ಡಿಕೆಶಿ ಎಲ್ಲಿದ್ದಾರೆ? ಎಲ್ಲಿರುತ್ತಾರೆ?

ಡಿಕೆಶಿ ಎಲ್ಲಿದ್ದಾರೆ? ಎಲ್ಲಿರುತ್ತಾರೆ?

Over a cup of tea anything can happen ಎಂಬ ಮಾತಿದೆ . ಸೋನಿಯಾ ಗಾಂಧಿ – ಜೆ. ಜಯಲಲಿತಾ ನಡುವಿನ ಚಾಯಪೇ ಚರ್ಚಾದಿಂದ ವಾಜಪೇಯಿ ಸರಕಾರ ಪತನವಾದದ್ದು ದೇಶದ ಇತಿಹಾಸದಲ್ಲಿ ದಾಖಲಾಗಿದೆ. ಸದ್ಯ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುದ್ದಿಯ ಉತ್ತುಂಗದಲ್ಲಿದ್ದಾರೆ. ಶಿವರಾತ್ರಿಯ ದಿನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಶಿವಕುಮಾರ್ ವೇದಿಕೆ ಹಂಚಿಕೊಂಡಿರುವುದು ರಾಜಕೀಯ ವಲಯದಲ್ಲಿ ಸೆನ್ಸೆಷನ್ ಉಂಟು ಮಾಡಿದೆ. ಇನ್ನೇನು ಪೂರ್ಣಕುಂಭಸ್ವಾಗತದೊಂದಿಗೆ ಡಿಕೆಪಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಷ್ಟೇ ಬಾಕಿ ಎಂಬಷರ ಮಟ್ಟಿಗೆ ಈ ಬೆಳವಣಿಗೆಗೆ ಸುಣ್ಣಬಣ್ಣ ಬಳಿಯಲಾಗುತ್ತಿದೆ.

ಕಾಂಗ್ರೆಸ್ ನಲ್ಲಿ ಸಿಎಂ ಆಗುವ ಅವಕಾಶ ಸಿಗೋದಿಲ್ಲ.ಹಾಗಾಗಿ ಡಿ.ಕೆ.ಶಿವಕುಮಾರ್ ಬೇರೆ ದಾರಿ ನೋಡಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ಸೇಫ್ ಆಗಿ ಲ್ಯಾಂಡ್ ಆಗೋದಕ್ಕೆ ಏನೆಲ್ಲ ವ್ಯವಸ್ಥೆಗಳಾಗಬೇಕೋ ಅದನ್ನು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅವರು ಅಪ್ಪಟ ಹಿಂದುತ್ವವಾದಿಯಾಗಿ ರೂಪುಗೊಳ್ಳುತ್ತಿದ್ದಾರೆ. ಎಂಬಿತ್ಯಾದಿ ಚರ್ಚೆಗಳು ನಡೆಯುತ್ತಿವೆ. ಡಿಕೆಶಿಯವರು ಕುಂಭಮೇಳದಲ್ಲಿ ಮಿಂದೆದ್ದಾಗಲೇ, ಆಡಿಕೊಂಡವರಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾಧ್ಯಾ ಪ್ರಯಾಗ್‌ರಾಡ್‌ನತ್ತ ಕಣ್ಣೆತ್ತಿಯೂ ನೋಡಿಲ್ಲ. ಎಐಸಿಸಿ ಅಧ್ಯಕ್ಷರು ಬೇರೆ ಕುಂಭಮೇಳದಲ್ಲಿ ಮುಳುಗಿ ಏಳುವುದರಿಂದ ಬಡತನ ನಿರ್ಮೂಲನೆಯಾಗುತ್ತದಾ? ಎಂಬ ಮೂಲಭೂತ ಪ್ರಶ್ನೆಯೆತ್ತಿದ್ದಾರೆ. ಇಂಥ ನಿಲುವಿನ ಪಕ್ಷದಲ್ಲಿರುವ ಡಿಕೆಶಿ ತಮ್ಮ ನಾಯಕರ ಚಿಂತನಾ ಕ್ರಮಕ್ಕೆ ವಿರುದ್ಧವಾಗಿ ಹಿಂದೂಗಳ ಪವಿತ್ರ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆಂದರೆ, ಅವರು ಒಂದು ಕಾಲು ಹೊರಗಿಟ್ಟಿದ್ದಾರೆಂದೇ ಅರ್ಥವೆಂದು ತರ್ಕಿಸಿದವರಿದ್ದಾರೆ.

