ಒಂದು ಪಾದಯಾತ್ರೆ…

ಒಂದು ಪಾದಯಾತ್ರೆ…

ಇಂಥ ಅನಿಶ್ಚಿತತೆಯ ನಡುವೆಯೇ ಶಿಸ್ತು, ಕಲಿಕೆ ಮತ್ತು ಬದುಕು ಸಾಗುತ್ತದೆ ಎಂಬ ಸತ್ಯವನ್ನು ಈ ಹುಡುಗರಿಗೆ ತಿಳಿಸಬೇಕಿತ್ತು. ಹಾಗೇ ಮಾಡಿದೆವು. ಜೊತೆಗೇ ಕೊಂಡೊಯ್ದಿದ್ದ ಚರಕದಲ್ಲಿ ನೂಲನ್ನು ತೆಗೆಯುವ ಕೆಲಸವೂ ನಡೆಯಿತು’ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಸಂತೋಷ ಕೌಲಗಿ ಹೇಳಿದರು.32ರ ಸುಮನಸ ಕೌಲಗಿಯವರನ್ನು ಈ ಹುಡುಗರು ಅಣ್ಣನೆಂದೇ ಭಾವಿಸಿದ್ದಾರೆ. ಇಂಗ್ಲೆಂಡ್‌ನ ಯೂನಿವರ್ಸಿಟಿ ಆಫ್ ಸಸ್ಪೆಕ್ಸ್‌ನ ಅಂತರರಾಷ್ಟ್ರೀಯ ಅಭಿವೃದ್ಧಿ ವಿಭಾಗದಲ್ಲಿ ಸ್ವರಾಜ್ಯ ಪರಿಕಲ್ಪನೆಯ ಬಗ್ಗೆಯೇ ಸಂಶೋಧನೆ ಮಾಡಿ ಪಿಎಚ್‌.ಡಿ ಪದವಿ ಪಡೆದಿದ್ದಾರೆ. ಅವರೂ ಪಾದಯಾತ್ರೆಯ ಭಾಗವಾಗಿದ್ದರು.ಗಾಂಧೀಜಿಯ ವಿಚಾರಗಳಿಂದ ಪ್ರೇರಣೆ ಪಡೆದು, 60ರ ದಶಕದಲ್ಲಿ ಸಮಾಜಸೇವೆಯ ಆಶಯದೊಂದಿಗೆ ಟ್ರಸ್ಟ್ ಆರಂಭಿಸಿದ ಅವರ ತಾತ, ‘ದಾದಾ’ ಎಂದೇ ಪ್ರಖ್ಯಾತರಾದ ಸುರೇಂದ್ರ

ಕೌಲಗಿ ಹಾಕಿಕೊಟ್ಟ ದಾರಿಯನ್ನೇ ಸುಮನಸ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗೆ ಮೂರು ತಲೆಮಾರು ಕಾಲದ ಅಗತ್ಯಗಳಿಗೆ ತಕ್ಕಂತೆ ಸೇವೆಯ ವ್ಯಾಖ್ಯೆಯನ್ನು ಬದಲಾಯಿಸಿಕೊಳ್ಳುತ್ತಾ, ಟ್ರಸ್ಟ್‌ನ ಹೊಸ ರೂಪಗಳಿಗೆ ದಾಟಿಸುತ್ತಾ ಹಾಗೇ ಬದುಕುತ್ತಾ ಬರುತ್ತಿದ್ದಾರೆ. ಕುವೆಂಪು ಅವರ ‘ಅನಿಕೇತನ’ ಪದ್ಮ ನಿಮಗೆ ನೆನಪಾಗಲೇಬೇಕು.ಪಾದಯಾತ್ರೆಯಿಂದ ವಿಷಯ ಬೇರೆಡೆಗೆ ಹೊರಳಿತು ಎನ್ನಿಸುತ್ತಿರಬಹುದು. ಹಾಗೇನಿಲ್ಲ. ‘ಹೊಸ ಜೀವನ ದಾರಿ’ ಎಂಬುದು ಕೌಲಗಿಯವರ ಮನೆ ಹೇಗೋ, ಈ ಆರು ಹುಡುಗರ ಮನೆಯೂ ಆಗಿಬಿಟ್ಟಿದೆ. ಮನೆಯ ಕುರಿತ ಭಾವ ಬಂಧಗಳು ಕಳಚಿ ಬೀಳುತ್ತಿರುವ ಹೊತ್ತಿನಲ್ಲಿ ಅದನ್ನು ಪುನರುಜ್ಜಿವಿಸುವ ನಿದರ್ಶನ ಇಲ್ಲಿ ಇದೆ ಎಂಬುದೇ ವಿಶೇಷ.

