ತೀವ್ರ ದ್ವಂದ್ವಯುದ್ಧ- ಸೈನಿಕ ಸಮೂಹ ನಾಶ
ಶ್ರೀ ವಸಿಷ್ಠರ ಉಪದೇಶದಲ್ಲಿ ಯುದ್ಧದ ವರ್ಣನೆ ನಡೆಯುತ್ತಿದೆ. ಅದರಲ್ಲೂ ದ್ವಂದ್ವ ಯುದ್ಧದ ಚಿತ್ರವನ್ನು ನಮಗೆ ಅವರು ನೀಡುತ್ತಿದ್ದಾರೆ. ಆಯಾ ವಿಷಯಕ್ಕೆ ಸಂಬಂಧಪಟ್ಟಂತೆ ವರ್ಣಿಸುವಾಗ ಅದಕ್ಕೆ ತಕ್ಕಂತೆ ದುಷ್ಟಾಂತಗಳನ್ನು ಕೊಡುವುದು ಮತ್ತು ವರ್ಣನಾಶೈಲಿಯನ್ನು ಬಳಸುವುದು ಯೋಗವಾಸಿಷ್ಠದ ಉದ್ದಕ್ಕೂ ಕಂಡು ಬರುವ ವೈಶಿಷ್ಟ್ಯ. ಕಾವ್ಯಗಳಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಮತ್ತು ರಸಕ್ಕೆ ಸಂಬಂಧಿಸಿದಂತೆ ಶೈಲಿಯನ್ನು ಬಳಸುವುದು ರೂಢಿಯಲ್ಲಿದೆ. ವಿಷಯ-ರಸಗಳಿಗೆ ಹೊಂದಿಕೆಯಾಗುವಂತೆ ಛಂದಸ್ಸುಗಳ ಬಳಕೆ ಮತ್ತು ರಾಗ, ತಾಳಗಳ ಬಳಕೆ ಕೂಡ ಕಂಡು ಬರುತ್ತದೆ. ಯೋಗವಾಸಿಷ್ಠವು ಒಂದು ಶಾಸ್ತ್ರಗ್ರಂಥವಾಗಿದ್ದರೂ ಇಂತಹ ಕಾವ್ಯ ಗುಣಗಳನ್ನು ಕೂಡ ನಾವಿಲ್ಲಿ ಕಾಣಬಹುದಾಗಿದೆ. ಸಂಸ್ಕೃತದಲ್ಲಿ ಯೋಗವಾಸಿಷ್ಠವನ್ನು ಅರ್ಥ ಮಾಡಿಕೊಂಡು ಓದಿದಾಗ ಇಂತಹ ಸಂಗತಿಗಳು ಗಮನಕ್ಕೆ ಬರುತ್ತವೆ. ಕನ್ನಡದ ಗದ್ಯಾನುವಾದದಲ್ಲಿ ಈ ಗುಣವನ್ನು ತೋರಿಸುವುದು ಸಾಧ್ಯವಿಲ್ಲ. ಶ್ರೀವಸಿಷ್ಠರ ಸರ್ವಜ್ಞತ್ಶ ಮತ್ತು ಗ್ರಂಥಕಾರರಾದ ವಾಲ್ಮೀಕಿ ಮಹರ್ಷಿಗಳ ಕವಿತಾ ಜಾತುರ್ಯ ಗೊತ್ತಾಗಲು ಈ ಸಂಗತಿಯನ್ನು ತಿಳಿಸುತ್ತಿದ್ದೇವೆ .
