ಮೈಕ್ರೋ ಫೈನಾನ್ಸ್ ಮತ್ತು ಪರಿಹಾರ ಮಾರ್ಗ

ಈ ಕ್ಷೇತ್ರವನ್ನು ಹೊಸದಾಗಿ ಮರುರೂಪಿಸುವುದು ಬಿಟ್ಟು ಬೇರೆ ಮಾರ್ಗವಿಲ್ಲ

ಮೈಕ್ರೋ ಫೈನಾನ್ಸ್ ಮತ್ತು ಪರಿಹಾರ ಮಾರ್ಗ

ಮೈಕ್ರೋ ಫೈನಾನ್ಸ್ ಕ್ಷೇತ್ರದಲ್ಲಿ ಪ್ರತಿ ಮೂರು ನಾಲ್ಕು ವರ್ಷಗಳಿಗೊಮ್ಮೆ ಯಾವುದಾದರೊಂದು ಬಿಕಟ್ಟನ್ನು ಕಾಣುವುದು ಸಹಜವಾಗಿಬಿಟ್ಟಿದೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿದ್ದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ 50 ಕಾರ್ಯಾಲಯಗಳನ್ನು 2006ರಲ್ಲಿ ಅಲ್ಲಿನ ಸರ್ಕಾರ ಕೆಲಕಾಲ ಮುಚ್ಚಿತ್ತು. ಆಗ ಈ ಸಂಸ್ಥೆಗಳ ಮೇಲೆ ಮುಖ್ಯವಾಗಿ ಮೂರು ಆರೋಪಗಳು ಕೇಳಿ ಬಂದಿದ್ದವು. ಅತಿ ಹೆಚ್ಚು ಬಡ್ಡಿ ದರದ ಮೇಲೆ ಸಾಲ ಕೊಡಲಾಗುತ್ತದೆ, ವಸುಲಾತಿಯ ವಿಧಾನ ಸಮರ್ಪಕವಾಗಿಲ್ಲ ಮತ್ತು ಹಲವು ಸಂಸ್ಥೆಗಳು ಅದೇ ಗ್ರಾಹಕರಿಗೆ ಮತ್ತೆ ಮತ್ತೆ ಹೆಚ್ಚಿನ ಸಾಲ ಕೊಡುತ್ತಿವೆ ಎನ್ನುವುದು ಆಪಾದನೆಗಳು. ಆಗ ಈ ಸಂಸ್ಥೆಗಳು ತಮ್ಮ ಒಕ್ಕೂಟವಾದ ‘ಸಾ-ಧನ್’ ಮೂಲಕ ಸರ್ಕಾರದೊಂದಿಗೆ ಒಂದು ಒಪ್ಪಂದಕ್ಕೆ ಬಂದವು. ಬಡ್ಡಿ ದರವನ್ನು ಕಡಿಮೆ ಮಾಡುವ, ಹೆಚ್ಚಿನ ಸಾಲದ ಪ್ರಲೋಭನೆಗೆ ಗ್ರಾಹಕರನ್ನು ತಳ್ಳದಿರುವ ಸ್ವಾನಿಯಂತ್ರಣಾ ಪದ್ಧತಿಯನ್ನು ಪಾಲಿಸುವುದಾಗಿ ಮಾತು ಕೊಟ್ಟಿದ್ದವು.
2010ರ ವೇಳೆಗೆ ಈ ಎಲ್ಲಾ ಆಶ್ವಾಸನೆಗಳನ್ನು ಗಾಳಿಗೆ ತೂರಿ, ತಮ್ಮ ವ್ಯಾಪಾರ ವೃದ್ಧಿಯನ್ನಷ್ಟೇ ಗುರಿಯಾಗಿ ಇಟ್ಟುಕೊಂಡ ಈ ಸಂಸ್ಥೆಗಳು, ಮತ್ತೆ ಅವೇ ಮೂರು ಆಪಾದನೆಗಳನ್ನು ಹೊತ್ತು ಕಟಕಟೆಯಲ್ಲಿ ನಿಂತವು. ಆಗ, ಅವಿಭಜಿತ ಆಂಧ್ರಪ್ರದೇಶ ಸರ್ಕಾರ ಮತ್ತೆ ಈ ಸಂಸ್ಥೆಗಳನ್ನು ನಿಯಂತ್ರಿಸಲು ಒಂದು ಸುಗ್ರೀವಾಜ್ಞೆಯನ್ನು, ನಂತರ ಕಾನೂನನ್ನು ಜಾರಿ ಮಾಡಿತು. ಅದೇ ಮಾದರಿಯಲ್ಲಿ ಇದೇ 12ರಂದು ಕರ್ನಾಟಕ ಸರ್ಕಾರವೂ ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಈ ಸುಗ್ರೀವಾಜ್ಞೆಯಿಂದ ಬಿಕ್ಕಟ್ಟಿನ ಆಯಾಮ ಬದಲಾಗುತ್ತದೆಯೇ ವಿನಾ ಒಂದು ದೀರ್ಘಕಾಲಿಕ ಪರಿಹಾರ ಒದಗಿಸಿದಂತೆ ಆಗುವುದಿಲ್ಲ.

