ಆರ್ಸಿಬಿಗೆ ಪಾಟೀದಾರ್ ಸರದಾರ
ಬೆಂಗಳೂರು ತಂಡಕ್ಕೆ ಮಧ್ಯ ಪ್ರದೇಶ ಆಟಗಾರರ ಸಾರಥ್ಯ ರಜತ್ ವಿರಾಟ್ ಕೊಹ್ಲಿಬೆಂಗಳೂರು: ಭಾರತ ಮತ್ತು ಬೇರೆ ಬೇರೆ ದೇಶಗಳ ದಿಗ್ಗಜ ಆಟಗಾರರು ನಾಯಕತ್ವ ವಹಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ಯುವನಾಯಕ ಲಭಿಸಿದ್ದಾರೆ. ಮಧ್ಯಪ್ರದೇಶದ ಇಂದೋರಿನ ರಜತ್ ಪಾಟೀದಾರ್ ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆರ್ಸಿಬಿ ತಂಡವನ್ನು ಮುನ್ನಡೆಸುವರು.
ಗುರುವಾರ ಕೆಎಸ್ಸಿಎ ಸಭಾಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅವರು ವಿಡಿಯೊ ಸಂದೇಶದ ಮೂಲಕ ರಜತ್ ಪಾಟೀದಾರ್ ನಾಯಕತ್ವವನ್ನು ಘೋಷಿಸಿದರು.’ನಾನು ಮತ್ತು ತಂಡದ ಎಲ್ಲ ಸದಸ್ಯರೂ ನಿಮ್ಮ ಬೆಂಬಲಕ್ಕೆ ಇದ್ದಾರೆ ರಜತ್, ಈ ಫ್ರಾಂಚೈಸಿಯಲ್ಲಿ ತಾವು ಬೆಳೆದ ರೀತಿಯು ಎಲ್ಲರ ಮನಗೆದ್ದಿದೆ. ನೀವು ಆರ್ಸಿಬಿ ಅಭಿಮಾನಿಗಳ ಹೃದಯಗಳಲ್ಲಿ ಇದ್ದೀರಿ. ಈ ಸ್ಥಾನಕ್ಕೆ ನೀವು ಅರ್ಹರು’ ಎಂದು ವಿರಾಟ್ ಅವರು ಕಳಿಸಿರುವ ವಿಡಿಯೊ ಸಂದೇಶದಲ್ಲಿ ಹೇಳಿದರು. ಆರ್ಸಿಬಿಯನ್ನು 143 ಪಂದ್ಯಗಳಲ್ಲಿ ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಅವರೇ ಮತ್ತೊಮ್ಮೆ ನಾಯಕರಾಗುವ ಕುರಿತ ಮಾತುಗಳೂ ಕೇಳಿಬಂದಿದ್ದವು. ಆದರೆ ಕೊಹ್ಲಿ ಒಪ್ಪದೇ ರಜತ್ ಅವರನ್ನು ಬೆಂಬಲಿಸಿದ್ದಾರೆ.
31 ವರ್ಷ ವಯಸ್ಸಿನ ರಜತ್, 2021ರಲ್ಲಿ ಆರ್ಸಿಬಿ ಮೂಲಕವೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಪದಾರ್ಪಣೆ ಮಾಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಭರವಸೆಯ ಆಟಗಾರನಾಗಿದ್ದಾರೆ. ಈ ವರ್ಷದ ಟೂರ್ನಿಗಾಗಿ ನಾಯಕ ತಂಡದಲ್ಲಿ ರಿಟೇನ್ ಆದ ಮೂವರು ಆಟಗಾರರಲ್ಲಿ ರಜತ್ ಕೂಡ ಒಬ್ಬರು. ಅವರಿಗೆ ತಂಡವು ₹11 ಕೋಟಿ ನೀಡಿ ಉಳಿಸಿಕೊಂಡಿತ್ತು. ಅವರಲ್ಲದೇ ವಿರಾಟ್ ಕೊಹ್ಲಿ (₹ 21 ಕೋಟಿ) ಮತ್ತು ಬೌಲರ್ ಯಶ್ ದಯಾಳ್ ( 5 ಕೋಟಿ) ಅವರನ್ನೂ ಫ್ರಾಂಚೈಸಿಯು ರಿಟೇನ್ ಮಾಡಿಕೊಂಡಿತ್ತು. ನಾಯಕ ಫಫ್ ಡುಪ್ಲೆಸಿ, ವೇಗಿ ಮೊಹಮ್ಮದ್ ಸಿರಾಜ್ ಸೇರಿದಂತೆ ಉಳಿದೆಲ್ಲರನ್ನೂ ಬಿಡುಗಡೆ ಮಾಡಿತ್ತು.
