ಅಲ್ಲಿ ಡಿಕೆಶಿ, ಇಲ್ಲಿ ಬಿವೈವಿ ಗುರಿ

ಅಲ್ಲಿ ಡಿಕೆಶಿ, ಇಲ್ಲಿ ಬಿವೈವಿ ಗುರಿ

ಬಲಸ್ಯ ಪೃಥ್ವಿ ಎಂಬ ಮಾತೊಂದಿದೆ. ಅಂದರೆ ಬಲಾಢ್ಯರು.ಮಾತ್ರ ಈ ಲೋಕದಲ್ಲಿ ದಾಪುಗಾಲಿಡ ಬಲ್ಲರು .ಡಾರ್ವಿನ್ನನ ವಿಕಾಸವಾದದ ಥಿಯರಿ ಕೂಡ ಇದನ್ನೇ ಹೇಳುತ್ತದೆ. ರೂಢಿಗತವಾದ ಈ ಮಾತು ರಾಜಕಾರಣಕ್ಕೆ ನೂರಕ್ಕೆ ನೂರರಷ್ಟು ಅನ್ವಯವಾಗುತ್ತದೆ. ರಾಜಕಾರಣದಲ್ಲಿ ಕಪಟ ವ್ಯೂಹದ ಮಹಾಮಥನದಿಂದ ಉಕ್ಕಿದ ವಿಷವನ್ನು ಗಂಟಲಲ್ಲಿ ಇಟ್ಟುಕೊಂಡು ಎದೆಯುಬ್ಬಿಸಬಲ್ಲವರು ಅಮೃತಪಾನದ ಯೋಚನೆ ಮಾಡಬಹುದು. ಸಾಮಾನ್ಯರಾದವರು ಈ ಹಾಲಾಹಲವನ್ನು ಕಂಡಾಗಲೇ ಗೊಟಕ್ ಎಂದುಬಿಡುತ್ತಾರೆ. ಹಾಗಾಗಿ ಹಾಲ್ಗಡಲಿನಿಂದ ಚಿಮ್ಮುವ ಪುಣ್ಯತಮವಾದ ಅಮೃತದ ಬಿಂದುವನ್ನು ಸೇವಿಸುವ ಭಾಗ್ಯವಂತರು ಅಸಾಮಾನ್ಯರೇ ಆಗಿರಬೇಕಾಗುತ್ತದೆ. ರಾಜಕಾರಣದ ಆತ್ಯಂತಿಕ ಗುರಿಯಾದ ಅಧಿಕಾರದ ಅಟ್ಟಣಿಗೆಯೇರಲು ಅದೆಷ್ಟು ಪ್ರಯಾಸ ಪಟ್ಟರೂ ಸಾಕಾಗಲಾರದು. ತಮ್ಮಿಂದ ಯಾವ ಕೆಲಸ ಮಾಡಲು ಸಾಧ್ಯವಾಗದಿದ್ದರೂ ಅಸೂಯಾ ಪ್ರವೃತ್ತಿಯವರು ರಾಜಕಾರಣದಲ್ಲಿ ಜಾಸ್ತಿ, ಕೈಕೇಯಿಯ ಮನಸ್ಸನ್ನು ಕದಡುವ ಮಂಥರೆಯಂಥವರೂ ರಾಜಕಾರಣದ ಅವಿಭಾಜ್ಯ ಅಂಗ. ಹಾಗಿರುವಾಗ ರಾಜಕಾರಣ ಸುಲಭದ ತುತ್ತು ಅಲ್ಲವೇ ಅಲ್ಲ, ವರ್ತಮಾನದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಈ ಅನುಭವವಾಗುತ್ತಿದ್ದರೆ ಅಚ್ಚರಿಯಲ್ಲ!

