ಭಾಗವತ್ ಹೇಳಿಕೆಗೆ ಪರ-ವಿರೋಧ ದನಿ

ಭಾಗವತ್ ಹೇಳಿಕೆಗೆ ಪರ-ವಿರೋಧ ದನಿ

ನವದೆಹಲಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಳಿಕ ಮಂದಿರ-ಮಸೀದಿಗೆ ಸಂಬಂಧಿಸಿ ಹೊಸ ವಿವಾದಗಳು ಹುಟ್ಟಿಕೊಳ್ಳುತ್ತಿರುವುದಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ದೇಶದ ಕೆಲ ಹಿಂದು ಸ್ವಾಮೀಜಿಗಳಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ.

ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರಾನಂದ ಸರಸ್ವತಿ ಅವರು, ರಾಷ್ಟ್ರೀಯ ಸಾಮರಸ್ಯವನ್ನು ಕಾಪಾಡುವಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರ ವಿಶಾಲ ದೃಷ್ಟಿಕೋನವನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಬೆಂಬಲ ಸೂಚಿಸಿದ್ದಾರೆ. ಭಾರತ ಪ್ರಸ್ತುತ ಯಾವುದೇ ಆಂತರಿಕ ಕಲಹ ತಡೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ಭಾಗವತ್ ಅವರ ಹೇಳಿಕೆಗಳ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ಧಾರ್ಮಿಕ ಮತ್ತು ರಾಷ್ಟ್ರೀಯ ಸಮಸ್ಯೆಗಳನ್ನು ಸಾಂವಿಧಾನಿಕ ಚೌಕಟ್ಟಿನೊಳಗೆ ಪರಿಹರಿಸಬೇಕು. ದೇಶ ಮತ್ತೊಂದು ಅಂತರ್ಯುದ್ಧದ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಿಲ್ಲ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ರವಿ-ಲಕ್ಷ್ಮಿ ಬಿಕ್ಕಟ್ಟು ಮತ್ತೊಂದು ಹಂತಕ್ಕೆ

ಅಯೋಧ್ಯೆ, ಮಥುರಾ ಮತ್ತು ಕಾಶಿಯಲ್ಲಿ ದೇವಾಲಯಗಳನ್ನು ಪುನ‌ರ್ ಸ್ಥಾಪಿಸಲು ಹಿರಿಯ ಸಂತರು ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) 1984ರಲ್ಲಿ ಮಾಡಿದ ಐತಿಹಾಸಿಕ ಬದ್ಧತೆ ಕಾರಣ. ಆದಾಗ್ಯೂ, ಅಯೋಧ್ಯೆ ವಿವಾದವನ್ನು ಸುಪ್ರೀಂಕೋರ್ಟ್ ಮೂಲಕ ಪರಿಹರಿಸಲಾಗಿದೆಯೇ ಹೊರತು ಮುಸ್ಲಿಂ ಕಡೆಯವರು ತೋರಿದ ದೊಡ್ಡತನದಿಂದಲ್ಲ ಎಂದು ಸರಸ್ವತಿ ಒತ್ತಿಹೇಳಿದ್ದಾರೆ.

ಉತ್ತರಾಖಂಡದ ಜ್ಯೋತಿರ್ಮಠ ಪೀಠದ ಶಂಕರಾಚಾರ್ಯ ಅವಿಮುಕ್ತಶ್ವರಾನಂದ ಸರಸ್ವತಿ ಅವರು. ದೇವಾಲಯಗಳ ಜೀರ್ಣೋದ್ಧಾರದ ಬಗ್ಗೆ ಭಾಗವತ್‌ರದ್ದು ರಾಜಕೀಯವಾಗಿ ಅನುಕೂಲಕರ ನಿಲುವು ಎಂದು ಟೀಕಿಸಿದ್ದಾರೆ. ಆಕ್ರಮಣಕಾರರಿಂದ ನಾಶವಾದ ದೇವಾಲಯಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಪುರಾತತ್ವ ಶಾಸ್ತ್ರದ ಸಮೀಕ್ಷೆ ಕೈಗೊಳ್ಳಬೇಕು ಎಂದು ಅವಿಮುಕ್ತಶ್ವರಾನಂದ ಹೇಳಿದ್ದರು. ಹಿಂದೂಗಳನ್ನು ಸ್ಥಳಾಂತರಿಸಲಾಗಿದೆ ಮತ್ತು ದೇವಾಲಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖೆಗಳಿಂದ ಬಹಿರಂಗಗೊಂಡರೆ, ಅವುಗಳನ್ನು ಮರಳಿ ಪಡೆಯಲು ಪ್ರಯತ್ನಿಸಬೇಕು. ಅಂತಹ ಸ್ಥಳಗಳನ್ನು ಗುರುತಿಸಿ ಪೂಜೆ ಪುನರಾರಂಭಿಸುವ ಮುಖ್ಯಮಂತ್ರಿ (ಯೋಗಿ ಆದಿತ್ಯನಾಥ) ಅವರ ಧೋರಣೆ ಸರಿಯಾಗಿದೆ ಎಂದು ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಮಹಂತ್ ಸತ್ಯೇಂದ್ರ ದಾಸ ಅಭಿಪ್ರಾಯಪಟ್ಟಿದ್ದಾರೆ.

Leave a Comment