ಪ್ರಕೃತವನ್ನು ಅನುಸರಿಸೋಣ; ಲೀಲಾ ಮಹಾರಾಣಿಯ ಪತಿಯೋಗಿದ್ದ ವಿದೂರಥನ ಕಡೆಯವರು ಮತ್ತು ಸಿಂಧುರಾಜನ ಕಡೆಯವರ ಜೊತೆ ಘೋರ ಯುದ್ದ ನಡೆಯುತ್ತಿದೆ. ತುಂಬಾ ಪ್ರಾಣ ಹಾನಿಗಳು ಆಗಿವೆ. ಈ ಸ್ಥಿತಿಯಲ್ಲಿ ನಡೆಯುತ್ತಿರುವ ದ್ವಂದ್ವಯುದ್ಧವನ್ನು ವರ್ಣೀಸುತ್ತಾ ಶ್ರೀವಸಿಷ್ಠರು ಹೇಳಿದರು-‘ ಶ್ರೀ ರಾಮ! ದ್ವಂದ್ವಯುದ್ಧದಲ್ಲಿ ತೊಡಗಿಕೊಂಡಿರುವ ದರದ ಎಂಬ ಹೆಸರಿನ ಸೈನಿಕರು ಆನೆಗಳ ದಂತಗಳ ಕಿವಿತಕ್ಕೆ ಸಿಲುಕಿಕೊಂಡು ರಕ್ತ ನದಿಯಲ್ಲಿ ಬಿದ್ದಿರುವ ಮರಗಳ ಎಲೆಗಳಂತಾದರು. ಈ ದರ ದರು ತುಂಬಾ ಶೂರರು. ಅನೇಕ ಶತ್ರುಗಳನ್ನು ಈ ಹಿಂದೆ ಸಂಹಾರ ಮಾಡಿದವರು.ಆದರೂ ಈಗ ಅವರ ಸ್ಥಿತಿ ಹೀಗಾಯಿತು. ಚೀನರು (ಎಂಬ ಸೈನಿಕರು) ಬಾಣಗಳ ಹೊಡೆತಕ್ಕೆ ಸಿಲುಕಿ ಪುಡಿಯಾದರೂ. ಜರ್ಜರಿತವಾದ ದೇಹವುಳ್ಳ ಅವರು ತಮ್ಮ ಭಾರವಾದ ಶರೀರಗಳನ್ನು ಸಮೀಪದ ಸರೋವರದಲ್ಲಿ ಸಮರ್ಪಿಸಿಕೊಂಡರು’.
ಇದನ್ನೂ ಓದಿ:ವಿಶ್ವವಿದ್ಯಾಲಯ :ಸಂಖ್ಯೆಯಷ್ಟೇ ಮುಖ್ಯವೇ?
‘ಕರ್ಣಾಟರೆಂಬ ವೀರ ಭಟರು (ಕರ್ನಾಟಕದವರಿರಬಹುದು)
ನಲದ ಶೂರರೆಂಬ ಸೈನಿಕರನ್ನು ಕುಂತಾಯುಧದ ಮೂಲಕ ಎದುರಿಸಿದರು.ಅಲ್ಲದೆ ಅವರ ಕುತ್ತಿಗೆಗಳನ್ನು ಕುಂತಾಯುದದ ಮೂಲಕ ಕತ್ತರಿಸಿದರು. ಇದರಿಂದ ನಲದ ಶೂರರು ತುಂಡು ತುಂಡಾಗಿ ನಕ್ಷತ್ರಗಳು ಪಟಪಟನೆ ಉದುರಿ ಬೀಳುವಂತೆ ಬಿದ್ದು ಹೋದರು.’ ಇನ್ನೊಂದೆಡೆ ದಾಶಕರು ಮತ್ತು ಶಕರು ಪರಸ್ಪರ ದ್ವಂದ್ವ ಯುದ್ಧವನ್ನು ಮಾಡಿಕೊಳ್ಳುತ್ತಿದ್ದರು. ಸಮುದ್ರದಲ್ಲಿ ಮೊಸಳೆಗಳ ವ್ಯೂಹವು ಮುತ್ತುವಂತೆ ಆನೆಗಳಿಂದ ಮುತ್ತಲ್ಪಟ್ಟಿದ್ದರಿಂದ ಅವರೀರ್ವರ ಆಯುಧಗಳು ನಾಶವಾದವು. ಹಾಗಾಗಿ ಪರಸ್ಪರ ಕೈಗಳಿಂದಲೇ ತಲೆಕೂದಲನ್ನು ಹಿಡಿದುಕೊಂಡು ಕೇಶಾಕೇಶಿ ದ್ವಂದ್ವ ಯುದ್ದ ಮಾಡುತ್ತಾ, ಸಿಟ್ಟಿನ ಆವೇಶದಲ್ಲಿ ಘರ್ಜಿಸುತ್ತಿದ್ದರು’. (ಇಲ್ಲಿ ‘ಮಕರವ್ಯೂಹ ಎಂಬ ಶಬ್ದವು ಚಕ್ರವ್ಯೂಹ ಮೊದಲಾದ ಶಬ್ದಗಳಂತೆ ಯುದ್ಧದ ಒಂದು ವ್ಯೂಹವನ್ನು ಹೇಳುತ್ತಿದೆ ಎಂದು ಕಾಣುತ್ತದೆ).
