ಕಾಣುವ ಕನಸಿಗೂ ಕಾನೂನು ಚೌಕಟ್ಟು!
ಮಧ್ಯಮವರ್ಗ,ಕೆಳ ಮಧ್ಯಮ ವರ್ಗದ ಜನರಿಗೆ ಜೀವನದ ಒಂದೇ ಒಂದು ಚಿಕ್ಕ ಕನಸು ಇರುತ್ತದೆ. ನಿವೇಶನ ಖರೀದಿಸಿ, ಅಲ್ಲೊಂದು ಸುಂದರವಾದ ಕನಸಿನ ಪುಟ್ಟ ಮನೆ ಕಟ್ಟಿಸಿಕೊಂಡು ಹೆಂಡತಿ ಮಕ್ಕಳೊಂದಿಗೆ ಬದುಕಿ ಬಾಳುವದು. ನಿವೇಶನ ಹುಡು ಕಾಟದಲ್ಲಿ ಇರುವಾಗಲೇ ಗಂಡ ಹೆಂಡತಿ ನಡುವೆ ಮನೆಗೆ ಏನು ಹೆಸರಿಡುವದೆಂದು ಚರ್ಚೆ ಪ್ರಾರಂಭವಾಗಿ ಜಗಳ, ಮುನಿಸಿನಲ್ಲಿ ಮುಗಿಯುತ್ತದೆ. ನಿವೇಶನಕ್ಕೆ ಹೇಗೆ ಹಣ ಕೂಡಿಸುವದು? ಮನೆ ಕಟ್ಟಲು ಹೇಗೆ ಹಣ ಹೊಂದಿಸುವದು? ಅನ್ನುವ ಯೋಜನೆಗಿಂತ ನಿವೇಶನ, ಮನೆಯ ವಾಸ್ತು ಮುನ್ನೆಲೆಗೆ ಬರುತ್ತದೆ. ಕೂಸು ಹುಟ್ಟುವದಕ್ಕಿಂತ ಮೊದಲೇ ಕುಲಾಯಿ ಹೊಲಿಸಿಬಿಡುತ್ತಾರೆ.
ಪಕ್ಷಿಗಳು ಕೂಡ ಮರಿ ಹಾಕುವ ಮುನ್ನ ವ್ಯವಸ್ಥಿತವಾದ ಪುಟ್ಟ ಗೂಡು ಕಟ್ಟಿಕೊಳ್ಳುತ್ತವೆ. ನಿವೇಶನ ಖರೀದಿಸಲು, ಮನೆ ಕಟ್ಟಲು ಜೀವನಪರ್ಯಂತ ಪ್ರಾಮಾಣಿಕವಾಗಿ ಬೆವರು ಸುರಿಸಿ ಗಳಿಸಿ, ಉಳಿಸಿದ ಹಣವನ್ನೆಲ್ಲ ವ್ಯಯಿಸಿ, ಬ್ಯಾಂಕ್ ಹಾಗೂ ಹಲವರಿಂದ ದುಬಾರಿ ಬಡ್ಡಿಯಿಂದ ಸಾಲ ಪಡೆಯುತ್ತಾನೆ. ಸಾಲ ತೀರುವವರೆಗೆ, ಹೊಸದಾಗಿ ಕಟ್ಟಿದ ಮನೆಯಲ್ಲಿ ಸುಖವಾಗಿ, ನೆಮ್ಮದಿಯಿಂದ ನಿದ್ರಿಸುವದಿಲ್ಲ. ಸಾಲ ತೀರಿಸಲು ಜನ್ಮವು ಕಳೆದಿರುತ್ತದೆ. ಮತ್ತೇನಾದರೂ ಸಾಲ ಉಳಿದರೆ ಅವನ ಉತ್ತರಾಧಿಕಾರಿಗಳು ತೀರಿಸ ಬೇಕಾಗುವದು. ನಿವೇಶನ ಕೊಳ್ಳುವಾಗ ಏನು ಕಾನೂನಾತ್ಮಕ ಪತ್ರ ಪರಿಶೀಲನೆ ಮಾಡಬೇಕು, ಕಾನೂನು ಸಲಹೆ ಪಡೆಯ ಬೇಕು, ಮನೆ ಕಟ್ಟಲು ಯಾವ ನಿಯಮ ಪಾಲಿಸಬೇಕು ಅನ್ನುವ ವಾಸ್ತವಿಕ ಸತ್ಯವನ್ನು ಅರಿಯುವದಿಲ್ಲ. ಭಾವನಾತ್ಮಕ ಕನಸು ಗುಂಗಿನಲ್ಲಿ ಮುಳುಗುತ್ತಾನೆ.
