ಐತಿಹಾಸಿಕ ತೀರ್ಪು
ಅಖಿಲ ಭಾರತ ನಾಗರಿಕ ಸೇವಾ (ಸಿವಿಲ್ ಸರ್ವಿಸ್) ಹುದ್ದೆಗಳ ಪರೀಕ್ಷೆಗಳಲ್ಲಿ ಇತರ ಮೀಸಲು ಅಭ್ಯರ್ಥಿಗಳಿಗೆ ನೀಡಲಾಗಿರುವ ಸೌಲಭ್ಯಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗದ (ಎಕನಾಮಿಕಲಿ ವೀಕರ್ ಸೆಕ್ಷನ್ – ಇಡಬ್ಲ್ಯುಎಸ್) ” ಅಭ್ಯರ್ಥಿಗಳಿಗೂ ನೀಡಬೇಕು ಎಂಬ ಬಹುದಿನಗಳ ಬೇಡಿಕೆಗೆ ಕೊನೆಗೂ ಫಲ ದೊರೆತಿದೆ. ಈ ತಾರತಮ್ಯದ ವಿರುದ್ಧ ಮಧ್ಯಪ್ರದೇಶದ ಮೈಹಾರ್ ನಗರದ ಅದಿತ್ಯ ನಾರಾಯಣ್ ಪಾಂಡೆ ಎಂಬುವವರು ಮಧ್ಯಪ್ರದೇಶ ಹೈಕೋರ್ಟ್ನ ಮೊರೆ ಹೋಗಿದ್ದರು. ಮುಖ್ಯ ನ್ಯಾಯಮೂರ್ತಿ ಸುರೇಶ್ಕುಮಾರ್ ಕೈಟ್ ಹಾಗೂ ನ್ಯಾಯಮೂರ್ತಿ ಸುರೇಶ್ ಜೈನ್ ಅವರಿದ್ದ ಪೀಠ ಮಹತ್ವದ ಮಧ್ಯಂತರ ಆದೇಶವನ್ನು ಮಂಗಳವಾರ ಪ್ರಕಟಿಸಿದೆ. ಇಡಬ್ಲ್ಯುಎಸ್ ವರ್ಗದವರಿಗೆ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷ ವಿನಾಯಿತಿ ನೀಡಬೇಕಲ್ಲದೆ, ಇತರ ಮೀಸಲು ಅಭ್ಯರ್ಥಿಗಳಿಗೆ ನೀಡುವಂತೆ ಗರಿಷ್ಠ 9 ಬಾರಿ ಪರೀಕ್ಷೆಗೆ ಹಾಜರಾಗಲು ಅವಕಾಶ ಒದಗಿಸಬೇಕು ಎಂದು ಪರೀಕ್ಷೆಗಳನ್ನು ಸಂಘಟಿಸುವ ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್ಸಿ) ನ್ಯಾಯಾಧೀಶರು ನಿರ್ದೇಶನ ಆರ್ಥಿಕವಾಗಿ ನೀಡಿದ್ದಾರೆ.