ಈ ಹುಡುಗರು ಆಗ ಮನೆ, ಶಾಲೆ ಬಿಟ್ಟು ಬಂದವರು. ಈಗ ಹೊಸ ಮನೆ, ಹೊಸ ಶಾಲೆಯಲ್ಲಿ ನೆಲೆ ನಿಂತಿದ್ದಾರೆ. ಇದು ಸಾಂಪ್ರದಾಯಿಕ ತರಗತಿ,ಬೆಲ್ಲು, ಸಮವಸ್ತ್ರ, ಬೋಧನೆ -ತರಗತಿಯುಳ್ಳ ಶಾಲೆಯಲ್ಲ. ಸ್ವಾವಲಂಬನೆ, ಅಹಿಂಸೆ, ಬೇಡಿಕೆ-ಪೂರೈಕೆಗಳ ನಡುವಿನ ವ್ಯತ್ಯಾಸವನ್ನು ಕಡಿಮೆ ಮಾಡುವಂಥ ಬದುಕು, ಯಂತ್ರಗಳನ್ನು ಕಳಚಿ ಕೈಗಳನ್ನೇ, ಗುಡಿ ಕೈಗಾರಿಕೆಯನ್ನೇ ನೆಚ್ಚಿಕೊಂಡು ಸಾಗಬೇಕೆಂಬ ಸಾತ್ವಿಕ ಹಟದ ನಿಲುವು. ಅಂಥ ನಿಲುವನ್ನು ಗಟ್ಟಿಗೊಳಿಸಿಕೊಳ್ಳುವತ್ತ ನಡೆದ ನಡಿಗೆ ಈ ನಡಿಗೆಗೆ ಮೂನ್‌ಫ್ರಾಗ್ ಸಂಸ್ಥೆಯ ಕಾರ್ಪೊರೆಟ್ ಸಾಮಾಜಿಕ ಜವಾಬ್ದಾರಿಯ ನಿಧಿಯ ನೆರವೂ ಇದೆ.

ಇದನ್ನೂ ಓದಿ:ಮೇರು ಸಾಧಕರಿಗೆ ನೂರರ ನಮನ

‘ಜನಪದ ಸೇವಾ ಟ್ರಸ್ಟ್’ ನೆರಳಿನಲ್ಲಿರುವ ‘ಜೀವನಶಾಲೆ’ಯ ವಿಸ್ತ್ರತ” ರೂಪವೆಂಬಂತೆ, ಎರಡು ವರ್ಷದ ಹಿಂದೆ ಅರಳಿ ನಿಂತಿರುವ ‘ಹೊಸ ಜೀವನ ದಾರಿ’ಯ ಪ್ರಯೋಗಪಾಠಗಳಲ್ಲಿ ಪಾದಯಾತ್ರೆಯೂ ಒಂದು. ಮಾನವ ಅಭಿವೃದ್ಧಿ, ಮತ್ತು ಜೀವನಶೈಲಿಗೆ ಇರುವ ಸಂಬಂಧಾಂತರಗಳನ್ನು ಸುಸ್ಥಿರ ವಿವರಿಸಿಕೊಳ್ಳಲು ಕೈದೀವಿಗೆಯಂಥ ಶಾಲೆ.’ಇದನ್ನು ಮೊದಲ ಬಾರಿಗೆ ನೋಡಿದವರಿಗೆ ಇದರಿಂದ ಏನು ಪ್ರಯೋಜನ ಎಂಬ ನಕಾರಾತ್ಮಕ ಭಾವನೆ ಬರಬಹುದು. ಆದರೆ, ಇದು ದೀರ್ಘಕಾಲದ ನಡಿಗೆಯನ್ನೇ ನೆಚ್ಚಿಕೊಂಡ ಕಲಿಕೆಯ ದಾರಿ. ಈ ಹುಡುಗರಿಗೆ ಕೊಂಚ ಸ್ಪೆಫಂಡ್, ಕೊಂಚ ಉಳಿತಾಯ. ಉಳಿಸಿದ್ದನ್ನೇ ಮತ್ತೆ ಬಂಡವಾಳವಾಗಿಸಿಕೊಳ್ಳುವ ಪಾಠಗಳೂ ಇವೆ.’ಪರಿಚಯ ಪತ್ರ, ಯಾರ ಕಣ್ಣಾವಲೂ ಇಲ್ಲದೆ, ಜಗವನ್ನು ಸುತ್ತಿ ಬರಬಲ್ಲ. ವ್ಯವಹರಿಸಬಲ್ಲ ಅತ್ಮವಿಶ್ವಾಸ ಈ ಎರಡು ವರ್ಷಗಳಲ್ಲಿ ಮೂಡಿದೆ. ನಾಲ್ಕು ವರ್ಷಕ್ಕೆಂದು ರೂಪಿಸಿದ್ದ ಕೋರ್ಸ್ ಎರಡೇ ವರ್ಷಕ್ಕೆ ಮುಗಿಯುವಂತಾಗಿದೆ’ ಎಂದು ಸಂತೋಷ ಕೌಲಗಿ ಅಚ್ಚರಿ ಪಡುವಷ್ಟರ ಮಟ್ಟಿಗೆ ಕೇಂದ್ರ ಮುನ್ನಡೆದಿದೆ.

