ಜೊಳ್ಳು ಕಾಳುಗಳ ಪೊಳ್ಳು ಸಂತೆ!
ವೇಗದ ಬದುಕಿನಲ್ಲಿಯೂ ಆಲಿಸುವ, ಗ್ರಹಿಸುವ, ಕಲಿಯುವ ಸಮಯ ಮೂಡಬೇಕು
ಯಂತ್ರಗಳು ಮನುಷ್ಯನಂತಾದ ಹೊತ್ತಿನಲ್ಲಿ ಮನುಷ್ಯನು ಯಂತ್ರದಂತೆ ಆಗದಿರಲು ಮಾಡಬೇಕಾದುದೇನು ಎಂಬುದೇ ಪ್ರಶ್ನಾರ್ಹ! ನಮ್ಮ ಪ್ರಸಕ್ತ ಜೀವನಶೈಲಿಯ ಆಶಿಸ್ತು, ಆತುರಗೇಡಿತನ ಹಲವಾರು ಅನಾಹುತಗಳನ್ನು ತಂದೊಡ್ಡುತ್ತವೆ. ಎಲ್ಲಿಯೂ ನಮಗಾಗಲಿ ನಮ್ಮೊಟ್ಟಿಗೆ ಹೆಜ್ಜೆ ಹಾಕುತ್ತಿರುವ ಮಕ್ಕಳಿಗಾಗಲಿ ಶ್ರದ್ಧೆ, ಸ್ಮರಣೆಯಿಲ್ಲ, ಕಾಯುವಿಕೆ, ಮಾಗುವಿಕೆಗೆ ತಯಾರಿಲ್ಲ ಎಂಬಂತಹ ಮನಸ್ಥಿತಿ. ಹೌದು, ಇದು ರೀಲ್ಸ್ ನ ಕಾಲಘಟ್ಟ. ಕೈಯಲ್ಲಿರುವ ಮೊಬೈಲ್ ಫೋನ್ ಪರದೆಯಲ್ಲಿನ ವಿಡಿಯೋಗಳು ಕ್ಷಣಾರ್ಧದಲ್ಲಿ ಸ್ಕ್ರೋಲ್ ಆಗಿ ಬಿಡುತ್ತವೆ. ಮನಸ್ಸು ಬರೀ ಸೆಕೆಂಡಿನೊಳಗೆ ಕಣ್ಣೆದುರು ಕಂಡಿದ್ದನ್ನು ವೀಕ್ಷಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸಿ ಮುಂದೆ ಹೋಗುತ್ತದೆ. ಚಿತ್ರ- ಸನ್ನಿವೇಶಗಳು ಚಕ್ಕನೆ ಬದಲಾಗುತ್ತಿರುತ್ತವೆ. ಕೂತು ಓದುವ, ಧ್ಯಾನಿಸುವ, ಆಸ್ವಾದಿಸುವ, ವಿಷದೀಕರಿಸುವ, ಚಿಂತಿಸುವ ವ್ಯವಧಾನವೇ ಈಗ ನಮ್ಮಲ್ಲಿ ಉಳಿದಿಲ್ಲ.
ದೀರ್ಘಾವಧಿಯ ದಣಿವಿರದ ದುಡಿತ, ಅವಿರತ ಪರಿಶ್ರಮದ ನಡುವೆ ಸಣ್ಣದೊಂದು ಬಿಡುವು, ರಂಜನೆ, ಪೇಟೆ, ಟಿ.ವಿ -ಸಿನಿಮಾ ಹೀಗಿತ್ತು ಅವತ್ತಿನ ಬದುಕು. ಈಗ ಬದಲಾಗಿದೆ .ಬಹುತೇಕ ಮನೆ ಮಂದಿಗೆ ಮನರಂಜನೆಯೇ ಬದುಕಾಗಿದೆ. ಇಡೀ ದಿನ ಮನೆಯೇ ಯಾವ ಮೌಲಿಕತೆ, ನೈತಿಕತೆಯನ್ನೂ ಕಲಿಸದ, ಬರೀ ದಾರಿ ತಪ್ಪಿಸುವ ಟಿ.ವಿ, ಧಾರಾವಾಹಿಗಳು, ರಿಯಾಲಿಟಿ ಶೋಗಳ ಎದುರು ಕೂತುಬಿಟ್ಟಿದೆ. ದಿನದ ಉಳಿದ ಅವಧಿಗೂ ಅದರದೇ ಮೆಲುಕು. ವಾಸ್ತವ ಜಗತ್ತಿನಿಂದ ಬಹುದೂರ. ಸುಳ್ಳು, ಕಪಟತನ, ಆಕರ್ಷಕ ಮುಖವಾಡಗಳಿಗೆ ಮಾರುಹೋಗುವ ಅಪ್ರಬುದ್ಧತೆ. ಹೀಗೆ ವಿವೇಕಹೀನರಾಗಿ ಬದುಕುವ ಮನೆ ಮಂದಿ ತಮ್ಮ ಕುಡಿಗಳಿಗಾಗಲಿ, ಪರಿಸರಕ್ಕಾಗಲಿ ನೈತಿಕ ಮೌಲ್ಯಗಳನ್ನು ಬೋಧಿಸಲು, ಬಿತ್ತಿ ಬೆಳೆಯಲು ಅಥವಾ ಉಳಿಸಿ ಹೋಗಲು ಸಾಧ್ಯವೇ?
