ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ
ದೇವನಹಳ್ಳಿ ಗ್ರಾಮೀಣ ಜನರಿಗೆ ರೇಷ್ಮೆ ಬೆಳೆ ಆರ್ಥಿಕ ಮೂಲ ಹೆಚ್ಚಿಸುವ ಕಸುಬಾಗಿದೆ. ಆದರೂ, ಈ ಕೃಷಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ.
ಜಿಲ್ಲೆಯ ನಾಲ್ಕು ತಾಲೂಕುಗಳ ಗ್ರಾಮೀಣ ಜನರ ಜೀವನಕ್ಕೆ ಹೈನುಗಾರಿಕೆ, ರೇಷ್ಮೆ ಆಧಾರವಾಗಿದೆ. ಹೀಗಾಗಿ, ರೇಷ್ಮೆ ಇಲಾಖೆಯು ಸಿಬ್ಬಂದಿ ಕೋರತೆ ಇದ್ದರೂ ಸಹ, ಹಿಪ್ಪು ನೇರಳೆ ಬೆಳೆ ವಿಸ್ತೀರ್ಣ 215 ಹೆಕ್ಟೇರ್ ಏರಿಕೆಯಾಗಿದೆ. ರೇಷ್ಮೆ ಸೂಕ್ಷ್ಮವಾದ ಬೆಳೆ. ಇದರಲ್ಲಿ ನಿರ್ವಹಣೆಗೆ ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸಬೇಕಾಗಿದೆ. ಜಿಲ್ಲೆಯಲ್ಲಿ 6396 ಮಂದಿ ರೇಷ್ಮೆ ಬೆಳೆಗಾರರಿದ್ದಾರೆ. ದೇವನಹಳ್ಳಿ, ಹೊಸಪೇಟೆ ಭಾಗದಲ್ಲಿ ರೇಷ್ಮೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಪ್ಪು ನೇರಳೆ ಸೊಪ್ಪುಗಳಲ್ಲಿ ಆಗಾಗ ರೋಗ, ಕೀಟಗಳ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ನುಸಿ ರೋಗ ಸೇರಿದಂತೆ ವಿವಿಧ ರೋಗಗಳು ಕಾಡುತ್ತವೆ. ಈ ವೇಳೆಯಲ್ಲಿ ಬೆಳೆಗಾರರಿಗೆ ಮಾಹಿತಿ ನೀಡಲು ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಬೇಕಾಗುತ್ತಾರೆ. ಸಿಬ್ಬಂದಿ ಕೊರತೆಯಿಂದ ಎಲ್ಲಾ ಬೆಳೆಗಾರರಿಗೆ ತಲುಪಲು ತಡವಾಗುತ್ತಿದೆ.
ಬೆಳಗಾರರಿಗೆ ಸಂಕಷ್ಟ: ಜಿಲ್ಲೆಯಲ್ಲಿ ಹಿಪ್ಪು ನೇರಳೆ, ದಾಳಿಂಬೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ರೈತರು ಮುಖ ಮಾಡುತ್ತಿದ್ದಾರೆ. ರೇಷ್ಮೆ ಕೃಷಿಯಲ್ಲಿ ಸೂಕ್ಷ್ಮ ನಿರ್ವಹಣೆ ಅಗತ್ಯವಾಗಿದೆ. ರೇಷ್ಮೆ ಹುಳುಗಳಿಗೆ ನೀಡುವ ಹಿಪ್ಪು ನೇರಳೆ ಗುಣಮಟ್ಟವು ಹೆಚ್ಚಿನ ಮಹತ್ವ ವಹಿಸುತ್ತದೆ. ಈ ಸಂದರ್ಭದಲ್ಲಿ ಸಿಂಪಡಿಸುವ ಕೀಟನಾಶಗಳು ಹಿಪ್ಪು ನೇರಳೆ ಸೊಪ್ಪಿನ ಮೇಲೆ ಕೂರುವುದರಿಂದ ಅದನ್ನು ಸೇವಿಸುವ ರೇಷ್ಮೆ ಹುಳುಗಳಿಗೂ ಸಮಸ್ಯೆಯಾಗುತ್ತದೆ . ಇದರಿಂದ ಬೆಳೆಗಾರರಿಗೆ ಸಂಕಷ್ಟ ಎದುರಾಗುತ್ತದೆ.