ಇದನ್ನೂ ಓದಿ: ಭಾರತದ ಭವಿಷ್ಯ ಹಳ್ಳಿಗಳಲ್ಲಿ ಅಡಗಿದೆ’
ನ್ಯಾಯಾಲಯದಿಂದ ಬಂದ ಸಮನ್ಸ್, ನೋಟಿಸ್ನ್ನು ತೆಗೆದುಕೊಂಡು ಕಕ್ಷಿದಾರ ಮನೆ, ಕಚೇರಿಗೆ ಬಂದನು. “ಯಜಮಾನೆ, ಮತ್ತೇನು ಸಮಾಚಾರ, ಮತ್ತೇನು ನೋಟಿಸ್ ಬಂತು ನಿಮಗೆ” ಅನ್ನುತ್ತ ಖಾಸಗಿ ಚೇಂಬರ್ಗೆ ಕರೆದುಕೊಂಡೆನು. ” ನೋಡಿ ಸರ್, ಅವನು ಒಂದಿಲ್ಲ ಒಂದು ಕೇಸನ್ನು ನನ್ನಮೇಲೆ ಮಾಡುತ್ತ ಇದ್ದಾನೆ” ಅನ್ನುತ್ತ ಕಾಗದ ಪತ್ರಗಳನ್ನು ಕೈಗೆ ಇಟ್ಟನು. ಒಂದೇ ವಿಷಯದ ಮೇಲೆ ಹಲವಾರು ಕೇಸುಗೆ ಮಾಡುವ ಚಾಳಿ ಕೆಲವರಿಗೆ ಅಂಟಿಕೊಂಡಿರುತ್ತದೆ. ಈಗಾಗಲೇ ಕಕ್ತಿದಾರ ವಾದಿ ಪ್ರತಿವಾದಿಯ ಮೇಲೆ ಕರಾರು ಪತ್ರದ ಅನ್ವಯ ನೋಂದಾಯಿತ ಕ್ರಯಪತ್ರ ಮಾಡಿಕೊಡುವಂತೆ ನಿರ್ದೇಶನಕ್ಕೆ ಪ್ರಾರ್ಥಿಸಿ, ಒಪ್ಪಂದದ ನಿರ್ದಿಷ್ಟ ಕಾರ್ಯಕ್ಷಮತೆ ಪರಿಹಾರ ಕೋರಿ ದಾವೆಯನ್ನು ದಾಖಲಿಸಿದ್ದಾನೆ.
ಪ್ರತಿವಾದಿಯು, ತನ್ನ ಮಾಲಿಕತ್ವದಲ್ಲಿ ಇರುವ ಒಂದು ಎಕರೆ ಕೃಷಿ ಭೂಮಿಯಲ್ಲಿ 2 ಗುಂಟೆ ಜಾಗವನ್ನು ಮಾರಾಟಕ್ಕೆ ತೆಗೆದಿದ್ದೆ. ಈ ವಿಷಯವನ್ನು ಊರಿನ ತುಂಬೆಲ್ಲ ಪ್ರಚಾರೆ ಮಾಡಿದ್ದನು. ಪ್ರತಿವಾದಿಯು ಮಾರಾಟಕ್ಕೆ ತೆಗೆದ ಜಾಗವು ಊರಿಗೆ ಹೊಂದಿಕೊಂಡಿರುವುದರಿಂದ ಕಕ್ಷಿದಾರ ವಾದಿಯು ಒಂದು ವಿಶಾಲವಾದ ಮನೆಯನ್ನು ಕಟ್ಟಿಸಿಕೊಳ್ಳುವ ತನ್ನ ಕನಸನ್ನು ನನಸಾಗಿಸಲು ಹೆಚ್ಚಿನ ಮೌಲ್ಯಕ್ಕೆ ಬೇಡಿದ್ದನು. ಪ್ರತಿವಾದಿಯು ಇದಕ್ಕೆ ಒಪ್ಪಿಕೊಂಡು ವಾದಿಯ ಹೆಸರಿಗೆ ಕರಾರು ಪತ್ರವನ್ನು ಬರೆದುಕೊಟ್ಟನು. ವಾದಿಯು ಪ್ರತಿವಾದಿಗೆ ಕಟ್ಟಿದ ಸಂಪೂರ್ಣ ಮುಂಗಡ ಹಣವನ್ನು ಕೊಟ್ಟನು.
