ಮುಕ್ತಾದ ಇತಿಹಾಸದ ಕೊಂಡಿ

ಮುಕ್ತಾದ ಇತಿಹಾಸದ ಕೊಂಡಿ

ಹೊಸಪೇಟೆ (ವಿಜಯನಗರ): ಹಂಪಿ ಉತ್ಸವಕ್ಕೆ ಸಿದ್ಧತೆಗಳು ನಡೆದಿರುವಾಗಲೇ ಫ್ರಾನ್ಸ್‌ನಿಂದ ನಾಲ್ವರು ಮಹಿಳಾ ಪ್ರವಾಸಿಗರು ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಹಂಪಿಗೆ ಬಂದಿದ್ದರು. ವಿರೂಪಾಕ್ಷ ದೇವಸ್ಥಾನ, ಸಾಲು ಮಂಟಪಗಳು, ಎದುರು ಬಸವಣ್ಣ ಮಂಟಪ ನೋಡಿಕೊಂಡು ಅಚ್ಯುತರಾಯ ದೇವಸ್ಥಾನ ನೋಡಿದ ಸ್ವಾಸ್ವಾಸ್ ಮತ್ತು ಸೆಲ್ವಿ ಅವರಿಗೆ ಶೌಚಕ್ಕೆ ಹೋಗಬೇಕಾದ ಸ್ಥಿತಿ ಎದುರಾಯಿತು. ಸುತ್ತಮುತ್ತ ಎಲ್ಲೂ ಶೌಚಾಲಯ ಇಲ್ಲ, ಗೈಡ್ ಮುಖಬಿಳಿಚಿಕೊಂಡಿತು. ಈ ಒಂದು ಕಾರಣಕ್ಕೆ ಭಾರತದ ಮಾನ ಕಳೆಯುವುದು ಅವರಿಗೆ ಬೇಕಿರಲಿಲ್ಲ. ಬನ್ನಿ ಇಲ್ಲೇ ಮುಂದೆ ಇದೆ ಎಂದು ಹೇಳುತ್ತ, ಪಕ್ಕದಲ್ಲಿದ್ದ ಇತರ ಸ್ಮಾರಕಗಳನ್ನು ತೋರಿಸದೆ ಸುಮಾರು ಎರಡು ಕಿಲೋಮೀಟ‌ರ್ ನಡೆಸಿ ವಿಜಯ ವಿಠಲ ದೇವಸ್ಥಾನ ಬಳಿಯ ಶೌಚಾಲಯ ತೋರಿಸಿದರು!ಇದು ನಿತ್ಯ ಹಂಪಿಯಲ್ಲಿ ಪ್ರವಾಸಿಗರು ಎದುರಿಸುತ್ತಿರುವ ಸಮಸ್ಯೆ, ಸುಮಾರು 10 ಚದರ ಕಿಲೋಮೀಟರ್ ಸ್ಥಳದಲ್ಲಿ ಹಂಪಿಯ ಪ್ರಮುಖ ಸ್ಮಾರಕಗಳು ಚಾಚಿಕೊಂಡಿವೆ. ಇವುಗಳನ್ನು ಒಂದು ದಿನದಲ್ಲಿ ನೋಡಿಬಿಡುವುದು ಬಹಳ ಕಷ್ಟ. ಇಷ್ಟು ವಿಶಾಲ ಸ್ಥಳದಲ್ಲಿ ಇರುವ ಶೌಚಾಲಯಗಳು ಸಂಖ್ಯೆ ಐದು ಮಾತ್ರ. ಇನ್ನೂ ಒಂದೆರಡು ಕಡೆ ನಿರ್ವಹಣೆ ಇಲ್ಲದೆ ಮುಚ್ಚಿಕೊಂಡಿವೆ. ಇರುವ ಶೌಚಾಲಯಗಳೂ ಎಲ್ಲಾ ಕಾಲದಲ್ಲಿ ಶುಚಿಯಾಗಿರುವುದಿಲ್ಲ.


