ಭಾರತದ ಭವಿಷ್ಯ ಹಳ್ಳಿಗಳಲ್ಲಿ ಅಡಗಿದೆ’

ಭಾರತದ ಭವಿಷ್ಯ ಹಳ್ಳಿಗಳಲ್ಲಿ ಅಡಗಿದೆ’

ಭಾರತದ ಭವಿಷ್ಯ ಹಳ್ಳಿಗಳಲ್ಲಿ ಅಡಗಿದೆ’ ಎಂದು ಹೇಳಿ, ಗ್ರಾಮ ಸ್ವರಾಜ್ಯದ ಕನಸನ್ನು ಬಿತ್ತಿದ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷಗಳು ಸಂದಿರುವ ಸಂದರ್ಭ ಇದು. ದೇಶದ ಪ್ರತಿ ಹಳ್ಳಿಯೂ ಪೂರ್ಣ ಸ್ವವಲಾಂಬಿ ಆಗಬೇಕು .ವ್ಯಾಸನ ಮುಕ್ತ, ವ್ಯಾಜ್ಯ ಮುಕ್ತ ಆಗಿರಬೇಕು .ಸ್ವಯಂ ಆಡಳಿತ ,ಅಭಿವೃದ್ಧಿ ಹಾಗೂ ನ್ಯಾಯ
ತೀರ್ಮಾನದ ವ್ಯವಸ್ಥೆ ಹೊಂದಿರಬೇಕು. ನೈಜ ಪ್ರಜಾಸತ್ತೆಯು ಅಲ್ಲಿ ಆಚರಣೆಗೆ ಬರಬೇಕು’ ಎಂಬುದು ಅವರ ಆಶಯವಾಗಿತ್ತು. ವಿಕೇಂದ್ರೀಕರಣಕ್ಕೆ ಮಹತ್ತ ನೀಡಿದ್ದ ಗ್ರಾಮ ಸ್ವರಾಜ್ಯ ವ್ಯವಸ್ಥೆಗೆ ಸಮಾನತೆಯೇ ಅಧಾರವಾಗಿತ್ತು. ಆದರೆ ಇಂದು ಈ ಕನಸು ನನಸಾಗಿದೆಯೇ ಎಂದು ಪ್ರಶ್ನಿಸಿಕೊಂಡಾಗ ವಿಷಾದ ಅವರಿಸುತ್ತದೆ. ಶ್ರೀಮಂತರು, ಬಡವರ ನಡುವಿನ ಅಂತರ ಹೆಚ್ಚಾಗಿದೆ. ದೇಶದ ಶೇ 40ರಷ್ಟು ಸಂಪತ್ತು ಕೆಲವೇ ಜನರ ಕೈಯಲ್ಲಿದೆ. ಸಂಪತ್ತಿನ ಕೆಲವೇ ಜನರ ಕೈಯಲ್ಲಿದೆ ಸಂಪತ್ತಿನ ಸಮಾನ ಹಂಚಿಕೆ ಆಗದೆ ಜನರಿಗೆ ನೆಮ್ಮದಿಯ ಜೀವನ ಇಲ್ಲವಾಗಿದೆ.
‌ ಪರಿಪೂರ್ಣ ಸ್ವಾವಲಂಬಿ ಸಮಾಜ ಕಟ್ಟುವ ಗುರಿಯತ್ತ ಸಾಗಲು ಬಲವಂತರಾಯ್ ಮೆಹ್ರಾ, ಕೊಂಡಜ್ಜಿ ಬಸಪ್ಪ, ಸಂತಾನಂ, ಅಶೋಕ ಮೆಹ್ರಾ, ಜಿ.ವಿ.ಕೆ. ರಾವ್ ಅವರ ನೇತೃತ್ವದಲ್ಲಿ ವಿವಿಧ ಸಮಿತಿಗಳು ರಚನೆಯಾದವು, ಪಶ್ಚಿಮ ಬಂಗಾಳ ಸರ್ಕಾರವು ಅಶೋಕ ಮೆಹ್ರಾ ಸಮಿತಿಯ ವರದಿ ಆಧರಿಸಿ ಆಡಳಿತ ವಿಕೇಂದ್ರೀಕರಣವನ್ನು ಯಶಸ್ವಿಯಾಗಿ ಜಾರಿಗೊಳಿಸಿತು. ಈ ಪ್ರಯೋಗದಿಂದ ಪ್ರಭಾವಿತರಾಗಿದ್ದ ನಜೀರ್ ಸಾಬ್ ಅವರ ಪ್ರಯತ್ನ ಹಾಗೂ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರ ಸಂಪೂರ್ಣ ಬೆಂಬಲದಿಂದ ‘ಕರ್ನಾಟಕ ಜಿಲ್ಲಾ ಪರಿಷತ್ತು, ತಾಲ್ಲೂಕು ಪಂಚಾಯಿತಿ ಸಮಿತಿಗಳು, ಮಂಡಲ ಪಂಚಾಯಿತಿ ಹಾಗೂ ನ್ಯಾಯ ಪಂಚಾಯಿತಿ ಕಾಯ್ದೆ- 1983’ ಜಾರಿಗೆ ಬಂದಿತು.