ಆದರೆ ರಾಜ್ಯ ಸರ್ಕಾರವು 10 ಗುಂಟೆವರೆಗೆ ಜಮೀನಿನ ಮಾರಾಟವನ್ನು ನಿಷೇಧಿಸಿತ್ತು. ಪ್ರತಿವಾದಿ, ನಿಷೇಧ ತೆರವುಗೊಂಡ ನಂತರ ವಾದಿಗೆ ನೋಂದಾಯಿತ ಖರೀದಿ ಪತ್ರ ಮಾಡಿಕೊಡಲು ಒಪ್ಪಿಕೊಂಡಿದ್ದನು. ಹೀಗೆ ವರ್ಷಗಳು ಕಳೆದವು. ಸರಕಾರದ ನಿಷೇಧ ಸಡಿಲಿಕೆ ಆಗಲಿಲ್ಲ. ಪ್ರತಿವಾದಿಯು ವಾದಿಗೆ ನೋಟಿಸ್ ನೀಡಿದನು. ತಾನು ಒಂದು ಎಕರೆ ಜಮೀನಿನ ಮಾಲೀಕನಿದ್ದು, ಹಣದ ಅಡಚಣೆಗಾಗಿ, ವಾದಿಯ ಕಡೆಯಿಂದ ಕೈ ಸಾಲವನ್ನು ಪಡೆದುಕೊಂಡಿದ್ದೇನೆ. ಸಾಲದ ಭದ್ರತೆಗಾಗಿ ವಾದಿ ತನ್ನ ಹೆಸರಿಗೆ ಭದ್ರತೆ ಪತ್ರವನ್ನು ಬರೆಯಿಸಿಕೊಂಡಿರುತ್ತಾನೆ. ಕೈ ಸಾಲದ ಹಣವನ್ನು ಮರಳಿಕೊಡಲು ಸಿದ್ದನಿದ್ದು, ಹಣ ಪಡೆದುಕೊಂಡು ಕರಾರು ಪತ್ರವನ್ನು ಮರಳಿ ಕೊಡಲು ಸೂಚಿಸಿ ನೋಟಿಸನ್ನು ನೀಡಿದನು. ನೋಟಿಸ್ಗೆ ಸೂಕ್ತವಾದ ಪ್ರತ್ಯುತ್ತರ ನೀಡಿದೆನು. ವಾದಿಗೆ ಒಪ್ಪಂದ ನಿರ್ದಿಷ್ಟ ಕಾರ್ಯಕ್ಷಮತೆ ಪರಿಹಾರ (ಸೂಟ್ ಫಾರ್ ಸ್ಪೆಸಿಫಿಕ್ ಪರ್ಫಾರ್ಮೆನನ್ಸ್) ಕೋರಿ ದಾವೆಯನ್ನು ಮಾಡಲು ಕಾರಣ ಉದ್ಭವಿಸಿ ದಾಖಲಿಸಿದನು.
ದಾವೆ ವಿಚಾರಣೆಗೆ ಇರುತ್ತದೆ. ಕೇಸು ವಿಚಾರಣೆಗೆ ಇರುವಾಗಲೇ ಪ್ರತಿವಾದಿ ಒಂದರ ನಂತರ ಮತ್ತೊಂದು ದಾವೆಯನ್ನು ಮಾಡುತ್ತಲೇ ಇರುವನು. ಈಗ ಮತ್ತೊಂದು ದಾವೆ ಮಾಡಿ, ನನ್ನ ಕಕ್ಷಿದಾರ ಒತ್ತಾಯದಿಂದ ಜಮೀನು ಸ್ವಾಧೀನ ಪಡೆದಿದ್ದು, ಸ್ವಾಧೀನಕೊಡಿಸಿಕೊಡಲು ಪ್ರಾರ್ಥಿಸಿದ್ದನು.
