಗಳಲ್ಲಿ, ಪಾಕಿಸ್ತಾನ ಟಿಟಿಪಿಯನ್ನು ನಿಯಂತ್ರಿಸಲು ಸಾಕಷ್ಟು ಪ್ರಯತ್ನ ನಡೆಸಿತ್ತು. ಅದಕ್ಕಾಗಿ ಟಿಟಿಪಿ ಜೊತೆ ಮಾತುಕತೆ, ಅಫ್ಘಾನಿಸ್ತಾನದ ಗಡಿಯಾದ್ಯಂತ ಬೇಲಿ, ಹಾಗೂ ಟಿಟಿಪಿಗೆ ಬೆಂಬಲ ನೀಡದಂತೆ ಅಫ್ಘಾನ್ ಸರ್ಕಾರಕ್ಕೆ ಆಗ್ರಹದಂತಹ ಕ್ರಮಗಳನ್ನು ಪಾಕಿಸ್ತಾನ ಕೈಗೊಂಡಿತ್ತು. ಅಫ್ಘಾನಿಸ್ತಾನದ ಗಡಿಯ ಬಳಿ ನಡೆಯುತ್ತಿರುವ ಹಿಂಸಾಚಾರಗಳ ಮೇಲೆ ಪಾಕಿಸ್ತಾನಕ್ಕೆ ಹೆಚ್ಚಿನ ನಿಯಂತ್ರಣ ಉಳಿದಿಲ್ಲ. ಪಾಕಿಸ್ತಾನ ಈಗ ತಾನೇ ಸೃಷ್ಟಿಸಿದ ಸಮಸ್ಯೆಯಸುಳಿಯಲ್ಲಿ ಸಿಲುಕಿಕೊಂಡಿದೆ. ಅಫ್ಘಾನಿಸ್ತಾನದ ಯುದ್ಧದಲ್ಲಿ 20 ವರ್ಷಗಳ ಕಾಲ ಪಾಕಿಸ್ತಾನವೇ ಬೆಂಬಲಿಸಿದ್ದ ತಾಲಿಬಾನ್ ನಾಯಕರು ಈಗ ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಿರುವಭಯೋತ್ಪಾದಕ ಸಂಘಟನೆಯನ್ನುರಕ್ಷಿಸುತ್ತಿದ್ದಾರೆ.
ಇದನ್ನೂ ಓದಿ: ದೇಶದ ಅರಣ್ಯ ಸ್ಥಿತಿಗತಿ: ಅಂಕಿಅಂಶದಡಿ ವಸ್ತುಸ್ಥಿತಿ ಮರೆಮಾಚಿದರೆ ಪ್ರಯೋಜನ ಇಲ್ಲ
ಮಾಜಿ ಮಿತ್ರರ ನಡುವೆ ಕದನಕ್ಕೆ ಕಾರಣ
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಹದಗೆಟ್ಟಿತ್ತು. ಆದರೆ, ಇದಕ್ಕೆ ಕಾರಣವಾದ ಗಡಿ ತಕರಾರು ಮತ್ತು ಗೆಡಿಯಾದ್ಯಂತ ಹಿಂಸಾಚಾರಗಳು ಸುದೀರ್ಘ ಕಾಲದಿಂದಲೂ ಇದ್ದವು. ಪಾಕಿಸ್ತಾನ ಸ್ವತಂತ್ರ ರಾಷ್ಟ್ರವಾದ ಸಮಯದಿಂದಲೂ, ಇಂದಿನ ತಾಲಿಬಾನ್ ಸರ್ಕಾರ ಸೇರಿದಂತೆ, ಅಫ್ಘಾನಿಸ್ತಾನದ ಯಾವುದೇ ಸರ್ಕಾರ ಅಧಿಕೃತ ಗಡಿಯನ್ನು ಒಪ್ಪಿಕೊಂಡಿರಲಿಲ್ಲ ಎಂದು ವಿಲ್ಸನ್ ಸೆಂಟರ್ನ ಸೌತ್ ಏಷ್ಯಾ ಇನ್ಸಿಟ್ಯೂಟ್ನ ಮೈಕೇಲ್ ಕುಗೆಲ್ಮ್ಯಾನ್ ಹೇಳಿದ್ದಾರೆ.