ಇಂತಹ ಸ್ಥಿತಿ ಇರುವಾಗಲೇ ಮತ್ತೊಂದು ವರ್ಷದ ಹಂಪಿ ಉತ್ಸವ ಆರಂಭವಾಗಿದೆ. ನಮ್ಮ ಸಂಸ್ಕೃತಿ, ಕಲೆ ತೋರಿಸಲು ಸಿಕ್ಕ ಅತ್ಯುತ್ತಮ ಅವಕಾಶದ ಜತೆ ಜತೆಗೇ ನಮ್ಮ ಹುಳುಕುಗಳೂ ಪ್ರದರ್ಶನಗೊಳ್ಳುತ್ತವೆ..
ವರ್ಷದ ಮೂರು, ನಾಲ್ಕು ತಿಂಗಳು ಪ್ರತಿದಿನ ಸರಾಸರಿ 30ರಿಂದ 40 ಸಾವಿರ ಪ್ರವಾಸಿಗರು ಬರುವ ಹಂಪಿಯಲ್ಲಿ ಒಂದಿಷ್ಟು ಸುಸಜ್ಜಿತ ಶೌಚಾಲಯ, ಸ್ನಾನಗೃಹ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇರಬೇಕಿತ್ತು. ‘ಯುನೆಸ್ಕೋ’ದ ನೆಪ ಹೇಳುತ್ತಲೇ ಪ್ರವಾಸಿಗರಿಗೆ ಮೂಲಸೌಲಭ್ಯ ಒದಗಿಸಲು ನಿರಾಕರಿ-ಸುತ್ತಲೇ ಇರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಹಂಪಿಯ ಸ್ಮಾರಕಗಳರಕ್ಷಣೆಯ ಹೊಣೆ ಇದೆ. ಆದರೆ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಒದಗಿಸುವ ಹೊಣೆ ಬಗ್ಗೆ ಕಣ್ಮುಚ್ಚಿ ಕುಳಿತಿದೆ. ‘ಸ್ವದೇಶ್ ದರ್ಶನ 2.0’ ಬಂದಾಗ ಎಲ್ಲಾ ಸೌಲಭ್ಯಗಳೂ ಬರಲಿವೆ ಎಂದು ಹೇಳುತ್ತಲೇ ವರ್ಷಗಟ್ಟಲೆ ಮೂಲಸೌಲಭ್ಯ ಕೊರತೆಯನ್ನು ಮುಂದೂಡುತ್ತಲೇ ಬರಲಾಗಿದೆ.ಪ್ರವಾಸೋದ್ಯಮ ಇಲಾಖೆ, ಹಂಪಿ ವಿಶ್ವ ಪರಂಪರೆ ತಾಣ ನಿರ್ವಹಣಾ ಪ್ರಾಧಿಕಾರ (ಹವಾಮ), ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ.. ಹೀಗೆ ಹೊಣೆ ದಾಟಿಸುತ್ತಾ ಹೋಗುತ್ತಾರೆ. ಪ್ರವಾಸಿಗರು ಹೈರಾಣರಾಗುತ್ತಾರೆ.


ಮೂಲಸೌಲಭ್ಯದ ಜತೆಗೆ ಸ್ಮಾರಕಗಳ ರಕ್ಷಣೆ ವಿಚಾರದಲ್ಲೂ ಹಂಪಿಯಲ್ಲಿ ಅಮೆ ನಡಿಗೆಯಷ್ಟೇ ಕಾಣಿಸುತ್ತಿದೆ. ಅನುದಾನ ಕೊರತೆಯಿಂದ ಸ್ಮಾರಕಗಳ ರಕ್ಷಣಾ ಕಾರ್ಯಗಳಿಗೆ ವೇಗ ಸಿಗುತ್ತಲೇ ಇಲ್ಲ. ಹಂಪಿಯ ವಿರೂಪಾಕ್ಷ ದೇವಾಲಯದ ರಥಬೀದಿಯ ಸಾಲುಮಂಟಪಗಳ ಪೈಕಿ ಒಂದು ಮಂಟಪ ಕಳೆದ ವರ್ಷ ಮೇ ತಿಂಗಳಲ್ಲಿ ಕುಸಿದಿತ್ತು. ಅದು ಮತ್ತೆ ಯಥಾ-ಸ್ಥಿತಿಯಲ್ಲಿ ಎದ್ದು ನಿಲ್ಲಲು ಎಂಟು ತಿಂಗಳು ಬೇಕಾಗಿತ್ತು.