ಗ್ರಾಮ ಸಭೆಗೂ ಹಾಗೂ ಸಾಮಾಜಿಕ ಪರಿಶೋಧನಾ ಗ್ರಾಮಸಭೆಗೂ ಇರುವ ವ್ಯತ್ಯಾಸ ಗೊತ್ತಿಲ್ಲ
ಗ್ರಾಮ ಸಭೆಗೂ ಹಾಗೂ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಗೂ ಇರುವ ವ್ಯತ್ಯಾಸ ಗೊತ್ತಿಲ್ಲ. ಗ್ರಾಮ ಪಂಚಾಯಿತಿಯ ಸದಸ್ಯೆ ಶಶಿಕಲಾ ಅಂಬರೀಷ್ ಅವರಿಗೆ ಗ್ರಾಮ ಸಭೆಗೂ ಹಾಗೂ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಗೂ ಇರುವ ವ್ಯತ್ಯಾಸ ಗೊತ್ತಿಲ್ಲ. ಇದಲ್ಲದೆ ಗ್ರಾಮ ಪಂಚಾಯಿತಿಯ ಆಡಳಿತ ವ್ಯವಸ್ಥೆ ಬಗ್ಗೆಯೂ ಅವರು ಸರಿಯಾಗಿ ತಿಳಿದುಕೊಳ್ಳದೆ ಸುಖಾ ಸುಮ್ಮನೆ ಆರೋಪ ಮಾಡುವುದು, ಸುಳ್ಳು ದೂರುಗಳನ್ನು ನೀಡುವುದು ಮಾಡುತ್ತಿದ್ದಾರೆ ಎಂದು ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ನಾಗೇಶ್ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೇ ೩೦ ರಂದು ಗ್ರಾಮ ಪಂಚಾಯಿತಿ ಕಚೇರಿ ಅವರಣದಲ್ಲಿ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ನಡೆದಿದ್ದು ಅದಕ್ಕೆ ಕರಪತ್ರ ಹಾಕಿಸಿದ್ದೇವೆ. ಎಲ್ಲ ಗ್ರಾ.ಪಂ.ಸದಸ್ಯರು, ನೋಡೆಲ್ ಅಧಿಕಾರಿ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೂ ಮಾಹಿತಿ ನೀಡಿದ್ದೇವೆ. ಸಾಮಾಜಿಕ ಪರಿಶೋಧನಾ ಸಭೆಯ ಭಾವಚಿತ್ರಗಳನ್ನು ತೆಗೆಸಿದ್ದೇವೆ, ವಿಡಿಯೋಗಳು ಇವೆ. ನಿಯಮದಂತೆ ಎಲ್ಲವನ್ನೂ ನಡೆಸಿದ್ದೇವೆ. ಆದರೆ ಸದಸ್ಯೆ ಶಶಿಕಲಾ ಅವರು ಮಾತ್ರ ಪರಿಶೋಧನಾ ಸಭೆಯನ್ನು ಗ್ರಾಮಸಭೆ ಎಂದು ತಪ್ಪಾಗಿ ಅರ್ಥೈಸಿಕೊಂಡು ಗ್ರಾಮಸಭೆಯನ್ನು ನಿಯಮದಂತೆ ನಡೆಸಿಲ್ಲ ಎಂದು ಪಂಚಾಯತ್ರಾಜ್ ಇಲಾಖೆ ಆಯುಕ್ತರು, ಕಾರ್ಯದರ್ಶಿ, ಜಿ.ಪಂ.ಸಿಇಒ ಅವರಿಗೆ ಸುಳ್ಳು ಮಾಹಿತಿ ನೀಡಿ ದೂರು ಸಲ್ಲಿಸಿದ್ದಾರೆ ಎಂದರು.
