ಕವಿತೆಗೆ ಇದು ಕಾಲವಲ್ಲವೇ?
ಈ ಬಾರಿ ಕವನ ಸಂಕಲನಗಳ ಬಗ್ಗೆ ಗ್ರಂಥಾಲಯ ಇಲಾಖೆ ತೋರಿಸಿಲ್ಲ.ಕವಿಗೋಷ್ಠಿಯಲ್ಲಿ ಕೇಳುಗರಿರುವುದಿಲ್ಲ ಎಂಬುದು ಹೊಸ ಸುದ್ದಿ ಏನಲ್ಲ ಪ್ರಕಾಶಕಾರಿಗೆ ಕವನ ಸಂಕಲನ ಮಾಡುವಿರಾ ಅಂತ ಕೇಳಿದರೆ ಬೆಚ್ಚಿ ಬೀಳುತ್ತಾರೆ. ಕವನಸಂಕಲನಗಳು ಯಾರೂ ಕವದಿಯದ ವಸ್ತುಗಳಾಗಿವೆ. ಕವನಗಳ ಬಗ್ಗೆ ಅಸಡ್ಡೆ ಮೂಡತೊಡಗಿದೆ.
ಬದುಕಿನ ಜಂಜಡಾಗಳಿಗೆ ಕವಿತೆಯಲ್ಲಿ ಉತ್ತರವಿದೆ. ಬಹುಶಃ ಕವಿತೆಯನ್ನು ಸಮಾಜವನ್ನು ಬೇರಾವುದೂ ಅಷ್ಟು ಪರಿಣಾಮಕಾರಿಯಾಗಿ ತಿದ್ದುವುದಿಲ್ಲ, ಅದೊಂದು ದಿವ್ಯ ಔಷಧ. ಕವಿತೆಯೇ ಸಾಹಿತ್ಯದ ನಿಜವಾದ ಅಭಿವ್ಯಕ್ತಿ ಅನ್ನುತ್ತಾರೆ ಕುವೆಂಪು. ”ಕವಿಗಳು ಜಗತ್ತಿನ ಅಘೋಷಿತ ಶಾಸಕರು,” ಎನ್ನುತ್ತಾನೆ ಶೆಲ್ಲಿ, ಕವಿತೆಗಳು ಶಾಸನಗಳಾಗುತ್ತವೆ. ಬಹುಶಃ ಕಾವ್ಯಕ್ಕೆ ಹೆದರಿಯೇ ಪ್ಲೇಟೊ ಕವಿಗಳನ್ನು ತನ್ನ ಆದರ್ಶ ರಾಜ್ಯದಿಂದ ಹೊರಹಾಕಲು ಯೋಚಿಸಿದ್ದನಾ? ಅಂಥ ಕವಿತೆಗಳು ಇಂದು ಅಸಡ್ಡೆಗೆ ಒಳಗಾಗುತ್ತಿವೆ.
ಸಮಾಜದ ಆದ್ಯತೆಗಳು ಬೇರೆಯಾಗಿವೆ. ಮಚ್ಚು ಕೊಲೆಯ ಸಿನಿಮಾ ದುಡಿಯುವ ದುಡ್ಡನ್ನು ಪ್ರೀತಿ ಹಂಚುವ ಸಿನಿಮಾ ದುಡಿಯುವುದಿಲ್ಲ. ಸಮಾಜ ಅವಸರದಲ್ಲಿದೆ. ಅದರ ಅವಧಾನ ಕೇವಲ ಒಂದು ರೀಕ್ಷೆ ನೋಡುವ ಸಮಯದ್ದು, ಸಮಾಜ ತನ್ನ ಸೂಕ್ಷ್ಮತೆ ಕಳೆದುಕೊಂಡಿದೆ.ಒಂದು ಗೂಡಾರ್ಥದ ಕವಿತೆಯನ್ನು ಓದಿಕೊಂಡು ಅಥವಾ ಕೇಳಿಸಿಕೊಂಡು ಅದನ್ನು ತನ್ನದು ಮಾಡಿಕೊಳ್ಳುವಷ್ಟು ವ್ಯವಧಾನ ಅದಕ್ಕಿಲ್ಲ, ಅದೀಗ ತನ್ನನ್ನು ಕಂಡುಕೊಳ್ಳಲು ಸುಲಭದ ದಾರಿಯನ್ನು ಆಯ್ದುಕೊಂಡಿದೆ. ಮತ್ತು ಅದು ಯಾವಾಗಲೂ ತತ್ಕ್ಷಣದ ಲಾಭ ಕೇಳುತ್ತದೆ. ಅದರ ಮುಂದೆ ಒಳ್ಳೆ ಕವಿತೆ ಮತ್ತು ಒಂದು ಕೆಟ್ಟ ಕವಿತೆ ಎರಡೂ ಒಂದೇ.ಕವಿತೆ ಮತ್ತು ಕಾಲ ಎರಡೂ ವಿಮರ್ಶೆಗೆ ಒಳಗಾಗಬೇಕಿದೆ. ಕವಿ ಮತ್ತು ಕವಿತೆ ಎರಡನ್ನೂ ಕಾಲದ ಕನ್ನಡಿಯಲ್ಲಿ ನೋಡಬೇಕಿದೆ. ಈ ಕಾಲದ ಕವಿತೆಗಳು ಸರಿಯಿಲ್ಲ ಅನ್ನುವವರು, ಅವು ಕವಿತೆಗಳೇ ಅಲ್ಲ ಅನ್ನುವವರಲ್ಲಿ ಹೆಚ್ಚಿನವರು ಈ ಕಾಲದ ಕವಿತೆಗಳನ್ನೇ ಓದಿರುವುದಿಲ್ಲ.
