ಭವಿಷ್ಯಕ್ಕೆ ಎಐ ದಿಕ್ಸೂಚಿ
ಯಾವುದೇ ಹೊಸ ತಂತ್ರಜ್ಞಾನ ಬಂದಾಗ ಅನೇಕ ಅನುಮಾನಗಳ ಜತೆ ಆತಂಕ, ಕಳವಳ ಸೃಷ್ಟಿಯಾಗುವುದು ಸ್ವಾಭಾವಿಕ. ಕೃತಕ ಬುದ್ಧಿಮತ್ತೆ (ಎಐ) ವಿಷಯದಲ್ಲೂ ಇದೇ ರೀತಿಯ ಭಾವನೆ ಸೃಷ್ಟಿಯಾಗಿರುವುದು ಸುಳ್ಳಲ್ಲ. ತಂತ್ರಜ್ಞಾನ ಹಲವು ಪ್ರಯೋಜನಗಳನ್ನು ಉಂಟು ಮಾಡಿ. ಜನರ ಜೀವನವಿಧಾನವನ್ನೇ ಬದಲಿಸಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ತಂತ್ರಜ್ಞಾನದ ವ್ಯಾಪಕ ದುರುಪಯೋಗದಿಂದ ವಂಚನೆ, ಮೋಸದಂಥ ಕೃತ್ಯಗಳು ಹೆಚ್ಚುತ್ತಲೇ ಸಾಗಿವೆ. ಈ ನಡುವೆ, ಎಐ ಆಧಾರಿತ ಸೇವೆಗಳು ಹೆಚ್ಚುತ್ತಿದ್ದು, ಇದಕ್ಕೆ ಸಂಬಂಧಿಸಿದ ಹೊಸ ಉಪಕರಣಗಳು, ಹೊಸ ಸಾಫ್ಟ್ವೇರ್ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕುರಿತು ಸ್ಪಷ್ಟ ಸಂದೇಶ ರವಾನಿಸುವ ಪ್ರಯತ್ನ ನಡೆದಾಗ, ಜನರಲ್ಲೂ ಸ್ಪಷ್ಟತೆ ಮೂಡಲು ಸಾಧ್ಯವಾಗುತ್ತದೆ.
ಜಾಗತಿಕ ಎಐ ಕ್ರಿಯಾ ಶೃಂಗಸಭೆಯ ಸಹ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವ ಮೂಲಕ, ಭಾರತ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ತನ್ನ ಛಾಪನ್ನು ದರ್ಶಿಸಿದೆ. ಫ್ರಾನ್ಸ್ನ ರಾಜಧಾನಿ ಪ್ಯಾರಿಸ್ನಲ್ಲಿ ಮಂಗಳವಾರ ನಡೆದ ಎಐ ಶೃಂಗಸಭೆ ಹಲವು ಮಹತ್ವದ ಸಂದೇಶಗಳನ್ನು ರವಾನಿಸುವ ಜತೆಗೆ, ಅನುಮಾನಗಳನ್ನೂ ಬಗೆಹರಿಸಿದೆ. ಭವಿಷ್ಯಕ್ಕೆ ಎಐ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಲಿದ್ದು, ಎಲ್ಲ ರಂಗಗಳಲ್ಲಿ ಬದಲಾವಣೆ ತರಲಿದೆ ಎಂಬುದನ್ನು ಸಾರಿದೆ. ಮಾತ್ರವಲ್ಲ, ಮುಂದಿನ ಎಐ ಶೃಂಗಸಭೆಯ ಸಾರಥ್ಯವನ್ನು ಭಾರತವೇ ವಹಿಸಿಕೊಳ್ಳಲಿದೆ.
