ಮಾನವೀಯ ಮೌಲ್ಯ ಸಾರಿದ ಯೇಸು
ಕ್ರಿಸ್ತ ಜಯಂತಿ ಅಥವಾ ಕ್ರಿಸ್ಮಸ್ ಎನ್ನುವ ಹಬ್ಬ ಹೆಸರೇ ಸೂಚಿಸುವಂತೆ ಭಗವಂತನು ಮಾನವನಾಗಿ ಅವತಾರ ಎತ್ತಿ ಬಂದಂತಹ ಐತಿಹಾಸಿಕ ಹಾಗೂ ಚಾರಿತ್ರಿಕ ಘಟನೆ ಎಂಬುದು ನಮ್ಮ ವಿಶ್ವಾಸ, ದೇವಮಾನವ ಪ್ರಭು ಯೇಸು ಕ್ರಿಸ್ತನ ಈ ಜನನೋತ್ಸವ ಹಲವಾರು ಕಾರಣಗಳಿಂದಾಗಿ ಭಾಷೆ, ಭೇದ, ಜಾತಿ, ಧರ್ಮ, ದೇಶ, ಜನಾಂಗಗಳ ಗಡಿಯನ್ನು ದಾಟಿ ಸರ್ವ ಜನಾಂಗದವರು ಆಚರಿಸುವಂತಹ ಜಾಗತಿಕ ಹಬ್ಬ ಎಂದರೆ ತಪ್ಪಲ್ಲ.
ಕ್ರಿಸ್ಮಸ್ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವಂತಹದ್ದು ಸಾಂತಾ ಕ್ಲಾಸ್, ಕ್ರಿಸ್ಮಸ್ ಟೀ, ಕೇಕ್ ಮತ್ತು ಸಿಹಿ ತಿನಿಸುಗಳು, ಪ್ರಾರ್ಥನಾ ಮಂದಿರಗಳ ಭವ್ಯ ಅಲಂಕಾರ. ಕ್ರಿಸ್ತನ ಜನನವನ್ನು ಚಿತ್ರಿಸುವ ಗೋದಲಿಗಳು, ಕ್ಯಾರೊಲ್ಸ್, ಹಾಡು, ನೃತ್ಯ, ಸಂಭ್ರಮ, ಸಂತೋಷ ಮಾತ್ರ. ಆದರೆ, ಆಧ್ಯಾತ್ಮಿಕವಾಗಿ ಮತ್ತು ಭಾವನಾತ್ಮಕವಾಗಿ ಈ ಹಬ್ಬದ ಅರ್ಥ ಮತ್ತು ಮಹತ್ವವನ್ನು ಗಮನಿಸುವುದಾದರೆ, ಮಾನವನ ಅಂತರ್ಯದಲ್ಲಿ ಅತಿ ಅವಶ್ಯಕವಾಗಿ ಪ್ರಸಕ್ತ ಜಗತ್ತಿನಲ್ಲಿ ನಿರೀಕ್ಷೆ, ಭರವಸೆ, ಶಾಂತಿ, ಸಮಾಧಾನ, ಸೌಖ್ಯ, ಸಾಂತ್ವನ, ಪ್ರೀತಿ ಮತ್ತು ಸಹಬಾಳ್ವೆ, ಸೇವೆ, ಸಹಾಯ, ಸಮಾನತೆಯ ಮೌಲ್ಯಗಳನ್ನು ಮನುಕುಲಕ್ಕೆ ನೀಡಲೆಂದೇ ಜಗತ್ತಿಗೆ ಬಂದಂತಹ ಯೇಸು ಕ್ರಿಸ್ತನ ತತ್ವ ಸಿದ್ಧಾಂತಗಳ ಹಬ್ಬದ ಆಚರಣೆ ಇದು. ಕ್ರಿಸ್ಮಸ್ ಸಂಭ್ರಮದ, ಆಡಂಬರದ ಅಚರಣೆಯ ಹೊರತಾಗಿ ಪ್ರೀತಿ, ದಯೆ, ಕರುಣೆ, ಕ್ಷಮೆ, ಸೇವೆ ಮುಂತಾದ ಮಾನವೀಯ ಮತ್ತು ದೈವೀ ಮೌಲ್ಯಗಳನ್ನು ಬದುಕಿಗೆ ಅಳವಡಿಸಿಕೊಳ್ಳುವ ಒಂದು ಶ್ರೇಷ್ಠ ಆಚರಣೆಯಾಗಲಿ.
