ಕೌಶಲ ವೃದ್ಧಿಗೆ ಜಂಟಿ ಸಮಿತಿ

ಕೌಶಲ ವೃದ್ಧಿಗೆ ಜಂಟಿ ಸಮಿತಿ

ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣದ ಜತೆಗೆ ಬಹುಮುಖಿ ಕೌಶಲವನ್ನು ಕಲಿಸುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆಗಳು ಹೇಗಿರಬೇಕು ಎಂಬುದನ್ನು ನಿರ್ಧರಿಸಲು ಶಿಕ್ಷಣ ತಜ್ಞರು ಹಾಗೂ ಉದ್ಯಮಿಗಳನ್ನು ಒಳಗೊಂಡ ಜಂಟಿ ಸಮಿತಿ ರಚಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಘೋಷಿಸಿದ್ದಾರೆ. ಹೂಡಿಕೆ ಸಮಾವೇಶದಲ್ಲಿ ಕ್ವಿನ್ ಸಿಟಿ ಯೋಜನೆ ಸಂಬಂಧ ಸಚಿವರಾದ ಎಂ.ಬಿ.ಪಾಟೀಲ, ಡಾ.ಶರಣಪ್ರಕಾಶ್ ಪಾಟೀಲ್ ಅವರ ಸಮ್ಮುಖದಲ್ಲಿ ನಡೆದ 30ಕ್ಕೂ ಹೆಚ್ಚು ಪ್ರತಿಷ್ಠಿತ ವಿವಿಗಳೊಂದಿಗೆ ನಡೆಸಿದ ದುಂಡು ಮೇಜಿನ ಸಭೆಯಲ್ಲಿ ಅವರು ಈ ಭರವಸೆ ನೀಡಿದರು.

“ಉದ್ಯಮಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಉನ್ನತ ಶಿಕ್ಷಣದ ಪಠ್ಯಕ್ರಮ ಬದಲಿಸಬೇಕೆಂದು ಕೇಳುತ್ತಿರುವುದು ಸಾಧುವಲ್ಲ. ಕಲಿಕೆ ಮತ್ತು ಶಿಕ್ಷಣದ ಸ್ವರೂಪವನ್ನು ಒಂದು ವಲಯಕ್ಕೆ ತಕ್ಕಂತೆ ಬದಲಿಸಲು ಸಾಧ್ಯವಾಗದು. ಅದರಿಂದ ಶಿಕ್ಷಣದ ವ್ಯಾಪ್ತಿ ಸೀಮಿತವಾಗುವ ಜತೆಗೆ ಹೊಸ ಸಮಸ್ಯೆಗಳು ಉದ್ಭವಿಸುತ್ತವೆ. ಹಾಗಾಗಿ ವಿದ್ಯಾರ್ಥಿಗಳ ಕಲಿಕೆ ಸಮಗ್ರವಾಗಿರುವ ಜತೆಗೆ ಬಹುಮುಖಿ ಕೌಶಲಗಳನ್ನು ಕಲಿಸುವ ಅಗತ್ಯವಿದೆ. ಆಗ ಮಾತ್ರ ಯುವಜನರು ಒಂದಲ್ಲ ಒಂದು ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಅವಕಾಶವಾಗಲಿದೆ .ಎಂಬ ಪ್ರತಿಪಾದಿಸಿದರು.

ಪರಿಪೂರ್ಣ ಕಲಿಕೆಯನ್ನು ನಾವು ಸಮಕಾಲೀನ ಜಗತ್ತಿಗೆ ತಕ್ಕಂತೆ ಮರು ರೂಪಿಸಬೇಕಿದೆ. ನಮ್ಮ ಪದವೀಧರರಿಗೆಲ್ಲ ಒಳ್ಳೆಯ ಉದ್ಯೋಗ ಸಿಗಬೇಕು. ಒಟ್ಟಾರೆ ಸುಧಾರಣೆಯ ನಿಟ್ಟಿನಲ್ಲಿ ಕೇಂದ್ರ ಸರಕಾರ ಮತ್ತು ಯುಜಿಸಿ ಜತೆಯಲ್ಲೂ ಸಮಾಲೋಚಿಸಲಾಗುವುದು. ನಮ್ಮ ಯುವಜನರಿಗೆ ನಮ್ಮಲ್ಲೇ ವಿಶ್ವದರ್ಜೆಯ ಶಿಕ್ಷಣ ಸಿಕ್ಕಬೇಕಾದುದು ಮುಖ್ಯ,” ಎಂದು ತಿಳಿಸಿದರು.”ನಮ್ಮ ವಿವಿಗಳಲ್ಲಿರುವ ವಿದ್ಯಾರ್ಥಿಗಳಲ್ಲಿಶೇ.70ರಷ್ಟು ಮಂದಿ ಹೊರರಾಜ್ಯದವರೇ ಆಗಿದ್ದಾರೆ. ಕ್ವಿನ್ ಸಿಟಿಯಲ್ಲಿ ಡೀಪ್-ಟೆಕ್ ನವೋದ್ಯಮಗಳು, ಬೃಹತ್ ಕಂಪನಿಗಳ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆ್ಯಂಡ್ ಡಿ) ಕೇಂದ್ರಗಳನ್ನು ಬೆಂಬಲಿಸಲು ಸುಸಜ್ಜಿತ ಪರಿಪೋಷಣಾ ಕೇಂದ್ರಗಳು ಮತ್ತು ಪರೀಕ್ಷಾ ಸೌಲಭ್ಯಗಳನ್ನು ಒದಗಿಸಲಾಗುವುದು,” ಎಂದು ಭರವಸೆ ನೀಡಿದರು.

