ಕೊನೆಯ ಪರೀಕ್ಷೆ, ಆ… 3 ಗಂಟೆ
ಶಾಲೆಯಲ್ಲಿ ಕಲಿಕೆಯ ವಿಧಾನ ಮತ್ತು ಫಲಿತಾಂಶಕ್ಕೆ ಹೊಸ ವ್ಯಾಖ್ಯಾನ ಬೇಕಾಗಿದ್ದು, ಶಿಕ್ಷಣ ಕ್ರಮವನ್ನು ಪುನರ್ರೂಪಿಸಬೇಕಿದೆ
ಕೇಂದ್ರ ಶಿಕ್ಷಣ ಸಚಿವಾಲಯದ ಅಧೀನಕ್ಕೆ ಒಳಪಡುವ ಶಾಲೆಗಳ 5 ಮತ್ತು 8ನೇ ತರಗತಿಯ ವಿದ್ಯಾರ್ಥಿ ಗಳು ನಿಗದಿತ ಕಲಿಕಾ ಸಾಮರ್ಥ್ಯ ಹೊಂದಿರದಿದ್ದರೆ ಅನುತ್ತೀರ್ಣರಾಗಬೇಕಾಗುತ್ತದೆ ಎಂಬ ಇತ್ತೀಚಿನ ಆದೇಶ, ನಮ್ಮ ಕಲಿಕೆಯ ಮಾನದಂಡಗಳನ್ನು ಪರಾಮರ್ಶೆಗೆ ಒಳಪಡಿಸಬೇಕಾದ ಅಗತ್ಯವನ್ನು ನಮಗೆ ಮನಗಾಣಿಸುತ್ತದೆ.
ಐದನೇ ತರಗತಿಯಲ್ಲಿರುವ ಒಂದು ಮಗು ‘ತರಕಾರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು’ ಎಂಬುದನ್ನು ಕಲಿಯುತ್ತದೆ ಮತ್ತು ಆ ಸಂಬಂಧದ ಪ್ರಶ್ನೆಗೆ ಅದೇ ರೀತಿ ಉತ್ತರವನ್ನೂ ಬರೆಯುತ್ತದೆ ಎಂದು ಭಾವಿಸೋಣ. ಆದರೆ ಆ ಮಗು ಊಟ ಮಾಡುವಾಗ ಮಾತ್ರ ತಟ್ಟೆಯಿಂದ ತರಕಾರಿಯನ್ನು ತೆಗೆದು ಆಚೆ ಇಟ್ಟು, ಉಳಿದದ್ದನ್ನು ತಿನ್ನುತ್ತದೆ. ಲಿಖಿತ ಪರೀಕ್ಷೆಗೆ ಸಂಬಂಧಿಸಿದ ನಮ್ಮ ಮೌಲ್ಯಮಾಪನದ ಮಾನದಂಡವು ಆ ಮಗುವಿನಲ್ಲಿ ಕಲಿಕೆಯಾಗಿದೆ ಎಂದು ಹೇಳುತ್ತದೆ. ಆದರೆ ನಿಜಕ್ಕೂ ಆ ಮಗುವಿನಲ್ಲಿ ಕಲಿಕೆಯಾಗಿರುವುದಿಲ್ಲ. ಹೀಗಿರುವಾಗ, ಮಗು ತನ್ನ ಕಲಿಕೆಯನ್ನು ವರ್ಷದ ಕೊನೆಯಲ್ಲಿ ಪರೀಕ್ಷೆ ಬರೆದೇ ಸಾಬೀತುಪಡಿಸಬೇಕೆ ಎಂಬ ಪ್ರಶ್ನೆ ಮೂಡುತ್ತದೆ.
ಒಂದು ಮಗು ಅನುತ್ತೀರ್ಣಗೊಳ್ಳುವ ಮಟ್ಟ ತಲುಪುತ್ತದೆ ಎಂದರೆ, ಅದು ಮಗುವಿನ ಕಡೆಯಿಂದ ಆಗುವ ದೋಷವಲ್ಲ. ಶಿಕ್ಷಕರು, ಶಾಲೆಯ ವಾತಾವರಣ, ಪಠ್ಯಕ್ರಮ, ಮೌಲ್ಯಮಾಪನದ ರೀತಿ ನೀತಿ, ಪೋಷಕರ ಮನೋಭಾವ, ಮನೆಯ ವಾತಾವರಣ, ಕಲಿಸಲು ಬಳಸುತ್ತಿರುವ ವಿಧಾನಗಳು… ಇಂತಹ ನೂರೆಂಟು ಕಾರಣಗಳಿರಬಹುದು.