ಅಮಿತ್ ಶಾ ಇಶಾರೆಯಿಲ್ಲದೆ ಬಿಜೆಪಿಯಲ್ಲಿ ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ. ಇಷ್ಟೊಂದು ದೊಡ್ಡ ಮನುಷ್ಯ ಅಮಿತ್ ಶಾ ಅವರೊಂದಿಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಭಾಗಿಯಾಗು ವುದು ಸಣ್ಣ ಸಂಗತಿಯಲ್ಲ. ಊಹಿಸಲು ಅಸಾಧ್ಯವಾದ ಸಂಗತಿಗಳು ತೆರೆಯ ಹಿಂದೆ ಈಗಾಗಲೇ ನಡೆದು ಹೋಗಿವೆ ಎಂದು ರಾಜಕಾರಣದ ಕುತೂಹಲಿಗಳು ವ್ಯಾಖ್ಯಾನಿಸುತ್ತಿದ್ದಾರೆ. ಅಲ್ಲಿಗೆ ‘ಡಿ.ಕೆ. ಶಿವಕುಮಾರ್ ನಡೆ ಬಿಜೆಪಿಯ ಕಡೆ’ ಎಂಬ ಗಾಳಿಪಟ ಆಗಸದೆತ್ತರಕ್ಕೆ ಹಾರಾಡುತ್ತಿದೆ. ಇದರ ಸೂತ್ರ ಮಾತ್ರ ಯಾರ ಕೈಯ್ಯಲ್ಲಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ!