ಗ್ರಾಮ ಸಭೆಗೂ ಹಾಗೂ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಗೂ ಇರುವ ವ್ಯತ್ಯಾಸ ಗೊತ್ತಿಲ್ಲ
ಶಶಿಕಲಾ ಅವರು ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿಯ ಬೈರಸಂದ್ರ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಅವರು ಬೆಂಗಳೂರಲ್ಲಿ ವಾಸಿಸುತ್ತಿದ್ದು ಗ್ರಾಮ ಪಂಚಾಯಿತಿಯ ಯಾವುದೆ ಸಭೆಗೂ ಅವರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಸಭೆ ಮುಗಿಯುವ ಸಮಯದಲ್ಲಿ ಬರುತ್ತಾರೆ.
ತನ್ನೊಂದಿಗೆ ತನ್ನ ಚಿಕ್ಕ ಮಗಳನ್ನು ಕರೆದುಕೊಂಡು ಬಂದು ಮಗಳ ಕೈಗೆ ಮೊಬೈಲ್ ಕೊಟ್ಟು ಸಭೆಯ ವಿಡಿಯೋ ಮಾಡಲು ಹೇಳುತ್ತಾರೆ. ಆಕೆ ಬರುವುದಕ್ಕೂ ಮೊದಲೆ ಚರ್ಚೆಯಾದ ವಿಷಯಗಳನ್ನು ಮತ್ತೆ ಚರ್ಚೆ ಮಾಡಲು ಹೇಳುತ್ತಾರೆ. ನಾನು ಇಲ್ಲದಾಗ ತೆಗೆದುಕೊಂಡ ತೀರ್ಮಾನಗಳನ್ನು ನಾನು ಒಪ್ಪಲ್ಲ. ಹಾಗಾಗಿ ಸಭೆಯನ್ನು ಮುಂದೂಡಿ ಇಲ್ಲವೇ ಮೊದಲಿನಿಂದ ನಡೆಸಿ ಎಂದು ಹಠಕ್ಕೆ ಬೀಳುತ್ತಾರೆ.
ಇದು ಕೇವಲ ಒಂದು ಸಭೆಯಲ್ಲಲ್ಲ ಬಹುತೇಕ ಎಲ್ಲ ಸಭೆಗಳಲ್ಲೂ ಇದು ಪುನರಾವರ್ತನೆ ಆಗುತ್ತಿದೆ. ಜತೆಗೆ ಗ್ರಾಮದಲ್ಲಿ ನಡೆಯುವ ಎಲ್ಲ ಕೆಲಸ ಕಾರ್ಯಗಳಿಗೂ ತನ್ನ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಾರೆ.
ಇದನ್ನೂ ಓದಿ:- ರಾಮ ಶೋಭಾಯಾತ್ರೆ ಪ್ರಚಾರ ವಾಹನಕ್ಕೆ ಚಾಲನೆ
ಗ್ರಾಮದಲ್ಲಿ ಬೀದಿ ದೀಪ ಹಾಕುವುದು, ಚರಂಡಿಯಲ್ಲಿ ಕಸ ಎತ್ತುವುದು, ಕುಡಿಯುವ ನೀರು ಬಿಡುವುದು, ಹೀಗೆ ಎಲ್ಲ ಕೆಲಸಗಳನ್ನೂ ಅವರನ್ನು ಮುಂದಿಟ್ಟುಕೊಂಡು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಶಶಿಕಲಾ ಅವರ ಕ್ಷೇತ್ರ ಬೈರಸಂದ್ರದಲ್ಲಿ ಕೆಲಸ ಮಾಡಲು ಅಧಿಕಾರಿಗಳು ಬೇಸತ್ತಿದ್ದಾರೆ.
ಕೆಲಸ ಮಾಡಲು ಆಗುವುದಿಲ್ಲ ಎಂದು ಅಧಿಕಾರಿಗಳು ಪತ್ರವನ್ನು ಕೂಡ ಹಿರಿಯ ಅಧಿಕಾರಿಗಳಿಗೆ ಬರೆದಿದ್ದಾರೆ. ಇದರಿಂದ ಬೈರಸಂದ್ರ ಗ್ರಾಮದಲ್ಲಿ ಅಭಿವೃದ್ದಿ ಕಾರ್ಯಗಳು ಆಗಿಲ್ಲ. ಅದಕ್ಕೆಲ್ಲವೂ ಶಶಿಕಲಾ ಅವರ ವರ್ತನೆಯೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.