ಸದ್ಯ ಕರ್ನಾಟಕದ ರಾಜಕಾರಣದಲ್ಲಿ ಎರಡು ಪ್ರಮುಖ ಪಕ್ಷಗಳ ಸಾರಥಿಗಳು ಅಸ್ತಿತ್ವದ ಯುದ್ದದಲ್ಲಿದ್ದಾರೆ. ಚಕ್ರವ್ಯೂಹ ವನ್ನು ಹೊಕ್ಕ ಅಭಿಮನ್ಯುವನ್ನು ಸದೆಬಡಿಯಲು ಏರಿ ಬಂದ ಅಕ್ಟೋಹಿಣಿ ಸೈನ್ಯದಂತೆ ಈ ಇಬ್ಬರತ್ತಲೂ ರಾಜಕೀಯ ವಿರೋಧಿಗಳು ಏರಿಕೊಂಡು ಹೋಗುತ್ತಿದ್ದಾರೆ. ಹಾಗಂತ ಡಿ.ಕೆ. ಶಿವಕುಮಾರ್ ವಿರುದ್ಧ ಮಸಲತ್ತು ನಡೆಸುತ್ತಿರುವವರು ಬಿಜೆಪಿಯವರೋ, ಜೆಡಿಎಸ್‌ ನವರೋ ಅಲ್ಲ, ವಿಜಯೇಂದ್ರ ವಿರುದ್ಧ ಕತ್ತಿ ಮಸೆಯುತ್ತಿರುವವರು ಕಾಂಗ್ರೆಸ್‌ನವರೂ ಅಲ್ಲ. ಉಭಯರಿಗೂ ಸ್ವಪಕ್ಷೀಯರಿಂದಲೇ ವಿರೋಧವಿದೆ. ಮುಖ್ಯ ಮಂತ್ರಿಯಾಗಲು ಹೊರಟಿರುವ ಡಿಕೆಶಿಯವರಿಗೆ ಇದೇ ಸ್ಥಾನದ ಅಪೇಕ್ಷೆಯಲ್ಲಿರುವ ಕಾಂಗ್ರೆಸ್‌ನ ಇತರರಿಂದ ಅಡ್ಡಿ ಯಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿದು 2028ರ ಹೊತ್ತಿಗೆ ಸೀಟು ಕಾಯ್ದಿರಿಸಿಕೊಳ್ಳುವ ಯೋಚನೆಯಲ್ಲಿರುವ ವಿಜಯೇಂದ್ರ ಅವರಿಗೂ ಸ್ಪೀಡ್ ಬ್ರೇಕರ್ ಅಳವಡಿಸಲು ಪಕ್ಷದ ಇತರ ಮುಖಂಡರು ಸಮಯಕ್ಕಾಗಿ ಕಾಯುತ್ತಿದ್ದಾರೆ. ಅಲ್ಲಿಗೆ ಇವತ್ತಿನ ಸನ್ನಿವೇಶದಲ್ಲಿ ಡಿಕೆಶಿ ಮತ್ತು ಬಿವೈವಿ ಸಮಾನ ದುಃಖಿಗಳು ಎಂದಂತಾಯಿತು.

ಶಿವಕುಮಾ‌ರ್ ಮತ್ತು ವಿಜಯೇಂದ್ರ ಮಹತ್ವಾಕಾಂಕ್ಷಿಗಳು. ಇದರಲ್ಲಿ ಅನುಮಾನವೇ ಬೇಡ. ಇಬ್ಬರೂ ಅವರವರ ಪಕ್ಷದ ನೆಲೆಯಲ್ಲಿ ಗರಿಷ್ಠಸಾಧ್ಯತೆಯ ಕಾರ್ಯಸೂಚಿಯನ್ನೇ ಹೊಂದಿ ದ್ದಾರೆ. ಮಗ್ಗಲು ಬದಲಿಸಿದರೆ ಮುಖ್ಯಮಂತ್ರಿ ಪಟ್ಟ ದಕ್ಕುತ್ತದೆ ಎನ್ನುವುದು ಡಿಕೆಶಿ ಅರಿವಿನಲ್ಲಿದೆ. ಪಕ್ಷ ಕಟ್ಟುವಲ್ಲಿ ಶ್ರಮ ಹಾಕಿದರೆ ಮೂರೂವರೆ ವರ್ಷದ ಬಳಿಕ ತೂಗುವ ತೊಟ್ಟಿಲು ಹತ್ತಿರಕ್ಕೆ ಬಂದೇ ಬರುತ್ತದೆ ಎಂಬ ಲೆಕ್ಕಾಚಾರ ವಿಜಯೇಂದ್ರ ಅವರದ್ದು. ಇದನ್ನು ಆಗಗೊಡಬಾರದು ಎನ್ನುವುದೇ ಈ ಇಬ್ಬರು ನಾಯಕರ ವಿರೋಧಿಗಳ ಒಂದಂಶದ ಕಾರ್ಯಕ್ರಮ.