ಮೈಕ್ರೋ ಬದಲಾಗುತ್ತದೆ ವಿನ ಒಂದು ದೀರ್ಘಕಾಲಿಕ ಪರಿಹಾರ ಒದಗಿಸದಂತೆ ಆಗುವುದಿಲ್ಲ ಮೈಕ್ರೋಫೈನರ್ ಸಂಸ್ಥೆಗಳು ಸಾಲ ಕೊಡುವ ವಿಧಾನದಲ್ಲಿ ಗಮನಿ ಬದಲಾಗುತ್ತದೆ ವಿನ ಒಂದು ದೀರ್ಘಕಾಲಿಕ ಪರಿಹಾರ ಒದಗಿಸದಂತೆ ಆಗುವುದಿಲ್ಲ. ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲ ಕೊಡುವ ವಿಧಾನದಲ್ಲಿ ಗಮನಿಸಲೇಬೇಕಾದ ನಾಲ್ಕಾರು ಅಂಶಗಳಿವೆ. ಈ ಸಂಸ್ಥೆಗಳು ಮಹಿಳೆಯರಿಗೆ ಮಾತ್ರ ಸಾಲ ಕೊಡುತ್ತವೆ. ಮಹಿಳೆಯರ ಗುಂಪುಗಳನ್ನು ರಚಿಸಿ, ಒಬ್ಬರ ಸಾಲಕ್ಕೆ ಇನ್ನೊಬ್ಬರನ್ನು ಭಾಧ್ಯರನ್ನಾಗಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಆಣೆ ಪ್ರಮಾಣ ಮಾಡಿ ಅವರಲ್ಲಿ ಒಂದು ರೀತಿಯ ಅಪರಾಧಿ ಭಾವವನ್ನು ಹುಟ್ಟಿಸುವುದೂ ಒಳಗೊಂಡಿದೆ.