ಒಪ್ಪಂದದ ನಿರ್ದಿಷ್ಟ ಕಾರ್ಯಕ್ಷಮತೆ ಪರಿಹಾರ ದಾವೆಯ ವಿಚಾರಣೆ ಪ್ರಾರಂಭವಾಯಿತು. ಪ್ರತಿವಾದಿ ಲಿಖಿತ ತಕರಾರು/ರಿಟನ್ ಸ್ಟೇಟೆಂಟ್ ದಾಖಲಿಸಿ ತನ್ನ ಪ್ರತಿರೋಧ ವ್ಯಕ್ತಪಡಿಸಿದನು. ತಾನು ಜಮೀನನ್ನು ಮಾರಾಟಕ್ಕೆ ತೆಗೆದಿಲ್ಲವೆಂದು ಅಂತಹ ಪ್ರಸಂಗ ತನಗೆ ಬಂದಿಲ್ಲ. ಒಕ್ಕಲುತನ ಕೆಲಸಕ್ಕಾಗಿ ಹಣದ ಟಿಸ್ ಅವಶ್ಯಕತೆ ಇತ್ತು, ಅದಕ್ಕೆ ವಾದಿಗೆ ಬೇಡಿಕೆ ಇಟ್ಟೆನು. ಭದ್ರತೆಗೆ ಖಾಲಿ ಪತ್ರಕ್ಕೆ ಸಹಿ ಮಾಡಿಕೊಟ್ಟರೆ ಹಣ ಕೊಡುವದಾಗಿ ಷರತ್ತು ಹಾಕಿದ. ಅನಿವಾರ್ಯವಾಗಿ ಖಾಲಿ ಪತ್ರಕ್ಕೆ ಅವನು ಹೇಳಿದಲ್ಲಿ ಸಹಿ ಮಾಡಿದ್ದೇನೆಂದು ಕಥೆ ಕಟ್ಟಿದ.
ವಾದಿಯ ಪರವಾಗಿ ಮುಖ್ಯ ವಿಚಾರಣೆ ಪ್ರಮಾಣ ಪತ್ರ ಸಲ್ಲಿಸಿದೆ. ಪ್ರತಿವಾದಿ ವಕೀಲರು ತಾಸುಗಟ್ಟಲೆ ಪಾಟಿ ಸಾವಾಲು ಮಾಡಿದರೂ ಅನುಕೂಲಕರ ಹೇಳಿಕೆ ಪಡೆಯಲಿಲ್ಲ. ಪತ್ರಕ್ಕೆ ಸಹಿ ಮಾಡಿದ ಇಬ್ಬರು ಸಾಕ್ಷಿದಾರರು, ಪತ್ರ ಬರೆದ ಬಾಂಡ್ ಟ್ ರೈಟರ್ ಸಾಕ್ಷಿ ಹೇಳಿಸಿದೆ. ಅವರು ಪಾಟಿ ಸವಾಲಿಗೆ ಒಳಪಟ್ಟರುಪ್ರತಿವಾದಿ ಪರ ಸಾಕ್ಷಿ ವಿಚಾರಣೆ ಆಯಿತು.
ವಾದಿಯ ಪರವಾಗಿ ಸುದೀರ್ಘವಾಗಿ ವಾದಿಸಿ, ವಾದಿಯ ಮನೆ ಕಟ್ಟಿಸಿ, ನೆರಳು ಪಡೆಯುವ ಸಲುವಾಗಿ ನಿವೇಶನಕ್ಕೆ ಸಂಪೂರ್ಣ ಮುಂಗಡ ಹಣ ನೀಡಿದ್ದು ಅನ್ಯಾಯವಾಗಬಾರದು ಎಂದು ಪ್ರತಿವಾದಿಗೆ ನೋಂದಾಯಿತ ಕ್ರಯಪತ್ರ ಮಾಡಿಕೊಡಲು ನಿರ್ದೇಶನ ನೀಡಿ ಆದೇಶ ಮಾಡಲು ಪ್ರಾರ್ಥಿಸಿದೆ.