ಎಎಸ್‌ಐ ನಿರ್ವಹಣೆಯ ರಾಜ್ಯದ ಇತರ ಸ್ಮಾರಕಗಳಿಗೂ ಹಂಪಿಯದೇ ಸ್ಥಿತಿ ಒದಗಿರುವುದು ದುರಂತ. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರದ ಚನ್ನಕೇಶವ ದೇವಾಲಯ ಕಳೆದ ವರ್ಷ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಆಯಿತು. ಆದರೆ, ಅದರ ಶಿಲ್ಪಕಲೆಗಳು ಕಿಡಿಗೇಡಿಗಳಿಂದ ವಿರೂಪಗೊಳ್ಳುವುದು ಕೊನೆಯಾಗಲಿಲ್ಲ. ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ಸ್ಮಾರಕಗಳು 2019ರಲ್ಲಿ ಪ್ರವಾಹದಿಂದ ಜಲಾವೃತವಾಗಿದ್ದವು. ಸುತ್ತಮುತ್ತಲಿನ 813 ಮನೆಗಳ ಸ್ಥಳಾಂತರಕ್ಕೆ ಒತ್ತಾಯ ವ್ಯಕ್ತವಾಯಿತು. ಆದರೆ, ಯಾವ ಪ್ರಗತಿಯೂ ಆಗಲಿಲ್ಲ.’ಅನುದಾನ ಇಲ್ಲದೆ ಯಾವಕೆಲಸವೂ ಆಗದು’ ಎಂಬುದಕ್ಕೆ ಇವು ಒಂದಿಷ್ಟು ಸಾಕ್ಷಿಗಳು. ರಾಜ್ಯದ ಪಶ್ಚಿಮಘಟ್ಟ ಪ್ರದೇಶ, ಹೊಸಪೇಟೆ ತಾಲ್ಲೂಕಿನ ಹಂಪಿ, ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲು, ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರದ ಚನ್ನಕೇಶವ ದೇವಾಲಯ, ಬೇಲೂರು ತಾಲ್ಲೂಕಿನ ಚನ್ನಕೇಶವ ದೇವಾಲಯ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿವೆ. ಆದರೆ, ಅವುಗಳ ಮಹತ್ವ ಸಾರುವ ಮತ್ತು ವೈಶಿಷ್ಟ್ಯ. ವನ್ನು ಕಾಪಾಡುವ ಕಾರ್ಯ ನಡೆಯುತ್ತಿಲ್ಲ. ವಿಜಯಪುರದ ಆದಿಲ್‌ಶಾಹಿ ಅರಸು ನಿರ್ಮಿಸಿದ ಗೋಳಗುಮ್ಮಟ ಪ್ರಪಂಚದ ಅದ್ಭುತಗಳಲ್ಲಿ ಒಂದು. “ಪಿಸುಗುಟ್ಟುವ ಗೋಪುರ’ ಎಂದೇ ಪ್ರಸಿದ್ಧಿ. ಈ ಸ್ಮಾರಕದಲ್ಲಿ ಧ್ವನಿ ಏಳು ಬಾರಿ ಪ್ರತಿಧ್ವನಿಸುತ್ತದೆ. ಆದರೆ, ಇದನ್ನು ಯುನೆಸ್ಕೋ ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಈವರೆಗೆ ಕೇಂದ್ರಸರ್ಕಾರಕ್ಕೆ ಪ್ರಸ್ತಾವವನ್ನೇ ಸಲ್ಲಿಸಿಲ’ ಎಂದು ಇತಿಹಾಸ ತಜ್ಞ ಪ್ರೊ.ಕೃಷ್ಣ ಕೊಲ್ಹಾರಕುಲಕರ್ಣಿ ಹೇಳುತ್ತಾರೆ.

