ಪ್ರೇಮದ ಆಲಿಂಗನಕ್ಕೆ ಸೋತುಹೋದ ಸಂಕಷ್ಟಗಳ ಸುನಾಮಿ

ಪ್ರೇಮದ ಆಲಿಂಗನಕ್ಕೆ ಸೋತುಹೋದ ಸಂಕಷ್ಟಗಳ ಸುನಾಮಿ

ಜಗತ್ತು ಆಹಾರಕ್ಕಾಗಿ ಎಷ್ಟು ಹಸಿದಿದೆಯೋ ನಿಜವಾದ ಪ್ರೇಮ ಮತ್ತು ಕರುಣೆಗಾಗಿ ಅಷ್ಟೇ ಹಂಬಲಿಸುತ್ತಿದೆ. ಜೀವನ ಕ್ಷಣಿಕ ಎಂದು ಗೊತ್ತಿದ್ದರೂ ಬಹುತೇಕರು ಸ್ವಾರ್ಥಸಾಧನೆಯಲ್ಲಿ ಬದುಕನ್ನು ವ್ಯಯಿಸಿ ಬಿಡುತ್ತಾರೆ. ಹಾಗಾಗಿಯೇ, ಈ ಪ್ರಪಂಚದ ನೋವನ್ನು ನೀಗಿಸಲೆಂದೇ ಭಗವಂತನು ಕಾಲಕಾಲಕ್ಕೆ ಕೆಲ ಲೀಲೆಗಳನ್ನು ಮಾಡಿ, ಹಲವು ಅವತಾರಗಳನ್ನು ಸೃಷ್ಟಿಸುತ್ತಾನೆ. ಅಂಥ ಶಕ್ತಿಗಳನ್ನು, ದಿವ್ಯಚೇತನಗಳನ್ನು ಕೂಡ ನಮ್ಮ ಜನರು ಬಹುಬೇಗ ಒಪ್ಪಿಕೊಳ್ಳುವುದಿಲ್ಲ. ಹಲವು ಪರೀಕ್ಷೆಗಳನ್ನು ಮಾಡಿಯೇ, ತಮ್ಮೆಲ್ಲ ತರ್ಕಗಳು, ಅನುಮಾನಗಳು ಸೋತ ಬಳಿಕ ಮುಂದಿನ ಹಂತದಲ್ಲಿ ಶರಣಾಗತರಾಗಿ ಸತ್ಯಪಥದಲ್ಲಿ ನಡೆಯಲು ಆರಂಭಿಸುತ್ತಾರೆ.

ನಮ್ಮಲ್ಲಿ ಸಾಮ್ರಾಜ್ಯಗಳು ಎಂದಾಕ್ಷಣ ರಾಜ-ಮಹಾರಾಜರುಗಳ ವೈಭವೋಪೇತ ಸಂಪತ್ತುಗಳು ಕಣ್ಮುಂದೆ ಬರುತ್ತವೆ. ಆದರೆ, ಕುಗ್ರಾಮದಲ್ಲಿ ಕಡುಬಡತನದಲ್ಲಿ ಬೆಳೆದ, ಹೆಜ್ಜೆಹೆಜ್ಜೆಗೂ ತಿರಸ್ಕಾರ, ಅವಮಾನ, ಅವಹೇಳನ ಅನುಭವಿಸಿದ ಬಾಲಕಿಯೊಬ್ಬಳು ಸೇವೆ, ಕರುಣೆ, ಮಾನವೀಯತೆಯ ದೊಡ್ಡ ಸಾಮ್ರಾಜ್ಯವನ್ನೇ ನಿರ್ಮಿಸುತ್ತಾಳೆ ಎಂದರೆ ಲೌಕಿಕ ಜಗತ್ತಿನ ಪಾಲಿಗೆ ಅದು ನಂಬಲು ಅಸಾಧ್ಯವೇ ಸರಿ. ಆದರೆ, ಅದು ಖಂಡಿತವಾಗಿಯೂ ಭಾರತದ ಆಧ್ಯಾತ್ಮಿಕ ಪರಂಪರೆ ಹಾಗೂ ಭಾರತೀಯ ಸ್ತ್ರೀತತ್ತ್ವದ ಶಕ್ತಿ.