ಇದನ್ನೂ ಓದಿ:ಭಾರತೀಯರು ಎಂದೂ ಮರೆಯದ ಆ ಕರಾಳ ನಸುಕು

ಉತ್ಕೃಷ್ಟತೆಯತ್ತ ವೈದ್ಯಕೀಯ ಶಿಕ್ಷಣ: ಸಚಿವ ಡಾ. ಶರಣಪ್ರಕಾಶ್ ಪಾಟೀಲ್, “ರಾಜ್ಯದಲ್ಲಿ 70 ವೈದ್ಯಕೀಯ ಕಾಲೇಜುಗಳಿದ್ದು, ಪದವಿ ಹಂತದಲ್ಲಿ 11,000 ಮತ್ತು ಸ್ನಾತಕೋತ್ತರ ಹಂತದಲ್ಲಿ 6,000 ಸೀಟುಗಳ ಹಂಚಿಕೆಯಾಗುತ್ತಿದೆ. ಕೃತಕ ಬುದ್ಧಿಮತ್ತೆ (ಎಐ) ಮತ್ತು ಪರಿಸರಸ್ನೇಹಿ ಇಂಧನ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಜಾಗತಿಕ ಮಟ್ಟದ ಕೌಶಲಾಭಿವೃದ್ಧಿ ತಾಣವನ್ನಾಗಿ ಮಾಡುವ ಗುರಿ ಇದೆ,” ಎಂದು ಹೇಳಿದರು.

ಕೆಎಲ್‌ಇ ಸೊಸೈಟಿಯ ಡಾ.ಪ್ರಭಾಕರ ಕೋರೆ, ಪಿಇಎಸ್ ವಿವಿಯ ಡಿ.ಜವಾಹರ್, ಆರ್.ವಿ.ಶಿಕ್ಷಣ ಸಂಸ್ಥೆಯ ನಾಗರಾಜು ಪಾಲ್ಗೊಂಡಿದ್ದರು. ಬಿಎಲ್‌ಡಿಇ ಶಿಕ್ಷಣ ಸಂಸ್ಥೆ ಸೇರಿದಂತೆ ರಾಜ್ಯ, ದೇಶ ಮತ್ತು ವಿದೇಶಗಳ 30 ವಿವಿ ಪ್ರಮುಖರು ಪಾಲ್ಗೊಂಡಿದ್ದರು. 9 ವಿವಿ ಜತೆಗೆ ಒಪ್ಪಂದ: “ಕ್ವಿನ್ ಸಿಟಿಯಲ್ಲಿ ಜಗತ್ತಿನ ಅತ್ಯುತ್ತಮ ವಿವಿಗಳು ಬರಲಿದ್ದು, ಸೇಂಟ್ ಜಾನ್ಸ್ ಮತ್ತು ಲಿವರ್‌ಪೂಲ್ ಸೇರಿದಂತೆ 9 ವಿವಿಗಳ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ,” ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.


‘ಪಿಲಾನಿಯಲ್ಲಿರುವ ಹೆಸರಾಂತ ಬಿರ್ಲಾ ತಾಂತ್ರಿಕ ವಿಜ್ಞಾನಗಳ ಸಂಸ್ಥೆ (ಬಿಟ್ಸ್) ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಹೆಸರಾಗಿರುವ ವರ್ಲ್ಡ್ ಹಾರ್ಟಿ ಸೆಂಟರ್ ಸೇರಿದಂತೆ ಇತರೆ ಸಂಸ್ಥೆಗಳು ಕೂಡ ಯೋಜನೆ ಬಗ್ಗೆ ಆಸಕ್ತಿ ತೋರಿವೆ. ಇಂತಹ ಸಂಸ್ಥೆಗಳೊಂದಿಗಿನ ಚರ್ಚೆ ಪ್ರಗತಿಯಲ್ಲಿದೆ,” ಎಂದರು “.ಹಲವು ದೇಶಗಳ ವಿವಿಗಳು ಕ್ವಿನ್ ಸಿಟಿಯಲ್ಲಿ ಕ್ಯಾಂಪಸ್ ತೆರೆಯಲು ಒಲವು ತೋರಿವೆ. ಯುಜಿಸಿ ನಿಯಮಗಳು ಅಗ್ರಶ್ರೇಣಿಯ 500 ವಿವಿಗಳು ಭಾರತದಲ್ಲಿ ತಮ್ಮ ಕ್ಯಾಂಪಸ್ ತೆರೆಯಲು ಅವಕಾಶ ಕಲ್ಪಿಸಿಕೊಟ್ಟಿವೆ. ಪಾಶ್ಚಾತ್ಯ ದೇಶಗಳ ವಿವಿಗಳು ಕಡಿಮೆ ಖರ್ಚಿನಲ್ಲೇ ಕ್ವಿನ್ ಸಿಟಿಯಲ್ಲಿ ನೆಲೆಯೂರಲು ಹೆಚ್ಚು ಅವಕಾಶಗಳಿವೆ. ವಿದ್ಯಾರ್ಥಿಗಳಿಗೆ ಸಂಶೋಧನೆ ಮತ್ತು ಅದರ ಅಭಿವೃದ್ಧಿಯ ನೇರ ಅನುಭವ ದೊರಕಿಸಿ ಕೊಡಲಾಗುವುದು,” ಎಂದು ವಿವರಿಸಿದರು.

Leave a Comment