ಇದನ್ನೂ ಓದಿ: ಭಾಗವತ್ ಹೇಳಿಕೆಗೆ ಪರ-ವಿರೋಧ ದನಿ
ಕ್ರಿಸ್ತ ಇತಿಹಾಸಕ್ಕೆ ಸೇರಿದವರು ಮತ್ತು ಇತಿಹಾಸದ ಪುಟಗಳಲ್ಲಿ ಜನಿಸಿ ಬಂದಂತಹ ಪವಿತ್ರವಾದ ಘಟನೆ. ಯೇಸು, ಪುರಾಣ ಅಥವಾ ಕಾಲ್ಪನಿಕ ವ್ಯಕ್ತಿಯಲ್ಲ. ಬದಲಾಗಿ ನಿರ್ದಿಷ್ಟ ಜನಾಂಗ, ದೇಶ, ಊರು ಹಾಗೂ ಸ್ಥಳದಲ್ಲಿ ಜನಿಸಿ ಬರುವುದನ್ನು ಮುಂಚಿತವಾಗಿಯೇ ತಿಳಿಲಾಗಿತ್ತು. ಕ್ರಿಸ್ತನ ಜನನ- ಜೀವನ, ಬೋಧನೆ ಮತ್ತು ಸಾಧನೆ ಎಲ್ಲವೂ ಸತ್ಯ. ಮನುಕುಲಕ್ಕೆ ಇತಿಹಾಸದ ಕಾಲಘಟ್ಟದಲ್ಲಿ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ಮಾನವೀಯ ಮತ್ತು ದೈವೀ ಮೌಲ್ಯಗಳನ್ನು ಜಗತ್ತಿಗೆ ಸಾರಲು ಬಂದ ಪರಮ ಉದ್ದೇಶ ಈ ಕ್ರಿಸ್ತನ ಜನನ, ದೇವ ಮಾನವನಾಗಿ ಧರೆಗೆ ಇಳಿದು ಬಂದ ಈ ಕ್ರಿಸ್ತನ ಜನನ ಇತಿಹಾಸವನ್ನೇ ಕ್ರಿಸ್ತ ಶಕ, ಕ್ರಿಸ್ತ ಪೂರ್ವವಾಗಿ ಇಬ್ಬಾಗ ಮಾಡಿದ ಚಾರಿತ್ರಿಕ ಘಟನೆ ಇದು. ಬೈಬಲ್ ಪುಟ ಪುಟಗಳಲ್ಲಿ ಕ್ರಿಸ್ತನ ಜನನದ ಪೂರ್ವ ಸಿದ್ಧತೆಯನ್ನು ಸಹಸ್ರಾರು ವರ್ಷಗಳ ಭಗವಂತನ ಸಿದ್ಧತಾ ಯೋಜನೆಯನ್ನು ಬೈಬಲಿನ ಹಳೆಯ ಒಡಂಬಡಿಕೆಯಲ್ಲಿ ನಾವು ಕಾಣುತ್ತೇವೆ. ಕ್ರಿಸ್ತನ ಜನನದೊಂದಿಗೆ ಆರಂಭವಾಗುವ ಬೈಬಲ್ನ ಹೊಸ ಒಡಂಬಡಿಕೆ ಆತನ ಬೋಧನೆ,ಸಾಧನೆ, ಶಿಲುಬೆಯ ಮರಣ ಮತ್ತು ನಂತರ ಎದ್ದುಬಂದಂತಹ ಆತನ ಪುನರುತ್ಥಾನ ಎಂದಿಗೂ ಮನುಕುಲಕ್ಕೆ ನಿರೀಕ್ಷೆ, ನಂಬಿಕೆ, ಭರವಸೆಯನ್ನು ಹಾಗೂ ಅತಿ ಅವಶ್ಯಕವಾದ ಶಾಂತಿ, ಸಮಾಧಾನ, ಸಂತೃಪ್ತಿ ಮತ್ತು ನೆಮ್ಮದಿಯ ಬದುಕನ್ನು ಪ್ರೀತಿ ಹಾಗೂ ಸೇವಾ ಕಾರ್ಯಗಳ ಮುಖಾಂತರ ಈ ಲೋಕದಲ್ಲಿ ಪ್ರಕಟಿಸುತ್ತ, ಪ್ರತಿಯೊಬ್ಬ ಮಾನವ ಜೀವಿಸಿದರೆ ಮಾತ್ರ ಮಾನವನ ಬದುಕಿಗೆ ಸಾರ್ಥಕತೆ ಮತ್ತು ಧನ್ಯತೆ ಸಿಗಲಿದೆ ಎಂಬುದನ್ನು ಕ್ರಿಸ್ತ ಜಯಂತಿ ಮತ್ತು ಕ್ರಿಸ್ತನ ಬದುಕು ನಿರಂತರವಾಗಿ ಸಾರುತ್ತ ಬಂದಿದೆ.
