ನಿಯಂತ್ರಣ ಕ್ರಮಗಳಲ್ಲಿ ಪಾರದರ್ಶಕತೆ ಮತ್ತು ಸ್ಪಷ್ಟತೆ ಕಾಯ್ದುಕೊಳ್ಳಬೇಕು

ನಿಯಂತ್ರಣ ಕ್ರಮಗಳಲ್ಲಿ ಪಾರದರ್ಶಕತೆ ಮತ್ತು ಸ್ಪಷ್ಟತೆ ಕಾಯ್ದುಕೊಳ್ಳಬೇಕು

ಪರಮಾಣು ವಿದ್ಯುತ್: ಖಾಸಗಿಯತ್ತ ಕಣ್ಣು ಈ ದಶಕದ ಕೊನೆಗೆ 5 ಲಕ್ಷ ಮೆಗಾ ವಾಟ್ ಇಂಗಾಲ ಮುಕ್ತ ವಿದ್ಯುತ್ ಉತ್ಪಾದಿಸುತ್ತೇವೆ ಎಂದು ಗ್ಲಾಸ್ಗೊ ಶೃಂಗಸಭೆಯಲ್ಲಿ ಭಾರತ ಪ್ರತಿಜ್ಞೆ ಮಾಡಿದ್ದು ನಿಮಗೆ ನೆನಪಿದೆಯೇ? ಅದನ್ನು ಸಾಧಿಸಲು ಕೇಂದ್ರ ಸರ್ಕಾರವು ಪರಮಾಣು ವಿದ್ಯುತ್ ಉತ್ಪಾದನೆಯ ಅವಕಾಶವನ್ನು ಖಾಸಗಿ ಕ್ಷೇತ್ರಕ್ಕೂ ವಿಸ್ತರಿಸಲು ಮುಂದಾಗಿದೆ. ಅದಕ್ಕಾಗಿ, ಅಣುಶಕ್ತಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಲು ಹೊರಟಿದೆ. ಸರ್ಕಾರದ ಈ ಉದ್ದೇಶ ಕೈಗೂಡಿದರೆ, ಇದುವರೆಗೂ ಸರ್ಕಾರಿ ಸ್ವಾಮ್ಯದ ಉದ್ಯಮಗಳಿಗೆ ಸೀಮಿತವಾಗಿದ್ದ ಅಣು ವಿದ್ಯುತ್ ಉತ್ಪಾದನೆಯ ಅವಕಾಶ ಇನ್ನು ಮುಂದೆ ಖಾಸಗಿಯವರಿಗೂ ಸಿಗಲಿದೆ.
ಈ ಸುದ್ದಿಯ ಬೆನ್ನಲ್ಲೆ, ಪರಮಾಣು ವಿದ್ಯುತ್ ಉತ್ಪಾದನೆಯಂತ ಅತಿ ಸೂಕ್ಷ್ಮ ಮತ್ತು ಅಪಾಯಕಾರಿ ಎಂದೇ ಭಾವಿಸಲಾಗಿರುವ ಉದ್ಯಮದಲ್ಲಿ ಖಾಸಗಿಯವರ ಪ್ರವೇಶವಾದರೆ ದೇಶದ ಭದ್ರತೆಗೆ ಧಕ್ಕೆಯಾಗುವುದಿಲ್ಲವೇ, ಈಗಾಗಲೇ ಬಿಸಿಲು, ಗಾಳಿ, ಬಯೋಮಾಸ್ ನಿಂದ 1.75 ಲಕ್ಷ ಮೆ.ವಾ. ಇಂಗಾಲಮುಕ್ತ ವಿದ್ಯುತ್ ಉತ್ಪಾದಿಸುವ ಕೆಲಸ ಚೆನ್ನಾಗಿ ನಡೆದಿರುವಾಗ, ಪರಮಾಣು ವಿದ್ಯುತ್ತಿನ ಗೊಡವೆ ಏಕೆ ಎಂಬ ಪ್ರಶ್ನೆಗಳು ಎದ್ದಿವೆ.