ಇದನ್ನೂ ಓದಿ:ರಂಗಮಂಚದ ಮೇಲೆ ಗೆಜ್ಜೆಯದೇ ಸದ್ದು


ಹಂಪಿಯ ವಿರೂಪಾಕ್ಷ ದೇವಾಲಯ ಮುಂಭಾಗದ ಸಾಲು ಮಂಟಪ ವಿಜಯನಗರ ಕಾಲದ ಬಜಾರ್ ಆಗಿತ್ತು. ಸಾಲು ಮಂಟಪಗಳು ವಾಲಿಕೊಂಡಿವೆ, ಅವು ಯಾವುದೇ ಕ್ಷಣದಲ್ಲಿ ಕುಸಿದು ಬೀಳಬಹುದು ಎಂದು ಮೇಲ್ನೋರಿಕೆಗೇ ಕಾಣಿಸುತ್ತಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಮಳೆಯಲ್ಲಿ ಕುಸಿದುದು ಸಹ ಇದೇ ಸಾಲು ಮಂಟಪದ ಒಂದು ಭಾಗ. ಸ್ಮಾರಕಗಳ ಪುನಶ್ಚತನ ಕಾರ್ಯ ವಿಳಂಬವಾಗುತ್ತಿರುವುದಕ್ಕೆ ಕಾರಣ ಏನು ಎಂದು ಕೇಳಿದರೆ, ಎಎಸ್‌ಐ ಅಧಿಕಾರಿಗಳಿಂದ ಸಿಗುವ ಚುಟುಕು ಉತ್ತರ ‘ಕಾಸು ಇಲ್ಲ’.ಕೇವಲ ₹8 ಕೋಟಿ: ‘ಎಎಸ್‌ಐ ಹಂಪಿ ವೃತ್ತದಲ್ಲಿ 94 ಸ್ಮಾರಕಗಳು ಬರುತ್ತವೆ. ಅವುಗಳ ವಾರ್ಷಿಕ ನಿರ್ವಹಣೆಗೆ ಲಭಿಸುವ ಮೊತ್ತ ಕೇವಲ ₹8 ಕೋಟಿ. ಸಾಲು ಮಂಟಪವೊಂದನ್ನೇ ತೆಗೆದುಕೊಂಡರೂ ಅದರ ಪುನಶ್ಚತನಕ್ಕೆ ₹8 ಕೋಟಿ ಬೇಕು, ಸದ್ಯ ಹಂತ ಹಂತವಾಗಿ ಕೆಲಸ ಮಾಡುತ್ತ ₹4 ಕೋಟಿ ವೆಚ್ಚ ಮಾಡಿ ಸಾಲುಮಂಟಪಗಳನ್ನು ಪುನಶ್ವೇತಗೊಳಿಸಲಾಗಿದೆ. ಅಲ್ಲೇ ಒಂದಿಷ್ಟು ಉತ್ಪನನ ಕೆಲಸ ನಡೆದಿದೆ. ಯಾವ ಕೆಲಸ ಅಗತ್ಯವಾಗಿ ಆಗಬೇಕೋ ಅದಕ್ಕೆ ಆದ್ಯತೆ ಕೊಟ್ಟು ಕೆಲಸ ಮಾಡಿಸಲಾಗುತ್ತಿದೆ’ ಎಂದು ಎಎಸ್‌ಐ ಹಂಪಿ ವೃತ್ತದ ಅಧೀಕ್ಷಕ ನಿಹಿಲ್ ದಾಸ್ ಹೇಳುತ್ತಾರೆ. ಹಂಪಿಯಲ್ಲಿ ಸ್ಮಾರಕಗಳ ರಕ್ಷಣಾ ಕಾರ್ಯಗಳಿಗಾಗಿಯೇ ವಾರ್ಷಿಕ ₹6ರಿಂದ ₹8 ಕೋಟಿ ಹಣ ಬೇಕು. ಆದರೆ ಸದ್ಯ ಸಿಗುತ್ತಿರುವುದು ಸುಮಾರು ₹2 ಕೋಟಿ ಮಾತ್ರ.