ಕೇರಳದ ಕೊಲ್ಲಂ ಜಿಲ್ಲೆಯ ಕರುನಾಗಪಲ್ಲಿಯಲ್ಲಿರುವ ಅಲಪ್ಪಾಡ್ ಪಂಚಾಯತ್‌ನ ಪರಯಾಕಡವು (ಈಗಿನ ಅಮೃತಪುರಿ) ಗ್ರಾಮದಲ್ಲಿ 1953ರ ಸೆಪ್ಟೆಂಬರ್ 27ರಂದು ಮೀನುಗಾರರ ಕುಟುಂಬದಲ್ಲಿ ಜನಿಸಿದ (ತಂದೆ ಸುಗುಣಾನಂದನ್, ತಾಯಿ ದಮಯಂತಿ) ಸುಧಾಮಣಿ ಸಾಲು ಸಾಲು ಸಂಕಷ್ಟಗಳೆಂಬ ಭಯಂಕರ ಸುನಾಮಿಯನ್ನೇ ಸೋಲಿಸಿ, ಸೇವೆಯ ಎಂಥ ಅದ್ಭುತ ಸಾಮ್ರಾಜ್ಯ ಕಟ್ಟಿದ್ದಾರೆಂದರೆ, ಅಲ್ಲಿ ಹರಿಯುತ್ತಿರುವ ಪ್ರೀತಿ, ಕರುಣೆಯ ನಿರಂತರ ಪ್ರವಾಹ ಮನುಷ್ಯನಿಗೆ ಒಳಗೂ, ಹೊರಗೂ ನೈಜಾನಂದದ ದರ್ಶನ ಮಾಡಿಸುತ್ತಿದೆ. ಯಾರು ಈ ಸುಧಾಮಣಿ ಎಂಬ ಪ್ರಶ್ನೆ ಕಾಡುತ್ತಿರಬೇಕಲ್ಲವೆ? ಕಡಲತೀರದ ಊರಿನಲ್ಲಿ (ಅಮೃತಪುರಿ) ಆಶ್ರಮ ಸ್ಥಾಪಿಸಿ, ಅಧ್ಯಾತ್ಮದ ಶಾಂತ ಅಲೆಗಳನ್ನು ಜಗದಗಲ ತಲುಪಿಸುತ್ತಿರುವ, ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ನಾಲ್ಕು ಕೋಟಿಗೂ ಅಧಿಕ ಜನರಿಗೆ ದರ್ಶನ ಹಾಗೂ ಪ್ರೀತಿಯ ಆಲಿಂಗನ ನೀಡಿ ಅವರ ಹೃದಯಗಳಲ್ಲಿ ಎಂದೂ ಆರದ ಶಾಶ್ವತ ದಿವ್ಯಪ್ರೇಮದ ಜ್ಯೋತಿಯನ್ನು ಬೆಳಗಿ, ಸುಧಾಮಣಿಯಿಂದ ಕೃಷ್ಣ ಹಾಗೂ ಕಾಳಿ ತತ್ವದಲ್ಲಿ ಒಂದಾಗಿ ‘ಅಮ್ಮ’ ಎಂದು ಜಗತ್ತಿನಾದ್ಯಂತ ಕರೆಯಲ್ಪಡುವ ಅವರೇ ಮಾತಾ ಅಮೃತಾನಂದಮಯಿ.

