ಕಾಂಗ್ರೆಸ್ಸಿಗೆ ಐತಿಹಾಸಿಕ ಅವಕಾಶ!

ಹೈಕಮಾಂಡ್ ಉದ್ದೇಶ, ಸಂವಿಧಾನದ ಆಶಯ ಒಂದೇ ಇದ್ದಾಗ ಪ್ರಯೋಗಿಸಲು ಅಡ್ಡಿಯೇನು?
ಕಾಂಗ್ರೆಸ್ಸಿಗೆ ಐತಿಹಾಸಿಕ ಅವಕಾಶ!

ಸಂವಿಧಾನದ ಆಶಯಗಳ ಕುರಿತು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಯಾನುಸಾರ ಬಹಳಷ್ಟು ಮಾತನಾಡುವುದನ್ನು ಉಲ್ಲೇಖಿಸುವುದನ್ನು ಕೇಳುತ್ತಿರುತ್ತೇವೆ. ಸಂವಿಧಾನವನ್ನು ಧರ್ಮ ಗ್ರಂಥಕ್ಕೆ ಹೋಲಿಸುವ ಮೂಲಕ ಪೂಜನೀಯ ಆಗಿಸುವುದನ್ನು ಗಮನಿಸಿದ್ದೇವೆ. ಆರಾಧನೆಯ ಕೋಶದಲ್ಲಿ ವಿಚಾರವಂತಿಕೆಯ ಕಣಗಳು ಜೀವಿಸುವುದಿಲ್ಲ ಎಂಬುದನ್ನು ಮರೆಯಲಾಗುತ್ತದೆ. ಸಂವಿಧಾನದ ಪುಸ್ತಕ ಹಿಡಿದು ಓಡಾಡುವುದನ್ನು ,ಪ್ರದರ್ಶಿಸುವುದನ್ನು, ಭಾಷಣ ಬಿಗಿಯುವುದನ್ನು ಪ್ರಚಾರ ಪ್ರಿಯತೆಯ ಭಾಗವಾಗಿಸಿಕೊಂಡವರನ್ನೂ ಕಾಣುತ್ತೇವೆ. ಇವೆಲ್ಲ ಮೇಲ್ಪದರದ ಕ್ರಿಯೆಗಳು ಒಂದು ಸ್ತರದಲ್ಲಿ ಅಪೇಕ್ಷಣೀಯವೂ ಒಂದು ರೀತಿಯಲ್ಲಿ ಪ್ರಭಾವಶಾಲಿಯೂ ಆಗಿರುತ್ತವೆ ಎಂದು ಹೇಳಲಾಗುತ್ತದೆ.
ಆದರೆ ಸಂವಿಧಾನದ ಬಗೆಗಿನ ಗೌರವ, ಕಾಳಜಿ ಮತ್ತು ನಿರೀಕ್ಷೆಗಳು ಇವಿಷ್ಟೇ ಕಕ್ಷೆಗಳಲ್ಲಿ ಪ್ರದಕ್ಷಿಣೆ ಹಾಕ ತೊಡಗ ಬಾರದಲ್ಲವೇ? ಧರ್ಮ ಕೇಂದ್ರಿತ ಸಿದ್ದಾಂತಗಳಿಗೆ ಜಾತ್ಯಾತೀತ ಸಂವಿಧಾನವನ್ನು ‘ಪರ್ಯಾಯ’ ಆಗಿ ಬಿಂಬಿಸುವ ಬದಲು ‘ಸಮಾನಾಂತರ’ ನೆಲೆಯಲ್ಲಿ ತೇಲಿಸಿದರೆ ಸಾಂವಿಧಾನಿಕ ಆಶಯಗಳ ಮೂಲಕ್ಕೇ ಗಾಸಿ ಮಾಡಿದಂತೆ ಆಗುವುದಲ್ಲವೇ?
ಇನ್ನೊಂದೆಡೆ, ಸಂವಿಧಾನವನ್ನು ಬರೀ ಒಂದು ಕಾನೂನು ಗ್ರಂಥ ಎಂಬ ಸೀಮಿತ ಅರ್ಥದಲ್ಲಿ ಪರಿಗಣಿಸುವ, ವ್ಯಾಖ್ಯಾನಿಸುವ ಪಂಡಿತರ ಬಹುದೊಡ್ಡ ಪಡೆಯನ್ನು ಕಾಣಬಹುದು. ಸಂವಿಧಾನದೊಳಗಿನ ಅಂತರ್ಗತ ಆಶಯ ಮತ್ತು ಸತ್ವವನ್ನು ಸೂಕ್ಷ್ಮವಾಗಿ ಅರ್ಥೈಸದಿರುವುದು ಅಥವಾ ಮುದ್ದಾಂ ನಿರ್ಲಕ್ಷಿಸುವುದು ಭಾಗಶಃ ತಿಳುವಳಿಕೆಗೆ, ಜಾರಿಯಲ್ಲಿನ ಕೊರತೆಗೆ ಬಹು ಮುಖ್ಯ ಕಾರಣ ಎಂದು ಅನ್ನಿಸುತ್ತದೆ. ಸಂವಿಧಾನದ ಸಂರಕ್ಷಕರೆಂದೇ ಕರೆದುಕೊಳ್ಳುವ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ಪ್ರಭಾವಿ ಜಾತಿಗಳ ಒತ್ತಡಕ್ಕೆ ಮಣಿದು ಜಾತಿ ಜನಗಣತಿ ವರದಿ ಬಗ್ಗೆ ದೃಢ ನಿಲುವು ತಾಳದಿರುವುದು, ಒಳ ಮೀಸಲಾತಿ ಜಾರಿಯನ್ನು ವಿನಾಕಾರಣ ಮುಂದೂಡುವುದು ಸಂವಿಧಾನದ ಸಮಾನತೆಯ ಆಶಯಕ್ಕೆ ಎಷ್ಟು ಅನುಗುಣ ಎಂಬುದನ್ನು ಅವಲೋಕಿಸಬೇಕಿದೆ.