ಖಾಸಗಿಯವರನ್ನು ಈ ಕ್ಷೇತ್ರಕ್ಕೆ ಬರಮಾಡಿಕೊಳ್ಳುವ ವಿಚಾರ ಹೊಸದೇನಲ್ಲ. ನೀತಿ ಆಯೋಗ ಮತ್ತು ಅಣು ಶಕ್ತಿ ಇಲಾಖೆಯ ಹಿಂದಿನ ವರ್ಷದ ವರದಿಯಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು. ಅದಕ್ಕಾಗಿ ಪರಮಾಣು ಶಕ್ತಿ ಕಾಯ್ದೆ (ಅಟಾಮಿಕ್ ಎನರ್ಜಿ ಆಕ್ಟ್) ಮತ್ತು ಪರಮಾಣು ಹಾನಿಗೆ ನಾಗರಿಕ ಹೊಣೆಗಾರಿಕೆ (ಸಿವಿಲ್ ಲಯಬಿಲಿಟಿ ಫಾರ್ ನ್ಯೂಕ್ಲಿಯರ್ ಡ್ಯಾಮೇಜ್- ಸಿಎಲ್ ಎನ್ ಡಿ) ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡಿ ಖಾಸಾಗಿ ಉದ್ದಿಮೆದಾರರಿಗೆ ಪ್ರವೇಶ ಕಲ್ಪಿಸಲಾಗುವುದು ಎಂದಿರುವ ಕೇಂದ್ರ ಸರ್ಕಾರ, ಇನ್ನು ಎಂಟು ವರ್ಷಗಳಲ್ಲಿ ನಿರ್ಮಿಸಲಾದ ಐದು ಸಣ್ಣ ಮತ್ತು ಮಧ್ಯಮ ರಿಯಾಕ್ಟರ್ ಗಳು ಕಾರ್ಯಾರಂಭ ಮಾಡಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.


ಇದಕ್ಕೆ ಪೂರಕವೆಂಬಂತೆ, ಈ ವರ್ಷದ ಆಯವ್ಯಯದಲ್ಲಿ ಈ ಉದ್ದೇಶಕ್ಕೆ ರೂ. 20,000 ಕೋಟಿ ತೆಗೆದಿರಿಸಿರುವ ಸರ್ಕಾರ, 2047ರ ವೇಳೆಗೆ ಕನಿಷ್ಠ ಒಂದು ಲಕ್ಷ ಮೆಗಾ ವ್ಯಾಟ್ ಪರಮಾಣು ವಿದ್ಯುತ್ ಉತ್ಪಾದನೆಯ ಗುರಿ ಇಟ್ಟುಕೊಂಡಿದೆ. ಈ ಕೆಲಸ ಬರೀ ಸರಕಾರಿ ಉದ್ಯಮಗಳಿಂದ ಸಾಧ್ಯವಿಲ್ಲ. ಖಾಸಗಿ ಸಹಭಾಗಿತ್ವ ಮತ್ತು 2,600 ಕೋಟಿ ಡಾಲರ್ (ಅಂದಾಜು ರೂ.2. 27 ಲಕ್ಷ ಕೋಟಿ) ಬಂಡವಾಳ ಬೇಕು. ಅಣುಶಕ್ತಿ ಉತ್ಪಾದನೆಗೆ ಖಾಸಗಿ ಭಾಗೀದಾರಿಕೆ ಪ್ರೋತ್ಸಾಹಿಸಲು ಅಮೇರಿಕದ ವೆಸ್ಟಿಂಗ್ ಹೌಸ್ ಎಲೆಕ್ಟ್ರಿಕ್ ಕಂಪನಿಯೊಂದಿಗೆ 2008ರಲ್ಲಿ ಒಪ್ಪಂದವಾಗಿತ್ತು. ಯೋಜನೆಗೆ ಅಂತಿಮ ರೂಪ ನೀಡಲು ಎರಡು ವರ್ಷ ಬೇಕಾಯಿತು. 2010ರಸಿಎಲ್ ಎನ್ ಡಿ ಕಾಯ್ದೆ ಪ್ರಕಾರ, ಅಣು ವಿದ್ಯುತ್ ಉತ್ಪಾದನೆಯನ್ನು ವಾಣಿಜ್ಯೀಕರಣ ಗೊಳಿಸಲು ಅವಕಾಶ ಇಲ್ಲ. ಯೋಜನೆಯ ಪ್ರಕಾರ, ಆಂಧ್ರಪ್ರದೇಶದ ಕೊವ್ವಡದಲ್ಲಿ 6,000 ಮೆಗಾವಾಟ್ ಸಾಮರ್ಥ್ಯದ ಅಣು ವಿದ್ಯುತ್ ಸ್ಥಾವರ ನಿರ್ಮಾಣ ಆರಂಭ ಆಗಬೇಕಿತ್ತು.