ಇದನ್ನೂ ಓದಿ:ಮೋದಿ ಸರಕಾರ ಮೂಗು ತೂರಿಸಿಲ್ಲ: ಚಂದ್ರಚೂಡ್

ಅಷ್ಟಕ್ಕೂ ಇವರರ್ ರೂ ಜನ್ಮತಃ ದ್ವೇಷಿಗಳಲ್ಲಿ, ಹುಟ್ಟುತ್ತಲೇ ಡಿಕೆಶಿ, ಬಿವೈವಿ ಮೇಲೆ ಸೇಡಿನ ಸೆಡವು ಇಟ್ಟುಕೊಂಡು ಬಂದವರಲ್ಲ. ಆದರೆ, ಅಧಿಕಾರವೆಂಬ ಮಾಯಾಜಲ ಪರಸ್ಪರ ವಿರುದ್ಧ ದಿಕ್ಕಿನಲ್ಲಿನಿಲ್ಲಿಸಿದೆ. ರಾಜಕಾರಣದ ಆಕ್ರಮಣಶೀಲತೆ, ಪಕ್ಷವನ್ನು ಆವರಿಸಿ ಕೊಳ್ಳುವ ಈ ರೀತಿ ಮತ್ತು ಅಂದುಕೊಂಡಿದ್ದನ್ನು ಸಾಧಿಸುವ ಹಠಕ್ಕೆ ಬೀಳುವುದರಲ್ಲಿ ಡಿಕೆಶಿ, ಬಿವೈವಿ ನಡುವೆ ಸಾಮ್ಯತೆಯಿದೆ. ಇವರಿಬ್ಬರ ವಿಚಾರದಲ್ಲಿ ವಿರೋಧಿಗಳು ಉರಿದು ಬೀಳಲು ಈ ಅಂಶಗಳೇ ಪ್ರಧಾನವಾದವು. ಒಂದರ್ಥದಲ್ಲಿ ಈ ಇಬ್ಬರಲ್ಲಿರುವ ಸಾಮರ್ಥ್ಯ, ಪ್ರಭಾವಳಿಯ ಕಾರಣದಿಂದಲೇ ದಿನದಿಂದ ದಿನಕ್ಕೆ ವಿರೋಧಿಗಳ ಸಂಖ್ಯೆ ಹೆಚ್ಚುತ್ತಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಮಾರಿಗೊಬ್ಬರು, ಊರಿಗೊಬ್ಬರು ಈ ನಾಯಕರು ಸಿಗುತ್ತಾರೆ. ಮುಖ್ಯಮಂತ್ರಿಯಾಗುವ ಕನಸು ಹೊತ್ತವರು ಹಲವರು. ಇಂಥವರಲ್ಲಿ ಡಿಕೆಶಿ ಟೋಟಲಿ ದ ಡಿಫರೆಂಟ್. ಹೈಕಮಾಂಡ್ ವಹಿಸುವ ಅಸೈನ್ವೆಂಟ್ ಗಳನ್ನು ತಲೆ ಮೇಲೆ ಹೊತ್ತುಕೊಂಡು ಮಾಡುವ ಡಿ.ಕೆ. ಶಿವಕುಮಾರ್ ದಿಲ್ಲಿ ಅಂಗಳದಲ್ಲೂ ಪ್ರಭಾವಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಬೇಕಾದ ಎಲ್ಲ ರೀತಿಯ ಜೈವನ್‌ ಪ್ರಾಶ್‌ ಗಳನ್ನು ಪೂರೈಸಿ ದವರು ಡಿಕೆಶಿ ಎಂಬ ಪ್ರಸಿದ್ದಿಯಿದೆ. ಅದೇನಿದ್ದರೂ ಪಕ್ಷವನ್ನು ಸಂಘಟಿಸಿ ಚುನಾವಣೆಗೆ ಸಜ್ಜುಗೊಳಿಸಲು ಶಿವಕುಮಾರ್ ನಿರ್ಣಾಯಕ ಪಾತ್ರ ವಹಿಸಿದ್ದಂತೂ ನಿಜ. ಆದ್ದರಿಂದ ಪಕ್ಷ ಅಭೂತಪೂರ್ವ ಗೆಲುವು ದಾಖಲಿಸಿದಾಗ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು. ಸಿದ್ದರಾಮಯ್ಯ ಅವರಂಥ ಜನನಾಯ ಕರು ಇರುವಾಗ ಅವರನ್ನು ದಾಟಿಕೊಂಡು ಡಿಕೆಶಿ ಅವರಿಗೆ ಮಣೆ ಹಾಕಲು ಹೈಕಮಾಂಡ್ ತಯಾರಿರಲಿಲ್ಲ. ಬದಲಾಗಿ ಎರಡೂವರೆ ವರ್ಷದ ಅಲಿಖಿತ ಒಪ್ಪಂದದ ಬಗ್ಗೆ ಚರ್ಚೆಯಿದೆ. ಇದು ಎಷ್ಟರ ಮಟ್ಟಿಗೆ ನಿಜ ಎನ್ನುವುದನ್ನು ಕಾಂಗ್ರೆಸ್ ವರಿಷ್ಠರಾಗಲಿ, ರಾಜ್ಯ ನಾಯಕರಾಗಲಿ ಖಚಿತ ಪಡಿಸಿಲ್ಲಆದರೆ, ರಾಜಕೀಯ ವಾತಾವರಣವೇ ಹಲವು ಬಗೆಯ ತರಂಗಗಳನ್ನು ಎಬ್ಬಿಸುತ್ತಿದೆ. ಶಿವಕುಮಾರ್ ಅವರಂತೂ ಪಟ್ಟವೇರಲು ಸಿದ್ಧರಾದವರಂತೆ ಲವಲವಿಕೆಯಿಂದ ಓಡಾಡಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಆಪ್ತ ಬಳಗದ ಸಚಿವರು ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲವೆಂದು ಪದೇಪದೆ ಹೇಳುತ್ತಿದ್ದಾರೆ. ಇವೆಲ್ಲವೂ ಕಾಂಗ್ರೆಸ್‌ನೊಳಗೆ ಏನಾಗುತ್ತಿದೆ ಎಂಬುದರ ದ್ಯೋತಕ.