ಬ್ರಿಟಿಷ್ ಆಡಳಿತದ ಕಾಲದಲ್ಲಿ ಎಳೆದ ಗಡಿಯಾದ ಡ್ಯುರಾಂಡ್ ಲೈನ್ 1,640 ಮೈಲಿಗೂ (2,640 ಕಿಲೋಮೀಟರ್) ಹೆಚ್ಚು ಉದ್ದವಾಗಿದ್ದು, ಪಾಕಿಸ್ತಾನವನ್ನುಅಧಿಕೃತವಾಗಿ ಅಫ್ಘಾನಿಸ್ತಾನದಿಂದ ಪ್ರತ್ಯೇಕಿಸುತ್ತದೆ. ಆದರೆ ಅಫ್ಘಾನಿಸ್ತಾನ ಯಾವತ್ತೂ ಈ ಗಡಿಯನ್ನು ಒಪ್ಪಿರಲಿಲ್ಲ. ಈಗಿನ ತಾಲಿಬಾನ್ ಸರ್ಕಾರವಂತೂ ಈ ಕುರಿತು ಇನ್ನಷ್ಟು ಕಠಿಣ ನಿಲುವು ತಳೆದಿದೆ. ಈ ಕಾರಣದಿಂದಾಗಿ ಗಡಿಯಲ್ಲಿ ಕಾವಲು ಕಾಯುವ ತಾಲಿಬಾನ್ ಯೋಧರು ಮತ್ತು ಪಾಕಿಸ್ತಾನಿ ಯೋಧರ ನಡುವೆ ಆಗಾಗ ಚಕಮಕಿಗಳು ನಡೆದಿವೆ.
ಡ್ಯುರಾಂಡ್ ಗಡಿ ಬಹುತೇಕ ಪಶ್ರೂನ್ ಜನರನ್ನು ಹೊಂದಿರುವ ಬುಡಕಟ್ಟು ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಪಾಕಿಸ್ತಾನ ತಾನು ಎರಡು ದೇಶಗಳನ್ನು ಪ್ರತ್ಯೇಕಿಸುವ ಗಡಿಯಾದ್ಯಂತ ತಂತಿ ಬೇಲಿ ಹಾಕುವುದಾಗಿ ಹೇಳಿದ್ದರೆ, ಈ ಬೇಲಿ ಕುಟುಂಬಗಳನ್ನು ಪ್ರತ್ಯೇಕಿಸುತ್ತದೆ ಎಂದು ತಾಲಿಬಾನ್ ಹೇಳಿದೆ.
ಈಗ ಅಫ್ಘಾನಿಸ್ತಾನದಲ್ಲಿ ಯುದ್ಧ ಮುಕ್ತಾಯಗೊಂಡಿದ್ದು, ಸುರಕ್ಷಿತ ನೆಲೆಗಾಗಿ ಮತ್ತು ಯುದ್ಧ ಕಾಲದ ಸಹಾಯಕ್ಕಾಗಿ ತಾಲಿಬಾನಿಗೆ ಪಾಕಿಸ್ತಾನದ ಅವಶ್ಯಕತೆ ಇಲ್ಲ. ಅದರ ಬದಲಿಗೆ, ತಾಲಿಬಾನ್ ಅಫ್ಘಾನಿಸ್ತಾನದ ಒಳಗೆ ಹೆಚ್ಚಿನ ಜನಬೆಂಬಲ ಗಳಿಸಲು ಪ್ರಯತ್ನ ನಡೆಸುತ್ತಿದೆ. ಅಫ್ಘಾನ್ ನಾಗರಿಕರುಹೆಚ್ಚಾಗಿ ಪಾಕಿಸ್ತಾನಿ ಸರ್ಕಾರದ ಕುರಿತು ಅನುಮಾನ ಹೊಂದಿದ್ದರು. ಕುಗೆಲ್ಮ್ಯಾನ್ ಪ್ರಕಾರ, ಪಾಕಿಸ್ತಾನವನ್ನು ಟೀಕಿಸುವ ಮೂಲಕ ಅಫ್ಘಾನ್ ಜನರ ವಿಶ್ವಾಸವನ್ನು ಒಂದಷ್ಟು ಗಳಿಸಲು ಸಾಧ್ಯವಾಗಬಹುದು ಎಂದು ತಾಲಿಬಾನ್ ಭಾವಿಸಿದೆ. ಚೀನಾದ ಒತ್ತಡವೇ ಕಾರ್ಯಾಚರಣೆಗೆ ಕಾರಣವಾಯಿತೇ?
ಚೀನಾದಿಂದ ಹೆಚ್ಚಿನ ಒತ್ತಡವಿದ್ದ ಕಾರಣ ಅಫ್ಘಾನಿಸ್ತಾನದ ಮೇಲೆ ವಾಯುದಾಳಿ ನಡೆಸಲಾಯಿತು ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ. ಚೀನಾದ ‘ಬೆಲ್ಸ್ ಆ್ಯಂಡ್ ರೋಡ್’ ಉಪಕ್ರಮದಡಿ, ಚೀನಾ – ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್ (ಸಿಪಿಇಸಿ) ಯೋಜನೆಗಳಲ್ಲಿ ಬಹಳಷ್ಟು ಚೀನೀ ಕಾರ್ಮಿಕರು ಭಾಗಿಯಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ ಓರ್ವ ಆತ್ಮಹತ್ಯಾ ದಾಳಿಕೋರ ಚೀನೀ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿ, ಐವರು ಚೀನೀ ಇಂಜಿನಿಯರ್ಗಳ ಸಾವಿಗೆ ಕಾರಣನಾದ. ಆತನನ್ನು ಅಫ್ಘಾನ್ ನಾಗರಿಕ ಎಂದು ಪಾಕಿಸ್ತಾನ ಆರೋಪಿಸಿತ್ತು.