ಇದನ್ನೂ ಓದಿ:ಟ್ರಂಪು ಗಾಳಿಯು ತಂದಾನ ಹಾಡಲಿಲ

ಹಾಗಿದ್ದರೆ ಅಸಲಿಯತ್ತೇನು ಎಂದು ನೋಡಿದರೆ, ರಾಜಕೀಯದಲ್ಲಿ ಪರಸ್ಪರ ವಿರೋಧಿಗಳು ವೇದಿಕೆ ಹಂಚಿಕೊಳ್ಳುವುದು ಹೊಸದಲ್ಲವಲ್ಲ. ಅಷ್ಟಕ್ಕೂ ಅಮಿತ್ ಶಾ ಮನೆಯ ಸಮಾರಂಭಕ್ಕೆ ಡಿಕೆಶಿ ಹೋದದ್ದಲ್ಲ. ತಮ್ಮ ಮನೆಯ ಔತಣಕೂಟಕ್ಕೂ ಅಮಿತ್ ಶಾರನ್ನು ಡಿಕೆಶಿ ಆಹ್ವಾನಿಸಿದ್ದಲ್ಲ, ಹಾಗೊಂದು ವೇಳೆ ಅಕ್ಕಪಕ್ಕ ಕುಳಿತು ಊಟ ಮಾಡಿದರೆ ಅದು ಖಂಡಿತ ತಪ್ಪಲ್ಲ ಸದ್ಗುರು ಜಗ್ಗಿ ವಾಸುದೇವ್ ಅವರ ಆಮಂತ್ರಣದ ಮೇರೆಗೆ ಉಭಯರೂ ಕೊಯಮತ್ತೂರಿನ ಕಾರ್ಯಕ್ರಮಕ್ಕೆ ತೆರಳಿದ್ದರು. ಸೀದಾಸಾದಾ ಹೇಳುವುದಿದ್ದರೆ ಇದರಲ್ಲಿ ಕಿಷ್ಟು ಮಹತ್ವ ವಿಶೇಷವೇನೂ ಇಲ್ಲ. ಇದಕ್ಕೆ ಯಾಕಿಷ್ಟು ಲಭಿಸಿದೆಯೆಂದರೆ, ಈಗಿನ ರಾಜಕೀಯ ಸಂದರ್ಭವೇ ಹಾಗಿದೆ. ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಸೂತ್ರದ ದಾರಿ ಗುಟ್ಟು ರಟ್ಟಾಗಲು ದಿನಗಣನೆ ಆರಂಭವಾಗಿದೆ ಎಂಬಂತೆ ರಾಜಕೀಯ ವಲಯ ಎದುರು ನೋಡುತ್ತಿದೆ. ಇದರ ಕೇಂದ್ರಬಿಂದು ಡಿ.ಕೆ.ಶಿವಕುಮಾರ್. ಸಿಎಂ ಸಿದ್ದರಾಮಯ್ಯನವರ ಆಪ್ತರು ಹಾಕುತ್ತಿರುವ ಪಟ್ಟುಗಳನ್ನು ಗಮನಿಸಿದರೆ ಡಿಕೆಶಿ ಹಾದಿ ಕಠಿಣವಿದೆ ಎನ್ನುವುದು ಎಂಥವರಿಗೂ ವೇದ್ಯವಾಗುತ್ತದೆ. ಹಾಗಾಗಿ ಡಿಕೆಶಿ ಹತಾಶರಾಗಿ ಬಿಟ್ಟಿದ್ದಾರೆ. ಶಾಸಕರು ಅವರ ಜತೆಗಿಲ್ಲ. ಹೈಕಮಾಂಡ್ ಅಸಹಾಯಕವಾಗಿದೆ. ಇಂಥ ಪರಿಸ್ಥಿತಿಯ ಕಾರಣ ಬಿಜೆಪಿಯಲ್ಲಿ ಭವಿಷ್ಯ ಕಂಡುಕೊಳ್ಳಲು ಭೂಮಿಕೆ ನಿರ್ಮಿಸಿಕೊಳ್ಳುತ್ತಿದ್ದಾರೆ ಎನ್ನುವುದೂ ಕೆಲವರ ವ್ಯಾಖ್ಯಾನ. ರಾಜಕೀಯದಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ಈ ವಾದಸರಣಿಗೆ ಸಮರ್ಥನೆ ಬೇರೆ.ಆದೇನಿದ್ದರೂ ಕಟ್ಟಾ ಕಾಂಗ್ರೆಸಿಗರ ನಡುವೆ ಹುಟ್ಟಾ ಕಾಂಗ್ರೆಸಿಗ ಡಿಕೆಶಿ ಪಕ್ಷಬಿಡುತ್ತಾರೆಂದರೆ ನಂಬುವುದು ಕಷ್ಟ ಏಕೆಂದರೆ, ಡಿಕೆಶಿ ದೇಹದಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ರಕ್ತ ಮತ್ತು ಅದಕ್ಕೆ ಯಾವುದೇ ಬೆರಕೆಯಾಗಿಲ್ಲ ಎನ್ನುವುದು ಲ್ಯಾಬ್‌ನಿಂದ ದೃಢಪಟ್ಟಿರುವ ವರದಿ!