ಡಿಕೆಶಿ ಅವರದ್ದು ಆನೆ ನಡೆದದ್ದೇ ದಾರಿಯೆಂಬ ಧೋರಣೆ ಎನ್ನುವುದು ಅವರ ಹಿತಶತ್ರುಗಳ ಆರೋಪ. ಶಿವಕುಮಾರ್ ಅವರೇನಾದರೂ ಮಖ್ಯಮಂತ್ರಿಯಾದರೆ ಬಾಳೆಯ ತೋಟಕ್ಕೆ ಮದ್ದಾನೆಯನ್ನು ನುಗ್ಗಿಸಿದಂತಾಗಲಿದೆ ಎಂಬ ಆತಂಕವೂ ಕಾಂಗ್ರೆಸ್‌ನ ಹಲವರಲ್ಲಿದೆ. ಬಹಳ ಮುಖ್ಯವಾಗಿ ಡಿಕೆಶಿಗೆ ನಾಯಕತ್ವ ದಕ್ಕಿ ಬಿಟ್ಟರೆ ಉನ್ನತ ಸ್ಥಾನದ ನಿರೀಕ್ಷೆಯಲ್ಲಿರುವ ಹಿರಿಯರ ಇನ್ನಿಂಗ್ಸ್ ಗೆ ತೆರೆ ಬಿದ್ದು ಬಿಡುತ್ತದೆ. ಹಾಗಾಗಿ ಶಿವಕುಮಾ‌ರ್ ಅವರಿಗೆ ಅವಕಾಶ ಬೇಡ, ನಾಯಕತ್ವ ಬದಲಾ ವಣೆಯಾದರೆ ಬೇರೆಯವರನ್ನೇ ಪರಿಗಣಿಸಬೇಕು ಎಂಬ ವಾದ ಹುಟ್ಟಿಕೊಂಡಿದೆ. ಸಿದ್ದರಾಮಯ್ಯ ಅವರೇ ಮುಂದುವರಿ ಯಬೇಕು ಎನ್ನುವವರ ಸಂಖ್ಯಾಬಲವೂ ಹಿಗ್ಗುತ್ತಿದೆ.