ಶಿಕ್ಷಕರ ಕೊರತೆ, ಕೆಲವು ಶಿಕ್ಷಕರ ಅದಕ್ಷತೆ, ಶಿಕ್ಷಕರ ಮೇಲಿನ ಕಾರ್ಯದೊತ್ತಡ, ಕಠಿಣ ಕಲಿಕಾಂಶ, ಮಗುವಿನ ಮನೆಯಲ್ಲಿನ ಬಡತನ, ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ, ಪದೇ ಪದೇ ಹೇರಲಾಗುವ ಹೊಸ ಹೊಸ ಕಾರ್ಯಕ್ರಮಗಳು ಕಲಿಕೆಗೆ ತೊಡಕುಂಟು ಮಾಡಬಹುದು. ವಿದ್ಯಾರ್ಥಿನಿಯೊಬ್ಬಳು ಮುಟ್ಟಾದಾಗ ಬಳಸಲು ಸೂಕ್ತ ಶೌಚಾಲಯ ಇಲ್ಲದ ಕಾರಣಕ್ಕೆ, ಪ್ರತಿಬಾರಿ ವಾರಗಟ್ಟಲೆ ಶಾಲೆಗೆ ಗೈರಾಗುತ್ತಾಳೆ ಎಂದಿಟ್ಟುಕೊಳ್ಳೋಣ. ಅದರಿಂದ ಅವಳ ಕಲಿಕೆಗೆ ಹಿನ್ನಡೆಯಾಗಿ ಅನುತ್ತೀರ್ಣಳಾದರೆ ಅದರ ಹೊಣೆಯನ್ನು ಯಾರು ಹೊರಬೇಕು?
ಇದನ್ನೂ ಓದಿ: ಮನೆ ಬಳಕೆ ವೆಚ್ಚ ಕುರಿತ ವರದಿ ಲಯ ಕಾಪಾಡಿಕೊಳ್ಳುವ ಸವಾಲು
ಫೇಲಾದ ಮಗುವಿನಲ್ಲಿ ಬರುವ ‘ನಾನು ಸೋತೆ’ ಎನ್ನುವ ಭಾವವು ಅದರ ಮೇಲೆ ಬೀರುವ ಪರಿಣಾಮ ತುಂಬಾ ದೊಡ್ಡದು. ಎರಡು ತಿಂಗಳಲ್ಲಿ ಇನ್ನೊಮ್ಮೆ ಪರೀಕ್ಷೆ ನಡೆಸಿ ಮಗುವನ್ನು ಮುಂದಿನ ತರಗತಿಗೆ ಕಳುಹಿಸಿದರೂ ಕುಗ್ಗಿಹೋದ ಅದರ ಅತ್ಮವಿಶ್ವಾಸವನ್ನು ಮತ್ತೆ ಚಿಗುರಿಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ಈಗಿನ ಮಕ್ಕಳ ಮನಸ್ಸು ಬಹಳ ಸೂಕ್ಷ್ಮ
ಅನುತ್ತೀರ್ಣರಾದ ಮಕ್ಕಳು ಶಾಶ್ವತವಾಗಿ ಶಾಲೆ ಬಿಡುವ ಅಪಾಯ ಇರುತ್ತದೆ. ಎಸ್ಎಸ್ಎಲ್ಸಿಯಲ್ಲಿ ಅನುತ್ತೀರ್ಣರಾಗುವವರಲ್ಲಿ ಹೆಚ್ಚಿನವರು ತಮ್ಮ ಓದನ್ನು ನಿಲ್ಲಿಸುವುದನ್ನು ಕಾಣುತ್ತಿರುತ್ತೇವೆ. ಇನ್ನು ನನ್ನಿಂದ ಆಗದು’ ಎನ್ನುವ ಭಾವನೆಯೇ ಅವರಲ್ಲಿ ತುಂಬಿಹೋಗಿ ರುತ್ತದೆ. ಸಹಪಾಠಿಗಳ ಕುಹಕ ನೋಟಕ್ಕೂ ಮಗು ಒಳಗಾಗಬೇಕಾಗುತ್ತದೆ.
ಕಲಿಕೆಯಲ್ಲಿ ಹಿಂದುಳಿದವರಲ್ಲಿ ಗ್ರಾಮೀಣ ಭಾಗದ ಮಕ್ಕಳು, ಅದರಲ್ಲೂ ಬಡ ಮಕ್ಕಳದೇ ಸಿಂಹಪಾಲಿ ರುತ್ತದೆ. ಅವರನ್ನೆಲ್ಲಾ ಅನುತ್ತೀರ್ಣ ಮಾಡಿದರೆ ಅವರ ಕಲಿಕೆಯ ಕನಸಿಗೆ ದೊಡ್ಡ ಪೆಟ್ಟು ಮಾಡುವುದು ದೊಡ್ಡದಲ್ಲ, ಅವರು ಕಲಿಯುವಂತೆ ಮಾಡುವುದು ಮುಖ್ಯವಾದ ಕಾರ್ಯ.