ಇದನ್ನೂ ಓದಿ:ತೀವ್ರ ದ್ವಂದ್ವಯುದ್ಧ- ಸೈನಿಕ ಸಮೂಹ ನಾಶ


ಇಡೀ ವ್ಯವಹಾರವನ್ನು ಬಹಿರಂಗ ಸ್ಥಳದಲ್ಲಿ ನಡೆಸಲಾಗುತ್ತದೆ. ಸಾಲ ಮರುಪಾವತಿಸುವುದು ಅತ್ಯಂತ ಪ್ರಮುಖವಾದ ನಿಯಮ, ಅದನ್ನು ಯಾವುದೇ ಪರಿಸ್ಥಿತಿಯಲ್ಲೂ ಉಲ್ಲಂಘಿಸಬಾರದು ಎನ್ನುವ ಸಂದೇಶವನ್ನು ಮತ್ತೆ ಮತ್ತೆ ಕೊಡಲಾಗುತ್ತದೆ. ಸಾಲ ಪಡೆದುಕೊಳ್ಳುವವರೆಗೆ ಕಂತುಗಳನ್ನು ಮರುಪಾವತಿಸುವ ಶಕ್ತಿ ಇದೆಯೇ ಎಂದು ಈ ಸಂಸ್ಥೆಗಳು ಪರಾಮರ್ಶಿಸುವುದಿಲ್ಲ. ಗ್ರಾಹಕರೇ ತಮ್ಮ ಪರಿಸ್ಥಿತಿಗೆ ಅನುಸಾರವಾಗಿ ಪರಾಮರ್ಶಿಸಿಕೊಂಡು ಸಾಲ ತೆಗೆದುಕೊಳ್ಳಬೇಕು. ಈ ಸಂಸ್ಥೆಗಳ ವಾರ್ಷಿಕ ಬಡ್ಡಿ ದರ ಶೇ 22 ರಿಂದ ಶೇಕಡ 28ರ ವರೆಗೆ ಇರುತ್ತದೆ. ಈ ಬಡ್ಡಿ ದರದಲ್ಲಿ ಸಣ್ಣ ಮಟ್ಟದ ಸಾಲ ತೆಗೆದುಕೊಂಡರೆ ಮರುಪಾವತಿ ಕಷ್ಟವಾಗದು. ಆದರೆ ಇದೇ ಬಡ್ಡಿ ದರ ದೊಡ್ಡ ಮಟ್ಟದ ಸಾಲಕ್ಕೆ ಮತ್ತು ದೀರ್ಘಕಾಲದ ಸಾಲಕ್ಕೆ ಹೊರಲಾರದ ಭಾರವಾಗುತ್ತದೆ. ಮೈಕ್ರೋ ಫೈನಾನ್ಸಿನ ಬಿಕ್ಕಟ್ಟು ಇರುವುದು ಬಡ್ಡಿ ದರವನ್ನು ಅದೇ ಮಟ್ಟದಲ್ಲಿಟ್ಟು ಗ್ರಹಕರಿಗೆ ಹೆಚ್ಚು ಹೆಚ್ಚು ಸಾಲ ಕೊಡುವುದರಲ್ಲಿ. ಒಂದು ಸಂಸ್ಥೆ ತಕ್ಕ ಮಟ್ಟಿನ ಸಾಲ ಕೊಟ್ಟು, ಇದಕ್ಕಿಂತ ಹೆಚ್ಚಿನ ಅಪಾಯಕ್ಕೆ ಒಡ್ಡಿಕೊಳ್ಳಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿದ್ದಾರೆ, ಮತ್ತೊಂದು ಸಂಸ್ಥೆ ಅದೇ ಗ್ರಾಹಕರನ್ನು ಹೊಸ ಗ್ರಾಹಕರಾಗಿ ಕಂಡು ಅಧಿಕ ಸಾಲ ಕೊಡುವ ಪರಿಪಾಠವಿದೆ.


2010ರಲ್ಲಿ ರಿಸರ್ವ್ ಬ್ಯಾಂಕು ತನ್ನ ಕೇಂದ್ರೀಯ ಆಡಳಿತ ಮಂಡಳಿಯ ವರಿಷ್ಠ ಸದಸ್ಯರಾಗಿದ್ದ ಮಾಲೇಗಾಮ್ ಅವರ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯ ವರದಿಯನ್ನು ಅನುಸರಿಸಿ, ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೆ ಅನ್ವಯಿಸುವ ಕಾರ್ಯವಿಧಾನ ಮತ್ತು ವಿಶೇಷ ನಿಯಮಾವಳಿಯನ್ನು ಜಾರಿ ಮಾಡಿತು. ಈ ವರದಿಯ ಮೂಲ ಚೌಕಟ್ಟಿನಲ್ಲೇ ಸಮಯ, ಸಂದರ್ಭಾನುಸಾರವಾಗಿ ಕೈಗೊಂಡ ಸುಧಾರಣೆ ಹಾಗೂ ಬದಲಾವಣೆಗಳೊಂದಿಗೆ ರಿಸರ್ವ್ ಬ್ಯಾಂಕಿನ ನೀತಿ ನಿಯಮಗಳು ಇಂದಿಗೂ ಜಾರಿಯಲ್ಲಿವೆ.