ಇತ್ತೀಚಿನ ದಿನಗಳಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಶಾಸಕರು ಬಹುಮತದ ಮೂಲಕ ಚುನಾಯಿಸುವ ಸಾಂವಿಧಾನಿಕ ಪ್ರಕ್ರಿಯೆಯನ್ನು ಯಾವ ರಾಷ್ಟ್ರೀಯ ಪಕ್ಷವೂ ಪಾಲಿಸಿದ ನಿದರ್ಶನ ಲಭಿಸುವುದಿಲ್ಲ. ಅಧಿಕಾರಕ್ಕೆ ಏರುವ ಶಾಸಕಾಂಗ ಪಕ್ಷದ ನಾಯಕ ಅರ್ಥಾತ್ ಮುಖ್ಯಮಂತ್ರಿ ಯನ್ನು ಆರಿಸಲು ಕರೆಯುವ ಶಾಸಕಾಂಗ ಪಕ್ಷದ ಸಭೆಯ ನಡಾವಳಿಯ ಔಪಚಾರಿಕತೆ , ನಾಟಕೀಯತೆ ಯಾರಿಗೂ ಅಸಹಜ ಎನ್ನಿಸುವುದೇ ಇಲ್ಲ. ಅಂತಿಮವಾಗಿ ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಯನ್ನು ನಾಯಕನನ್ನಾಗಿ ಘೋಷಿಸಲಾಗುತ್ತದೆ. ಮಧ್ಯದಲ್ಲಿ ಭಿನ್ನಮತ, ಪಕ್ಷಾಂತರ, ಹೈಕಮಾಂಡ್ ನಿಂದ ಮುಖ್ಯಮಂತ್ರಿ ಬದಲಾವಣೆ ಘಟಿಸಿದರೂ ಸಂವಿಧಾನ ಸಹಿಸಿಕೊಳ್ಳಬೇಕು!

ಇದನ್ನೂ ಓದಿ:ಜೊಳ್ಳು ಕಾಳುಗಳ ಪೊಳ್ಳು ಸಂತೆ!

