ನಂಬುವುದು ಯಾರನ್ನು?
ದೆಹಲಿಯ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ 63 ವರ್ಷ ವಯಸ್ಸಿನ ಡಾಕ್ಟರ್ ಯೋಗೇಶ್ ತಮ್ಮ ಪತ್ನಿ ಡಾ. ನೀನಾ ಜತೆ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದರು. ಸರ್ಕಾರಿ ಸೇವಾ ನಿವೃತ್ತಿಯ ನಂತರ ಅವರು ತಮ್ಮ ಮನೆಯ ಹತ್ತಿರದಲ್ಲೇ ಒಂದು ಸಣ್ಣ ಕ್ಲಿನಿಕ್ ಮಾಡಿಕೊಂಡಿದ್ದು ಪ್ರತಿದಿನವೂ ಎರಡು ಗಂಟೆಗಳ ಕಾಲ ಅಲ್ಲಿಗೆ ಹೋಗಿ ಬರುತ್ತಿದ್ದರು. ಡಾ.ನೀನಾ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಪ್ರಸೂತಿ ತಜ್ಞೆಯಾಗಿದ್ದರು. ಅವರಿಗೆ ಇಬ್ಬರು ರು ಹೆಣ್ಣು ಮಕ್ಕಳು. ಇಬ್ಬರಿಗೂ ಮದುವೆಯಾಗಿದ್ದು ಒಬ್ಬಳು ಕೆನಡಾದಲ್ಲಿದ್ದರೆ ಇನ್ನೊಬ್ಬಳು ದೆಹಲಿಯ ಸಮೀಪದ ನೋಯ್ದಾದಲ್ಲಿ ಇದ್ದು ಪ್ರತಿ ಭಾನುವಾರವೂ ತನ್ನ ಮಾತಾಪಿತರನ್ನು ಕಾಣಲು ಬರುತ್ತಿದ್ದಳು.
ತಮ್ಮ ಮನೆಯ ಕೆಲಸ ಕಾರ್ಯಗಳನ್ನು ಮಾಡಲು ಬಸಂತಿ ಎನ್ನುವ ನೇಪಾಳೆಯೊಬ್ಬಳನ್ನು ಡಾ. ಯೋಗೇಶ್ ನೇಮಿಸಿಕೊಂಡಿದ್ದರು. ಸುಮಾರು 24 ವರ್ಷಗಳಿಂದ ಅವರ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದ ಬಸಂತಿ, ಅವರ ಮನೆಯ ಮಹಡಿಯ ಕೋಣೆಯೊಂದರಲ್ಲಿ ವಾಸವಿರುತ್ತಿದ್ದಳು. ವರ್ಷಕ್ಕೊಮ್ಮೆ ಆಕೆ ತನ್ನೂರಿಗೆ ಹತ್ತು ದಿನಗಳ ಅವಧಿಗೆ ಹೋಗಿಬರುತ್ತಿದ್ದಳು. ಕುಟುಂಬದ ಒಬ್ಬ ಸದಸ್ಯೆಯಂತೆಯೇ ಆಗಿಹೋಗಿದ್ದ ಬಸಂತಿ 2022ರ ಮೇ ತಿಂಗಳಲ್ಲಿ ತನ್ನ ಮಾಲೀಕರ ಅನುಮತಿಯನ್ನು ಪಡೆದು ವಾರ್ಷಿಕ ರಜೆಯ ಮೇಲೆ ಹೋದಳು.