ಐಹೊಳೆ: ಐಹೊಳೆಯಲ್ಲಿ 70ಕ್ಕೂ ಹೆಚ್ಚು ಸ್ಮಾರಕಗಳಿಗೆ ಹೊಂದಿಕೊಂಡೇ ಮನೆಗಳನ್ನು ನಿರ್ಮಿಸಲಾಗಿದೆ. ಅಲ್ಲಿಯೇ ದನ ಕಟ್ಟುವುದು, ಬಟ್ಟೆ ಒಣ ಹಾಕುವುದು ಸೇರಿ ದೈನಂದಿನ ಚಟುವಟಿಕೆಗಳು ಸಾಮಾನ್ಯವಾಗಿವೆ. ಇದರಿಂದ ಸ್ಮಾರಕಗಳಿಗೆ ಧಕ್ಕೆಯಾಗುತ್ತಿದೆ. ‘ಸ್ಮಾರಕಗಳು ಸಂರಕ್ಷಿತ ಪ್ರದೇಶ’ ಎಂದು ಎಎಸ್‌ಐ ಘೋಷಿಸಿದೆ. ಇಲ್ಲಿ ಮನೆಗಳು ಬಿದ್ದರೂ ದುರಸ್ತಿಗೆ ಅವಕಾಶವಿಲ್ಲ. ಇದರಿಂದ ಬೇಸತ್ತ ಜನರು, ಗ್ರಾಮ ಸ್ಥಳಾಂತರಕ್ಕೆ ಒಪ್ಪಿದ್ದಾರೆ. ಅದರೆ, ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ಪೂರಕ ಕಾರ್ಯಗಳು ನಡೆದಿಲ್ಲ.ಆರಂಭದಲ್ಲಿ 9 ದೇವಾಲಯಗಳ ಸಂಕೀರ್ಣಗಳ ಸುತ್ತಮುತ್ತಲಿನ 144 ಮನೆಗಳ ಸ್ಥಳಾಂತರಕ್ಕೆ ಎಎಸ್‌ಐ ಮುಂದಾಗಿತ್ತು. 2006ರಲ್ಲಿ ಸಲ್ಲಿಸಲಾದ ₹30 ಕೋಟಿ ವೆಚ್ಚದ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಆದರೆ, ‘ಎಲ್ಲರನ್ನೂ, ಎಲ್ಲವನ್ನೂ’ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸ್ಥಳಾಂತರದ ಲಕ್ಷಣಗಳು ಗೋಚರಿಸಿದವು. ₹56 ಕೋಟಿಬೇಕಾಗುತ್ತದೆ ಎಂದು ಅಂದಾಜಿಸಲಾಯಿತು. ನಂತರ ಯಾವುದೂ ನೆರವೇರಲಿಲ್ಲ. ‘ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿದ್ದು, ಗ್ರಾಮ ಸ್ಥಳಾಂತರಕ್ಕೆ ₹362 ಕೋಟಿ ಬೇಕು’ ಎಂಬ ಹೊಸ ಪ್ರಸ್ತಾವ ಸರ್ಕಾರಕ್ಕೆ 2016ರಲಿ ಸಲಿಸಲಾಯಿತು. ಈಗ ಅದರ ಮೊತ್ತ ಮತ್ತೆ ಹೆಚ್ಚಾಗಿದೆ.


ಸದ್ಯಕ್ಕೆ ರಾಜ್ಯ ಸರ್ಕಾರವು ಮೊದಲ ಹಂತದ ರೂಪದಲ್ಲಿ ದೇವಾಲಯಕ್ಕೆ ಹೊಂದಿಕೊಂಡ 114 ಮನೆಗಳ ಸ್ಥಳಾಂತರಕ್ಕೆ ನಿರ್ಧರಿಸಿದೆ. ಭೂಮಿ ಸ್ವಾಧೀನಕ್ಕೆ ₹3.30 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲತಿಳಿಸಿದ್ದಾರೆ. ಆದರೆ ‘ಸಂಪೂರ್ಣ ಗ್ರಾಮ ಸ್ಥಳಾಂತರ ಮಾಡಬೇಕು’ ಎಂದು ಗ್ರಾಮಸ್ಥರು ಮತ್ತೆ ಪಟ್ಟು ಹಿಡಿದಿದ್ದಾರೆ.ಪಟ್ಟದಕಲ್ಲು ಸುತ್ತಮುತ್ತ ಮೂಲಸೌಲಭ್ಯಗಳ ಕೊರತೆ ಇದೆ. ಪಾರ್ಕಿಂಗ್ ಕಟ್ಟಡ ಅರ್ಧಕ್ಕೆ ನಿಂತಿದೆ. ಪ್ರವಾಸಿಗರಿಗೆ ದೊಡ್ಡ ಪ್ರಮಾಣದಲ್ಲಿ ವಸತಿಗೆ ವ್ಯವಸ್ಥೆಯಿಲ್ಲ. ಸೋಮನಾಥಪುರದ ಚನ್ನಕೇಶವ ದೇಗುಲದ ‘ಸಹಜ ಸೌಂದರ್ಯ’ಕ್ಕೆ ಧಕ್ಕೆ ತರುವ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿಲ್ಲ. ಸಮೀಪದಲ್ಲಿದ್ದ ಪ್ರವಾಸೋದ್ಯಮ ಇಲಾಖೆಯ ಹೋಟೆಲ್ ಅನ್ನು ಹಲವು ವರ್ಷಗಳ ಹಿಂದೆಯೇ ಮುಚ್ಚಲಾಗಿದೆ. ಪ್ರವಾಸಿಗರಿಗೆ ಕನಿಷ್ಠ ಸೌಲಭ್ಯ ನೀಡಬಾರದೇ’ ಎಂದು ಪ್ರಶ್ನಿಸುತ್ತಾರೆ ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು.