ಬೇಡಿಕೆ, ಉತ್ಪಾದನೆ, ಮಾನವ-ಪರಿಸರ ಸಂಪನ್ಮೂಲಗಳ ಬಳಕೆ, ಯಾಂತ್ರೀಕರಣ, ಅಭಿವೃದ್ಧಿ ಎಲ್ಲವೂ ಅತಿಯಾಗಿರುವ ಕಾಲಘಟ್ಟದಲ್ಲಿ, ‘ಈ ಸ್ವರಾಜ್ಯದ ಪರಿಕಲ್ಪನೆಯ ಕಲಿಕೆ-ಪಾದಯಾತ್ರೆಯು ನಿಧಾನಗತಿಯಲ್ಲಿದೆ. ಪರಿಣಾಮಗಳು ಎದ್ದು ಕಾಣುವುದೇ ಇಲ್ಲವಲ್ಲ’ ಎಂದು ಅನ್ನಿಸಿದರೆ ಟ್ರಸ್ಟ್‌ನ ಎಲ್ಲರೂ, ‘ಸ್ವಲ್ಪ ಕಾಯಿರಿ. ನಾವೂ ಕಾಯುತ್ತಿದ್ದೇವೆ’ ಎಂದು ತಣ್ಣಗೆ ನಗುತ್ತಾರೆ. ಹಾಗೆ ಕಾಯುತ್ತಲೇ ಹಲವರ ಬದುಕುಗಳು ಬದಲಾದ ನಿದರ್ಶನಗಳು ಅವರೊಂದಿಗೆ ಇವೆ. ಈಗ ಎಲ್ಲರೂ ದಿಢೀರ್ ಫಲಿತಾಂಶ ಬಯಸುತ್ತಿದ್ದಾರೆ. ಆದರೆ, ಜನಪದ ಸೇವಾ ಟ್ರಸ್ಟ್‌ನ ಎಲ್ಲರೂ ‘ಹೊಸ ಜೀವನ ದಾರಿಯಲ್ಲಿ ಫಲಿತಾಂಶ ಬರುವ ವೇಳೆಯಲ್ಲೇ ತಾನಾಗೇ ಬರಲಿ’ ಎಂದು ತಮ್ಮ ಕಾಯಕದಲ್ಲಿ ತೊಡಗಿದ್ದಾರೆ. ಈ ಹುಡುಗರೂ ಹೊಸ ಕಾಲದ ಎಲ್ಲ ಭ್ರಮೆಗಳನ್ನು ಕಳಚಿಕೊಳ್ಳುತ್ತಿದ್ದಾರೆ. ಹೊಸ ಜೀವನ ದಾರಿಯ ಆಶಾವಾದ ಅವರ ಕಣ್ಣು, ಪಾದಗಳಲ್ಲಿದೆ.

Leave a Comment