ಇದನ್ನೂ ಓದಿ:ಕರೆದರೂ ಕೇಳದೆ.., ಐದನೇ ತಲೆಮಾರಿನ ಅಂತರಂಗದ ಪಿಸುಮಾತು
ಕವನ ಸಂಕಲನಗಳು ಮಾರಾಟ ಆಗಿಯೇ ಇಲ್ಲ ಅಂದಮೇಲೆ ದೊಡ್ಡಮಟ್ಟದ ಓದು ಸಾಧ್ಯವಾದದ್ದಾರೂ ಎಲ್ಲಿ?ಎಲ್ಲಾ ಕಾಲಕ್ಕೂ ಒಳ್ಳೆಯ ಕವಿತೆಗಳು, ಕಳಪೆ ಕವಿತೆಗಳೂ ಇರುತ್ತವೆ. ಈ ಕಾಲದ ಕವಿತೆಗಳು ಸರಿಯಿಲ್ಲ, ಅವು ಕವಿತೆಗಳೇ ಅಲ್ಲ ಅನ್ನುವ ನಿರ್ಧಾರಕ್ಕೆ ಬರಲು ಇನ್ನೊಂದು ಕಾರಣವಿದೆ. ಸಾಮಾನ್ಯ ಕವಿತೆಯೊಂದು ವೇದಿಕೆಮೇಲೆರಾರಾಜಿಸಿದಾಗ, ಅದಕ್ಕೊಂದು ಬಹುಮಾನವೋ, ದಿನ ಪ್ರಶಸ್ತಿಯೋ ಸಿಕ್ಕಾಗ, ಮುಲಾಜಿಗೆ ಒಳಗಾದ ದೊಡ್ಡವರಿಂದ ಅತಿ ಹೆಚ್ಚು ವಿಮರ್ಶೆಗೆ ಒಳಪಟ್ಟಾಗ ಓದುಗ ಭ್ರಮನಿರಸನಗೊಂಡು ಈ ಕಾಲದ ಕವಿತೆಗಳೆ ಇಷ್ಟೇ ಅನ್ನುವ ತೀರ್ಮಾನಕ್ಕೆ ಬಂದು ದಷ್ಟೇ ಬಿಡುತ್ತಾನೆ. ನಿಜಕ್ಕೂ ಒಳ್ಳೆಯ ಕವಿತೆ ನಿಜವಾದ ಕವಿಯ ಕಿಸೆಯಲ್ಲಿ ಸುಮ್ಮನೆ ಕೂತಿರುತ್ತದೆ.ಸಾಹಿತ್ಯದೊಳಗೆ ಯಥೇಚ್ಛವಾಗಿ ಇಣುಕುತ್ತಿರುವ ರಾಜಕೀಯ, ಲಾಬಿಗಳು, ಗುಂಪುಗಾರಿಕೆ, ವ್ಯಕ್ತಿ ನಿಷ್ಠೆ ವಿಮರ್ಶೆಗಳು ಒಳ್ಳೆಯ ಕವಿತೆಗಳು ಮುನ್ನೆಲೆಗೆ ಬರಲು ಸೋಲುತ್ತಿವೆ. ಕಳಪೆ ಕವಿತೆಗಳೇ ಒಳ್ಳೆಯ ಕವಿತೆಗಳೆಂದು ವ್ಯಾಖ್ಯಾನಿಸಲ್ಪಡುವಾಗ ಸಹೃದಯ ಇದರ ಸಹವಾಸವೇ ಬೇಡವೆಂದು ಸುಮ್ಮನಾಗುತ್ತಾನೆ.
ಕವಿ ಸರಿಯಾದ ಓದಿಗೆ ತೊಡಗಿಸಿಕೊಳ್ಳುತ್ತಿಲ್ಲ, ಅವನೊಳಗೆ ಅವನಿಗೇ ಸ್ಪಷ್ಟತೆ ಇಲ್ಲ .ಎಲ್ಲರನ್ನೂ ಪ್ರೀತಿಸುವ ಔದಾರ್ಯವಿಲ್ಲ. ಮಾನವ ಪ್ರೇಮವಿಲ್ಲ, ಪ್ರಚಾರದ ಹಪಾಹಪಿ, ವೇದಿಕೆಗಳ ಮೇಲಿನ ಹೊಗಳಿಕೆ, ಚಪ್ಪಾಳೆ ಸದ್ದಿನಿಂದ ಅವನೊಳಗಿನ ಮೌನವೊಂದು ನಶಿಸಲು ಆರಂಭಿಸಿದ್ದರಿಂದ ಕವಿತೆ ಹದಗೊಳ್ಳುತ್ತಿಲ್ಲ.