ಗ್ರಾಮ ಸಭೆಗೂ ಹಾಗೂ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಗೂ ಇರುವ ವ್ಯತ್ಯಾಸ ಗೊತ್ತಿಲ್ಲ
ಪಂಚಾಯಿತಿ ವ್ಯಾಪ್ತಿಯ ಎಲ್ಲ ಕ್ಷೇತ್ರಗಳ ಗ್ರಾಮಗಳಲ್ಲೂ ನರೇಗಾ ಯೋಜನೆಯಡಿ ಲಕ್ಷಾಂತರ ರೂಪಾಯಿಗಳ ಅಭಿವೃದ್ದಿ ಕಾರ್ಯಗಳು ನಡೆದಿವೆ. ಆದರೆ ಬೈರಸಂದ್ರದಲ್ಲಿ ಮಾತ್ರ ನರೇಗಾದಡಿ ಅಭಿವೃದ್ದಿ ಕಾರ್ಯಗಳು ಆಗಿಲ್ಲ. ಅದಕ್ಕೆ ಶಶಿಕಲಾ ಅವರ ಅಸಹಕಾರ, ನಿರ್ಲಕ್ಷ್ಯವೇ ಕಾರಣ ಎಂದು ಆಪಾದಿಸಿದರು.
ಸಭೆಗಳಲ್ಲಿ ಅವರು ನಡೆದುಕೊಳ್ಳುವ ರೀತಿ ನೀತಿ, ಮೊಬೈಲ್ನಲ್ಲಿ ವಿಡಿಯೋ ಮಾಡುವುದು, ಸಣ್ಣ ಪುಟ್ಟ ಎಲ್ಲದಕ್ಕೂ ಪ್ರತಿಭಟನೆ ಮಾಡುತ್ತೇನೆ, ಹಿರಿಯ ಅಧಿಕಾರಿಗಳಿಗೆ ದೂರು ಕೊಡುತ್ತೇನೆ ಎಂದು ಬೆದರಿಸುವುದು, ಬ್ಲಾಕ್ ಮೇಲ್ ಮಾಡುವುದರ ವಿರುದ್ದ ಪಂಚಾಯತ್ರಾಜ್ ಇಲಾಖೆ ಆಯುಕ್ತರು, ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ರಾಜ್ಯಾಧ್ಯಕ್ಷರಿಗೂ ಶಶಿಕಲಾ ವಿರುದ್ದ ದೂರು ನೀಡಿದ್ದೇವೆ.
ಸಭೆಯಲ್ಲಿನ ದುರ್ನಡತೆ, ಬ್ಲಾಕ್ ಮೇಲ್ ತಂತ್ರ, ಅಭಿವೃದ್ದಿಗೆ ಅಸಹಕಾರ ನೀಡುತ್ತಿರುವ ಶಶಿಕಲಾ ವಿರುದ್ದ ದೂರು ನೀಡಿರುವುದಕ್ಕೆ ವಿಚಲಿತರಾದ ಅವರು ಪಂಚಾಯಿತಿ ಅಧ್ಯಕ್ಷರು, ಪಿಡಿಒ ವಿರುದ್ದ ಇಲ್ಲ ಸಲ್ಲದ ಸುಳ್ಳು ದೂರುಗಳನ್ನು ನೀಡುತ್ತಿದ್ದಾರೆ, ಇದಕ್ಕೆ ನಾವು ವಿಚಲಿತರಾಗುವುದಿಲ್ಲ. ಶಶಿಕಲಾ ಅವರ ಆಟಾಟೋಪಗಳಿಗೆ ಕಡಿವಾಣ ಹಾಕಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಟಿ.ನಾರಾಯಣಸ್ವಾಮಿ, ತಿರುಪಳ್ಳಪ್ಪ, ಮುಖಂಡರಾದ ಪಿ.ದೇವರಾಜ್, ಹರೀಶ್, ವೆಂಕಟೇಶ್, ಶಿವಶಂಕರ್ ಮತ್ತಿತರರು ಹಾಜರಿದ್ದರು.