ವಾಸ್ತವಿಕವಾಗಿ ಸಿದ್ದರಾಮಯ್ಯ ಅವರಿಗೆ ವಿಶ್ರಾಂತಿ ತಗೆದುಕೊಳ್ಳಿ ಎಂದು ಹೇಳುವ ಸ್ಥಿತಿಯಲ್ಲಿ ವರಿಷ್ಠರೂ ಇಲ್ಲ. ಬೆರಳೆಣಿಕೆ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್‌ಗೆ ಕರ್ನಾಟಕವೇ ಭದ್ರಕೋಟೆ. ರಾಜ್ಯದಲ್ಲಿ ಕಾಂಗ್ರೆಸ್‌ಗೊಂದು ನಿಶ್ಚಿತವಾದ ವೋಟ್‌ ಬ್ಯಾಂಕ್ ಸೃಷ್ಟಿಸಿದ್ದರಲ್ಲಿ ಸಿದ್ದರಾಮಯ್ಯ ನವರ ಭೂಮಿಕೆ ಮಹತ್ವದ್ದು. ಹಾಗಾಗಿ ಅವರನ್ನು ಬದಿಗೆ ಸರಿಸುವುದು ದುಬಾರಿಯಾದೀತು ಎಂಬ ಅಳುಕು ಹೈಕಮಾಂಡ್‌ನಲ್ಲೂ ಇದೆ. ಒಂದು ವೇಳೆ ಧೈರ್ಯ ಮಾಡಿದರೆ ಸಿದ್ದರಾಮಯ್ಯ ಅವರ ಬೆಂಬಲಿಗರನ್ನು ಒಪ್ಪಿಸುವುದು ಕಷ್ಟ ಇಂಥದ್ದೆಲ್ಲ ಒಳಸುಳಿ ಇರುವುದರಿಂದ ಡಿಕೆಶಿ ಪಟ್ಟಾಭಿಷೇಕ ಸುಲಭವಂತೂ ಅಲ್ಲವೇ ಅಲ್ಲ.

ವಿಜಯೇಂದ್ರ ವಿಷಯಕ್ಕೆ ಬಂದರೆ ಡಿಕೆಶಿ ಬಗೆಗಿರುವ ಆಕ್ಷೇಪ ಇವರ ಬಗ್ಗೆಯೂ ಇದೆ. ಪಕ್ಷದಲ್ಲಿ ಇವರನ್ನು ವಿರೋಧಿ ಸುವವರು ತುಟಿ ಬಿಚ್ಚಿದರೆ ವಿಜಯೇಂದ್ರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ರಾಗವೆಳೆಯುತ್ತಾರೆ. ಮೊದ ಮೊದಲು ಯತ್ನಾಳ್ ಒಬ್ಬರೇ ತಿರುಗಿ ಬೀಳುತ್ತಾರೆ ಎಂಬಂತಿತ್ತು. ಅಧ್ಯಕ್ಷರಾಗಿ ವಿಜಯೇಂದ್ರ ಮುಂದುವರಿ ಯುವ ಸಾಧ್ಯತೆ ಹೆಚ್ಚಿದಾಗ ಅನೇಕರು ಎದ್ದು ಕುಳಿತಿದ್ದಾರೆ. ಇವರಲ್ಲಿ ಬಹುತೇಕರು ಯಡಿಯೂರಪ್ಪ ಅವರಿಂದ ಉಪಕೃತರು. ಆದರೆ, ಇದು ರಾಜಕಾರಣ. ವಿಜಯೇಂದ್ರ ಅವರೇ ಅಧ್ಯಕ್ಷರಾಗಿ ಪುನರಾಯ್ಕೆಯಾದರೆ ಮುಂದಿನ ಚುನಾವಣೆಯೂ ಅವರದೇ ನೇತೃತ್ವದಲ್ಲಿ ನಡೆಯುತ್ತದೆ. ಪಕ್ಷ ಅಧಿಕಾರಕ್ಕೆ ಬಂದರೆ ಸಿಎಂ ಸ್ಥಾನದ ಸಹಜ ದಾವೇದಾರರಾಗುತ್ತಾರೆ. ಇದು ಹಲವರ ಚಿಂತೆಯ ಮೂಲ. ಹಾಗಾಗಿ ವಿಜಯೇಂದ್ರ ಹಠಾವೋ ಚಳವಳಿಗೆ ಭಿನ್ನರು, ವಿಭಿನ್ನರೆಲ್ಲ ಕೈಜೋಡಿಸಿದ್ದಾರೆ. ಡಿ.ಕೆ.ಶಿವಕುಮಾರ್, ಬಿ.ವೈ.ವಿಜಯೇಂದ್ರ ಇಬ್ಬರೂ ಅವರ ಪಕ್ಷಗಳ ಹೈಕಮಾಂಡ್‌ನ ಕೃಪಾಶೀರ್ವಾದವುಳ್ಳವರು ಎಂಬ ಪ್ರತೀತಿಯಿದೆ. ಮೈದಾನದ ರಾಜಕಾರಣದಲ್ಲೂ ಛಾತಿಯುಳ್ಳವರು. ಮುಂದಿನದ್ದನ್ನು ನಿರೀಕ್ಷಿಸೋಣ.

Leave a Comment