ಈ ನಿಯಮಾನುಸಾರ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮೊದಲಿಗೆ ತಮ್ಮನ್ನು ನೋಂದಾಯಿಸಿಕೊಳ್ಳಬೇಕು. ಅನಂತರ ಅವು ಪಾಲಿಸಬೇಕಾದ ಕಾರ್ಯವಿಧಾನದ ಪ್ರಕಾರ ,ಸಂಸ್ಥೆಗಳು ಎಲ್ಲ ಗ್ರಾಹಕರ ಸಾಲದ ವಿವರಗಳನ್ನು, ಇರುವ ನಾಲ್ಕು ಕ್ರೆಡಿಟ್ ಬ್ಯೂರೊಗಳ ಮಾಹಿತಿ ಕೋಶದಲ್ಲಿ ಕಡ್ಡಾಯವಾಗಿ ಸೇರಿಸಬೇಕು. ಇದರಿಂದ ಗ್ರಾಹಕರು ಎಲ್ಲಾ ಮೂಲಗಳಿಂದ ಪಡೆದಿರುವ ಒಟ್ಟಾರೆ ಸಾಲದ ವಿವರಗಳು ಸಿಗುತ್ತವೆ. 2011ರಲ್ಲಿ ಮೊದಲಿಗೆ ನಿಯಮಾವಳಿಗಳು ಜಾರಿಯಾದಾಗ ಗ್ರಾಮೀಣ ಪ್ರದೇಶಗಳಲ್ಲಿ ಆದಾಯದ ಗರಿಷ್ಠ ಮಿತಿ ಬರೀ ರೂ 60,000 ಇತ್ತು. ಈಗ ಅದನ್ನು ರೂ ಮೂರು ಲಕ್ಷಕ್ಕೆ ಏರಿಸಲಾಗಿದೆ .ಒಟ್ಟಾರೆ ಸಾಲದ ಗರಿಷ್ಠ ಮಿತಿ ರೂ 50,000 ಇತ್ತು .ಇದನ್ನೂ ರೂ ಮೂರು ಲಕ್ಷಕ್ಕೆ ಏರಿಸಲಾಗಿದೆ. ಈ ಎರಡೂ ಗರಿಷ್ಠ ಮಿತಿಗಳನ್ನು ಐದಾರು ಪಟ್ಟು ಹೆಚ್ಚಿಸಿರುವುದು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಬಡ ಗ್ರಾಹಕರಿಗೆ ಅಧಿಕ ಸಾಲ ಕೊಡಲು ಪ್ರೋತ್ಸಾಹಿಸುತ್ತಿರುವಂತೆಯೇ ಕಾಣುತ್ತದೆ. ಈ ಸಾಲದ ಮಿತಿಯ ಮೇಲೆ ಹೆಚ್ಚಿನ ಕಡಿವಾಣ ಇರಬೇಕು. ಸಾಲದ ಗರಿಷ್ಠ ಮಿತಿಯನ್ನು ಆರು ಪಟ್ಟು ಹೆಚ್ಚಿಸುವಾಗ ಗ್ರಾಮೀಣ ಪ್ರದೇಶಗಳಲ್ಲಿ ಈ 14 ವರ್ಷಗಳಲ್ಲಿ ಆರ್ಥಿಕ ವೃದ್ಧಿ ಅಷ್ಟರಮಟ್ಟಿಗೆ ಆಗಿದೆಯೇ ಎನ್ನುವ ಪ್ರಶ್ನೆಯನ್ನು ಯಾರೂ ಕೇಳಿದಂತಿಲ್ಲ.