ಹಿಂದುಳಿದವರ ಪಾಲಿಗೆ ಇದು ಐತಿಹಾಸಿಕ ತೀರ್ಪು ಎಂದೇ ಏಕೆಂದರೆ, ಪರಿಗಣಿತವಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದವರನ್ನು ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ಇದುವರೆಗೆ ಒಂದೇ ತಕ್ಕಡಿಯಲ್ಲಿ ಇಟ್ಟು ನೋಡಲಾಗುತ್ತಿತ್ತು. ಸಾಮಾನ್ಯ ವರ್ಗದವರಿಗೆ ನಿಗದಿಪಡಿಸಿದ ಮಾನದಂಡಗಳನ್ನೇ ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೂ ಅನ್ವಯಿಸಲಾಗುತ್ತಿತ್ತು. ಆದರೆ ಈ ಅಭ್ಯರ್ಥಿಗಳು ಮೀಸಲು ಅಭ್ಯರ್ಥಿಗಳಿಗೆ ಸಮವಾಗಿದ್ದು, ಅವರಿಗೆ ಸಿಗುವ ಸೌಲಭ್ಯಗಳನ್ನೇ ನೀಡುವುದು ನ್ಯಾಯೋಚಿತ ಎಂಬ ವಾದ ವ್ಯಾಪಕವಾಗಿತ್ತು. ಯುಪಿಎಸ್ಸಿ 2025ನೇ ಸಾಲಿನ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಒಟ್ಟು 1129 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲು ಅನುವು ಮಾಡಿಕೊಂಡಿದ್ದು, ಆ ಪೈಕಿ ನಾಗರಿಕ ಸೇವಾ ಪರೀಕ್ಷೆಗೆ 979, ಭಾರತೀಯ ಅರಣ್ಯ ಸೇವೆಗೆ 150 ಹುದ್ದೆಗಳನ್ನು ಮೀಸಲಿರಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ, ಅಂಗವಿಕಲರಿಗೆ ಮತ್ತು ಮಾಜಿ ಯೋಧರಿಗೆ ಗರಿಷ್ಠ 5 ವರ್ಷ ಹಾಗೂ ಹಿಂದುಳಿದ ವರ್ಗದವರಿಗೆ 3 ವರ್ಷಗಳ ವಯೋ ಸಡಿಲಿಕೆಯು ನಾಗರಿಕ ಸೇವಾ ಹುದ್ದೆಗಳ ಪರೀಕ್ಷೆಯಲ್ಲಿ ಈಗಾಗಲೇ ಇದೆ.
ಇದನ್ನೂ ಓದಿ: ನದಿಸ್ನಾನವು ಪ್ರಕೃತಿ ಜತೆ ಬೆಸೆಯುವ ಕ್ರಿಯೆ
ಸಾಮಾನ್ಯ ವರ್ಗದ ಅಭ್ಯರ್ಥಿಗಳು ಗರಿಷ್ಠ 6 ಬಾರಿ, ಹಿಂದುಳಿದ ವರ್ಗದವರು 9 ಬಾರಿ ಪರೀಕ್ಷೆಗೆ ಹಾಜರಾಗಿ ತಮ್ಮ ಪ್ರತಿಭೆ/ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡದವರು ಪರೀಕ್ಷೆಗೆ ಹಾಜರಾಗಲು ಯಾವುದೇ ಮಿತಿ ನಿಗದಿಪಡಿಸಲಾಗಿಲ್ಲ. ಈ ಸೌಲಭ್ಯವನ್ನು ಆರ್ಥಿಕವಾಗಿ ಹಿಂದುಳಿದವರಿಗೂ ವಿಸ್ತರಿಸಬೇಕು ಎಂಬ ವಾದವನ್ನು ಹಲವರು ಮುಂದಿಟ್ಟಿದ್ದರು. ಈ ವಾದವನ್ನು ಹೈಕೋರ್ಟ್ ನ್ಯಾಯಾಧೀಶರು ಪುರಸ್ಕರಿಸಿದ್ದು, ಇದರಿಂದ ಎಲ್ಲ ಆರ್ಥಿಕ ಹಿಂದುಳಿದ ಅಭ್ಯರ್ಥಿಗಳಿಗೆ ಸೌಲಭ್ಯ ದೊರೆಯಲಿರುವುದು ಸ್ವಾಗತಾರ್ಹವಾಗಿದೆ. ಆದರೆ ಇದು ಕೇವಲ ಮಧ್ಯಂತರ ಆದೇಶ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್ ನ್ಯಾಯಾಧೀಶರು, ಅಂತಿಮ ತೀರ್ಪಿಗೆ ಇದು ಒಳಪಟ್ಟಿರುತ್ತದೆ ಎಂದು ಹೇಳಿದ್ದಾರೆ. ಇನ್ನು ಕೆಲ ಕಾಲದ ಬಳಿಕ ಹೊರಬೀಳಲಿರುವ ಅಂತಿಮ ತೀರ್ಪಿನಲ್ಲೂ ಆರ್ಥಿಕ ಹಿಂದುಳಿದವರಿಗೆ ನ್ಯಾಯ ದೊರಕುತ್ತದೆ ಎಂಬ ವಿಶ್ವಾಸ ಎಲ್ಲರದಾಗಿದೆ.