ಕವಿಗೋಷ್ಠಿಯೊಂದರಲ್ಲಿ ಕವಿಯೊಬ್ಬ ಕವಿತೆ ಓದಿದ ಮೇಲೆ, ”ನಿಮ್ಮ ಕವಿತೆ ಏನು ಹೇಳುತ್ತದೆ,” ಅಂತ ಒಬ್ಬರು ಕೇಳಿಬಿಟ್ಟರು. ಅರ್ಥ ಬಿಟ್ಟುಕೊಡದ ಕವಿತೆಯನ್ನೂ ಯಾರೂ ಓದುವುದಿಲ್ಲ. ಹಾಗಂತ ಕವಿತೆ ತನ್ನ ಕವಿತ್ವವನ್ನು ಬಿಟ್ಟು ರೂಪುಗೊಳ್ಳಬೇಕಾ ಅನ್ನುವ ಪ್ರಶ್ನೆ ಮೂಡುತ್ತದೆ. ಕವಿತ್ವ ಇಲ್ಲದ ಕವಿತೆಯನ್ನು ಬರೆದರೆಷ್ಟು ಬಿಟ್ಟರೆಷ್ಟು
ಅಷ್ಟಾದಶ ವರ್ಣನೆ, ಛಂದಸ್ಸಿನಿಂದ ತುಂಬಿ ಹೋಗಿದ್ದ ಕಾವ್ಯ, ಅರಮನೆಯ ಸಿಂಹಾಸನದ ಮೇಲಿದ್ದಾಗ ಸಾಮಾನ್ಯರಿಗೆ ದುರ್ಲಭವಾಗಿತ್ತು. ಅದು ಪಂಡಿತರಿಗಾಗಿಯೇ ಎನ್ನುವಂತಿತ್ತು. ವಚನಗಾರರು ವಚನಗಳ ಮೂಲಕ ಜನರ ಬಳಿ ಬಂದರು. ಜನ ಅದನ್ನು ಸ್ವೀಕರಿಸಿದರು. ದಾಸರೂ ಮಾಡಿದ್ದೂ ಇದನ್ನೇ. ನವೋದಯ ಸಾಹಿತ್ಯ ಜನರಿಗೆ ಹತ್ತಿರವಾಗಲು ನಡುಗನ್ನಡದಿಂದ ಬಿಡಿಸಿಕೊಂಡಿತು. ನವೋದಯವನ್ನು ಹಿಂದಿಕ್ಕಿ ನವ್ಯ ಬಂತು. ಕಾಲ ಬದಲಾಗಿದೆ. ವೇಗದ ಮತ್ತು ಅವಸರದ ಕಾಲಘಟ್ಟಕ್ಕೆ ಕವಿತೆಯು ತನ್ನ ಕವಿತ್ವವನ್ನು ಉಳಿಸಿಕೊಂಡು ಏನಾದರೂ ಬದಲಾಗಬಹುದಾ? ಕೆಲವು ಪ್ರಯತ್ನಗಳು ಆ ನಿಟ್ಟಿನಲ್ಲಿ ಆಗಿವೆ. ಆ ಕುರಿತು ಚರ್ಚೆಗಳಾಗಬೇಕು.
ಕವಿತೆ ಅಮ್ಮನ ತರಹ. ಬಚ್ಚಿಟ್ಟುಕೊಂಡ ಪ್ರೀತಿಯ ತರಹ. ಬದುಕು ತೋರಿಸುವ ಹಸಿದ ಹೊಟ್ಟೆಯ ತರಹ, ಗಾಯದ ತರಹ, ಮದ್ದಿನ ತರಹ. ಒಂದು ಕವಿತೆ ಒಬ್ಬ ವ್ಯಕ್ತಿಗೆ ಏನೆಲ್ಲ ಆಗಿಬಿಡಬಹುದು. ಅವನನ್ನು ಹೇಗೆ ಬೇಕಾದರೂ ತಿದ್ದಬಹುದು, ಬದಲಿಸಬಹುದು. ಇಡೀ ಜೀವನ ಪೂರ್ತಿ ಒಂದು ಒಳ್ಳೆಯ ಕವಿತೆ ಓದಿಕೊಂಡು ಖುಷಿಯಾಗಿ ಬದುಕಿ ಬಿಡಬಹುದು. ಅದು ಕವಿತೆಯ ಶಕ್ತಿ. ಅಂಥ ಕವಿತೆಗಳು ಮನುಕುಲವನ್ನು ಪೊರೆಯುವಂತಾಗಲಿ.