ಇನ್ನು, ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕೆಂದು ರಿಸರ್ವ್ ಬ್ಯಾಂಕು ತನ್ನ ನಿಯಂತ್ರಣದಲ್ಲಿರುವ ಸಂಸ್ಥೆಗಳಿಗೆ ಮಾತ್ರ ನಿಯಮ ಜಾರಿ ಮಾಡಬಹುದು. ಆದರೆ ರಿಸರ್ವ್ ಬ್ಯಾಂಕಿನ ನಿಯಂತ್ರಣಕ್ಕೆ ಒಳಪಡದ ಅನೇಕರು (ಸರ್ಕಾರಿ ಸಂಘಗಳು ,ಸೊಸೈಟಿಗಳು, ಟ್ರಸ್ಟ್, ಸ್ವಸಹಾಯ ಗುಂಪುಗಳು, ಚಿಟ್ ಕಂಪನಿಗಳು, ಅನಿಯಂತ್ರಿತ ಬಡ್ಡಿ ವ್ಯಾಪಾರಿಗಳು) ಮಾರುಕಟ್ಟೆಯಲ್ಲಿ ಇದ್ದಾರೆ . ಮೈಕ್ರೋಫೈನಾನ್ಸ್ ಗ್ರಾಹಕರು ಬೇರೆ ಮೂಲಗಳಿಂದ ಎಷ್ಟು ಸಾಲವನ್ನು ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಇಲ್ಲವಾಗಿದೆ.
ಸದ್ಯ ಕರ್ನಾಟಕ ಸರ್ಕಾರ ಜಾರಿ ಮಾಡಿರುವ ಸುಗ್ರೀವಾಜ್ಞೆಯ ಉದ್ದೇಶ ಒಳ್ಳೆಯದೇ ಆಗಿದ್ದರೂ ಅದರಿಂದ ಹೆಚ್ಚಿನ ಪ್ರಯೋಜನವಾಗುವಂತೆ ಕಾಣುತ್ತಿಲ್ಲ. ಅದರಲ್ಲಿ ರಿಸರ್ವ್ ಬ್ಯಾಂಕಿನ ಸುಪರ್ದಿಯಲ್ಲಿರುವ ಸಂಸ್ಥೆಗಳನ್ನು ಹೊರಗಿಡಲಾಗಿದೆ. ಮಿಕ್ಕ ಸಂಸ್ಥೆಗಳಿಂದ ಮಾಹಿತಿಯನ್ನು ಸಂಗ್ರಹಿಸುವುದು ಈ ಚೌಕಟ್ಟಿಗೆ ಒಳಪಟ್ಟಿದೆಯಾದರೂ ಅದನ್ನು ಸಮರ್ಪಕವಾಗಿ ಜಾರಿಗೆ ತರುವ ಮತ್ತು ಅದನ್ನು ಆಧಾರವಾಗಿ ಇಟ್ಟುಕೊಂಡು ಒಂದು ನಿಯಂತ್ರಣಾ ಚೌಕಟ್ಟನ್ನು ರೂಪಿಸಿರುವ ದೂರದೃಷ್ಟಿ ಕಾಣುತ್ತಿಲ್ಲ. ಇದರಿಂದ ಪ್ರಾಮಾಣಿಕವಾಗಿ ವ್ಯವಹರಿಸುತ್ತಿರುವ ಸಂಸ್ಥೆಗಳಿಗೆ ತೊಂದರೆಯಾಗುತ್ತದೆ. ಪರವಾನಗಿ ಪಡೆಯದೆ ನೀಡಿದ ಸಾಲವು ವಸೂಲಿಗೆ ಅರ್ಹವಲ್ಲ ಎಂದು ಹೇಳಲಾಗಿದ್ದರು ಇದಕ್ಕೆ ಒಂದು ಶಾಶ್ವತವಾದ ಏರ್ಪಾಟನ್ನು ಮಾಡಬೇಕಾಗಿದೆ. ಈ ದಿಸೆಯಲ್ಲಿ ಸರ್ಕಾರ ಏನು ಮಾಡಬಹುದು?
ಇದಕ್ಕೆ ಒಂದು ದೀರ್ಘಕಾಲಿಕ ಪರಿಹಾರವನ್ನು ಒದಗಿಸಲು ಸರ್ಕಾರ ಭಿನ್ನ ರೀತಿಯಲ್ಲಿ ಆಲೋಚಿಸಬೇಕು.