ನೋಡಲು ಕೃಷ್ಣವರ್ಣದವಳೆಂದು ಹೆತ್ತವರಿಂದ, ಸೋದರ-ಸೋದರಿಯರಿಂದ, ಗ್ರಾಮಸ್ಥರಿಂದ ತಿರಸ್ಕಾರ, ಅವಮಾನಗಳನ್ನೇ ಪಡೆದರೂ, ಬಾಲ್ಯದಲ್ಲಿ ನೆರೆಹೊರೆಯವರ ಹರಿದ ಬಟ್ಟೆಯ ನೂಲಿನಿಂದ ತಾನೇ ಹೊಲಿದು ಕೊಂಡ ಬಟ್ಟೆ ಧರಿಸಿದರೂ, ಬಾಲ್ಯ ಹಾಗೂ ತಾರುಣ್ಯದ ಬಹುತೇಕ ಭಾಗವನ್ನು ದನದ ಕೊಟ್ಟಿಗೆಯಲ್ಲಿ ಕಳೆದರೂ, ಕಷ್ಟದ, ನೋವಿನ ಕಣ್ಣೀರು ಧಾರಾಕಾರವಾಗಿ ಹರಿದರೂ ಸುಧಾಮಣಿ ಮಾತಾ ಅಮೃತಾನಂದಮಯಿಯಾದರು. ಏಕೆಂದರೆ, ಎಂಥ ಕಷ್ಟದಲ್ಲೂ ಅವರು ಕೃಷ್ಣನ ನಾಮಸ್ಮರಣೆ ಬಿಡಲಿಲ್ಲ, ಕೃಷ್ಣನ ಭಾವ ತೊರೆಯಲಿಲ್ಲ. ಮೂರು ವರ್ಷದ ಬಾಲಕಿಯಾಗಿದ್ದಾಗಿನಿಂದಲೇ ಕೃಷ್ಣನ ಭಜನೆಗಳು ರಚಿಸಿ, ಹಾಡತೊಡಗಿದರು. ಈವರೆಗೆ 4,500ಕ್ಕೂ ಹೆಚ್ಚು ಭಜನೆಗಳನ್ನು ರಚಿಸಿರುವ ಮಾತಾ ಅಮೃತಾನಂದಮಯಿಯವರು, 35 ಭಾಷೆಗಳಲ್ಲಿ ಸ್ವತಃ ಸುಶ್ರಾವ್ಯವಾಗಿ ಭಜನೆ ಹಾಡುತ್ತಾರೆ. ಸರಳವಾಗಿ ಭಾವಸಮಾಧಿ ತಲುಪುತ್ತಾರೆ.

ನೀಲಾಕಾಶದಲ್ಲೂ, ಸಮುದ್ರದ ಅಲೆಗಳಲ್ಲೂ, ಬೀಸುವ ಶೀತ ಗಾಳಿಯಲ್ಲೂ, ಆಡುವ ಪುಟ್ಟ ಮಕ್ಕಳಲ್ಲೂ, ಗೋವುಗಳಲ್ಲೂ ಕೃಷ್ಣ, ಕಾಳಿಯನ್ನೇ ಕಂಡರು. ತಮ್ಮ ಸುತ್ತಮುತ್ತ ಯಾರೇ ಹಸಿದಿರಲಿ ಮನೆಯಲ್ಲಿದ್ದ ಅಡಿಗೆಯನ್ನೇ ಎತ್ತಿಕೊಂಡು, ಅವರಿಗೆ ಕೊಟ್ಟುಬರುತ್ತಿದ್ದರು. ದುಃಖಿತರು, ರೋಗಿಗಳು ಇದ್ದರೆ ಕಣ್ಣೀರು ಒರೆಸಿ,ಅವರ ಸೇವೆ ಮಾಡುತ್ತಿದ್ದರು. ಆದರೆ, ಜನರು, ಅಷ್ಟೇ ಏಕೆ ಮನೆಯವರೇ ‘ಇವಳಿಗೆ ಏನೋ ಕಾಯಿಲೆ ಬಂದಿದೆ, ಅದಕ್ಕೆ ಹೀಗೆ ಆಡುತ್ತಿದ್ದಾಳೆ’ ಎಂದು ಮೂದಲಿಸಿದರು. ಅಧ್ಯಾತ್ಮದ ಸವಿ ಗೊತ್ತಿಲ್ಲದವರಿಗೆ ಕಾಣುವುದೇ ಹಾಗಲ್ಲವೇ?