ಬಸಂತಿ ರಜೆ ಹೋದ ಮಾರನೆಯ ದಿನ ಡಾ. ನೀನಾ ಎಂದಿನಂತೆ ಆಸ್ಪತ್ರೆಗೆ ಹೋಗಿ ಸಂಜೆ 6.30ಕ್ಕೆ ಮರಳಿ ಬಂದು ಮನೆಯ ಬೆಲ್ ಬಾರಿಸಿದಾಗ ಯಾರೂ ಉತ್ತರಿಸಲಿಲ್ಲ. ಸಾಮಾನ್ಯವಾಗಿ ಡಾ. ಯೋಗೇಶ್ ಮಧ್ಯಾಹ್ನದ ನಿದ್ದೆ ಮಾಡಿ ಸಂಜೆ 6 ಗಂಟೆಗೆ ಹಜಾರದಲ್ಲಿ ಕುಳಿತು ಚಹಾ ಕುಡಿಯುತ್ತಿದ್ದುದು ಆಕೆಗೆ ತಿಳಿದಿತ್ತು. ಏಕೆ ಇಂದು ಇನ್ನೂ ಎದ್ದಿಲ್ಲವೆಂದು ಯೋಚಿಸಲಾರಂಭಿಸಿದ ಡಾ. ನೀನಾ ತಮ್ಮ ಬಳಿ ಇದ್ದ ಬೀಗದ ಕೈಯಿಂದ ಮನೆಯ ಬಾಗಿಲನ್ನು ತೆಗೆದು ಒಳಗೆ ಹೋದರು. ಆಗ ಅವರು ಕಂಡ ದೃಶ್ಯ ಭಯಾನಕವಾಗಿತ್ತು.ಡೈನಿಂಗ್ ಟೇಬಲ್ ಕುರ್ಚಿಯೊಂದರ ಮೇಲೆ ಡಾ. ಯೋಗೇಶ್ರನ್ನು ಕಟ್ಟಿ ಹಾಕಲಾಗಿದ್ದು ಅವರ ತಲೆಯಿಂದ ರಕ್ತ ಸುರಿದು ಅವರ ಕಾಲಿನ ಬಳಿ ಮಡುವಾಗಿ ನಿಂತಿತ್ತು. ಡಾ. ನೀನಾ ಪತಿಯತ್ತ ಓಡಿ ಹೋಗಿ ಪರೀಕ್ಷಿಸಿದರು. ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಮನೆಯಲ್ಲಿದ್ದ ತಮ್ಮ ಎರಡು ಸಾಕುನಾಯಿಗಳೆಲ್ಲಿ ಹೋದವು ಎಂದು ಹುಡುಕಿದಾಗ ಅವೆರಡನ್ನೂ ಗೆಸ್ಟ್ ಬೆಡ್ ರೂಂನಲ್ಲಿ ಕೂಡಿಹಾಕಲಾಗಿತ್ತು. ಅವೆರಡೂ ಗಾಢ ನಿದ್ದೆಯಲ್ಲಿದ್ದವು. ಯಾವುದೋ ವಿಷ ಇಲ್ಲವೇ ಮಾದಕ ವಸ್ತುಗಳನ್ನು ಅವಕ್ಕೆ ಉಣಿಸಿರಬೇಕೆಂದು ಡಾ. ನೀನಾ ಊಹಿಸಿದರು. ಅವರು ತಮ್ಮ ಬೆಡ್ ರೂಂಗೆ ಹೋಗಿ ನೋಡಿದಾಗ ಅಲ್ಲಿದ್ದ ಬೀರುವನ್ನು ತೆರೆದು ಅದರಲ್ಲಿದ್ದ ಹನ್ನೆರಡು ತೊಲೆ ತೂಕದ ಬಂಗಾರದ ಆಭರಣಗಳು ಮತ್ತು ಸುಮಾರು ಐದು ಲಕ್ಷ ರೂ. ಗಳನ್ನು ಕಳ್ಳತನ ಮಾಡಲಾಗಿತ್ತು. ಗಾಬರಿಯಾದ ಡಾ. ನೀನಾ ಕೂಡಲೇ ದೆಹಲಿ ಪೊಲೀಸ್ ಕಂಟ್ರೋಲ್ ರೂಂಗೆ ಫೋನ್ ಮಾಡಿ ಸುದ್ದಿ ಮುಟ್ಟಿಸಿದರು.