ಕುರುಕ್ಷೇತ್ರಕ್ಕೆ ಹೊರಟಿದ್ದ ಮಾದ್ರದೇಶದ ದೊರೆ ಶಲ್ಯಭೂಪ ತನ್ನವರ ಬಿಡದಿ ಪ್ರವೇಶಿಸುವ ಬದಲು ವಿರೋಧಿ ಪಾಳಯದ ಆಲಯ ಹೊಕ್ಕಿ ಸಂತೃಪ್ತಿಗೊಂಡಿದ್ದನಂತೆ. ಬಳಿಕ ತನ್ನ ಅಳಿಯಂದಿರ ವಿರುದ್ಧವೇ ಯುದ್ಧಕ್ಕೆ ನಿಂತನಂತೆ. ಈ ಪ್ರಕರಣದಲ್ಲಿ ಶಲ್ಯಭೂಪ ದಾರಿತಪ್ಪಿದ್ದ. ಅಂದರೆ, ರಾಜಕಾರಣದ ಒಳತಂತ್ರದಿಂದ ಶಲ್ಯನನ್ನು ಯಾಮಾರಿಸಿದ್ದವನು ಕುರುರಾಯ ಕೌರವ. ಗಟ್ಟಿಯಾಗಿ ನಿಂತರೆ ಬಂಡೆಯಂತೆ ಎಂಬ ಖ್ಯಾತಿಯ ಡಿಕೆಶಿಗೆ ಹಾದಿ ತಪ್ಪಿಸುವುದು ದೂರದಮಾತ್ರವಲ್ಲ, ರಾತ್ರಿಯೂ ಅವರು ನಿದ್ರೆ ಮಾಡುವುದಿಲ್ಲ ಎಂಬ ವರ್ತಮಾನವಿದೆ. ಹೀಗೆ ಮೈಯೆಲ್ಲ ಕಣ್ಣಾಗಿರುವ ಡಿಜಿಪಿ ಅವರಿಗೆ ಅನ್ಯರು ಬಲೆ ಬೀಸುತ್ತಿದ್ದಾರೆ. ಗಾಳ ಹಾಕುತ್ತಿದ್ದಾರೆ ಎಂಬ ವಿಶೇಷಣಗಳು ಹೊಂದಾಣಿಕೆಯಾಗದು. ಇದಕ್ಕೆ ಮಧ್ಯಸ್ಥಿಕೆ ವಹಿಸಲು ನಿಶಾ ಕಾಲದಲ್ಲಿ ಯಾರಾದರೂ ಬಂದರೂ ಉಷಾ ಕಾಲದಲ್ಲೆದ್ದು ಜ್ಯೋತಿಷ್ಯಾದಿಗಳನ್ನು ವಿಮರ್ಶಿಸಿಯೇ ಮುಂದುವರಿಯುವ ರೂಢಿ ಡಿಕೆ ಅವರದ್ದು. ಆದಕಾರಣ ಸಮಾರಂಭವೊಂದರ ನಿಮಿತ್ತದಿಂದ ಅವರ ಮನಸ್ಸನ್ನು ಬದಲಿಸುವ ಕೆಲಸವಾಗಿರುತ್ತದೆ ಎನ್ನಲಾಗದು.ಹಾಗಿದ್ದರೆ ಸೋನಿಯಾ ಗಾಂಧಿ ಅವರಿಗೇ ಮಾರ್ಗದರ್ಶಕರಾಗಿದ್ದ ಗುಲಾಂ ನಬಿ ಆಜಾದ್, ರಂಥವರೇ ಪಕ್ಷ ತೊರೆದರಲ್ಲ, ಜ್ಯೋತಿರಾದಿತ್ಯ ಸಿಂಧಿಯಾ ಹೊರ ಹೋಗುತ್ತಾರೆಂದು ಯಾರಾದರೂ ಎಣಿಸಿದ್ದರಾ? ಸಚಿನ್ ಪೈಲಟ್ ಕಾಲು ಹೊರಗಿಟ್ಟಿರಲಿಲ್ಲವಾ? ಎಂದು ಕೇಳುವವರಿದ್ದಾರೆ.