ಈ ವರ್ಷ ಹತ್ತನೇ ತರಗತಿಯಲ್ಲಿ ಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅನುತ್ತೀರ್ಣರಾದರು. ಅವರಿಗೆ ಮೂರು ಬಾರಿ ಪರೀಕ್ಷೆಗಳನ್ನು ನಡೆಸಲಾಯಿತಾದರೂ ಪಾಸಾಗದೇ ಉಳಿದವರು ಬಹಳಷ್ಟು ಮಂದಿ. ಅಂತಹ ವಿದ್ಯಾರ್ಥಿಗಳು ಮತ್ತೆ ನಿಯಮಿತವಾಗಿ ಶಾಲೆಗೆ ಹೋಗಲು ಅವಕಾಶ ಕಲ್ಪಿಸಿಕೊಡಲಾಗಿದೆ. ಆದರೆ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿಲ್ಲ. ಅಂತಹ ಮಕ್ಕಳು ಬಾಲಕಾರ್ಮಿಕರಾಗಬಹುದು, ಬಾಲ್ಯವಿವಾಹ ಗಳ ಸಂಖ್ಯೆ ಹೆಚ್ಚಾಗಬಹುದು. ಕೆಲವರು ಅಡ್ಡದಾರಿ ಯನ್ನೂ ಹಿಡಿಯಬಹುದು.
ಮಗುವಿನ ಕಲಿಕಾ ಸುಧಾರಣೆಗೆ ಅನುತ್ತೀರ್ಣ ಗೊಳಿಸುವುದು ಎಂದಿಗೂ ಪರಿಹಾರ ಆಗಲಾರದು. ಮಕ್ಕಳಿಗೆ ಕಲಿಸಲೇಬೇಕು ಎಂಬುದು ನಮ್ಮ ಮೊದಲ ಆದ್ಯತೆ ಆಗಬೇಕು. ಕೊನೆಯ ಆದ್ಯತೆ ಕೂಡ ಅದೇ. ಯಾಕೆ ಮಗು ಕಲಿಯುತ್ತಿಲ್ಲ ಎಂಬುದಕ್ಕೆ ಕಾರಣ ಹುಡುಕುವುದರ ಕಡೆ ನಮ್ಮ ಆದ್ಯತೆ ಇರಬೇಕು. ಒಂದು ವಿಚಿತ್ರವೆಂದರೆ, ತಾನು ಕಲಿಸುವ ಮಗುವಿನ ಕುರಿತಾಗಿ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಶಿಕ್ಷಕನಿಗೆ ಇಲ್ಲ. ತರಗತಿಯ ಪರಿಚಯವೇ ಇಲ್ಲದ ಯಾರೋ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದರಂತೆ ಶಿಕ್ಷಕ ನಡೆದುಕೊಳ್ಳ- ಬೇಕು ಅಷ್ಟೆ. ಈ ಅವ್ಯವಸ್ಥೆಯಿಂದಲೇ ಕಲಿಕಾ ಪ್ರಕ್ರಿಯೆ ಹೆಚ್ಚು ಬಾರಿ ಸೋಲಿನ ಕಡೆ ನಡೆಯುತ್ತದೆ. ಮಗು ಫೇಲಾದರೆ ಶಿಕ್ಷಣ ಕ್ರಮ ಫೇಲಾದಂತೆ.
ನಮ್ಮ ಶಿಕ್ಷಣ ಕ್ರಮವನ್ನು ಪುನರ್ರೂಪಿಸಬೇಕಾದ ಅವಶ್ಯಕತೆ ಹೆಚ್ಚಾಗಿದೆ. ಕಲಿಕಾ ವಿಧಾನ ಮತ್ತು ಅದನ್ನು ಪರೀಕ್ಷಿಸುವ ಮಾನದಂಡಗಳು ಸೋತುಹೋಗಿವೆ. ಹತ್ತಾರು ವರ್ಷಗಳಿಂದ, ವರ್ಷದ ಕೊನೆಯ ಪರೀಕ್ಷೆಯನ್ನೂ ಆ ಮೂರು ಗಂಟೆಯನ್ನೂ ನೂರು ಅಂಕ ಗಳನ್ನೂ ನೆಚ್ಚಿಕೊಂಡಿದ್ದೇವೆ. ಅವು ಮಾತ್ರ ಎಲ್ಲವನ್ನೂ ಅಳೆದುಬಿಡುತ್ತವೆ ಎಂಬ ಭ್ರಮೆಯಲ್ಲಿದ್ದೇವೆ. ನಮ್ಮ ಶಿಕ್ಷಣ ಕ್ರಮವು ಉತ್ತೀರ್ಣ ಮತ್ತು ಅನುತ್ತೀರ್ಣದ ಪರಿಕಲ್ಪನೆಯನ್ನು మిరి ಬೆಳೆಯಬೇಕಿದೆ. ಅಂತಹದ್ದೊಂದು ಹೊಸ ಶಿಕ್ಷಣ ಕ್ರಮ ರೂಪಿಸುವು ದರತ್ತ ನಾವು ಯೋಚಿಸಬೇಕಿದೆ.