ಇದೆಲ್ಲ ಮೀರಿ ಅದೊಂದು ದಿನ ಕೃಷ್ಣತತ್ತ್ವವು ಪ್ರಕಟವಾದಾಗ ಅಮ್ಮನ ಮಡಿಲು ಈ ಲೋಕದ ದುಃಖಗಳನ್ನು ಕಳೆಯುವಂಥದ್ದು ಎಂಬ ಅರಿವು ಜಾಗೃತವಾಯಿತು. ಈಗ ಜಗತ್ತು ಅಂತಾರಾಷ್ಟ್ರೀಯ ವೇದಿಕೆಗಳಿಂದ ಅಮ್ಮನ ಶಾಂತಿ ಹಾಗೂ ಸೇವೆಯ ಸಂದೇಶಗಳನ್ನು ಕೇಳಿ, ಅದನ್ನು ಅನುಷ್ಠಾನಕ್ಕೆ ತರುತ್ತಿದೆ. ವರ್ಷದ ಆರು ತಿಂಗಳು ಪ್ರವಾಸದಲ್ಲಿರುವ ಅಮ್ಮ ಈ ಅವಧಿಯಲ್ಲಿ ದೇಶ ಮತ್ತು ವಿದೇಶಗಳಲ್ಲಿ ಭಕ್ತರಿಗೆ ದರ್ಶನ ನೀಡುತ್ತಾರೆ. ಕೆಲವೊಮ್ಮೆಯಂತೂ, ದಿನದ 22 ಗಂಟೆಗಳ ಕಾಲ ಸತತವಾಗಿ ದರ್ಶನ ನೀಡಿರುವುದು ಇದೆ.
ಕರುಣೆ ನನ್ನ ಸ್ವಭಾವ. ನಾನು ನನ್ನ ಸ್ವಂತ ಸ್ವಭಾವದಿಂದ ಭಿನ್ನವಾಗಿ ಯಾರನ್ನೂ ನೋಡುವುದಿಲ್ಲ. ನನ್ನಿಂದ ಎಲ್ಲ ಸೃಷ್ಟಿಗೆ ಪ್ರೀತಿಯ ನಿರಂತರ ಹರಿಯುತ್ತದೆ.

ವೈದ್ಯರ ಕರ್ತವ್ಯ ರೋಗಿಗಳಿಗೆ ಚಿಕಿತ್ಸೆ ನೀಡುವುದು. ಅಂತೆಯೇ ನನ್ನ ಕರ್ತವ್ಯ ನೊಂದವರ ಕಣ್ಣೀರು ಒರೆಸುವುದು, ಬಳಲಿದವರಿಗೆ ಸಾಂತ್ವನ ಹೇಳುವುದು’ ಎಂದು ಉಚ್ಚಕಂಠದಲ್ಲಿ ಘೋಷಿಸಿದ ಮಾತಾ ಅಮೃತಾನಂದಮಯಿಯವರು 1981ರಲ್ಲಿ ಸ್ಥಾಪಿಸಿದ ಮಾತಾ ಅಮೃತಾನಂದಮಯಿ ಮಠವು ಪ್ರಸ್ತುತ ಸೇವೆ ಹಾಗೂ ಕರುಣೆಯ ದೊಡ್ಡ ಆದರ್ಶವನ್ನು ಸಾಕಾರಗೊಳಿಸಿ, ಸಮಾಜದ ಶಕ್ತಿಯನ್ನು ಹೆಚ್ಚಿಸುತ್ತಿದೆ. ಬಡವರಿಗೆ, ನಿರ್ಗತಿಕರಿಗೆ ಭರವಸೆಯ ಬೆಳಕಾಗಿದೆ. ಕಳೆದ ತಿಂಗಳು ಕೇರಳದ ಅಮೃತಪುರಿಯ ಅಮೃತ ವಿದ್ಯಾಪೀಠಂ (ವಿಶ್ವವಿದ್ಯಾಲಯ) ಮತ್ತು ಮಾತಾ ಅಮೃತಾನಂದಮಯಿ ಆಶ್ರಮಕ್ಕೆ ಭೇಟಿ ನೀಡಿದಾಗ ಈ ಎಲ್ಲ ಕಾರ್ಯಗಳ ಅಗಾಧ ಸ್ವರೂಪ ಅರಿವಿಗೆ ಬಂತು.