‘ ಪಾಶವೆಂಬ ದೇಶದ ಸೈನಿಕರು ಪ್ರಯೋಗಿಸಿದ ಶೃಂಕಲೆ ( ವೈರಿಗಳನ್ನು ಸಾಮೂಹಿಕವಾಗಿ ಕಟ್ಟಿಹಾಕಲು ಎಸೆಯುವ ಗಟ್ಟಿಯಾದ ಬಲೆ)ಗಳಿಂದ ತಾವು ಬಲೆಯಲ್ಲಿ ಸಿಲುಕಿ ಕೊಳ್ಳುತ್ತೇವೆ ಎಂಬ ಭಯಕ್ಕೆ ಒಳಗಾಗಿ ದಶಾರ್ಣರು ಓಡತೊಡಗಿದರು. ಆದರೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಜೊಂಡು ಹುಲ್ಲಿನ ಬುಡಗಳಲ್ಲಿ ಮೀನುಗಳು ಸಿಲುಕಿ ಕೊಳ್ಳುವಂತೆ ರಕ್ತದ ಕೆಸರಿನಲ್ಲಿ ಸಿಲುಕಿಕೊಂಡರು.’
‘ ತಂಗಣರು ಎಂಬ ಸೈನಿಕರು ದುರ್ಜರ ಸೇನೆಯನ್ನು ನಾಶಪಡಿಸಿದರು. ಆ ಮೂಲಕ ಎತ್ತಿದ ನೂರಾರು ಖಡ್ಗಗಳಿಂದ ಮತ್ತು ಬಾಣಗಳಿಂದ ದುರ್ಜರ ಸ್ತ್ರೀಯರ ಕೇಶಗಳನ್ನು ಲಂಚನ ಮಾಡಿಸಿದರು’.(ದುರ್ಜರ ಸೈನಿಕರು ಯುದ್ಧದಲ್ಲಿ ತೀರಿಕೊಂಡಾಗ ಅವರ ಮಡದಿಯರಾದ ಸ್ತ್ರೀಯರು ವಿಧವೆಯರಾದರು).
‘ ನಿಗಡರು ಎಂಬ ಸೈನಿಕರು ಜಾನಪದ ಎಂಬ ಸೈನಿಕರ ಮೇಲೆ ಅಕ್ರಮಣ ಮಾಡಿ ಬಾಣಗಳ ಮಳೆಗಳನ್ನು ಸುರಿಸಿದರು. ಈ ನಿಗಡರು, ಪ್ರಾಣಿಗಳು ಶಬ್ದಗಳನ್ನು ಕೇಳಿಸಿಕೊಂಡಾಗ ಕಿವಿಗಳನ್ನು ಎತ್ತರಕ್ಕೆ ನಿಮಿರಿಸಿಕೊಳ್ಳುವಂತೆ, ಶಸ್ತ್ರಗಳನ್ನು ಎತ್ತಿ ಹಿಡಿದವರೆಂದು ಪ್ರಸಿದ್ಧರಾದವರು. ಅಂತಹ ಯುದ್ಧನಿಷ್ಣಾತ ಸೈನಿಕರ ಸಮೂಹದಿಂದ ಪ್ರಯೋಗಿಸಲ್ಪಟ್ಟ ಬಾಣಗಳ ಮಳೆ ಗುಹಾ ಸೈನಿಕರನ್ನು ಆವರಿಸಿತು. ಈ ಮಳೆಯನ್ನು ಸುರಿಸುತ್ತಿದ್ದಿರುವ ನಿಗಡ ವೀರರು ಧರಿಸಿರುವ ಆಯುಧಗಳ ಪ್ರಭೆಗಳು ಮೋಡದಲ್ಲಿರುವ ಮಿಂಚಿನಂತೆ ಕಾಣುತ್ತಿತ್ತು. ಅದರಿಂದ ಮೋಡದಂತೆ ಕಾಣುತ್ತಿರುವ ನಿಗಡ ಸೈನಿಕರು ಮಳೆಗಾಲದ ಮೇಘಗಳ ವನ ಪ್ರದೇಶಗಳನ್ನು ಮಳೆಯಿಂದ ಆವರಿಸುವಂತೆ, ಬಾಣಗಳಿಂದ ನಿಗಡ ಸೈನಿಕರನ್ನು ಅಚ್ಚಾದಿಸಿದರು. ಇದರಿಂದ ಗುಹಾ ಸೈನಿಕರು ಸೋತು ಹೋದರು’.