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿದ ಕಾಂಗ್ರೆಸ್, ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ದೆಹಲಿಯ ಹೈಕಮಾಂಡ್ ಸಮ್ಮುಖದಲ್ಲಿ ಆಯ್ಕೆ ಮಾಡಿದ ಸನ್ನಿವೇಶ ಹೊಸತೊಂದು ಪ್ರಸಂಗದ ಜನನಕ್ಕೆ ಕಾರಣವಾಯಿತು. ಅಧಿಕಾರವಧಿಯ ಪೂರ್ವಾರ್ಧದಲ್ಲಿ ಸಿದ್ದರಾಮಯ್ಯ, ಉತ್ತರಾರ್ಧದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂಬ ಹೊಂದಾಣಿಕೆ, ಒಪ್ಪಂದ ಮತ್ತು ಹೈಕಮಾಂಡ್ ಸೂಚನೆ ಕುರಿತು ರಾಜ್ಯದ ತುಂಬಾ ಚರ್ಚೆ ನಡೆಯಿತು‌. ಒಪ್ಪಂದ ಆಗಿದೆ ಎಂದು ಜನ, ಪಕ್ಷದ ಕಾರ್ಯಕರ್ತರು, ಕೆಲವು ಮುಖಂಡರು ನಂಬಿದ್ದಾರೆ ಕೂಡ. ಆದರೆ ರಹಸ್ಯದ ಭಾಗಿದಾರರು ಮಾತ್ರ ಸುತ್ತಿ ಬಳಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆಯೇ ವಿನಾ ಈ ಬಗೆಗಿನ ಸತ್ಯಾಸತ್ಯ ಹೊರಹಾಕಲು ಬಿಲ್ಕುಲ್ ತಯಾರಿಲ್ಲ.


ಶಿವಕುಮಾರ್ ಅವರು ದೆಹಲಿಯ ಇಂಗ್ಲಿಷ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಬಾಯಿ ತಪ್ಪಿಯೋ ಮನ ಒಪ್ಪಿಯೋ ಅಧಿಕಾರ ಹಂಚಿಕೆ ಒಪ್ಪಂದ ಖಚಿತಪಡಿಸಿ. ನಂತರ ತಮ್ಮದೇ ಮಾತನ್ನು ಕರ್ನಾಟಕದಲ್ಲಿ ತೇಲಿಸಿಬಿಟ್ಟರು.
ಬಹಳ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ಅವರ ನಡುವೆ ಆಗಿರುವ ಅಥವಾ ಆಗದಿರುವ ಅಧಿಕಾರ ಹಂಚಿಕೆಯ ಒಡಂಬಡಿಕೆ ಖಾಸಗಿ ಸ್ವರೂಪದ್ದಲ್ಲ. ಇದಕ್ಕೆ ಸಾಂವಿಧಾನಿಕ ಮಾನ್ಯತೆಯಂತೂ ಇಲ್ಲವೇ ಇಲ್ಲ.
ಕರ್ನಾಟಕದಂತಹ ಒಂದು ದೊಡ್ಡ ರಾಜ್ಯದ ಸರ್ಕಾರ ಮತ್ತು ಅದು ಪ್ರತಿನಿಧಿಸುವ ಏಳು ಕೋಟಿ ಪ್ರಜೆಗಳ ಹಿತಾಸಕ್ತಿ ಇದರಲ್ಲಿ ಅಡಗಿದೆ ಎಂಬುದನ್ನು ಮರೆಯಬಾರದು. ಇಂತಹ ಮಹತ್ವದ ವಿಷಯವನ್ನು ಪಕ್ಷ ಅಥವಾ ಪಕ್ಷದ ವರಿಷ್ಠರಿಗೆ ಸಂಬಂಧಿಸಿದ ಆಂತರಿಕ ನಿರ್ಧಾರ ಎಂಬಂತೆ ರಹಸ್ಯವಾಗಿ ಇರಿಸಿದಾಗ ರಾಜ್ಯದ ಆಡಳಿತ ವ್ಯವಸ್ಥೆ ಮತ್ತು ರಾಜ್ಯಕಾರಣದ ಸಮೀಕರಣದಲ್ಲಿ ಉಂಟಾಗುವ ಗೊಂದಲಕ್ಕೆ ಯಾರು ಹೊಣೆ?