ಚೀನಾ ಈಗ ನಿರ್ಬಂಧಗಳ ಸುಳಿಗೆ ಸಿಲುಕಿ ನಲುಗುತ್ತಿರುವ ಅಫ್ಘಾನಿಸ್ತಾನದಲ್ಲಿ ಹೂಡಿಕೆ ನಡೆಸುವ ಸಾಮರ್ಥ್ಯ ಹೊಂದಿರುವುದರಿಂದ, ಅದು ತಾಲಿಬಾನ್ ಮೇಲೂ ಒಂದಷ್ಟು ಪ್ರಭಾವ ಹೊಂದಿದೆ. ಒಂದು ವೇಳೆ ಚೀನಾ ಏನಾದರೂ ಅಫ್ಘಾನಿಸ್ತಾನದ ಒಳಗೆ ಮತ್ತು ಪಾಕಿಸ್ತಾನದ ಗಡಿಯಾದ್ಯಂತ ಇಷ್ಟು ಭಯೋತ್ಪಾದಕ ಚಟುವಟಿಕೆಗಳನ್ನು ಕಡಿಮೆಗೊಳಿಸುವಂತೆ ತಾಲಿಬಾನ್ ಮನ ಒಲಿಸಲು ಯಶಸ್ವಿಯಾದರೆ, ಅದು ಚೀನಾ ಪಾಕಿಸ್ತಾನ ಎರಡಕ್ಕೂ ಪ್ರಯೋಜನಕಾರಿಯಾಗಬಹುದು.
ಕಾರ್ಯತಂತ್ರದ ಅನುಕೂಲತೆ
ಟಿಟಿಪಿಯ ಪ್ರಮುಖ ಬೇಡಿಕೆ ಎಂದರೆ, ಖೈಬರ್ ಪನ್ಸೂನ್ ಖ್ಯಾ ಪ್ರದೇಶದ ಜೊತೆಗಿನ ಫಾತಾದ ವಿಲೀನವನ್ನು ಹಿಂಪಡೆಯುವುದು. ಈ ಬೇಡಿಕೆ ಟಿಟಿಪಿಯ ಪ್ರಮುಖ ಗುರಿಯಾಗಿದ್ದು, ಇದನ್ನು ಹಲವು ಕಾರಣಗಳಿಗಾಗಿ ಟಿಟಿಪಿ ಆಗ್ರಹಿಸುತ್ತಲೇ ಇದೆ. ಟಿಟಿಪಿ ಫಾತಾ ಪ್ರಾಂತ್ಯವನ್ನು ತನ್ನ ಕಾರ್ಯಾಚರಣೆಗಳಿಗೆ, ನೂತನ ಸದಸ್ಯರ ನೇಮಕಾತಿಗೆ ಬಳಸುತ್ತದೆ. ಬಹಳಷ್ಟು ಸ್ಥಳೀಯ ಮತ್ತು ವಲಸಿಗ ಪಶೂನ್ಗಳು
ಇಲ್ಲಿಯೇ ವಾಸಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಟಿಟಿಪಿ ತನ್ನ ವಿಶಿಷ್ಟ ರಾಜಕೀಯ ಸಮಸ್ಯೆಗಳು ಮತ್ತು ಅಸಮಾಧಾನಗಳನ್ನು ಹೆಚ್ಚಿನ ಬೆಂಬಲ ಗಳಿಸಲು ಬಳಸುತ್ತಿದೆ.
ಎರಡನೆಯದಾಗಿ, ಫಾತಾ ಪ್ರದೇಶ ಅಫ್ಘಾನಿಸ್ತಾನದ ಗಡಿಯ ಬಳಿ ಇರುವುದರಿಂದ, ಟಿಟಿಪಿಗೆ ಕಾರ್ಯತಂತ್ರದ ಅನುಕೂಲತೆಗಳನ್ನು ಕಲ್ಪಿಸುತ್ತದೆ. ಟಿಟಿಪಿ ಹಕ್ಕಾನಿ ನೆಟ್ವರ್ಕ್ ನಂತಹ ಗುಂಪುಗಳೊಡನೆಯೂ ಕಾರ್ಯಾಚರಿಸಿ, ತನ್ನ ಜನಾಂಗೀಯ ಮತ್ತು ಮಿಲಿಟರಿ ಸಂಬಂಧಗಳ ಪ್ರಯೋಜನ ಪಡೆದುಕೊಳ್ಳುತ್ತಿದೆ.