ಕೆಲವೇ ನಿಮಿಷಗಳಲ್ಲಿ ಪೊಲೀಸರು ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಜತೆಗೆ ಸ್ಥಳಕ್ಕೆ ಬಂದರು. ಡಾ. ನೀನಾರ ಹೇಳಿಕೆಯ ಮೇರೆಗೆ ಕೊಲೆ ಮತ್ತು ದರೋಡೆಯ ಪ್ರಕರಣವನ್ನು ದಾಖಲಿಸಿ ಸ್ಥಳ ಪರಿಶೀಲನೆ ಮಾಡಿದರು. ಮನೆಯ ಹಲವಾರು ಜಾಗಗಳಲ್ಲಿ ಬೆರಳಚ್ಚು ದೊರೆತವು. ಪಂಚನಾಮೆಯ ನಂತರ ಡಾಕ್ಟರ್ ಯೋಗೇಶ್ವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದರು. ಪೊಲೀಸ್ ನಾಯಿಗಳಿಂದ ಯಾವ ಕುರುಹೂ ಸಿಗಲಿಲ್ಲ.
ಇದನ್ನೂ ಓದಿ: ಅಫ್ಘಾನ್ ಮೇಲೆ ಪಾಕ್ ಬಾಂಬ್ ದಾಳಿ ದಾಯಾದಿ ಕಲಹಕ್ಕೆ ಮೂಲವೆಲ್ಲಿ?
ಪೊಲೀಸರು ಮನೆಯ ಸುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ಪುಟೇಜ್ಗಳನ್ನು ಪರಿಶೀಲಿಸಿದಾಗ ಮಧ್ಯಾಹ್ನ ಸುಮಾರು 4 ಗಂಟೆಗೆ ಡಾ. ಯೋಗೇಶ್ರ ಮನೆಯ ಹಿಂಬಾಗಿಲಿನ ಮೂಲಕ ಆರು ಜನ ಆಗಂತುಕರು ಬಂದದ್ದು ದಾಖಲಾಗಿತ್ತು. ಅವರಲ್ಲಿ ಐವರು ಪುರುಷರು ಹಾಗೂ ಒಬ್ಬ ಮಹಿಳೆಯಿದ್ದು ಎಲ್ಲರೂ ಎರಡು ನಿಮಿಷಗಳ ಅಂತರದಲ್ಲಿ ಇಬ್ಬರಿಬ್ಬರಂತೆ ಬಂದಿದ್ದರು. ಅವರಲ್ಲಿ ಯಾರ ಮುಖವೂ ಸ್ಪಷ್ಟವಾಗಿ ಕಾಣಲಿಲ್ಲ. ಆ ಚಿತ್ರಗಳನ್ನು ಡಾ. ನೀನಾ ಮತ್ತು ಅವರ ನೆರೆಹೊರೆಯವರಿಗೆ ತೋರಿಸಲಾಯಿತು. ಯಾರೂ ಅವರನ್ನು ಗುರುತು ಹಿಡಿಯಲಿಲ್ಲ.