ಇದನ್ನೂ ಓದಿ:ಹಕ್ಕು ದಕ್ಕಿಸಿದ ‘ಗ್ಯಾರಂಟಿ ‘
ನಕಾರಾತ್ಮಕತೆಯ ನೆರಳಲ್ಲಿ ಬೆಳೆದ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನಾಗಲಿ ತಿಳುವಳಿಕೆಯನ್ನಾಗಲಿ ಉಂಡು ಬೆಳೆಯುವುದಕ್ಕೆ ಸಾಧ್ಯವಾಗದು. ಅದೇ ವಾತಾವರಣದಲ್ಲಿನ ಎಳೆಯ ಮನಸ್ಸುಗಳಿಗೆ ವರ್ತಮಾನದ ತಲ್ಲಣಗಳಾಗಲಿ, ಭವಿಷ್ಯದ ಭೀಕರತೆಯ ಬಗೆಗಾಗಲಿ ಅರಿವಿರುವುದಿಲ್ಲ. ಹಾಗಾಗಿ, ಇವತ್ತಿನ ತಲೆಮಾರಿಗೆ ಚರಿತ್ರೆಯ ವಿವೇಕವಾಗಲಿ, ಅಪಾರ ಓದಿನದ್ದಾಗಲಿ ಅಥವಾ ಆದರ್ಶ ಪುರುಷರ ಒಡನಾಟದ ಬಲವಾಗಲಿ ಇಲ್ಲ. ಜೊಳ್ಳು ಕಾಲುಗಳ ಪೊಲಳ್ಳು ಸಂತೆಯಂತೆ. ಸುದ್ದಿ -ಸಂಗತಿಗಳನ್ನು ವಿವೇಚಿಸುವ, ಮಥಿಸುವ ವ್ಯವಧಾನವಿಲ್ಲ. ಯಾವುದೋ ದುಷ್ಚಟ, ದ್ವೇಷ ,ದಾಳಿ, ಜೂಜು, ಆನ್ಲೈನ್ ಗೇಮ್, ಪ್ರೀತಿ-ಪ್ರೇಮ ಅಂತೆಲ್ಲಾ ನಿತ್ಯವೂ ಹಾದಿ ತಪ್ಪುತ್ತಿದೆ ದೊಡ್ಡ ಯುವ ಸಮೂಹ. ಹಿಡಿದು ಕೇವಲ ಸ್ಥಿತಿಯಲ್ಲಿ ಹಿರಿಯರು ಇಲ್ಲ !
ಸಮಸ್ಯೆಗಳ ಬಗ್ಗೆ ಬರಿದೇ ಹಳಹಳಿಸುವ ಬದಲು ಪರಿಹಾರದ ಕುರಿತು ಯೋಚಿಸಬೇಕು, ಯೋಜಿಸಬೇಕು. ಇಂತಹ ಕಾಲ ಘಟ್ಟದಲ್ಲಿ ನಮ್ಮನ್ನು ಕೈಹಿಡಿಯಬೇಕಾದದ್ದು ದಾರ್ಶನಿಕರು ತೋರಿದ ವಿವೇಕದ ಮಾರ್ಗಗಳು. ಹಿರಿಯರ ನೈತಿಕ ಪ್ರಜ್ಞೆ ಮತ್ತು ಶ್ರಮದ ದುಡಿಮೆಯ ಸಭ್ಯ ಮಾರ್ಗಗಳನ್ನು ಹೊಸ ಪೀಳಿಗೆ ಸಕಾಲಿಕವಾಗಿ ಅರಿಯದೆ ಹೋದರೆ ಆಪತ್ತು ಕಟ್ಟಿಟ್ಟ ಬುತ್ತಿ. ಸಮಾಜ ಪರಿವರ್ತನೆಗೆ ದಿಟ್ಟ ಹೆಜ್ಜೆ ಇಡಬೇಕೆಂದರೆ ಶಿಕ್ಷಣದ ಎಲ್ಲ ಹಂತಗಳಲ್ಲೂ ಮಾನವೀಯ ಮೌಲ್ಯಗಳು ಪ್ರಾಮುಖ್ಯ ಪಡೆಯಬೇಕು, ಸುದ್ದಿ ಮಾಧ್ಯಮಗಳ ಕಾರ್ಯಕ್ರಮಗಳಲ್ಲೂ ಸತ್ಸಂದೇಶಗಳು ಮನೆ ಮನೆಗಳನ್ನು ತಲುಪಬೇಕು. ನೈತಿಕತೆಯನ್ನು ಬಾಳುವ ದಿವ್ಯ ಚೇತನ್ಯವೇ ದೇವರೆಂದು ಪ್ರತಿ ಮನೆಯೂ ಮನವೂ ಪರಿಭಾವಿಸಬೇಕು. ಆ ಹಾದಿಯಲ್ಲಿ ನಾವು ವಿವೇಕಪೂರ್ಣವಾಗಿ ಗ್ರಹಿಸಬೇಕಾದ, ಪಾಲಿಸ ಬೇಕಾದ ಸಂಗತಿಗಳು ಹಲವು ಇವೆ .