ಸುಗ್ರೀವಾಜ್ಞೆಯಲ್ಲಿ ಮಂಡಿಸಿರುವ ಉದ್ದೇಶಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ರಾಜ್ಯಮಟ್ಟದ ಹಣಕಾಸು ಕ್ಷೇತ್ರ ನಿಯಂತ್ರಣಾ ಪ್ರಾಧಿಕಾರವನ್ನು ರಚಿಸಬೇಕು. ಕೇರಳ ಸರ್ಕಾರವು ಪತ್ತಿನ ವ್ಯವಸ್ಥೆಯಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕುಗಳನ್ನು ರಾಜ್ಯದ ಅಪೆಕ್ಸ್ ಬ್ಯಾಂಕಿನೊಂದಿಗೆ ವಿಲೀನಗೊಳಿಸಲು ಸಮಿತಿಯೊಂದನ್ನು ರಚಿಸಿತ್ತು. ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ವೈ.ವಿ .ರೆಡ್ಡಿ ಅವರ ಸಲಹೆಯ ಮೇರೆಗೆ ಈ ಸಮಿತಿಯು ಇಂತಹ ಸೂಚನೆಯನ್ನು ಕೇರಳ ಸರ್ಕಾರಕ್ಕೆ ನೀಡಿತ್ತು. ಅದು ಜಾರಿಯಾಗಲಿಲ್ಲ. ಆದರೆ ಕರ್ನಾಟಕ ಸರ್ಕಾರ ಈ ಸಲಹೆಯನ್ನು ಕಾರ್ಯ ರೂಪಕ್ಕೆ ತರಬಹುದು. ಇದರಿಂದ ರಿಸರ್ವ್ ಬ್ಯಾಂಕಿನ ವ್ಯಾಪ್ತಿಗೆ ಬರದ ಎಲ್ಲಾ ಸಂಸ್ಥೆಗಳು ಈ ಪ್ರಾಧಿಕಾರದ ಅಡಿಯಲ್ಲಿ ಬರುತ್ತವೆ. ಅವು ನಿಯಮಿತವಾಗಿ ತಮ್ಮ ಮಾಹಿತಿಯನ್ನು ಕ್ರೆಡಿಟ್ ಬ್ಯೂರೋಗಳೊಂದಿಗೆ ಹಂಚಿಕೊಳ್ಳಬೇಕೆಂಬ ನಿಯಮವನ್ನು ಜಾರಿ ಮಾಡಿದರೆ, ಅಪೂರ್ಣ ಮಾಹಿತಿಯಿಂದ ಆಗುತ್ತಿರುವ ತೊಡಕುಗಳ ನಿವಾರಣೆಯತ್ತ ಒಂದು ಹೆಜ್ಜೆ ಇಟ್ಟಂತೆ ಆಗುತ್ತದೆ. ಸಂಸ್ಥೆಗಳ ವಾರ್ಷಿಕ ವಹಿವಾಟಿನ ಮಾಹಿತಿಯನ್ನು ಒಂದೆಡೆ ದಾಖಲಿಸಲು ಮತ್ತು ಸಂಸ್ಥೆಗಳನ್ನು ನಿಯಂತ್ರಿಸಲು ಒಂದು ಚೌಕಟ್ಟು ಸಿಕ್ಕಂತೆ ಆಗುತ್ತದೆ. ರಾಜ್ಯದ ಕಾನೂನಿನ ಅಡಿಯಲ್ಲಿ ಬರುವ ಸಹಕಾರ ವ್ಯವಸ್ಥೆ, ಸ್ವಸಹಾಯ ಗುಂಪುಗಳು, ಸೊಸೈಟಿಗಳು, ಇತರ ಎಲ್ಲಾ ಆರ್ಥಿಕ ಕ್ಷೇತ್ರದ ಸಂಸ್ಥೆಗಳು ಈ ಕಾನೂನು ಮತ್ತು ಪ್ರಾಧಿಕಾರದ ಅಡಿಯಲ್ಲಿ ಬರಬೇಕು. ಆಗ ಸದಸ್ಯ ಸುಗ್ರೀವಾಜ್ಞೆಯಲ್ಲಿರುವ ಉದ್ದೇಶವನ್ನು ಸಾಧಿಸಲು ಒಂದು ಸುಸ್ಥಿರ ಏರ್ಪಾಟನ್ನು ಸರ್ಕಾರ ಮಾಡಿದೆ ಎಂದು ನಂಬಬಹುದು.
ಈಗಿನ ತೇಪೆಯಿಂದ ಮೈಕ್ರೋ ಫೈನಾನ್ಸ್ ಕ್ಷೇತ್ರದಲ್ಲಿ ಸುಸ್ತಿ ಹೆಚ್ಚಾಗುತ್ತದೆಯೇ ವಿನಾ ಯಾವ ಮೂಲಭೂತ ಬದಲಾವಣೆಗಳೂ ಆಗುವುದಿಲ್ಲ. ಮೈಕ್ರೋ ಫೈನಾನ್ಸ್ ನ ಮಾದರಿ ಬಿರುಕು ಬಿಟ್ಟು ಛಿದ್ರವಾಗುತ್ತಿದೆ. ಈ ಕ್ಷೇತ್ರವನ್ನು ಹೊಸದಾಗಿ ಮರುರೂಪಿಸದೇ ಅನ್ಯ ಮಾರ್ಗವಿಲ್ಲ.

Leave a Comment