ಲಕ್ಕುಂಡಿಯ ಕೆಲಪಾರಂಪರಿಕ ದೇವಾಲಯಗಳುಅತಿಕ್ರಮಣವಾಗಿದೆ. ನನ್ನೇಶ್ವರದೇವಾಲಯ, ಕಾಶಿ ವಿಶ್ವನಾಥ ದೇವಾಲಯ, ಜೈನ ಬಸದಿ, ಮುಸ್ಕಿನಬಾವಿ ಸೇರಿ 8 ತಾಣಗಳನ್ನು ಮಾತ್ರ ಎಎಸ್‌ಐ ನಿರ್ವಹಿಸು-ತ್ತಿದೆ. ಸದ್ಯಕ್ಕೆ ಅವುಗಳ ನಿರ್ವಹಣೆಯಲ್ಲಿ ತೊಂದರೆ ಇಲ್ಲ. ಆದರೂ ಶಿಲ್ಪಕಲೆಗಳನ್ನು ವಿರೂಪಗೊಳಿಸುವ ಕಿಡಿಗೇಡಿಗಳ ಕೃತ್ಯ ಮುಂದುವರಿದಿದೆ. ಕುಂಬಾರೇಶ್ವರ ದೇವಾಲಯ ಸೇರಿ ಸಾಕಷ್ಟು ದೇವಸ್ಥಾನಗಳು ಜನವಸತಿ ಪ್ರದೇಶದಲ್ಲಿವೆ. ಅಲ್ಲಿ ಸಾಕಷ್ಟು ಮನೆಗಳಿದ್ದು, ಹಲವು ವರ್ಷಗಳಿಂದ ಜನರು ವಾಸವಿದ್ದಾರೆ.ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಲಕ್ಕುಂಡಿಯನ್ನು ಸೇರ್ಪಡೆ ಮಾಡಬೇಕು ಎಂಬ ಆಶಯದೊಂದಿಗೆ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. 15 ಕೋಟಿ ವೆಚ್ಚದಲ್ಲಿ 15 ದೇವಾಲಯಗಳು ಸೇರಿ ಹಲವು ಬಾವಿಗಳಿಗೆ ಕಾಯಕಲ್ಪ ನೀಡಲಾಗುವುದು. ಅತಿಕ್ರಮಣ ಎಂದು ಗುರುತಿಸಲಾದ ಆಸ್ತಿ ಅವರ ಹೆಸರಿನಲ್ಲಿ ಇದ್ದರೆ ಪರಿಹಾರ ಕೊಟ್ಟು ಸ್ವಾಧೀನಕ್ಕೆ ಪಡೆಯಲಾಗುವುದು. ಅತಿಕ್ರಮಣ ಆಗಿದ್ದರೆ ತೆರವುಗೊಳಿಸಲಾಗುವುದು’ ಎಂದು ಪ್ರಾಧಿಕಾರದ ಆಯುಕ್ತಶರಣು ಗೋಗೇರಿ ತಿಳಿಸಿದ್ದಾರೆ. ಚಿತ್ರದುರ್ಗದ ಕಲ್ಲಿನ ಕೋಟೆ: ಶಾತವಾಹನ ರಿಂದ ಆರಂಭವಾಗಿ ‘ನಾಯಕ’ರವರೆಗಿನ ಪರಂಪರೆಯನ್ನುಸಾದರಪಡಿಸುವ ಚಿತ್ರದುರ್ಗದ ಕಲ್ಲಿನ ಕೋಟೆ ಇಂದಿಗೂ ಅಭೇದ್ಯವಾಗಿದೆ. ಆದರೆ, ಏಳು ಸುತ್ತಿನ ಕೋಟೆಯ ಒಂದೊಂದು ಸುತ್ತು ಹಾಕಿದಾಗಲೂ ನಿರಾಸೆ ಅವರಿಸುತ್ತದೆ. ಏಳುಸುತ್ತುಗಳಲ್ಲಿ 2 ಸುತ್ತು ಒತ್ತುವರಿಯಾಗಿದ್ದು, ಅಲ್ಲಿ ಕಾಂಕ್ರೀಟ್ ಕಟ್ಟಡಗಳಿವೆ.