ಈಗಾಗಲೇ ಇಂತಹ ಗೊಂದಲ ದಿನಕ್ಕೊಂದು ಸ್ವರೂಪ ಪಡೆಯುತ್ತಾ ವಿವಿಧ ಬಣಗಳ ಹೇಳಿಕೆ, ಪ್ರತಿ ಹೇಳಿಕೆ, ‘ರಾಜಕೀಯ ಚರ್ಚಿಸದ’ ಡಿನ್ನರ್ -ಲಂಚ್ ಸಭೆಗಳು, ದೆಹಲಿ ಭೇಟಿಗಳು ಸದ್ಯೋಭವಿಷ್ಯದ ಬಗ್ಗೆ ಏನೋ ಮುನ್ಸೂಚನೆ ನೀಡುತ್ತಿವೆ. ಬಿಜೆಪಿ ನಾಯಕರಂತೆ ರಾಜ್ಯ ಕಾಂಗ್ರೆಸ್ಸಿನ ಇಬ್ಬರು ದಿಗ್ಗಜರ ನಡುವೆ ನೇರಾನೇರ ಹಗ್ಗಜಗ್ಗಾಟ ನಡೆಯುತ್ತಿಲ್ಲ. ಆದರೆ ಸಿದ್ದರಾಮಯ್ಯ ನೇತೃತ್ವದಲ್ಲೇ ಸರ್ಕಾರ ಪೂರ್ಣಾವಧಿ ಮುಗಿಸುವ ಬಗ್ಗೆ ಕೆಲವು ಸಚಿವರು ಇತ್ತೀಚೆಗೆ ಗಟ್ಟಿ ಧ್ವನಿಯಲ್ಲಿಯೇ ಹೇಳ ತೊಡಗಿದ್ದಾರೆ. ಮುಂದಿನ ಅವಧಿಗೂ ‘ಅವರು’ ಅಗ್ನಿವಾರ್ಯ ಎನ್ನುವಷ್ಟರ ಮಟ್ಟಿಗೆ ಈ ದನಿಯಲ್ಲಿ ದೃಢತೆ ಇದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹಾಲಿ ಮುಖ್ಯಮಂತ್ರಿ ಚಾಣಾಕ್ಷ ನಡೆ ಗುರುತಿಸಲು ಹೆಚ್ಚಿನ ಜಾಣತನವೇನೂ ಬೇಕಿಲ್ಲ.
ಇನ್ನೊಂದು ಬದಿಯಲ್ಲಿ, ತಾವು ಶಾಸಕರ ಬೆಂಬಲ ನಂಬಿಲ್ಲ ಎಂದು ಬಹಿರಂಗವಾಗಿ ಘೋಷಿಸಿರುವ ಡಿ.ಕೆ .ಶಿವಕುಮಾರ್ ಅವರು, ಹೈಕಮಾಂಡ್ ಭರವಸೆಯನ್ನು ಸಂಪೂರ್ಣ ಅವಲಂಬಿಸಿದಂತೆ ತೋರುತ್ತದೆ. ಸ್ವಜಾತಿ ಮಠಮಾನ್ಯಗಳ ಬೆಂಬಲದ ಕ್ರೋಡೀಕರಣವಂತೂ ಇತ್ತೀಚಿಗೆ ಎಲ್ಲಾ ರಾಜಕಾರಣಿಗಳ ಕಾರ್ಯ ತಂತ್ರದ ಭಾಗವೇ ಆಗಿರುವುದರಿಂದ ಯಾರನ್ನಾಗಲಿ ಹೊರತು ಪಡಿಸುವ ಸಾಧ್ಯತೆ ಇಲ್ಲ. ಸಿದ್ದರಾಮಯ್ಯ ಪರ ಆಟವಾಡುತ್ತಿರುವ ತಂಡ ಅದೆಷ್ಟೇ ಘರ್ಷಣಾತ್ಮಕವಾಗಿ ಮುನ್ನುಗ್ಗಿದರೂ ಸವಾಲಿಸಿದರೂ ಶಿವಕುಮಾರ್ ತಮ್ಮ ಸ್ವಭಾವಕ್ಕೆ ವ್ಯತಿರಿಕ್ತವಾಗಿ ಸಂಯಮ ಪ್ರದರ್ಶಿಸುತ್ತಿರುವುದರಲ್ಲಿ ಆಟ ಕೆಡಿಸಿಕೊಳ್ಳಬಾರದೆಂಬ ವಿವೇಕಯುಕ್ತ ಕಾರ್ಯತಂತ್ರವಿದೆ.


