ಆರೋಗ್ಯವೂ ಪವಿತ್ರ

ಆರೋಗ್ಯವೂ ಪವಿತ್ರ

ಭಕ್ತಿಮಜ್ಜನದ ಜತೆ ವಿಜ್ಞಾನವನ್ನೂ ಒಪ್ಪೋಣ
ಪ್ರಯಾಗರಾಜ್‌ನಲ್ಲಿನ ನಡೆಯುತ್ತಿರುವ ಮಹಾ ಕುಂಭಮೇಳವು ಈಗಾಗಲೇ 58 ಕೋಟಿಗೂ ಹೆಚ್ಚಿನ ಜನರನ್ನು ಆಕರ್ಷಿಸಿ, ಮತ್ತೊಂದು ಮಗದೊಂದು ದಾಖಲೆಯತ್ತ ದಾಪುಗಾಲಿಡುತ್ತಿದೆ. 144 ವರ್ಷಗಳಿಗೊಮ್ಮೆ ಬರುವ ಮಹಾಪೂರ್ಣ ಕುಂಭಕ್ಕೆ ಸಾಕ್ಷಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೇಳಲು ಕೇವಲ ಭಾರತವಷ್ಟೇ ಅಲ್ಲದೆ, ಜಗತ್ತಿನ ವಿವಿಧ ಭಾಗದವರೂ ಉತ್ಸುಕರಾಗಿರುವುದು ಹೆಮ್ಮೆಯೇ ಸರಿ. ಈ ಸಂಖ್ಯೆ, ಈ ದಾಖಲೆ, ಈ ಭಕ್ತಿಭಾವಗಳ ಸಡಗರ ಹಾಗೂ ಈ ಅಭಿಮಾನಗಳ ಮೇಲೇರುತ್ತಿರುವ ಹೊತ್ತಿನಲ್ಲೇ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) “ಸಂಗಮದ ನೀರು ಅತ್ಯಂತ ಕಲುಷಿತವಾಗಿದ್ದು, ಸ್ನಾನಕ್ಕೂ ಯೋಗ್ಯವಲ್ಲ,” ಎಂದಿರುವುದು ಹಲವರಿಗೆ ಅಚ್ಚರಿಯ ಆಘಾತವನ್ನೇ ನೀಡಿದೆ. ಇದಕ್ಕೆ ವ್ಯತಿರಿಕ್ತವಾಗಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಸಿಎಂ ಯೋಗಿ ಆದಿತ್ಯನಾಥ್ ”ಕೆಲವರು ಮಹಾಕುಂಭಕ್ಕೆ ಅಪಖ್ಯಾತಿ ತರಲು ಯತ್ನಿಸುತ್ತಿದ್ದಾರೆ. ಸಂಗಮದ ನೀರು ಸ್ನಾನಕ್ಕೂ ಯೋಗ್ಯ, ಕುಡಿಯಲೂ ಯೋಗ್ಯ” ಎಂದಿರುವುದು ಸಾಕಷ್ಟು ಚರ್ಚೆಗೂ ಎಡೆಮಾಡಿಕೊಟ್ಟಿದೆ.


ಸಂಗಮ ನೀರು ಕಲುಷಿತ ಎಂದಿರುವುದು ಯಾವುದೋ ಖಾಸಗಿ ಅಧ್ಯಯನ ಸಂಸ್ಥೆಯೋ ಅಥವಾ ಇನ್ಯಾರೋ ಹೊರಗಿನ ತಜ್ಞರೋ ಹೇಳಿದ್ದಿದ್ದರೆ ಈ ಬಗ್ಗೆ ಅನುಮಾನಗಳು ಮುತ್ತಿಗೆ ಹಾಕುತ್ತಿದ್ದವೇನೋ. ಕೇಂದ್ರ ಸರಕಾರದ ಅಧೀನದಲ್ಲಿ ಕೆಲಸ ಮಾಡುವ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ತಜ್ಞರೇ ತ್ರಿವೇಣಿ ಸಂಗಮ ಸೇರಿದಂತೆ ಪ್ರಯಾಗರಾಜ್‌ನ ವಿವಿಧೆಡೆಯ ನೀರನ್ನು ಸಂಗ್ರಹಿಸಿ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಮುಂದಿಟ್ಟಿದ್ದಾರೆ. ಹಸಿರು ನ್ಯಾಯಾಧಿಕರಣವೂ ತೀವ್ರ ಕಳವಳ ವ್ಯಕ್ತಪಡಿಸಿದ್ದಲ್ಲದೆ, ಉತ್ತರ ಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ. ಈ ವಿಚಾರದಲ್ಲಿ ಕೇಂದ್ರ ಸರಕಾರದ ಅಧೀನ ಸಂಸ್ಥೆಗಳು ತೋರಿರುವ ಪಾರದರ್ಶಕತೆ ಗಮನಾರ್ಹ.