ಕ್ರಿಸ್ತ ಜನನದ ಮೂಲ ಉದ್ದೇಶ ಮನುಷ್ಯನಿಗೆ ಆಧ್ಯಾತ್ಮಿಕ ಸ್ವಾತಂತ್ರ್ಯವನ್ನು ನೀಡುವುದೇ ಆಗಿದೆ. ಏಕೆಂದರೆ ಇಡೀ ಇತಿಹಾಸವನ್ನು ತೆಗೆದುಕೊಂಡಾಗ ಅಲ್ಲಿ ಯಾವುದೇ ವ್ಯವಸ್ಥೆ ಬಂದಾಗಲೂ ಸ್ವಾರ್ಥವೇಮೇಲಾಗಿತ್ತು. ಆದ್ದರಿಂದ ನಿಸ್ವಾರ್ಥ ಪ್ರೀತಿ, ಸೇವೆ ಬದುಕಿನಲ್ಲಿ ಮನುಷ್ಯ ಜೀವಿಸಿದಾಗ ಮಾತ್ರ ಭಗವಂತನ ಇಚ್ಛಾನುಸಾರ ಪ್ರತಿಯೊಬ್ಬ ಮನುಷ್ಯರಲ್ಲಿ ಇರುವ ದೇವರನ್ನು ಗುರುತಿಸಿ ಬಾಳಿದರೆ ಅದುವೇ ನಿಜವಾದ ಆಧ್ಯಾತ್ಮಿಕ ಸ್ವಾತಂತ್ರ್ಯ ಎಂಬುದನ್ನು ಕ್ರಿಸ್ತ ಸಾರಿದ.
ವಿಪರ್ಯಾಸವೆಂದರೆ ಇವತ್ತು ಕ್ರಿಸ್ತ ಜನಿಸಿದಂತಹ ಆ ಪುಣ್ಯ ನಾಡು ಬೆಲ್ಲೆಹೇಂ ಮತ್ತು ಜೆರೂಸಲೇಂ ಹಿಂಸೆ ಮತ್ತು ಯುದ್ಧಗಳಿಂದಾಗಿ ರಣಾಂಗಣವಾಗಿವೆ. ಶಾಂತಿದೂತನಾದ ಯೇಸು ಕ್ರಿಸ್ತನ ಜನನದ ಈ ಸ್ಥಳವೇ ಅಶಾಂತಿಯ ಗೂಡಾಗಿರುವಾಗ ಇಡೀ ವಿಶ್ವ ಕೂಡ ಇಂತಹದ್ದೇ ಶೋಚನೀಯ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ದುಃಖದ ಸಂಗತಿಯೇ ಸರಿ. ಅಧಿಕಾರ, ಅಂತಸ್ತು, ಸ್ಥಾನಮಾನಕ್ಕಾಗಿ ಜಾತಿ, ಭಾಷೆ, ಧರ್ಮಗಳ ಆಧಾರದಲ್ಲಿ ಜನಾಂಗಗಳು ಪರಸ್ಪರ ದ್ವೇಷ-ವೈಷಮ್ಯದ ಬದುಕಿನೊಂದಿಗೆ ಹೋರಾಟದ ಹಾಗೂ ಕಚ್ಚಾಟದ ಬದುಕಿನಲ್ಲಿ ಕ್ರಿಸ್ತ ಜಯಂತಿ ಹಬ್ಬ ಕ್ರಿಸ್ತನ ಜೀವನ, ಬೋಧನೆ ಮತ್ತು ಸಾಧನೆ ಎಲ್ಲವೂ ಜಿಗುಪ್ಪೆ, ಭರವಸೆ ಮತ್ತು ನಂಬಿಕೆಯನ್ನು ಮೂಡಿಸುವಂತಹ ಆಚರಣೆ ಆಗಲಿ.
ಮನುಷ್ಯನ ಅಂತರಾತ್ಮದಲ್ಲಿ ಮಾನವೀಯ ಮತ್ತು – ದೈವೀ ಮೌಲ್ಯಗಳು ಕ್ರಿಸ್ತನ ಜನನದಲ್ಲಿ ಮತ್ತೆ ಮತ್ತೆ ಮೂಡಿಬರಲಿ. ವಿಶ್ವವನ್ನು ಹಾಗೂ ಸಮಸ್ತ ಜನತೆಯನ್ನು ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಪ್ರೀತಿ, ಶಾಂತಿ ನೆಮ್ಮದಿಯೊಂದಿಗೆ ಸಹಾಯ, ಸಹಕಾರ ಸಹಬಾಳ್ವೆಯೊಂದಿಗೆ ಇಡೀ ಮನುಕುಲ ಒಂದು ವಿಶ್ವ ಕುಟುಂಬವಾಗಿ ಜೀವಿಸಲು ಈ ಕ್ರಿಸ್ತ ಜಯಂತಿ ಕ್ರಿಸ್ಮಸ್ ಹಬ್ಬ ಸರ್ವರಿಗೂ ಸ್ಫೂರ್ತಿ ಹಾಗೂ ಪ್ರೇರಣೆಯಾಗಲಿ.