ಮನೆಯಲ್ಲಿದ್ದ ಸಾಕುನಾಯಿಗಳಿಗೆ ಮತ್ತು ಬರಿಸಿ ಅವನ್ನು ಕೋಣೆಯಲ್ಲಿ ಕೂಡಿಹಾಕಿ ಅಪರಾಧವನ್ನು ಮಾಡಿರಬೇಕಾದರೆ ಈ ಕೃತ್ಯದಲ್ಲಿ ಯಾರೋ ಒಳಗಿನವರ ಕೈವಾಡವೇ ಇರಬೇಕು ಎಂದು ಊಹಿಸಿದ ತನಿಖಾಧಿಕಾರಿ, ‘ನಿಮ್ಮ ಮನೆಯಲ್ಲಿ ವಾಸ ಮಾಡುತ್ತಿರುವವರು ಯಾರ್ ರ್ರು?” ಎಂದು ಡಾ. ನೀನಾರನ್ನು ಪ್ರಶ್ನಿಸಿದರು. ಆಕೆ ತಮ್ಮ ಸೇವಕಿ ಬಸಂತಿಯ ಬಗ್ಗೆ ಮಾಹಿತಿಯಿತ್ತರು. ‘ಅವಳಿಗೆ ಈಗ 50 ವರ್ಷ ವಯಸ್ಸು ಬಹಳ ನಂಬಿಕಸ್ಥೆ, ಈಗ ಎರಡು ದಿನಗಳ ಹಿಂದೆ ರಜೆ ಪಡೆದು ನೇಪಾಳಕ್ಕೆ ಹೋಗಿದ್ದಾಳೆ. ಆಕೆಯ ಮೇಲೆ ನನಗೆ ಯಾವುದೇ ಅನುಮಾನವಿಲ್ಲ’ ಎಂದರು.
ಏತನ್ಮಧ್ಯೆ ಡಾ. ಯೋಗೇಶ್ರ ಮರಣೋತ್ತರ ಪರೀಕ್ಷಾ ವರದಿ ಬಂತು ಅವರ ಕುತ್ತಿಗೆಯನ್ನು ನಾಯಿಗೆ ಕಟ್ಟುವ ಬೆಲ್ಸ್ನಿಂದ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಲ್ಲದೆ ಅವರ ತಲೆಗೆ ಭಾರವಾದ ವಸ್ತುವಿನಿಂದ ಹೊಡೆಯಲಾಗಿತ್ತು ಎಂದು ಅದರಲ್ಲಿ ಬರೆದಿತ್ತು. ಅವರನ್ನು ಕುರ್ಚಿಯಲ್ಲಿ ಕಟ್ಟಿ ಹಾಕಿದ ನಂತರ ಅವರ ಕೊಲೆ ಮಾಡಲಾಗಿತ್ತು.
ಆರಂಭದಿಂದಲೂ ಬಸಂತಿಯನ್ನೇ ಸಂದೇಹಿಸಿದ ಪೊಲೀಸರು ಅವಳ ಮನೆಯ ವಿಳಾಸವನ್ನು ಕೇಳಿದಾಗ ಡಾ. ನೀನಾ. ‘ಆಕೆ ನೇಪಾಳಿ ಎಂದಷ್ಟೇ ನನಗೆ ತಿಳಿದಿದೆ. ಅವಳ ಇತರ ವಿವರಗಳು ಗೊತ್ತಿಲ್ಲ. ಅವಳ ಮೊಬೈಲ್ ಫೋನ್ ನಂಬರ್ ನನ್ನ ಬಳಿ ಇದೆ. ನಾನು ಡಾ. ಯೋಗೇಶ್ ಕೊಲೆಯ ವಿಷಯವನ್ನುತಿಳಿಸಲು ಅವಳಿಗೆ ನಿನ್ನೆ ಫೋನ್ ಮಾಡಿದ್ದೆ. ಆದರೆ ಅದು ಸ್ವಿಚ್ ಆಫ್ ಆಗಿತ್ತು. ಅವಳ ಕೆಲ ಸಂಬಂಧಿಕರು ಡೆಹರಾಡೂನ್ನಲ್ಲಿದ್ದಾರೆ ಎಂದಷ್ಟೇ ನನಗೆ ಗೊತ್ತು’ ಎನ್ನುತ್ತಾ ಬಸಂತಿಯ ಮೊಬೈಲ್ ನಂಬರ್ ಕೊಟ್ಟರು. ಅದನ್ನು ಟ್ರ್ಯಾಕಿಂಗ್ಗೆ ಹಾಕಿದಾಗ ಆ ಪೋನ್ ನೇಪಾಳದ ಗಡಿ ಭಾಗದಲ್ಲಿರುವ ಉತ್ತರಪ್ರದೇಶದ ಒಂದು ಗ್ರಾಮದಲ್ಲಿತ್ತು.