ಇದನ್ನೂ ಓದಿ:ಕವಿತೆಗೆ ಇದು ಕಾಲವಲ್ಲವೇ?


ಸಂಗಮದ ನೀರಿನಲ್ಲಿನಿಗದಿತ ಮಾನದಂಡಕ್ಕಿಂತ 13 ಪಟ್ಟು ಹೆಚ್ಚುಫೆಕಲ್ ಕೋಲಿಫಾರ್ಮ್ ಬ್ಯಾಕ್ಟಿರಿಯಾ ಪತ್ತೆಯಾಗಿದೆ ಎನ್ನುವುದು ಸಿಪಿಸಿಬಿ ವರದಿಯ ಮುಖ್ಯಾಂಶ, ಬ್ಯಾಕ್ಟಿರಿಯಾ ಎಂಬ ಪದವನ್ನು ಕೇಳಿದಾಗ, ಜನರ ಮನಸ್ಸಿನಲ್ಲಿ ಬರುವ ಮೊದಲ ವಿಚಾರ ಇವು ಮಾನವರಿಗೆ ಹಾನಿಮಾಡುವ ಸೂಕ್ಷ್ಮಜೀವಿಗಳೆಂದು, ಆದರೆ, ಶೇ.99 ಬ್ಯಾಕ್ಟಿರಿಯಾಗಳು ನಮಗೆ . ಯಾವುದೇ ಹಾನಿ ಮಾಡುವುದಿಲ್ಲ ಎನ್ನುವುದೂ ವೈಜ್ಞಾನಿಕ ಸತ್ಯವೇ. ಕೇವಲ 1 ಪ್ರತಿಶತ ಮಾತ್ರ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತವೆ. ಹಾಗೆ ನೋಡಿದಾಗ, ಫೆಕಲ್ ಕೋಲಿಫಾರ್ಮ್ ಬ್ಯಾಕ್ಟಿರಿಯಾಗಳು ಎರಡೂ ವರ್ಗಗಳಿಗೂ ಸೇರುತ್ತವೆ. ಈ ಬ್ಯಾಕ್ಟಿರಿಯಾವು ಮಾನವರಂಥ ಬೆಚ್ಚಗಿನ ರಕ್ತದ ಜೀವಿಗಳ ಜೀರ್ಣಾಂಗ ವ್ಯವಸ್ಥೆಯೊಳಗಿನ ಸಾಮಾನ್ಯ ವಾಸಿಗಳು, ದೇಹದೊಳಗಿದ್ದರೂ ಇವು ಹಾನಿ ತಂದೊಡ್ಡುವುದಿಲ್ಲ. ಆದರೆ, ಯಾವಾಗ ಈ ಬ್ಯಾಕ್ಟಿರಿಯಾಗಳು ದೇಹದ ಮಲದೊಂದಿಗೆ ಹೊರಬಂದು ನೀರಿನೊಂದಿಗೆ ಬೆರೆಯುತ್ತವೆಯೋ, ಸಮಸ್ಯೆ ಅಲ್ಲಿಂದಲೇ ಶುರುವಾಗುತ್ತದೆ.


ಈ ಬ್ಯಾಕ್ಟಿರಿಯಾಯುಕ್ತ ಕಲುಷಿತ ನೀರು ಚರ್ಮಕ್ಕೆ ಸೋಕುವುದರಿಂದ ಅಲರ್ಜಿಯಂಥ ಸಮಸ್ಯೆಗಳು ಕಾಣಿಸುತ್ತವಲ್ಲದೆ, ಇದರ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆ ತೊಂದರೆ, ಹೆಪಟೈಟಿಸ್ ಎ, ಶ್ವಾಸಕೋಶ ಹಾಗೂ ರಕ್ತಸಂಬಂಧಿತ ತೊಂದರೆ, ಟೈಫಾಯ್ಡ್ ಗಳಿಗೂ ಇವು ಕಾರಣವಾಗಬಲ್ಲವು. ಭಕ್ತಿ, ಸಡಗರವನ್ನು ಒಪ್ಪಿಕೊಳ್ಳುತ್ತಲೇ ಈ ವೈಜ್ಞಾನಿಕ ಸತ್ಯದ ಬಗ್ಗೆಯೂ ಎಚ್ಚರ ವಹಿಸುವುದು ಒಳಿತು. ಮಕ್ಕಳು, ಹಿರಿಯರು, ಆರೋಗ್ಯ ತೊಂದರೆ ಇರುವವರು ಈ ಸಮಯದಲ್ಲಿ ಕುಂಭ ಮರು ಆಲೋಚಿಸುವುದೇ ಉತ್ತಮ, ಕುಂಭ ಮುಗಿದು, ಸಂಗಮ ನೀರು ತಿಳಿಯಾದಾಗ ಪುಣ್ಯಸ್ನಾನ ಆಚರಿಸಿಕೊಳ್ಳುವುದು ಸೂಕ್ತ.

Leave a Comment