‘ ಭುಶುಂಡಿ ಎಂಬ ಆಯುಧಗಳ ಮುಂಡಲದಿಂದ ಹೊರಬಂದ ನೀಲಿ ಬಣ್ಣದ ಬೆಳಕನ್ನು ನೋಡಿ, ಸೂರ್ಯನು ನೀಲಿ ಬಣ್ಣದ ಕಿರಣಗಳನ್ನು ನೀಡುತ್ತಿರುವಂತೆ ಭಾಸವಾಗಿದ್ದರಿಂದ ಪ್ರಳಯದ ಭೀತಿ ಉಂಟಾಗಿ ಭಯದಿಂದ ತತ್ತರಿಸಿರುವ ಅಭೀರ ಎಂಬ ಸೈನಿಕರ ಮೇಲೆ ಅವರೊಡನೆ ದ್ವಂದ್ವಯುದ್ಧ ಮಾಡುತ್ತಿರುವ ವೈರಿ ಸೈನಿಕರು ಮುಗಿಬಿದ್ದು ನಾಶಪಡಿಸಿದರು. ಹಸಿರಿನ ಹುಲ್ಲುಗಾವಲನ್ನು ಕಂಡು ಗೋ ಸಮೂಹಗಳು ಮುಗಿಬೀಳುವಂತೆ ವೈರು ಸೈನಿಕರು ಅಭೀರ ಸೈನಿಕರ ಮೇಲೆ ಮುಗಿಬಿದ್ದು ಅಕ್ರಮಣ ಮಾಡಿದರು’. (ಸೂರ್ಯನಿಂದ ನೀಲಿ ಬಣ್ಣದ ಕಿರಣ ಹೊರ ಬರುತ್ತಿರುವುದು ಗೋಚರಿಸಿದರೆ ಅದು ಜನ ಸಮೂಹ ನಾಶವಾಗುವುದರ ಸೂಚನೆ).
‘ತಾಮ್ರದಂತಿರುವ ಮೈಬಣ್ಣವನ್ನು ಹೊಂದಿರುವ ಯವನ ಸೇನೆಯನ್ನು ಗೌಡ ಭಟರೆಂಬ ಸೈನಿಕರು ಉಗುರು, ಕೇಶಗಳನ್ನೆಲ್ಲ ವಿಕೃತಿಗೊಳಿಸುವ ಮೂಲಕ ನಾಶಪಡಿಸಿದ್ದರು. ಹೇ ರಾಮ! ಈ ದೃಶ್ಯವನ್ನು ನೋಡಿದರೆ, ಸುಂದರ ಬಂಗಾರದ ಮೈಬಣ್ಣವುಳ್ಳ ನಾಯಿಕೆಯನ್ನು ಗೌಡ ಭಟ ಎಂಬ ನಾಯಕನು ಉಪಭೋಗಿಸುತ್ತಿರುವಂತೆ ಕಾಣುತ್ತಿತ್ತು. ಭಾಸಕರೆಂಬ ಸೈನಿಕರು ತಂಗಣರೆಂಬ ಸೈನಿಕರನ್ನು ಕಂಕ,ಗೃದ್ರಗಳಂತಿರುವ ತಮ್ಮ ಬಾಣಗಳಿಂದ ಪುಡಿಪುಡಿ ಮಾಡಿದರು. ಭಾಸಕರು ಮರ, ಪರ್ವತಗಳನ್ನು ಕತ್ತರಿಸಿ ಹಾಕಬಲ್ಲ ಚಕ್ರಾಯುಧಗಳನ್ನು ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಪ್ರಯೋಗಿಸಿದರು. ಶಬ್ದ ಮಾಡುತ್ತಾ ಮೇಲೆರಗಿ ಬರುತ್ತಿರುವ ಚಕ್ರಾಯುಧಗಳ ಆಕ್ರಮಣಿದಿಂದ ತಂಗಣ ಸೈನಿಕರು ಚೂರು ಚೂರಾಗಿ ಕತ್ತರಿಸಲ್ಪಟ್ಟರು’.