ಇಂತಹ ರಾಜಕೀಯ ಸಂದರ್ಭದಲ್ಲಿ ನಿರ್ಣಾಯಕ ಘಟ್ಟದಲ್ಲಿ ಸ್ಪರ್ದಾಳುಗಳ ನಿಲುವು ಏನಾಗಿರಬಹುದು ಎಂಬ ಕುತೂಹಲಕಾರಿ ಪ್ರಶ್ನೆಯನ್ನು ವಿಶ್ಲೇಷಣೆಯ ಮೂಸೆಗೆ ಒಡ್ಡಿದರೆ ಹೊಸತೊಂದು ಸಾಧ್ಯತೆ ಮಿಂಚುತ್ತದೆ. ಅಧಿಕಾರ ಹಸ್ತಾಂತರ ಅನಿವಾರ್ಯ ಅಂತಾದರೆ ಸಿದ್ದರಾಮಯ್ಯ ಯಾವ ನಿಲುವು ತಾಳುತ್ತಾರೆ? ಅಧಿಕಾರ ತಮಗೆ ದಕ್ಕದೆಂದು ಖಚಿತವಾದರೆ ಶಿವಕುಮಾರ್ ಯಾವ ಹೆಜ್ಜೆ ಇರಿಸಬಹುದು? ಸಾಮಾನ್ಯವಾಗಿ ಇಂತಹ ಸನ್ನಿವೇಶದಲ್ಲಿ ಎರಡೂ ಬಣಗಳ ಒಮ್ಮತದ ಅಭ್ಯರ್ಥಿ ಅಥವಾ ವರಿಷ್ಠರ ಆಯ್ಕೆಯ ಹೊಸ ಮುಖ ಹೊರಹೊಮ್ಮುವ ಸಂಭವ ಹೆಚ್ಚು.
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪರಿಶಿಷ್ಟ ಸಮುದಾಯದ ರಾಜಕಾರಣಿಯೊಬ್ಬರು ಮುಖ್ಯಮಂತ್ರಿ ಪದವಿಗೇರಿದ ನಿದರ್ಶನವೇ ಇಲ್ಲದಿರುವುದು ಪ್ರಾತಿ ನಿಧ್ಯದ ದೃಷ್ಟಿಯಲ್ಲಿ ಸಣ್ಣ ಲೋಪವೇನಲ್ಲ. ಬಹುಶಃ ಇದನ್ನು ಸರಿಪಡಿಸುವ ಸಂದರ್ಭ ಇದೀಗ ಸೃಷ್ಟಿಯಾಗಿದೆ. ಇದು ಕಾಂಗ್ರೆಸ್ ಪಕ್ಷದ ಪಾಲಿಗೆ ದಲಿತ ಸಮುದಾಯದ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಐತಿಹಾಸಿಕ ಅವಕಾಶ ಕೂಡ ಹೌದು. ಈವರೆಗೆ 14 ಬಾರಿ ಲಿಂಗಾಯತ ಮತ್ತು ಎಂಟು ಬಾರಿ ಒಕ್ಕಲಿಗ ಸಮುದಾಯದವರು ಮುಖ್ಯಮಂತ್ರಿ ಗದ್ದುಗೆ ಏರಿದ್ದಾರೆ, ಹಿಂದುಳಿದ ವರ್ಗ ಮತ್ತು ಬ್ರಾಹ್ಮಣರಿಗೂ ಅವಕಾಶ ಸಿಕ್ಕಿದೆ. ಸಂವಿಧಾನದ ಆಶಯವಾದ ಪ್ರಾತಿನಿಧ್ಯದಿಂದ ಸತತವಾಗಿ ವಂಚಿತರಾದವರೆಂದರೆ ದಲಿತರು, ಮುಸಲ್ಮಾನರು ಮತ್ತು ಮಹಿಳೆಯರು ಎಂಬುದು ಗಮಾನಾರ್ಹ ಅನ್ಯಾಯ.


ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ, ‘ದೇಶದ ಅಧಿಕಾರ ವ್ಯವಸ್ಥೆ ಮತ್ತು ಸಂಸ್ಥೆಗಳಲ್ಲಿ ದಲಿತರು ಹಾಗೂ ದಮನಿತರು ನಾಯಕತ್ವದ ಸ್ಥಾನ ವಹಿಸಿಕೊಳ್ಳುವ ದಿನಕ್ಕಾಗಿ ಕಾಯುತ್ತಿರುವೆ’ ಎಂದು ಬಿಹಾರದಲ್ಲಿ ಭಾಷಣ ಮಾಡಿದ್ದಾರೆ. ಮುಂದುವರಿದು, ‘ಸಮಾಜದಲ್ಲಿ ದಲಿತರು, ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗದವರ ನಿಖರ ಸಂಖ್ಯೆ ತಿಳಿಯಲು ದೇಶದಾದ್ಯಂತ ಜಾತಿ ಜನಗಣತಿ ನಡೆಸುವ ಅಗತ್ಯವಿದೆ’ ಎಂದು ಒತ್ತಿ ಹೇಳಿದ್ದಾರೆ. ಹೈಕಮಾಂಡ್ ಉದ್ದೇಶವೂ ಸಂವಿಧಾನದ ಆಶಯವೂ ಒಂದೇ ಆಗಿರುವಾಗ ಕರ್ನಾಟಕದಲ್ಲಿ ಪ್ರಯೋಗಿಸಲು ಅಡಚಣೆಯೇನು?

Leave a Comment