ಎಲ್ಲಾ ಕ್ಷೇತ್ರದಲ್ಲೂ ಕನ್ನಡಕ್ಕೆ ಆದ್ಯತೆ ನೀಡಿ

ಎಲ್ಲಾ ಕ್ಷೇತ್ರದಲ್ಲೂ ಕನ್ನಡಕ್ಕೆ ಆದ್ಯತೆ ನೀಡಿ

ದೊಡ್ಡಬಳ್ಳಾಪುರದ ನ್ಯಾಯಾಲಯ ಅವರಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಹಾಗೂ ವಕೀಲರ ದಿನಾಚರಣೆಯನ್ನು ನ್ಯಾಯಮೂರ್ತಿ ಕೆ. ಸೋಮಶೇಖರ್ ಉದ್ಘಾಟಿಸಿದರು.

ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯೋತ್ಸವ ಆಚರಣೆ ಜೊತೆಗೆ ಪ್ರತಿಯೊಬ್ಬ ಕನ್ನಡಿಗರು ನಿತ್ಯದ ಪ್ರತಿ ಕ್ಷೇತ್ರಗಳಲ್ಲಿ ಕನ್ನಡ ಭಾಷಾ ಬಳಕೆಯ ಕಡೆಗೂ ಅದ್ಯತೆ ನೀಡಬೇಕು. ಆಗ ಮಾತ್ರ ನಮ್ಮ ಭಾಷೆ ಬದಲಾದ ಕಾಲಮಾನದ ಶಬ್ದಗಳನ್ನು ಒಳಗೊಂಡು ಬೆಳೆಯಲು ಸಹಕಾರಿಯಾಗಲಿದೆ ಎಂದು ರಾಜ್ಯದ ಉಚ್ಛ ನ್ಯಾಯಾಲಯ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್ ಹೇಳಿದ್ದರು .

ತಾಲೂಕು ವಕೀಲರ ಸಂಘದ ವತಿಯಿಂದ ನಗರದ ನ್ಯಾಯಾಲಯ ಆವರಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಹಾಗೂ ವಕೀಲರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ ,ಅನ್ಯ ಭಾಷೆಯಿಂದ ನಮ್ಮ ಭಾಷೆಗೆ ಅನುವಾದ ಮಾಡುವಾಗ ನಮ್ಮ ಭಾಷೆ ಮೇಲಿನ ಹಿಡಿತ ಸಾಧಿಸಿರುವುದು ಮುಖ್ಯವಾಗುತ್ತದೆ .ನಮ್ಮ ಮನೆಗಳಿಂದಲೇ ಭಾಷೆಯ ಕ್ರಮಬದ್ಧ ಸಮೃದ್ಧ ಪದಕೋಶಕ್ಕೆ ನಾವು ಸದಾ ಕಿಟ್ಟಲ್ ಅವರನ್ನು ಸ್ಮರಿಸಬೇಕು. ಕನ್ನಡ ಭಾಷೆ ಸೇರಿದಂತೆ ಯಾವುದೇ ಒಂದು ಭಾಷೆಯ ಪ್ರೌಢಿಮೆ ಹೆಚ್ಚಲು ಶಬ್ದಕೋಶಗಳು ಮುಖ್ಯವಾಗಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ:- ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ. ಗೀತಾ ಮಾತನಾಡಿ, ನ್ಯಾಯಾಲಯಗಳಲ್ಲಿ ಉತ್ತಮ ತೀರ್ಪು, ಆದೇಶಗಳು ಬರಲು ವಕೀಲರು ಅಷ್ಟೇ ಉತ್ತಮವಾಗಿ ವಾದಗಳನ್ನು ಮಂಡಿಸುವುದು ಮುಖ್ಯ ಎಂದರು.

ನ್ಯಾಯಾಲಯದಲ್ಲಿ ಕನ್ನಡ ಬಳಸಿ: ನಗರದ ಹಿರಿಯ ವಕೀಲ ಅಸದುಲ್ಲಾಖಾನ್ ಮಾತನಾಡಿ, ಫಜಲ್ ಅಲ್ಲಿ ಆಯೋಗ ನೀಡಿದ ವರದಿಯು ದೇಶದಲ್ಲಿ ಭಾಷಾವಾರು ರಾಜ್ಯಗಳ ಉದಯಕ್ಕೆ ನಾಂದಿಯಗಿದೆ. ರಾಜ್ಯದ ಏಕೀಕರಣದಲ್ಲಿ ಕಸಾಪ ಎಲ್ಲರನ್ನೂ ಒಂದು ವೇದಿಕೆಯಡಿ ಬರುವಂತೆ ಮಾಡಿದೆ. ನ್ಯಾಯಾಲಯದಲ್ಲೂ ಕನ್ನಡ ಭಾಷೆ ಬಳಕೆಯ ಕಡೆಗೆ ಹೆಚ್ಚಿನ ಒತ್ತು ನೀಡಬೇಕು. ನಮ್ಮ ನ್ಯಾಯಾಲಯದಲ್ಲಿ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಮೇಶ್ ದುರುಗಪ್ಪ ಏಕ ಬೋಟೆ ಅವರು ಆದೇಶಗಳಿಂದ ಮೊದಲುಗೊಂಡು ತೀರ್ಪುಗಳವರೆಗೂ ಕನ್ನಡ ಭಾಷೆ ಬಳಸುವುದು ಹಾಗೆಯೇ ಇಂಗ್ಲಿಷ್ ಭಾಷೆ ಮೇಲಿನ ಅವರ ಪ್ರಭುದ್ಧತೆಯು ಎಲ್ಲಾ ಯುವ ವಕೀಲರಿಗೆ ಸ್ಪೂರ್ತಿಯಾಗಿದೆ. ಯಾರೂ ಸಹ ಯಾವುದೇ ಭಾಷೆ ಯ ಮೇಲು ಭಾಷಾ ಮತ್ಸರ ಬೆಳೆಸಿಕೊಳ್ಳಬಾರದು ಎಂದು ಹೇಳಿದರು.

ಎಂ. ಎಸ್. ನರಸಿಂಹಮೂರ್ತಿ ತಂಡದಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಮಾವಿನಕುಂಟೆ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಿಲ್ಪ,1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಜೆ. ಎಸ್. ಪ್ರವೀಣ್, 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯದೀಶರಾದ ರವಿ ಬೆಟರ್ಗಾ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ. ಕೃಷ್ಣಮೂರ್ತಿ, ಉಪಾಧ್ಯಕ್ಷ ಎಂ.ಅರ್. ಸುರೇಶ್, ಖಜಾಂಚಿ ಎಂ. ಮುನಿರಾಜು, ಜಂಟಿ ಕಾರ್ಯದರ್ಶಿ ವಿಜಯ ಕುಮಾರ್ ಹಾಗೂ ಸಂಘದ ಪಾದಾಧಿಕಾರಿಗಳು ಹಾಜರಿದ್ದರು.

Leave a Comment