ಉತ್ಪಾದನೆಯಲ್ಲಿ ಅಪಘಾತಗಳು ಏನಾದರೂ ಸಂಭವಿಸಿದರೆ ನಷ್ಟ ಕಟ್ಟಿಕೊಡುವ ಹೊಣೆಯು ಕಾನೂನಿನ ಅನ್ವಯ ಸ್ತಾವರ ನಿರ್ವಾಹಕರದೇ ಆಗಿರುತ್ತದೆ. ಕಾನೂನಿನ ತೊಡಕು ಮತ್ತು 2017ರಲ್ಲಿ ಕಂಪನಿ ಎದುರಿಸಿದ ಆರ್ಥಿಕ ಮುಗ್ಗಟ್ಟಿನಿಂದ ಯೋಜನೆ ಇನ್ನೂ ತೆವಳುತ್ತಲೇ ಇದೆ. 2015ರಲ್ಲಿ ಎನ್ ಡಿ ಎ ಸರ್ಕಾರ ಯಾವ ಕಾರಣಕ್ಕೂ ಕಾಯ್ದೆ ಬರಲಾಗದು ಎಂದಿತ್ತು.ಈಗ ಮಾತಿನ ವರಸೆ ಬದಲಾಗಿದೆ .

ಇದನ್ನೂ ಓದಿ:ಯು ಜಿ ಸಿ ಕರಡು ನಿಯಮಗಳಿಗೆ ವಿರೋಧ ರಾಜ್ಯಗಳ ಅಧಿಕಾರ ಮೊಟಕು ಸಲ್ಲದು

ಸಿ ಎಲ್ ಎನ್ ಡಿ ಯು ಪರಮಾಣು ವಿಪತ್ತಿನ ಸಂದರ್ಭದಲ್ಲಿ ಹಾನಿಗೆ ಒಳಗಾಗುವವರನ್ನು ರಕ್ಷಿಸಲು ಮುತುವರ್ಜಿ ವಹಿಸುತ್ತದೆ. ಆಸ್ತಿ ಪಾಸ್ತಿ, ಪ್ರಾಣ ನಷ್ಟಕ್ಕೆ ನಿರ್ವಾಹಕರೇ ಪರಿಹಾರ ನೀಡಬೇಕಾಗುತ್ತದೆ. ಪರಿಹಾರದ ಗರಿಷ್ಠ ಮಿತಿ ರೂ 1,500 ಕೋಟಿ. ನಷ್ಟದ ಪ್ರಮಾಣ ಇದಕ್ಕೂ ದೊಡ್ಡದಿದ್ದರೆ ಕೇಂದ್ರ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳುತ್ತದೆ. ಆದರೆ ಉದ್ದೇಶಿತ ತಿದ್ದುಪಡಿಯ ಪ್ರಕಾರ, ನಷ್ಟ ಕಟ್ಟಿ ಕೊಡುವ ಹೊಣೆಯು ಸಾಮಗ್ರಿ, ಉಪಕರಣ ಸರಬರಾಜು ಮಾಡುವವರದು. ಆದರೆ ಅಂತರಾಷ್ಟ್ರೀಯ ಕಾನೂನು ಚೌಕಟ್ಟು, ನಿರ್ವಾಹಕರೇ ಹೊಣೆಗಾರರಾಗುತ್ತಾರೆ ಎನ್ನುತ್ತದೆ. ಈಗ ನಾವು ಮಾಡುತ್ತಿರುವ ತಿದ್ದುಪಡಿಯು ಜಗತ್ತಿನಾದ್ಯಂತ ಅಣು ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದ ಚಾಲ್ತಿಯಲ್ಲಿರುವ ನಿಯಮಗಳಿಗೆ ಸಂಪೂರ್ಣ ತದ್ವಿರುದ್ಧವಾಗಿದೆ..’ ಈ ಮಸೂದೆಯು ತಂತ್ರಜ್ಞಾನ, ಉಪಕರಣ, ಸಾಮಗ್ರಿ ಸರಬರಾಜು ಮಾಡುವ ನಮ್ಮಂತಹ ಕಂಪನಿಗಳಿಗೆ ಭಾರಿ ನಷ್ಟ ಉಂಟು ಮಾಡುತ್ತದೆ’ ಎಂದಿರುವ ಅಮೆರಿಕದ ಜಿ. ಈ . ಹಿಟಾಚಿ ನ್ಯೂಕ್ಲಿಯರ್ ಎನರ್ಜಿ, ವೆಸ್ಟಿಂಗ್ ಹೌಸ್ ಎಲೆಕ್ಟ್ರಿಕ್ ಕಂಪನಿ ಮತ್ತು ರೋಸಾಟಂ ಸ್ಟೇಟ್ ಕಾರ್ಪೊರೇಷನ್ ಸಲಕರಣೆ ಸರಬರಾಜಿಗೆ ಹಿಂದೇಟು ಹಾಕುತ್ತಿವೆ.


ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಈಗಾಗಲೇ ಅಣು ವಿದ್ಯುತ್ ಘಟಕಗಳು ಕೆಲಸ ನಿಭಾಯಿಸುತ್ತಿವೆ. ವಾರ್ಷಿಕ 6,733 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಎಲ್ಲಾ ಘಟಕಗಳು ಸರ್ಕಾರಕ್ಕೆ ಸೇರಿವೆ. ಸರ್ಕಾರದ ಒಡೆತನದ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ‘ಭಾವಿನಿ’ಯು ವಿದ್ಯುತ್ ಉತ್ಪಾದನೆಗೆ ಬೇಕಾದ ಪರಿಸರಗಳನ್ನು ಒದಗಿಸುತ್ತಿವೆ.‌ ಅಣು ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ಖಾಸಗಿಯವರು ಏಕೆ ಇರುವಂತಿಲ್ಲ ಎಂದು ಸಂದೀಪ್ ಎನ್ನುವವರು ಹಿಂದಿನ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.’ ಸಂಸತ್ತು ಬಹಳ ಎಚ್ಚರಿಕೆಯ ಲೆಕ್ಕಾಚಾರ ಹಾಕಿ, ದೇಶದ ಭದ್ರತೆಯನ್ನು ಆದ್ಯತೆಯನ್ನಾಗಿಸಿ, ಉತ್ಪಾದನೆಯ ಜೊತೆಗೆ ಅಪಘಾತ ತಪ್ಪಿಸಲು ಸರ್ವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತದೆ. ಖಾಸಗಿಯವರಿಂದ ಇದನ್ನು ನಿರೀಕ್ಷಿಸಲಾಗದು’ ಎಂಬ ವಿವರಣೆ ನೀಡಿ ಅರ್ಜಿ ವಜಾ ಮಾಡಲಾಗಿತ್ತು.