ದೆಹಲಿ ಪೊಲೀಸರ ಒಂದು ತಂಡ ಅಲ್ಲಿಗೆ ಹೋಗಿ ಬಸಂತಿಯನ್ನು ಪತ್ತೆ ಮಾಡಿತು. ಅವಳ ಜತೆ ಒಬ್ಬ ಪುರುಷನಿದ್ದು ಆತ ತಾನು ಬಸಂತಿಯ ಸೋದರ ಸಂಬಂಧಿ ರಾಜೇಶ್ ಎಂದು ಹೇಳಿಕೊಂಡ. ಅವರಿಬ್ಬರನ್ನು ವಿಚಾರಣೆ ಮಾಡಿದಾಗ ಬಸಂತಿ ಹೀಗೆಂದಳು: “ನನಗೆ ಸುಮಿತ್ರ ಎನ್ನುವ ಬಹಳ ಹತ್ತಿರದ ಸ್ನೇಹಿತೆ ಮತ್ತು ಸಂಬಂಧಿಕಳಿದ್ದಾಳೆ. ಅವಳು ಡೆಹರಾಡೂನ್ ನಲ್ಲಿ ತನ್ನ ಗಂಡನೊಡನೆ ವಾಸಿಸುತ್ತಾಳೆ. ತಿಂಗಳ ಹಿಂದೆ ಆಕೆ ನನಗೆ ಫೋನ್ ಮಾಡಿ ನನ್ನ ಮಾಲೀಕರ ಬಗ್ಗೆ ಕೇಳಿದಳು. ನಾನು ಮಾಲೀಕರ ಬಗ್ಗೆ ಹೇಳಿದಾಗ ನೀನಿರುವ ಮನೆ ಹೇಗಿದೆಯೆಂದು ವಿಡಿಯೋದಲ್ಲಿ ತೋರಿಸು ಎಂದಳು. ಆಗ ನಾನು ಟೆಲಿಗ್ರಾಮ್ ವಿಡಿಯೋ ಕಾಲ್ ಮುಖಾಂತರ ಮನೆಯ ಎಲ್ಲ ಕೋಣೆಗಳನ್ನು ತೋರಿಸಿದೆ. ಮನೆಯಲ್ಲಿರುವ ನಾಯಿಗಳನ್ನೂ ಅವಳಿಗೆ ತೋರಿಸಿದೆ.
ಅವಳು ಕೇಳಿದ ವಿವರಗಳನ್ನೆಲ್ಲಾ ಕೊಟ್ಟೆ. ಮುಂದಿನ ವಾರ ಸುಮಿತ್ರ ನನಗೆ ಫೋನ್ ಮಾಡಿ ಒಂದು ವಾರ ರಜೆ ಹೋಗುವಂತೆ ಹೇಳಿದಳು. ನಾನು ಹಾಗೆಯೇ ಮಾಡಿ ನನ್ನ ಗ್ರಾಮಕ್ಕೆ ಬಂದೆ. ಎರಡು ದಿನಗಳ ಹಿಂದೆ ಆಕೆ ತನ್ನ ಗಂಡನೊಡನೆ ನನ್ನ ಮನೆಗೆ ಬಂದು ತಾವು ಡಾಕ್ಟರ್ ಸಾಹೇಬರನ್ನು ಕೊಲೆ ಮಾಡಿ ಅವರ ಮನೆಯನ್ನು ದೋಚಿದ್ದಾಗಿ ತಿಳಿಸಿದಳು. ನನಗೆ ಆಘಾತವಾಯಿತು. ಅವರ ಕುಕೃತ್ಯದಲ್ಲಿ ನಾನೂ ಶಾಮೀಲಾದೆನಲ್ಲ ಎಂದು ಬೇಸರವಾಯಿತು. ತಾವು ಕದ್ದ ಮಾಲಿನಲ್ಲಿ ಒಂದು ಭಾಗವಾದ ಒಂದು ಚಿನ್ನದ ಸರ ಮತ್ತು ಐವತ್ತು ಸಾವಿರ ರೂ.ಗಳನ್ನು ನನಗೆ ಸುಮಿತ್ರ ಕೊಟ್ಟು ನನ್ನನ್ನು ಸುಮ್ಮನಾಗಿಸಿದಳು. ನಾನು ನೇಪಾಳಕ್ಕೆ ಹೊರಟು ನಿಂತಿದ್ದೆ…’