ಇದನ್ನೂ ಓದಿ: ಕಲೆ ಆಸ್ವಾದಿಸುವ, ಆರಾಧಿಸುವ ಮನಸ್ಸು ಅಗತ್ಯ

ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸಲು. ಅವಕಾಶ ವಂಚಿತರಿಗೆ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿಗೆ ನಿರ್ಧರಿಸಿದರು. ದುರ್ದೈವವಶಾತ್ ಈ ತಿದ್ದುಪಡಿಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು, ವಿಶೇಷವಾಗಿ, ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಪರವಾಗಿ ಇದ್ದ ಜನತಾ ಪರಿವಾರ ಹಾಗೂ ಕಮ್ಯುನಿಸ್ಟ್ ಪಕ್ಷಗಳು ವಿರೋಧ ವ್ಯಕ್ತಪಡಿಸಿದವು. ಈ ಮೂಲಕ, ತಮಗೆ ಬರೀ ರಾಜಕೀಯ ಮಾಡುವುದರಲ್ಲಿ ಆಸಕ್ತಿಯೇ ವಿನಾ ಅವಕಾಶವಂಚಿತರಿಗೆ ಅಧಿಕಾರ ಹಸ್ತಾಂತರಿಸು ವಲ್ಲಿ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದವು.
ನರಸಿಂಹ ರಾವ್ ಅವರು ಪ್ರಧಾನಿಯಾದ ನಂತರ ಸಂವಿಧಾನಕ್ಕೆ 73- 74ನೇ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿಯ ಆಶಯಗಳನ್ನು ಈಡೇರಿಸುವ ದಿಸೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಕಾಯ್ದೆಯೊಂದು ರೂಪುಗೊಂಡಿತು. ಮುಖ್ಯಮಂತ್ರಿ ಯಾಗಿದ್ದ ವೀರಪ್ಪ ಮೊಯಿಲಿ ಹಾಗೂ ಸಚಿವರಾಗಿದ್ದ ಎಂವೈಘೋರ್ಪಡೆ ಅವರ ವಿಶೇಷ ಆಸಕ್ತಿಯಿಂದ ಹಿಂದುಳಿದ ವರ್ಗದವರೂ ಅಧಿಕಾರ ಪಡೆಯಲು
ಅನುವಾಗುವಂತೆ ಮೀಸಲಾತಿಯನ್ನು ಜಾರಿಗೊಳಿಸ ಲಾಯಿತು. 2013ರಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾದಾಗ ಕೆ.ಆರ್.ರಮೇಶ್ ಕುಮಾ‌ರ್ ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿದ್ದರು. ಆ ಸಮಿತಿಯಶಿಫಾರಸಿನಂತೆ, ಗ್ರಾಮ ಪಂಚಾಯಿತಿಗಳನ್ನು ಗ್ರಮ ಸರ್ಕಾರಗಳನ್ನಾಗಿ ರೂಪಿಸಲು ಕಾನೂನಿನಲ್ಲಿ ಎಲ್ಲ ಪಂಚಾಯಿತಿಗಳನ್ನು ಗ್ರಾಮ ಅವಶ್ಯಕ ಬದಲಾವಣೆಗಳನ್ನೂ ತರಲಾಯಿತು.