ಪರಮಾಣು ವಿದ್ಯುತ್ ಉತ್ಪಾದನೆಯಲ್ಲಿ ಸೋರಿಕೆ ಮತ್ತು ತ್ಯಾಜ್ಯ ನಿರ್ವಹಣೆಯ ಸವಾಲುಗಳು ತುಂಬಾ ದೊಡ್ಡವು. ಇವುಗಳನ್ನು ಸರಿಯಾಗಿ ನಿವಹಿಸುವ ಬಗ್ಗೆ ಇನ್ನೂ ಅನುಮಾನಗಳಿವೆ. ರಷ್ಯಾದ ಚರ್ನೋಬಿಲ್ ,ಜಪಾನಿನ ಫುಕುಶಿಮಾ ಅಣುಸ್ಥಾವರಗಳ ಅವಗಳಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡ ಸುಪ್ರೀಂ ಕೋರ್ಟ್, ತಮಿಳುನಾಡಿನ ಕೂಡಂಕುಲಂ ಅಣುಸ್ಥಾವರ ಸ್ಥಾಪನೆಯ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಕಟ್ಟಲೆಗಳನ್ನು ಹಾಕಿ, ಸ್ಥಾವರವನ್ನು ಸತತವಾಗಿ ತಪಾಸಿಸಿ ವರದಿ ನೀಡುವಂತೆ ಆದೇಶಿಸಿತ್ತು. ಅಣುಶಕ್ತಿ ಇಲಾಖೆ, ನ್ಯಾಷಿನಲ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಆ ಕೆಲಸವನ್ನು ತಪ್ಪದೇ ಮಾಡುತ್ತಿವೆ.


ಗುರಿ ಸಾಧನೆಗೆ ಹಲವು ಅಡ್ಡಿಗಳಿವೆ. ಅಣು ವಿದ್ಯುತ್ ಘಟಕ ಸ್ಥಾಪನೆಗೆ ಬೇಕಾದ ಜಾಗ ಪಡೆಯುವುದು ಅಷ್ಟು ಸುಲಭವಲ್ಲ. ಪ್ರತಿ ಸ್ಥಾವರದ ಸ್ಥಾಪನೆಯ ಸಮಯದಲ್ಲಿ ಸ್ಥಳೀಯರ ಪ್ರತಿಭಟನೆ ಸರ್ವೇಸಾಮಾನ್ಯ. ಪರಿಸರ ಇಲಾಖೆಯು ಹಸಿರು ನಿಶಾನೆ ತೋರುವವರೆಗೂ ಭೂಸ್ವಾಧೀನ ಪ್ರಕ್ರಿಯೆ ನಡೆಯಕೂಡದು ಎಂದು ಕೊವ್ವಾಡ ಸ್ಥಾವರದ ವಿಷಯದಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಹೇಳಿತ್ತು.ಅಣು ವಿದ್ಯುತ್ ಕ್ಷೇಮಕರವಲ್ಲ ಎಂಬ ಅಂಶವನ್ನು ಅಸ್ತ್ರವನ್ನಾಗಿಸಿಕೊಂಡು ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳುತ್ತವೆ.