ಆಹಾರ, ವಸತಿ, ಆರೋಗ್ಯ ಸೇವೆ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ, ಕೌಶಲ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಸಂವರ್ಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸುಧಾರಣೆಯ ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ. ಬಡಜನರ ಹಸಿವು ತಣಿಸದೆ, ಯಾವುದೇ ಸತ್ಕಾರ್ಯ ಅಪೂರ್ಣ ಎಂಬ ಹಿನ್ನೆಲೆಯಲ್ಲಿ ಪ್ರತಿವರ್ಷ ಸರಾಸರಿ 1 ಕೋಟಿ ಜನರಿಗೆ ಅನ್ನದಾನ ನಡೆಯುತ್ತಿದೆ. ಸೂರು ಇಲ್ಲದೆ ಜನರು ಪರದಾಡುವಂತಾಗಬಾರದು ಎಂಬ ಉದ್ದೇಶದಿಂದ ಕೇರಳ, ತಮಿಳುನಾಡು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಆರ್ಥಿಕ ಹಿಂದುಳಿದ 3 ಲಕ್ಷ ಕುಟುಂಬಗಳಿಗೆ ಮನೆಗಳನ್ನು ಮಠದ ವತಿಯಿಂದ ನಿರ್ಮಿಸಿ ಕೊಡಲಾಗಿದೆ. ಈಗಿನ ದಿನಗಳಲ್ಲಿ ವೈದ್ಯಕೀಯ ಚಿಕಿತ್ಸೆಯೇ ದುಬಾರಿಯಾಗಿ ಪರಿಣಮಿಸಿದೆ. ಗ್ರಾಮೀಣ ಹಾಗೂ ಬುಡಕಟ್ಟು ಪ್ರದೇಶಗಳ ಜನರ ಹಿತದೃಷ್ಟಿಯಿಂದ 60 ಲಕ್ಷ ಜನರಿಗೆ ಈವರೆಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸಲಾಗಿದೆ.

ಶಾಲಾ, ಕಾಲೇಜು ಶುಲ್ಕ ಭರಿಸಲಾಗದೆ ಬಡವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕಾಗಿ ಪ್ರತಿ ವರ್ಷ ಸರಾಸರಿ 55 ಸಾವಿರ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಗುತ್ತಿದೆ. ಮಹಿಳೆ ಕುಟುಂಬ ಬೆನ್ನೆಲುಬು ಎಂಬುದನ್ನು ಅರಿತು 2 ಲಕ್ಷ ಮಹಿಳೆಯರನ್ನು ಸಬಲಗೊಳಿಸಿ, ದುಡಿಯಲು ಕೆಲಸವನ್ನು ಒದಗಿಸಲಾಗಿದೆ. ಅಷ್ಟು ಮಾತ್ರವಲ್ಲ, ದೇಶದ 21 ರಾಜ್ಯಗಳಲ್ಲಿ 13,500 ಮಹಿಳಾ ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಸ್ವಾವಲಂಬನೆಯ ಹೊಸ ಅಧ್ಯಾಯವನ್ನು ಬರೆದಿವೆ. ವಿಶೇಷಚೇತನರು ಮತ್ತು ವೃದ್ಧರು ಜೀವನದ ಸಂಧ್ಯಾಕಾಲದಲ್ಲಿ ಕಷ್ಟಪಡುವಂತಾಗಬಾರದು ಎಂಬ ಕಳಕಳಿಯಿಂದ 1 ಲಕ್ಷ ಜನರಿಗೆ ಮಾಸಿಕ ಪಿಂಚಣಿ ಒದಗಿಸಲಾಗುತ್ತಿದೆ. ಪರಿಸರ ಸಂರಕ್ಷಣೆ ಕೇವಲ ಉಪನ್ಯಾಸದ ವಿಷಯವಾಗಿರದೆ ಕೃತಿರೂಪಕ್ಕೆ ತರಲು ಸಂಕಲ್ಪಿಸಿ ದೇಶದ ಹಲವು ರಾಜ್ಯಗಳಲ್ಲಿ ಈವರೆಗೆ 10 ಲಕ್ಷಕ್ಕೂ ಹೆಚ್ಚು ಗಿಡಮರಗಳನ್ನು ಬೆಳೆಸಲಾಗಿದೆ.