ಶೇ.50ರಷ್ಟು ಸಿಬ್ಬಂದಿ ಇಲ್ಲ: ರೇಷ್ಮೆ ಬೆಳೆ ಬೆಳೆಯುವ ರೈತರಿಗೆ ರೇಷ್ಮೆ ಇಲಾಖೆಯ ಮಾರ್ಗದರ್ಶನ ಅಗತ್ಯ ವಿದ್ದು, ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಶೇ.50 ರಷ್ಟು ಸಿಬ್ಬಂದಿಗಳಿಲ್ಲದೆ, ಒಬ್ಬರಿಗೆ ಎರಡು ಮೂರು ಹುದ್ದೆ ಜವಾಬ್ದಾರಿ ನಿರ್ವಹಿಸಬೇಕಾಗಿದೆ. ಜಿಲ್ಲೆಯ ನಾಲ್ಕು ತಾಲೂಕಿನ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, ಜಿಲ್ಲಾ ಉಪ ನಿರ್ದೇಶಕರ ಕಚೇರಿ ಒಳಗೂಂಡಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸ್ಥಾನಗಳಲ್ಲಿ ಹುದ್ದೆಗಳು ಹಲವು ವರ್ಷಗಳಿಂದ ಕಾಲಿ ಇದ್ದರೂ, ನೇಮಕ ಮಾಡಿಲ್ಲ. ಕೆಲವು ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಅವಕಾಶವಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:- ರಂಗಭೂಮಿಗೆ ಘನತೆ ತಂದ ಜುಲೇಖಾ ಬೇಗಂ
ಅಧಿಕಾರಿಗಳಿಗೆ ಹೊರೆ ಸಾಧ್ಯತೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ರೇಷ್ಮೆಗೆ ಹೆಸರುವಾಸಿ. ಚೀನಾ ಮಾರುಕಟ್ಟೆಯೊಂದಿಗೆ ವ್ಯಾಪಾರ ವಹಿವಾಟು ಕಡಿಮೆಯಾದ ಮೇಲೆ ಸ್ಥಳೀಯ ರೇಷ್ಮೆಗೆ ಬೇಡಿಕೆ ಹೆಚ್ಚಾಗಿದೆ. ರೇಷ್ಮೆ ಇಲಾಖೆಯಲ್ಲಿ 62 ಹುದ್ದೆ ಗಳು ಖಾಲಿ ಇದೆ. ರೇಷ್ಮೆ ವಿಸ್ತಾರಣಾಧಿಕಾರಿ, ಕಚೇರಿ ಸಹಾಯಕರು, ಡಿ ಗ್ರಾಫ್ ಸಿಬ್ಬಂದಿ ಸೇರಿದಂತೆ ಜಿಲ್ಲೆಯ ರೇಷ್ಮೆ ಇಲಾಖೆಗೆ 90 ಹುದ್ದೆ ಮಂಜೂರಾಗಿದೆ. ಇದುವರೆಗೆ ಕೇವಲ 28 ಹುದ್ದೆಗಳು ಮಾತ್ರ ಭರ್ತಿಯಾಗಿದೆ. ಉಳಿದಂತೆ 62 ಹುದ್ದೆಗಳು ಖಾಲಿ ಉಳಿದಿವೆ. ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ 5ಕ್ಕೂ ಹೆಚ್ಚು ಮಂದಿ ನಿವೃತ್ತರಾಗಲಿದ್ದಾರೆ. ಈ ಮೂಲಕ ಮತ್ತಷ್ಟು ಹುದ್ದೆಗಳು ಖಾಲಿಯಾಗಲಿದ್ದು, ಅಧಿಕಾರಿಗಳಿಗೆ ಇನ್ನಷ್ಟು ಹೊರೆಯಾಗುವ ಸಾಧ್ಯತೆ ಹೆಚ್ಚಿದೆ.
ಸರ್ಕಾರ ಇನ್ನಾದರೂ ಸಿಬ್ಬಂದಿ ನೇಮಕಾತಿ ಮಾಡಿ, ರೈತರಿಗೆ ಮತ್ತಷ್ಟು ಯೋಜನೆಗಳನ್ನು ರೂಪಿಸಿ, ಸೌಲಭ್ಯ ಮತ್ತು ರೇಷ್ಮೆ ಬೆಳೆ ವಿಸ್ತೀರ್ಣವನ್ನು ಹೆಚ್ಚಿಸಬೇಕು ಎಂದು ರೈತರು ಅಗ್ರಹಿಸಿದ್ದಾರೆ.