ಖಾಸಗಿ ಉದ್ಯಮಗಳು ರೂಪಿಸಿಕೊಳ್ಳುವ ತಂತ್ರಜ್ಞಾನ ಬಳಕೆಗೆ ಅವಕಾಶವಿಲ್ಲ. ಬಳಸುವ ತಂತ್ರಜ್ಞಾನ ದೇಶಿಯ ವಾಗಿರಬೇಕು ಮತ್ತು ಅದು ವಾಣಿಜ್ಯ ಕ್ಷೇತ್ರದ ಬಳಕೆಗೆ ಯೋಗ್ಯವಾಗಿರಬೇಕು ಎನ್ನುವ ಮಾರುಕಟ್ಟೆ ತಜ್ಞರು, ‘ಇನ್ನೂ ಐದು ವರ್ಷ ನಮ್ಮ ಕೆಲಸವೇನಿದ್ದರೂ ತಂತ್ರಜ್ಞಾನ ರೂಪಿಸುದಾಗಿರುತ್ತದೆ. ಉತ್ಪಾದನೆ ಏನಿದ್ದರೂ 2030ರ ನಂತರ’ ಎಂದಿದ್ದಾರೆ. ಸರ್ಕಾರ ಹೇಳುವ ತಂತ್ರಜ್ಞಾನವನ್ನೇ ಬಳಸಬೇಕೆನ್ನುವ ನಿರ್ಬಂಧ ಅಣು ವಿದ್ಯುತ್ ಉತ್ಪಾದನೆಯ ಕೆಲಸಗಳಿಗೆ ಹಿನ್ನಡೆ ಉಂಟು ಮಾಡುತ್ತದೆ . ಸಣ್ಣ ಮತ್ತು ಮಧ್ಯಮಗಾತ್ರ ರಿಯಾಕ್ಟರ್ ಗಳನ್ನು ಉತ್ಪಾದಿಸುವ ತಂತ್ರಜ್ಞಾನ ನಮಗಿನ್ನೂ ಪೂರ್ಣವಾಗಿ ಸಿದ್ದಿಸಿಲ್ಲ. ಮಾಡಿದ ಉತ್ಪಾದನೆಗೆ ದರ ನಿಗದಿ ಆಗಬೇಕು, ಸರಿಯಾದ ಬೆಲೆ ಸಿಗಬೇಕು. ಆಗ ಖಾಸಗಿಯವರು ಈ ಕ್ಷೇತ್ರಕ್ಕೆ ಕೈ ಹಾಕುತ್ತಾರೆ. ಅಲ್ಲದೇ ಹೊಸ ತಂತ್ರಜ್ಞಾನ ಯಶಸ್ವಿಯಾಗದಿದ್ದಲ್ಲಿ ಉದ್ಯಮಕ್ಕೆ ಬೆಂಬಲವಾಗಿ ನಿಲ್ಲಲು ಸರ್ಕಾರ ತಯಾರಿರಬೇಕು.


ನಿಯಂತ್ರಣ ಕ್ರಮಗಳಲ್ಲಿ ಪಾರದರ್ಶಕತೆ ಮತ್ತು ಸ್ಪಷ್ಟತೆ ಇದ್ದರೆ ಮಾತ್ರ ಖಾಸಗಿಯವರು ಮುಂದೆ ಬರುತ್ತಾರೆ. ಪ್ರಕ್ರಿಯೆಗಳು ನೇರ ಹಾಗು ಮುಕ್ತವಾಗಿದ್ದರೆ ವಿದೇಶಿ ಕಂಪನಿಗಳು ಬಂಡವಾಳ ಹೂಡುತ್ತವೆ .ಅಪಘಾತಗಳು ಸಂಭವಿಸಿದಾಗ ಅಂತರಾಷ್ಟ್ರೀಯ ಒಪ್ಪಂದಗಳಿಗೆ ಅನುಗುಣವಾಗಿ ಪೂರಕ ಪರಿಹಾರ ವ್ಯವಸ್ಥೆ ಇದ್ದರೆ ವಿದೇಶಿ ಬಂಡವಾಳ ಸುಲಭವಾಗಿ ಹರಿದು ಬರುತ್ತದೆ. ವಿಪತ್ತಿಗೆ ಒಳಗಾದವರಿಗೆ ಶೀಘ್ರ ಪರಿಹಾರ ದೊರಕಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಪರಮಾಣು ವಿದ್ಯುತ್ ಉತ್ಪಾದನೆಯ ಬಗೆಗೆ ಜನರಲ್ಲಿ ಇರುವ ಭಯ, ಅನುಮಾನವನ್ನು ವಿಜ್ಞಾನಿಗಳು ನಿವಾರಿಸಬೇಕು.

Leave a Comment