ಶಾಹಿ ಎನ್ನುವವನ ನೇತೃತ್ವದ ನೇಪಾಳಿಗಳ ತಂಡದೊಡನೆ ಡಾ. ಯೋಗೇಶ್ ಮನೆಯ ದರೋಡೆಗೆ ತಾನು ಹೋಗಿದ್ದಾಗಿ ತಿಳಿಸಿದ ರಾಜೇಶ್ ತಾನು ವೈದ್ಯರ ಮನೆಯೊಳಗೆ ಹೋಗದೇ ಹೊರಗೇ ನಿಂತು ಯಾರಾದರೂ ಬರುವ ಬಗ್ಗೆ ತಂಡಕ್ಕೆ ಎಚ್ಚರಿಕೆ ನೀಡುವ ಕೆಲಸವನ್ನಷ್ಟೇ ಮಾಡಿದೆ ಎಂದ. ದೆಹಲಿ ಮತ್ತು ಆಸುಪಾಸಿನ ನಗರಗಳಲ್ಲಿ ದರೋಡೆ ಮತ್ತು ಕಳ್ಳತನಗಳನ್ನು ಮಾಡಲು ಆಕಾಶ್ ಮತ್ತು ಹಿಮಾಂಶು ಎನ್ನುವವರ ಜತೆ ಶಾಹಿ ತಂಡವನ್ನು ಕಟ್ಟಿಕೊಂಡಿದ್ದ ಎಂದು ತಿಳಿಸಿ ತಾನೂ ಆ ತಂಡದ ಸದಸ್ಯನಾಗಿದ್ದೆ. ಎಂದ. ಕಳೆದ ಐದು ವರ್ಷಗಳಿಂದ ನೇಪಾಳಿ ಸೇವಕರ ಸಹಾಯದಿಂದ ಇಂತಹುದೇ ಕಳ್ಳತನಗಳನ್ನು ತಾವು ಮಾಡುತ್ತಿದ್ದೆವು ಎಂದ. ಪೊಲೀಸರು ಶಾಹಿಗಾಗಿ ಬಲೆ ಬೀಸಿ ಆತ ನೇಪಾಳದ ಗಡಿ ದಾಟುವಾಗ ಅವನನ್ನು ಬಂಧಿಸಿದರು. ಸುಮಾರು ಎಂಟು ಮೊಬೈಲ್ ಫೋನ್ಗಳನ್ನು ಬಳಸುತ್ತಿದ್ದ ಶಾಹಿ ತನ್ನ ಹೆಸರನ್ನು ಶಾಹಿ ಶಕ್ತಿ ಸಾಯಿ, ಕೃಷ್ಣ ಸಾಯಿ ಎಂದು ಬದಲಾಯಿಸುತ್ತಿದ್ದ. 2018 ಮತ್ತು 2020ರಲ್ಲಿ ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಮಾಡುವಾಗ ಆತ ಹಿಮಾಚಲ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.