ಇದನ್ನೂ ಓದಿ:ಶುದ್ಧ ಜಲ ಮರೀಚಿಕೆಯಾಗದಿರಲಿ
ಪ್ರಧಾನಿ ನರೇಂದ್ರ ಮೋದಿ ಉದ್ಯೋಗಸೃಷ್ಟಿಗೂ ಪೂರಕ ಅವರು ಸಂದರ್ಭದಲ್ಲಿ ಮಹತ್ವದ ಮಾತುಗಳನ್ನಾಡಿದ್ದು, ‘ಎಐ ಲಕ್ಷಾಂತರ ಜನರ ಬದುಕನ್ನು ಬದಲಿಸುತ್ತಿದೆ. ಮನುಕುಲದ ಕೋಡ್ ಅನ್ನು ರಚಿಸುತ್ತಿದೆ. ಕಾಲಕ್ಕೆ ತಕ್ಕಂತೆ ಉದ್ಯೋಗದ ಸ್ವರೂಪವೂ ಬದಲಾಗಿದ್ದು, ఎఐ ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲ. ಬದಲಾಗಿ, ಇನ್ನಷ್ಟು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ’ ಎಂದು ಹೇಳುವ ಮೂಲಕ, ಭಾರತ ಡಿಜಿಟಲ್ ಮೂಲಸೌಕರ್ಯ ವಿಸ್ತರಣೆ ಮಾಡಿದ್ದು, ಎಐ ರಂಗದಲ್ಲಿ ಮುನ್ನುಗ್ಗಲಿದೆ ಎಂದಿದ್ದಾರೆ. ‘ಎಐ-ಪ್ರೇರಿತ ಭವಿಷ್ಯಕ್ಕೆ ಜನರನ್ನು ಸಿದ್ಧಗೊಳಿಸಲು ಕೌಶಲ ಹಾಗೂ ಮರುಕೌಶಲಕ್ಕಾಗಿ ನಾವು ಹೆಚ್ಚು ಹೂಡಿಕೆ ಮಾಡಬೇಕಿದೆ. ಎಐ ಅಳವಡಿಕೆ ಮತ್ತು ಡೇಟಾ ಗೋಪ್ಯತೆ ವಿಚಾರವಾಗಿ ತಂತ್ರಜ್ಞಾನ-ಕಾನೂನಾತ್ಮಕ ಪರಿಹಾರಗಳನ್ನು ರೂಪಿಸುವಲ್ಲಿ ಭಾರತ ಮುಂಚೂಣಿಯಲ್ಲಿದೆ. ತನ್ನ ಅನುಭವ ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ದೇಶ ಸಿದ್ಧವಿದೆ’ ಎಂದೂ ಪ್ರಧಾನಿ ಹೇಳಿರುವುದು ಗಮನಾರ್ಹ.
ಎಐ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಸಹಕಾರ, ಸಮನ್ವಯ ಸೃಷ್ಟಿಯಾಗಿರುವುದು ಒಳ್ಳೆಯ ಬೆಳವಣಿಗೆ. ಆದರೆ, ತಂತ್ರಜ್ಞಾನ ಕ್ಷೇತ್ರವು ಸೃಷ್ಟಿಸಿರುವ ಸವಾಲುಗಳ ಪರಿಹಾರದ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ವೇದಿಕೆಗಳು ಚರ್ಚೆ ನಡೆಸಿ, ಮುಂದಿನ ಹಾದಿಯನ್ನು ಕಂಡುಕೊಳ್ಳಬೇಕಿದೆ. ಡೀಪ್ಫೇಕ್ಗಳಂಥ ಕಳವಳಗಳನ್ನು ನಿವಾರಿಸಬೇಕಿದ್ದು, ಸೈಬರ್ ಭದ್ರತೆಯನ್ನು ಬಲಪಡಿಸಬೇಕಿದೆ. ಆರೋಗ್ಯ, ಶಿಕ್ಷಣ, ಕೃಷಿ, ಆರ್ಥಿಕತೆ ಸೇರಿದಂತೆ ಹಲವಾರು ರಂಗಗಳಲ್ಲಿ ಸುಧಾರಣೆ ತರಲು, ಜನರ ಜೀವನಮಟ್ಟವನ್ನು ಉತ್ತಮ ಪಡಿಸಲು ತಂತ್ರಜ್ಞಾನ ಪರಿಣಾಮಕಾರಿ ಸಾಧನವಾಗಿ ಬಳಕೆಯಾಗಬೇಕಿದೆ. ಈ ನಿಟ್ಟಿನಲ್ಲಿ ಎಐ ಹಲವು ಸಾಧ್ಯತೆಗಳನ್ನು ಸೃಷ್ಟಿಸಿದ್ದು, ಸುಸ್ಥಿರ ಅಭಿವೃದ್ಧಿಯ ಗುರಿ ಸಾಗಿಸಲು ನೆರವಾದಲ್ಲಿ, ಅದು ಖಂಡಿತವಾಗಿಯೂ ಮನುಕುಲಕ್ಕೆ ವರದಾನವೇ ಸರಿ. ಎಐ ಕ್ಷೇತ್ರದಲ್ಲಿ ಬೆಳವಣಿಗೆಗೆ ಇರುವ ಅವಕಾಶಗಳನ್ನು ಭಾರತ ಸಮರ್ಥವಾಗಿ ಬಳಸಿಕೊಳ್ಳುವ ವಿಶ್ವಾಸವಿದೆ. ಇದರಲ್ಲಿ ಕೌಶಲ ಹೊಂದಿದ ಮಾನವ ಸಂಪನ್ಮೂಲದ ಪಾತ್ರ ಮಹತ್ವದ್ದಾಗಿದ್ದು, ದೇಶದ ಯುವಶಕ್ತಿ ಈ ಸದಾವಕಾಶವನ್ನು ಚಿಮ್ಮುಹಲಗೆಯಾಗಿ ಬಳಸಿಕೊಳ್ಳಲಿ.