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಈಗ ಮೀಸಲಾತಿ ಜಾರಿಗೆ ಬಂದಿದೆ. ಅಧಿಕಾರ ಸ್ಥಾನದ ಕನಸನ್ನೇ ಕಾಣದಿದ್ದ ಬಡವರು, ದುರ್ಬಲ ವರ್ಗದವರು, ಎಲ್ಲಕ್ಕೂ ಮಿಗಿಲಾಗಿ ಮಹಿಳೆಯರು ಅಧಿಕಾರ ಸ್ಥಾನದಲ್ಲಿ ವಿಜೃಂಭಿಸಿದ್ದಾರೆ. ಇಂಥದ್ದೊಂದು ‘ರಕ್ತರಹಿತ ಸಾಮಾಜಿಕ ಕ್ರಾಂತಿ’ ಸದ್ದಿಲ್ಲದೇ ಅನುಷ್ಠಾನಗೊಂಡಿದೆ. ಆದರೆ ಕಾಯ್ದೆಯಲ್ಲಿ ಕೊಡಮಾಡಿರುವ ಅಧಿಕಾರಗಳು ಈಗಲೂ ಜಾರಿಗೆ ಬಂದಿಲ್ಲ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜನಪರವಾಗಿಸಲು ಹಾಗೂ ಜನರ ಸಂಕಷ್ಟ ಪರಿಹಾರಕ್ಕೆ ಅವಶ್ಯಕ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ರೂಪಿಸಿರುವ ಈ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರಬೇಕಾಗಿದೆ. ಅಧಿಕಾರ, ಅಧಿಕಾರಿಗಳು, ಹಣಕಾಸನ್ನು ಲಭ್ಯವಾಗಿಸುವುದು ಹಾಗೂ ಅವುಗಳನ್ನು ಉಪಯೋಗಿಸುವ ಸ್ವಾತಂತ್ರ್ಯ ವನ್ನು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗೆ ವರ್ಗಾಯಿಸಬೇಕಾಗಿದೆ.
1980ರ ದಶಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಯಲ್ಲಿ ಅಧಿಕಾರ ಸ್ಥಾನಗಳಿಗೆ ಮೀಸಲಾತಿ ಇಲ್ಲದಿದ್ದಾಗ ಇಂತಹ ಸೌಲಭ್ಯಗಳನ್ನು ಮೊದಲ ದಿನದಿಂದಲೇ ವರ್ಗಾಯಿಸಲಾಗಿತ್ತು. ಈಗ ಮೀಸಲಾತಿ ಬಂದು ದುರ್ಬಲರು, ಧ್ವನಿ ಇಲ್ಲದವರು ಹಾಗೂ ಮಹಿಳೆಯರು ಅಧಿಕಾರ ಸ್ಥಾನದಲ್ಲಿರುವಾಗ ಇವುಗಳನ್ನು ವರ್ಗಾಯಿಸಲು ವಿಳಂಬ ಆಗುತ್ತಿರುವುದು ಅತ್ಯಂತ ದುರ್ದೈವದ ಸಂಗತಿ. ಈ ಲೋಪ ನಿವಾರಿಸುವ ಕಾಲ ಈಗ ಸನ್ನಿಹಿತವಾಗಿದೆ.
ಗಾಂಧೀಜಿ ಕನಸಿನ ಗ್ರಾಮ ಸ್ವರಾಜ್ಯದ ಆಶಯ ಈಡೇರಿಸಲು ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಬೇಕಾಗಿದೆ. ಪ್ರತಿ ಗ್ರಾಮ ತನ್ನ ಯೋಜನೆ ರೂಪಿಸಿಕೊಂಡು ದೃಢಹೆಜ್ಜೆ ಇರಿಸುವಂತೆ ಮಾಡಬೇಕಾಗಿದೆ. ಸ್ಥಳೀಯ ಆಡಳಿತ ಸಂಸ್ಥೆಗಳನ್ನು ಸ್ಥಳೀಯ ಸರ್ಕಾರಗಳನ್ನಾಗಿ ರಚಿಸಿ, ಪ್ರಜೆಗಳೇ ಪ್ರಭುಗಳೆಂದು ಸಾಬೀತುಪಡಿಸುವ ವ್ಯವಸ್ಥೆಯನ್ನು ತ್ವರಿತವಾಗಿ ಜಾರಿಗೊಳಿಸುವುದು ನಾವು ರಾಷ್ಟ್ರಪಿತನಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ.

Leave a Comment