‘ನಾವುಡಾಕ್ಟರ್ ಮನೆಯೊಳಗೆ ಹೋದಾಗ ಅವರು ಕುರ್ಚಿಯ ಮೇಲೆ ಕುಳಿತು ಚಹಾ ಕುಡಿಯುತ್ತಿದ್ದರು. ಮನೆಯೊಳಗೆ ನಾವು ಹೋದ ಕೂಡಲೇ ಅವರ ಸಣ್ಣ ನಾಯಿಗಳು ತುಂಬಾ ಬೊಗಳಿದವು. ನಾನು ಅವಕ್ಕೆ ಮಾದಕ ವಸ್ತು ಮಿಶ್ರಿತ ಅನ್ನವನ್ನು ಹಾಕಿ ಸುಮ್ಮನಾಗಿಸಿದೆ. ಡಾಕ್ಟರ್ ಸಾಹೇಬರು ಪೊಲೀಸರಿಗೆ ಫೋನ್ ಮಾಡಲು ಹೊರಟಾಗ ನಾವು ಅವರನ್ನು ಕಟ್ಟಿ ಹಾಕಿ ಕೊಲೆ ಮಾಡಿದೆವು’ ಎಂದ ಶಾಹಿ, ಶಾಹಿಯ ಬಳಿ 40 ಸಾವಿರ ರೂ. ನಗದು ಮತ್ತು 13 ಗ್ರಾಂ ಚಿನ್ನ ಸಿಕ್ಕಿತು. ನೇಪಾಳಿ ಜನರು ಯಾರ ಯಾರ ಮನೆಗಳಲ್ಲಿ ಕೆಲಸಕ್ಕೆ ಇದ್ದಾರೋ ಅವರ ಸಂಪರ್ಕವನ್ನು ಮಾಡಿ ಅವರ ಸಹಾಯದಿಂದ ಭಾರಿ ಶ್ರೀಮಂತರ ಮನೆಗಳನ್ನು ಗುರುತಿಸಿ ಅವನ್ನೇ ತಾನು ಗುರಿ ಮಾಡುತ್ತಿದ್ದೆನೆಂದು ಆತ ತಿಳಿಸಿದ. ಅವನ ತಂಡದ ಇತರ ಸದಸ್ಯರನ್ನು ಬಂಧಿಸಿ ಡಾ. ಯೋಗೇಶ್ ಮನೆಯಿಂದ ಕಳವು ಮಾಡಿದ್ದ ಸರಿಸುಮಾರು ಎಲ್ಲ ಆಭರಣಗಳನ್ನೂ ವಶಪಡಿಸಿಕೊಳ್ಳಲಾಯಿತು. ಈ ಪ್ರಕರಣದ ವಿಚಾರಣೆ ಇನ್ನೂ ಕೋರ್ಟಿನಲ್ಲಿ ನಡೆಯುತ್ತಿದೆ.
ವಿಶ್ವಾಸ ಹಾಗೂ ನಂಬಿಕೆ ಎರಡೂಯಿಂದೇ ಅಲ್ಲ. ಒಬ್ಬ ಸ್ನೇಹಿತನ ಮೇಲೆ ನೀವು ವಿಶ್ವಾಸವಿಡಬಹುದು. ಆದರೆ ಎಲದ ಮೇಲೆಯೂ ನಂಬಿಕೆಯನ್ನಿಡುವುದು ಅಪಾಯಕಾರಿ’ ಎನ್ನುತ್ತಾನೆ ಬ್ರಿಟಿಷ್ ಪತ್ರಕರ್ತ ಹಾಗೂ ಲೇಖಕ ಕ್ರಿಸ್ಟೊಫರ್ ಹಚಿನ್ಸ್ ಎರಡು ದಶಕಗಳ ಕಾಲ ತಮ್ಮ ಜತೆಯಲ್ಲಿದ್ದ ಬಸಂತಿಯನ್ನು ವೈದ್ಯ ದಂಪತಿ ನಂಬಿದ್ದು ಅವರಿಗೇ ಮುಳುವಾಯಿತು