ಕಾಂಗ್ರೆಸ್‌ನಲ್ಲಿ ಇಂಥದೊಂದು ಸಮಸ್ಯೆಯಿರವುದು ನಿಜ. ಪಕ್ಷಕ್ಕಾಗಿ ದುಡಿದವರು, ಪಕ್ಷ ನಿಷ್ಠೆಯಲ್ಲಿ ಪ್ರಶ್ನಾತೀತರು, ಗಾಂಧಿ ಪರಿವಾರದ ಸುಖ, ಸಮೃದ್ಧಿಗಾಗಿ ತಾವು ವೈಯಕ್ತಿಕವಾಗಿ ಕಷ್ಟ ಅನುಭವಿಸಿದವರನ್ನು ಕೆಲ ಬಾರಿ ಸರಿಯಾಗಿ ನಡೆಸಿಕೊಂಡಿಲ್ಲ. ಅಂಥವರಿಗೆ ಕೊಡಬೇಕಾದ ಸ್ಥಾನಮಾನಗಳನ್ನು ನೀಡದೆ ಕೈಚೆಲ್ಲಿದ ನಿದರ್ಶನಗಳಿವೆ. ಡಿಕೆಶಿ ವಿಷಯದಲ್ಲೂ ಹಾಗಾಗಿ ಬಿಡುತ್ತದಾ ಎನ್ನಲು ಕಾಲ ಪಕ್ವವಾಗಿಲ್ಲ.ಹಿಂದುತ್ವದ ವಿಚಾರಕ್ಕೆ ಬಂದರೆ, ತಮ್ಮ ನಂಬಿಕೆ ಏನೆಂಬುದನ್ನು ಡಿಕೆಶಿ ಅವರೇ ಹೇಳಿದ್ದಾರೆ. ಅವರವರ ನಂಬಿಕೆ ಅವರಿಗೆ ಎಂಬ ಡಿಕೆಶಿಯವರ ಅಭಿಪ್ರಾಯವನ್ನು ಗೌರವಿಸಬೇಕು. ಡಿಕೆಶಿ ಚುನಾವಣಾ ಸಮಯದ ಹಿಂದೂ ಅಲ್ಲ, ಅವರು ದೇವಸ್ಥಾನ, ಮಠಮಾನ್ಯಗಳಿಗೆ ಹೋಗುವುದು ಹೊಸದಲ್ಲ, ಅಪಾರವಾದ ಧಾರ್ಮಿಕ ಶ್ರದ್ದೆಯುಳ್ಳ ವ್ಯಕ್ತಿ ಡಿಕೆಶಿ. ಇದೆಲ್ಲವೂ ವಾಸ್ತವ. ಹಾಗೆ ನೋಡಿದರೆ ಹಿಂದುತ್ವದ ಗುತ್ತಿಗೆ ಹಿಡಿದಿರುವ ಬಿಜೆಪಿಯ ತೋರಿಕೆ ಹಿಂದುತ್ತವಾದಿಗಳಿಗಿಂತಲೂ ಶುದ್ಧ ಹಿಂದುತ್ವವಾದಿ ಡಿಕೆಶಿ. ಸೆಕ್ಯುಲರ್‌ವಾದಿಗಳಲ್ಲೂ ಡೋಂಗಿ ಜಾತ್ಯತೀತವಾದಿಯಲ್ಲ. ಇಂಥ ಜಾತಕದ ಡಿಕೆಶಿ ಇದ್ದಕ್ಕಿದ್ದಂತೆ ಮಾತೃಪಕ್ಷವನ್ನು ತೊರೆದು ಬಿಜೆಪಿ ಪಡಸಾಲೆ ಸೇರುತ್ತಾರೆಂಬ ನಿರ್ಣಯಕ್ಕೆ ಬರುವುದು ಬಾಲಿಶತನವಾಗುತ್ತದೆ. ರಾಜಕೀಯದಲ್ಲಿ ತಾನಾಗಿಯೇ ಸೃಷ್ಟಿಯಾಗುವ ಮತ್ತು ಪ್ರಜ್ಞಾಪೂರ್ವಕವಾಗಿ ಸೃಷ್ಟಿಸಲಾಗುವ ಸನ್ನಿವೇಶಗಳು ಕೆಲವರಿಗೆ ಅವಕಾಶ, ಆಯ್ಕೆಗಳನ್ನು ತೆರೆದಿಡುತ್ತವೆ. ನಿಶ್ಚಿತವಾಗಿಯೂ ಅದರಿಂದ ಸಂದೇಶವೂ ರವಾನೆಯಾಗುತ್ತದೆ. ಹಿಂದೂ ಧಾರ್ಮಿಕ ಭಾವನೆಯ ಅಪಮಾನವೇ ಸೆಕ್ಯುಲರಿಸಂ ಎಂದುಕೊಂಡವರಿಗೆ ಡಿಕೆಶಿಯವರ ಈ ಆಚರಣೆ ಇಷ್ಟವಾಗಿರಲಿಕ್ಕಿಲ್ಲ. ಕಾಂಗ್ರೆಸ್‌ನಲ್ಲೂ ಅನೇಕರಿಗೆ ಇದು ಅಪಥ್ಯವಾಗಿದೆ ಎನ್ನುವುದೂ ಸತ್ಯ.

Leave a Comment