ನಮ್ಮೆಲ್ಲರ ಜೀವ ಚೈತನ್ಯವು ಕ್ಷುಲ್ಲಕ ರಾಜಕೀಯ, ಜಾತಿ -ಮತಗಳ ವಿಭಜನೆಯ ಭಾವೋದ್ವೇಗದಲ್ಲಿ ವ್ಯಯವಾಗದೆ, ಬಲಿಯಾಗದೆ ಪ್ರೀತಿ, ಕರುಣೆಯಿಂದ ಹೊರಹೊಮ್ಮಬೇಕು. ಶಿಕ್ಷಣವು ಸಾಂವಿಧಾನಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಪ್ರತಿಫಲಿಸಬೇಕು. ಮಕ್ಕಳು ತಿಳಿಯದ ಆಲೋಚನೆ, ಮನದ ಮಾತು ,ಹೃದಯದ ಮಿಡಿತದಲ್ಲಿ ಬೆಸೆದುಕೊಂಡು, ಜೀವನ ಮೌಲ್ಯಗಳಲ್ಲಿ ಒಡಮೂಡಬೇಕು.
ತಂತ್ರಜ್ಞಾನ ಯುಗವು ತಂದೊಡ್ಡವು ಒಂಟಿತನ ,ಸೋಮಾರಿತನ, ಮಿಥ್ಯ ಸುಖಗಳಲ್ಲಿ ಮೆದುಳು ಮುದುಡದೆ, ಆಂತರ್ಯದ ಅತೃಪ್ತಿ ಜ್ವಾಲೆಯು ಮಂಕಾಗದೆ ಸುಜನಶೀಲತೆಗೆ ತೆರೆದುಕೊಳ್ಳುಬೇಕು. ಶಿಷ್ಟ ಸಮಾಜವು ಗುರುತಿಸುವ ‘ನೈತಿಕತೆ’ಯ ಒಳ-ಹೊರ ಸುಳಿಗಳನ್ನು ಮೀರಿ ಸ್ವಂತಿಕೆಯ ಪೂರ್ಣ ಸ್ವಾತಂತ್ರ್ಯದಲ್ಲಿ ಸಂಭ್ರಮಿಸುವಂತಾಗಬೇಕು. ಬಾಳುವೆಯ ವೈಶಾಲ್ಯವು ಸ್ವಾರ್ಥ, ಲೋಭಗಳಲ್ಲಿ ಕುರುಡಾಗದೇ ಪ್ರಕೃತಿಯ ಅದಮ್ಯ ಚೇತನದಲ್ಲಿ ಕಲೆತು ಬೆಳಗಬೇಕು. ಆ ಬೆಳಕು ಎಲ್ಲೆಡೆಯೂ ಪಸರಿಸಬೇಕು. ಚಲನಚಿತ್ರ ಬದುಕಿನಲ್ಲಿ ಆಲಿಸುವ, ಗ್ರಹಿಸುವ, ಕಲಿಯುವ, ಧ್ಯಾನಿಸುವ ಸಂಯಮ ಮೂಡಬೇಕು, ಎಲ್ಲಕ್ಕೂ ಮಿಗಿಲಾಗಿ ಸಂವೇದನಾಶೀಲತೆ, ವಿನಯವಂತಿಕೆಯು ‘ಜೀವನ ಕಲೆ’ಯಾಗಬೇಕು.
ಪರಸ್ಪರ ಪ್ರೀತಿ, ನಂಬುಗೆಯಲ್ಲಿ ಬಾಂಧವ್ಯಗಳನ್ನು ಬೆಸೆಯುವಷ್ಟು ನಿಸ್ವಾರ್ಥ ಬೇಕು. ಮುಗ್ಧತೆಯು ಮಾನ, ಅಪಮಾನಗಳನ್ನು ಮೀರಿ, ಹಳೆಯ ಗಾಯದ ನೋವುಗಳಿಲ್ಲದೆ ನಿರಾಳ ಗೊಳ್ಳಬೇಕು. ನಮ್ಮ ಆತ್ಮವನ್ನು ತಿನ್ನುವ ಮನ್ನಣೆಯ ದೇಹವನ್ನು ತೊರೆದು ,ತನ್ನ ತಾನು ಬಣ್ಣಿಸ ಬಯಸದೆ ಕೀರ್ತಿ ಶನಿಯನ್ನು ಆಚೆ ನೂಕಬೇಕು. ಹಾಗಾದಾಗ ಮಾನವ ಜನ್ಮ ಹಿರಿದೆನಿಸುತ್ತದೆ.