ಇದನ್ನೂ ಓದಿ: ಐತಿಹಾಸಿಕ ತೀರ್ಪು

ದೇಶದಲ್ಲಿ ಹಲವು ವಿಶ್ವವಿದ್ಯಾಲಯಗಳಿವೆ. ಆದರೆ, ವಿಶ್ವವಿದ್ಯಾಲಯಗಳು ಗ್ರಾಮೀಣ ಪ್ರದೇಶ ಮತ್ತು ಅಲ್ಲಿನ ಜನರ ಸಮಸ್ಯೆಗಳನ್ನು ನಿವಾರಿಸಬೇಕು, ಆ ನಿಟ್ಟಿನಲ್ಲಿ ವಿವಿಯ ಸಂಶೋಧನೆಗಳು ನಡೆಯಬೇಕು ಎಂಬ ಮಹೋದ್ದೇಶದಿಂದ ಸ್ಥಾಪಿಸಲಾಗಿರುವ ಅಮೃತಾ ವಿದ್ಯಾಪೀಠಂ (ವಿಶ್ವವಿದ್ಯಾಲಯ) ದೇಶದಲ್ಲಿ ಒಟ್ಟು 8 ಬೃಹತ್ ಕ್ಯಾಂಪಸ್‌ಗಳನ್ನು ಹೊಂದಿದೆ. ಅಮೃತಪುರಿ, ಕೊಯಮತ್ತೂರು, ಬೆಂಗಳೂರು, ಮೈಸೂರು, ಚೆನ್ನೈ, ಫರೀದಾಬಾದ್, ಕೊಚ್ಚಿ, ಅಮರಾವತಿಯಲ್ಲಿ ಈ ಕ್ಯಾಂಪಸ್‌ಗಳು ಶೈಕ್ಷಣಿಕ ಎತ್ತರವನ್ನು ಹೆಚ್ಚಿಸಿವೆ.

20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, 220ಕ್ಕೂ ಹೆಚ್ಚು ಬಗೆಯ ಕೋರ್ಸ್‌ಗಳು ಇಲ್ಲಿವೆ. ಸಂಶೋಧನೆಗಾಗಿಯೇ ಬೃಹತ್ ಮೊತ್ತ ವಿನಿಯೋಗಿಸಲಾಗಿದೆ. ಪಿ.ಎಚ್.ಡಿ ಪೂರೈಸಿರುವ ಸಾವಿರಕ್ಕೂ ಅಧಿಕ ಬೋಧಕ ವೃಂದವಿದ್ದು, ಇತರ ವಿವಿ ಹಾಗೂ ಸಂಶೋಧನಾ ಕೇಂದ್ರಗಳೊಂದಿಗೆ 200ಕ್ಕೂ ಹೆಚ್ಚಿನ ಒಪ್ಪಂದ (ಎಮ್ಒಯು) ಮಾಡಿಕೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಅಲ್ಲಿ ಮೂಲಸೌಕರ್ಯ ವಿಸ್ತರಣೆಗೆ ಅನುವಾಗುವ ದೃಷ್ಟಿಯಿಂದ ವಿವಿಯು ಪಿಎಚ್‌ಡಿ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅಭ್ಯರ್ಥಿಗಳು ಗ್ರಾಮೀಣ ಭಾಗದಲ್ಲಿ ಇದ್ದು, ಸಂಶೋಧನೆ ಮಾಡಿ, ಪರಿಹಾರಗಳನ್ನೂ ಸೂಚಿಸುತ್ತಿದ್ದಾರೆ. ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಭೂಕುಸಿತಕ್ಕೆ ಕಾರಣ ಪತ್ತೆ ಹಚ್ಚಲು ಆಯಾ ಪ್ರದೇಶದ ಮಣ್ಣಿನ ಸಂರಚನೆ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ‘ಜೀವಾಮೃತಂ’ ಹೆಸರಿನಲ್ಲಿ ಶುದ್ಧ ಕುಡಿಯುವ ನೀರಿನ ಸಾವಿರಾರು ಘಟಕಗಳನ್ನು ನಿರ್ಮಿಸಲಾಗಿದೆ.