ಇದನ್ನೂ ಓದಿ:ಅನಪೇಕ್ಷಿತ ಕರೆ, ಸಂದೇಶ ‘ಟ್ರಾಯ್’ ನಿಯಮ ಬಿಗಿ
ಆದರೆ 2025ರ ಟೂರ್ನಿಗಾಗಿ ನಡೆದಿದ್ದ ಮೆಗಾ ಹರಾಜಿನಲ್ಲಿ ನಾಯಕತ್ವದ ಅನುಭವ ಹೊಂದಿರುವ ರಿಷಭ್ ಪಂತ್, ಕೆ.ಎಲ್. ರಾಹುಲ್ ಅಥವಾ ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರನ್ನು ಖರೀದಿಸುವಲ್ಲಿ ವಿಫಲವಾಗಿತ್ತು. ಆದ್ದರಿಂದ ಈಗ ನಾಯಕತ್ವದ ಹೊಣೆಯು ರಜತ್ ಹೆಗಲೇರಿದೆ.ತಂಡವು ಐಪಿಎಲ್ನಲ್ಲಿ 3 ಸಲ ರನ್ನರ್ಸ್ ಅಪ್ ಆಗಿದೆ. 2016ರಲ್ಲಿ ಕೊಹ್ಲಿ ನಾಯಕತ್ವದಲ್ಲಿ ಫೈನಲ್ ತಲುಪಿತ್ತು. ಅದರ ನಂತರ ಈ ಪ್ರಶಸ್ತಿ ಸುತ್ತು ಪ್ರವೇಶಿಸಲು ತಂಡಕ್ಕೆ ಸಾಧ್ಯವಾಗಿಲ್ಲ.
ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ತಂಡದ ಮುಖ್ಯ ಕೋಚ್ ಆ್ಯಂಡಿ ಪ್ಲವರ್, ‘ಸರಳ ವ್ಯಕ್ತಿತ್ವದ ರಜತ್ತಮ್ಮೊಂದಿಗೆ ಇರುವವರ ಬಗ್ಗೆ ಅಪಾರ ಕಾಳಜಿ ವಹಿಸುತ್ತಾರೆ. ಮಧ್ಯಪ್ರದೇಶ ತಂಡವನ್ನು ಅವರು ಮುನ್ನಡೆಸಿದ ರೀತಿಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ್ದೇವೆ. ಅವರ ರೀತಿ, ನೀತಿಗಳು ನಮಗೆ ಇಷ್ಟವಾದವು. ಆದ್ದರಿಂದ ಅವರನ್ನು ನಾಯಕನ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ’ ಎಂದರು.ರಜತ್ ಕಳೆದ ದೇಶಿ ಋತುವಿನಲ್ಲಿ ಸೈಯದ್ ಮುಸ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವನ್ನು ಮುನ್ನಡೆಸಿದ್ದರು. ತಂಡವು ರನ್ನರ್ಸ್ ಅಪ್ ಆಗಿತ್ತು. ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ನಲ್ಲಿಯೂ ಅವರು ನಾಯಕತ್ವ ವಹಿಸಿದ್ದರು.
ವಿರಾಟ್ ಅವರೊಂದಿಗೆ ಕಳೆದ ಕೆಲವು ವರ್ಷಗಳಿಂದ ಆಡುತ್ತಿದ್ದೇನೆ. ಅವರು ಒಳ್ಳೆಯ ಮಾರ್ಗದರ್ಶಕರು. ಅವರ ಅನುಭವ ಮತ್ತು ಬೆಂಬಲವು ನನ್ನ ಹೊಣೆ ನಿಭಾಯಿಸಲು ನೆರವಾಗಲಿದೆ. ಎಲ್ಲ ಆಟಗಾರರೊಂದಿಗೂ ಸಮನ್ವಯ ಸಾಧಿಸಿ ತಂಡವನ್ನು ಮುನ್ನಡೆಸುವುದು ನನ್ನ ಗುರಿ’ ಎಂದು ರಜತ್ ಹೇಳಿದರು.’ಪಂದ್ಯಗಳಲ್ಲಿ ಅನುಕ್ಷಣವೂ ಆಳವಾಗಿ ತೊಡಗಿಕೊಂಡು ಪರಿಸ್ಥಿತಿಯನ್ನು ಚೆನ್ನಾಗಿ ಅರಿತು ಕ್ರಮ ವಹಿಸುವಸಾಮರ್ಥ್ಯ ಇದೆ. ನನ್ನ ತಂಡದ ಆಟಗಾರರಿಗೆ ಬೆಂಬಲವಾಗಿ ನಿಲ್ಲಬೇಕು. ಎಲ್ಲ ಸಂದರ್ಭಗಳಲ್ಲಿಯೂ ಅವರೊಂದಿಗಿರುತ್ತೇನೆ. ಅವರು ಆತ್ಮವಿಶ್ವಾಸ ಮತ್ತು ಒತ್ತಡರಹಿತ ವಾಗಿರುವಂತಹ ವಾತಾವರಣ ನಿರ್ಮಿಸುವೆ’ ಎಂದರು.ಫ್ರಾಂಚೈಸಿಯ ಸಿಒಒ ರಾಜೇಶ್ ಮೆನನ್, ರಜತ್ ಅವರಿಗೆ ಕ್ಯಾಪ್ ಪ್ರದಾನ ಮಾಡಿದರು. ತಂಡದ ನಿರ್ದೇಶಕ ಮೊ ಬೊಬಾಟ್ ಹಾಜರಿದ್ದರು.