ಪ್ರತಿವಾದಿಯ ಪರ ವಕೀಲರು ವಾದಿಸುತ್ತ, ವಾದಿ ಪರ ವಕೀಲರು ಭಾವನಾತ್ಮಕವಾಗಿ ನ್ಯಾಯಾಲಯದ ಮನಸ್ಸು ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಕರಾರು ಸರಕಾರದ ನಿಯಮಾವಳಿ ವಿರುದ್ಧವಾದ ಕರಾರು ಪತ್ರದ ಪ್ರಕಾರ ಡಿಕ್ರಿಗೊಳಿಸಿ ಕಾನೂನುಬದ್ಧವಾಗಿ ಜಾರಿಗೊಳಿಸಿ ಆಗದು ಎಂದು ವಾದಿಸಿದರು.
ನ್ಯಾಯಾಲಯವು, ವಾದಿ ಪ್ರತಿವಾದಿ ಪರ ವಕೀಲರ ವಾದ, ವಾದ ಪತ್ರ ಮತ್ತು ಕೈಫಿತದಲ್ಲಿಯ ಸಂಗತಿಗಳು, ಸಾಕ್ಷಿದಾರರ ಸಾಕ್ಷಿ ಹೇಳಿಕೆ, ಪಾಟಿ ಸವಾಲಿನಲ್ಲಿ ಒಪ್ಪಿಕೊಂಡ ಹೇಳಿಕೆಗಳು, ಗುರುತಿಸಿದ ಲಿಖಿತ ಪತ್ರಗಳನ್ನು ಪರಿಶೀಲಿಸಿ, ವಾದಿಯ ದಾವೆಯನ್ನು ಭಾಗಶಃ ಪುರಸ್ಕರಿಸಿ, ಕರಾರು ನಿರ್ದಿಷ್ಟ ಕಾರ್ಯಕ್ಷಮತೆ ಕೋರಿಕೆ ವಜಾಗೊಳಿಸಿ, ವಾದಿ, ಪ್ರತಿವಾದಿಗೆ ನೀಡಿದ ಮುಂಗಡ ಹಣವನ್ನು ಕೊಟ್ಟ ದಿನಾಂಕದಿಂದ 6% ಬಡ್ಡಿ ಸಹಿತ ಮರಳಿಕೊಡುವಂತೆ ಪ್ರತಿವಾದಿಗೆ ನೀಡುವಂತೆ ಜಡ್ಜ್ ಮೆಂಟ್ ಡಿಕ್ರಿ ಆದೇಶಿಸಿತು.
ನ್ಯಾಯಾಲಯದ ಆದೇಶದಿಂದ ಮನೆ ಕಟ್ಟುವ ಕನಸು ಭಗ್ನಗೊಂಡರೂ ತಾನು ನೀಡಿದ ಮುಂಗಡ ಹಣ ಮರಳಿ ದೊರಕಿರುವದಕ್ಕೆ ಅಲ್ಪ ತೃಪ್ತಿಗೊಂಡನು. ಮೇಲ್ಮನವಿ ಬೇಡವೆಂದು ನಿರ್ಧರಿಸಿದ. ಕನಸು ನನಸಾಗಲು ಕೇವಲ ಭಾವನೆಗಳ ಮೇಲೆ ಸವಾರಿ ಮಾಡಲಾಗದು. ನಾವು ಜೀವಿಸುವ ನೆಲದ ಕಾನೂನು ಅರಿಯುವದು, ನಡೆಯುವುದು ಅವಶ್ಯ ಇದೆ. ಸ್ವತ್ತು ಖರೀದಿಸುವಾಗ, ಸ್ವತ್ತಿನ ಇತಿಹಾಸ, ಸರಕಾರಿ ದಾಖಲೆ ಜಾಲಾಡಬೇಕು. ಪರಿಣಿತರಿಂದ ಕಾನೂನು ಸಲಹೆ ಅವಶ್ಯ ಬಹಳ ಇದೆ.