211 ವರ್ಷಗಳ ಅಳ್ವಿಕೆ ನೀಡಿದ್ದನಾಯಕ ಅರಸರು ಸಾವಿರ ಎಕರೆಯಲ್ಲಿ ಕೋಟೆ ಕಟ್ಟಿಕೊಂಡಿದ್ದರು ಎಂದು ಇತಿಹಾಸ ಹೇಳುತ್ತದೆ. ಈಗಿನ ಕೋಟೆಯ ವ್ಯಾಪ್ತಿ 300 ಎಕರೆಗೆ ಕುಸಿದಿದೆ. ಕೋಟೆಯ ನೆಲದಲ್ಲಿ ಕಟ್ಟಡಗಳು ನಿರ್ಮಾಣವಾಗಿವೆ. ಕೋಟೆ ಸಮೀಪದಲ್ಲೇ ಮನೆ ಕಟ್ಟಿಕೊಳ್ಳಲು ನಗರಸಭೆಯೇ ಅನುಮತಿ ಕೊಟ್ಟಿದೆ!. ಕೇಂದ್ರ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಗಳ ನೀತಿ ಅನ್ವಯ ಈ ಹಿಂದೆ ಜಿಲ್ಲಾಡಳಿತ ಹಲವು ಮನೆಗಳನ್ನು ತೆರವುಗೊಳಿಸಲು ಪ್ರಯತ್ನಿಸಿದೆ. ರಂಗಯ್ಯನಬಾಗಿಲು ದಾಟಿ ಉತ್ಸವಾಂಬಾ ದೇವಾಲಯದ ಮುಂದೆ ನಿಂತು ಕೋಟೆಯತ್ತ ಕಣ್ಣು ಹಾಯಿಸಿದರೆ ತುದಿಯ ಬುರುಜಿನವರೆಗೂ ಮನೆಗಳು ಇವೆ.ಪುರಾತತ್ವ ಇಲಾಖೆಗಳ ನೀತಿಗಳ ಅನುಸಾರ ಕೋಟೆಯ ಸುತ್ತಲೂ 3 ಹಂತದ ನಿರ್ಬಂಧ ವಿಧಿಸಲಾಗಿದೆ. ಮೊದಲ ಹಂತದಲ್ಲಿ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡಗಳು ಇರುವಂತಿಲ್ಲ. ಅದರೆ ಇಲ್ಲಿಯ ಕೋಟೆಗೆ ಹೊಂದಿಕೊಂಡಂತೆ ಹಲವು ಕಟ್ಟಡಗಳಿವೆ. ಕೋಟೆಯ ಪ್ರವೇಶದ್ವಾರದಲ್ಲೇ ಹೋಟೆಲ್‌ಗಳಿವೆ. ಕೋಟೆ ಎದುರೇ ವಿದ್ಯಾಸಂಸ್ಥೆಯೊಂದರ ಶಾಲಾ, ಕಾಲೇಜುಗಳಿವೆ. ಕೆಲ ಮಾಲೀಕರು ತಮ್ಮ ಕಟ್ಟಡ ಉಳಿಸಿಕೊಳ್ಳಲು ಸುಪ್ರೀಂ ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತೆರವಿಗೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿರುವ ಕಾರಣ ತೆರವು ಕಾರ್ಯ ಆಗಿಲ್ಲ. ಎಎಸ್ಐ ಕೂಡಕೋಟೆಯನ್ನುರಕ್ಷಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಚಿತ್ರದುರ್ಗ ಕೋಟೆಯನ್ನು ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿ ಸೇರಿಸಬೇಕು ಎಂಬ ನಮ್ಮ ಕನಸು ಕನಸಾಗಿಯೇ ಉಳಿದಿದೆ’ ಎಂದು ಸಂಶೋಧಕ ಎಂ. ಮೃತ್ಯುಂಜಯಪ್ಪ ಬೇಸರದಿಂದ ಹೇಳುತ್ತಾರೆ.


ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಹಲವು ಸ್ಮಾರಕಗಳು ಪಾಳು ಬಿದ್ದಿವೆ. ಅನುದಾನ ಸಿಗದ ಕಾರಣ ಅವು ಅವಸಾನದ ಸ್ಥಿತಿಯಲ್ಲಿವೆ. ಕಲಬುರಗಿಯ ಐತಿಹಾಸಿಕ ಬಹಮನಿ ಕೋಟೆಯ ಒಳಗಡೆಯೇ ದಶಕಗಳಿಂದ 282 ಕುಟುಂಬಗಳು ವಾಸವಾಗಿವೆ. ಅಕ್ರಮವಾಸಿಗಳನ್ನು ಅಲ್ಲಿಂದ ತೆರವುಗೊಳಿಸು. ವಂತೆ ಸಾಮಾಜಿಕ ಕಾರ್ಯಕರ್ತ ಶರಣ್ ದೇಸಾಯಿ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅಕ್ರಮವಾಸಿಗ ಳನ್ನು ಹೊರಗೆ ಹಾಕುವಂತೆ ನಿರ್ದೇಶನ ನೀಡಿದೆ. ಆದೇಶ ಪಾಲನೆ ಆಗಿಲ್ಲ. ಮಳಖೇಡದ ರಾಷ್ಟ್ರಕೂಟರ ಕೋಟೆಯಲ್ಲೂ ಹಲವು ಕುಟುಂಬಗಳು ದಶಕಗಳಿಂದ ವಾಸ ಇವೆ.ಬೀದರ್‌ನ ಬಹಮನಿ ಕೋಟೆ ವೀಕ್ಷಣೆಗೆ ದೇಶವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಆದರೆ, ಸ್ಮಾರಕಗಳ ಬಗ್ಗೆ ಮಾಹಿತಿ ನೀಡಲು ಗೈಡ್‌ಗಳೇ ಇಲ್ಲ. ಯಾರಾದರೂ ಗಣ್ಯರು ಭೇಟಿ ನೀಡಿದರೆ ಇತಿಹಾಸ ಶಿಕ್ಷಕರನ್ನು ಕರೆತಂದು. ಅವರ ಮೂಲಕ ಸ್ಮಾರಕಗಳ ಪರಿಚಯ ಮಾಡಿಸಿಕೊಡುತ್ತಾರೆ. ‘ನಾವು ಉಳಿಸುವ ಕೆಲಸ ಮಾಡುತ್ತಿದ್ದರೂ ಅದಕ್ಕೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೇ ಅಡ್ಡಿಪಡಿಸಿದ ಉದಾಹರಣೆಗಳೂ ಇವೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕಲಬುರಗಿಯ ಇತಿಹಾಸತಜ್ಞ ಶಂಭುಲಿಂಗ ವಾಣಿ.

ಸಂಸ್ಕೃತಿ ಉಳಿಸಿಕೊಳ್ಳಲು ಕಾಳಜಿ ಇರುವ ಅಧಿಕಾರಿಗಳಿಗೆ ಸ್ಥಳೀಯರ ಸಹಕಾರ, ಅಗತ್ಯವಿ ದ್ದಷ್ಟು ಅನುದಾನ ದೊರೆತರೆ ಮಾತ್ರ ಸ್ಮಾರಕಗಳು ಮುಂದಿನ ತಲೆಮಾರಿಗೆಉಳಿಯಬಹುದು. ಜೊತೆಗೆ ಪ್ರವಾಸಿಗರಿಗೆ ಕನಿಷ್ಠ ಸೌಲಭ್ಯ ಕಲ್ಪಿಸುವ ಕೆಲಸ ಅಗಬೇಕು ಎಂಬುದು ಇತಿಹಾಸಪ್ರಿಯರ ಒತ್ತಾಯ.

Leave a Comment