ಸುನಾಮಿ, ಭೂಕುಸಿತ, ಭೂಕಂಪ, ನೆರೆ, ಬರ ಸೇರಿದಂತೆ ಹಲವು ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ 582 ಕೋಟಿ ರೂ.ಗಳ ದೇಣಿಗೆ ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ದೇಶದಲ್ಲಿ ಸ್ವಚ್ಛ ಭಾರತ ಅಭಿಯಾನ ಆರಂಭವಾದಾಗ ಮಠದ ಕಡೆಯಿಂದ 200 ಕೋಟಿ ರೂ. ದೇಣಿಗೆಯನ್ನು ಅಭಿಯಾನಕ್ಕೆ ನೀಡಲಾಯಿತು. ಮಾತ್ರವಲ್ಲ, 7500 ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ, 6,500ಕ್ಕೂ ಹೆಚ್ಚು ಕಾರ್ಯಾಗಾರಗಳಲ್ಲಿ 1 ಲಕ್ಷ ಸ್ವಯಂಸೇವಕರು ಪಾಲ್ಗೊಂಡು, 5 ಲಕ್ಷ ಗಂಟೆಗಳಿಗೂ ಅಧಿಕ ಅವಧಿಯನ್ನು ವಿನಿಯೋಗಿಸಿದ್ದಾರೆ.

ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ಹರಿಯಾಣದ ಫರಿದಾಬಾದ್ ನಲ್ಲಿ 2600 ಹಾಸಿಗೆಗಳ ಸಾಮರ್ಥ್ಯದ ಅಮೃತಾ ಆಸ್ಪತ್ರೆ, ಕೇರಳದ ಕೊಚ್ಚಿಯಲ್ಲಿ 1100 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲಾಗಿದೆ. ಕೇರಳದಲ್ಲಿ 500 ನಿರ್ಗತಿಕ ಮಕ್ಕಳಿಗಾಗಿ ಅನಾಥಾಶ್ರಮ ಮತ್ತುಅಂಗವಿಕಲ ಮತ್ತು ಮಕ್ಕಳಿಗಾಗಿ ಎರಡು ವಿಶೇಷ ಶಾಲೆಗಳನ್ನು ನಡೆಸಲಾಗುತ್ತಿದೆ. ಈ ಎಲ್ಲ ಸೇವಾಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಇಷ್ಟೆಲ್ಲ ಸೇವಾ ಸಾಮ್ರಾಜ್ಯವನ್ನು ವಿಸ್ತರಿಸಿ, ಅದರ ಹೊಣೆಯನ್ನು ಸಮರ್ಪಕವಾಗಿ ಹೊತ್ತಿರುವ ಮಾತಾ ಅಮೃತಾನಂದಮಯಿಯವರು ಸೇವೆಯಿಂದ ಪರಿವರ್ತಿತವಾದ ಹೃದಯಗಳ ಆನಂದದಲ್ಲಿ ತಮ್ಮ ಆನಂದವನ್ನು ಕಾಣುತ್ತಿದ್ದಾರೆ. ಅಧ್ಯಾತ್ಮ ಮತ್ತು ಸೇವೆಯ ಅಪೂರ್ವ ಸಂಗಮ ಮತ್ತು ಅದರ ಶಕ್ತಿಯನ್ನು ಭಾರತಕ್ಕೆ ಮಾತ್ರವಲ್ಲ ಜಗತ್ತಿಗೆ ದರ್ಶಿಸಿ ಮಾದರಿಯಾಗಿದ್ದಾರೆ. ಗುಡಿಸಲಿನಿಂದ ಕಣ್ಣೀರು ಒರೆಸಿಕೊಂಡು ಸಮಾಜ ಬದಲಾವಣೆಯ ಸಂಕಲ್ಪದಿಂದ ಹೊರಟ ಸಾಮಾನ್ಯ ಹೆಣ್ಣು, ಈಗ ಲಕ್ಷಾಂತರ ಜನರು ಕಣ್ಣೀರು ಒರೆಸುವ ಅಮ್ಮನಾಗಿದ್ದಾರೆ. ಇದುವೇ ಜೀವನದ ಸೊಬಗು, ಇದೇ ಜೀವನದ ಧನ್ಯತೆ. ಅಲ್ಲವೇ?

Leave a Comment