ಮೋದಿ ಸರಕಾರ ಮೂಗು ತೂರಿಸಿಲ್ಲ: ಚಂದ್ರಚೂಡ್
ಹೊಸದಿಲ್ಲಿ: “ಬಾಹ್ಯ ಒತ್ತಡಗಳ ಹೊರತಾಗಿಯೂ ಕಾನೂನಿನ ನಿಯಮಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಸುಪ್ರೀಂ ಕೋರ್ಟ್ ಮಾಡುತ್ತಿದೆ. ಪ್ರಜಾಪ್ರಭುತ್ವದ ಮೂಲಭೂತ ತತ್ವಕ್ಕೆ ಅನುಗುಣವಾಗಿ ನ್ಯಾಯಾಂಗ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ.” ಎಂದು ನಿವೃತ್ತ ಸಿಜೆಐ ಡಿ.ವೈ.ಚಂದ್ರಚೂಡ್ ಪ್ರತಿಪಾದನೆ ಮಾಡಿದ್ದಾರೆ. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಅವರು, ”ಯಾವುದೇ ಒತ್ತಡ ಬಂದರೂ ಕಾನೂನಿನ ಗೌರವ ಎತ್ತಿ ಹಿಡಿಯುವ ಕೆಲಸವನ್ನು ನ್ಯಾಯಾಂಗ ಮಾಡಿಕೊಂಡು ಬಂದಿದೆ. ಪ್ರತಿಯೊಬ್ಬ ನಾಗರಿಕರ ಹಕ್ಕು ಗಳನ್ನು ರಕ್ಷಣೆ ಮಾಡಿದೆ. ಪ್ರಜಾಪ್ರಭುತ್ತದ ಆಡಳಿತ ಆಧಾರ ಸ್ತಂಭವಾಗಿ ನಿಂತಿದೆ.” ಎಂದು ವಿವರಿಸಿದರು.
”ನರೇಂದ್ರ ಮೋದಿ ದೇಶದ ಪ್ರಧಾನಿಯಾದ ಬಳಿಕ ನ್ಯಾಯಾಂಗ ವ್ಯವಸ್ಥೆ ಮೇಲೆ ಪ್ರಬಲ ಒತ್ತಡವಿದೆ. ರಾಜಕೀಯ ಹಸ್ತಕ್ಷೇಪ ಸ್ವಲ್ಪ ಹೆಚ್ಚಿದೆ,” ಎಂಬ ಸಂದರ್ಶಕ ಸ್ಟೀಫನ್ ಸಕರ್ ಪ್ರಶ್ನೆಗೆ ಉತ್ತರ ನೀಡಿದ ಚಂದ್ರಚೂಡ್, “ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ಗಳು ಜನರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಾಪಾಡಿವೆ. ಹೀಗಾಗಿಯೇ ನ್ಯಾಯಾಂಗ ವ್ಯವಸ್ಥೆ ಮೇಲೆ ಜನ ಇನ್ನೂ ನಂಬಿಕೆ ಹೊಂದಿದ್ದಾರೆ,” ಎಂದು ತಿಳಿಸಿದರು.
ರಾಮ ಮಂದಿರ ತೀರ್ಪು. ಸಂವಿಧಾನದ ಕಲಂ 370, ಪೌರತ್ವ ತಿದ್ದುಪಡಿ ಹಕ್ಕು ಕುರಿತ ತೀರ್ಪು, ಗಣೇಶ ಚತುರ್ಥಿಯಂದು ತಮ್ಮ ನಿವಾಸಕ್ಕೆ ಮೋದಿ ಭೇಟಿ ಮೊದಲಾದ ಸಂಗತಿಗಳ ಕುರಿತು ಪ್ರಶ್ನೆಗಳು ಎದುರಾದವು. ಎಲ್ಲವಕ್ಕೂ ಸಹನೆಯಿಂದಲೇ ಉತ್ತರಿಸಿದ ಚಂದ್ರಚೂಡ್, “ಒತ್ತಡ, ಸವಾಲುಗಳ ಮಧ್ಯೆ ನ್ಯಾಯಾಂಗ ವೃತ್ತಿಪರ ಬದ್ಧತೆ ಯಿಂದ ಕೆಲಸ ಮಾಡುತ್ತಿದೆ. ಆ ಮೂಲಕ ಕಾನೂನಿನ ಸಾರ್ವಭೌಮತೆ ಎತ್ತಿ ಹಿಡಿದಿದೆ. ಜನರ ಮೂಲಭೂತ ಹಕ್ಕು ಗಳಿಗೆ ಕಾವಲಾಗಿದೆ,” ಎಂದು ಹೇಳಿದರು.
ಇದನ್ನೂ ಓದಿ:ಕೌಶಲ ವೃದ್ಧಿಗೆ ಜಂಟಿ ಸಮಿತಿ
ಪ್ರಧಾನಿ ಭೇಟಿ ಆಕಸ್ಮಿಕ, ತೀರ್ಪು ಚಾರಿತ್ರಿಕ ”ನನ್ನ ನಿವಾಸಕ್ಕೆ ಪ್ರಧಾನಿ ಮೋದಿ ಭೇಟಿ ಆಕಸ್ಮಿಕ, ರಾಮ ಮಂದಿರ ತೀರ್ಪು ಚಾರಿತ್ರಿಕ,” ಎಂದು ವಿವರಣೆ ನೀಡಿರುವ ಚಂದ್ರಚೂಡ್, ”ಸಂವಿಧಾನಕ್ಕೆ ನಾಸ್ತಿಕ, ಆಸ್ತಿಕ ಎಂಬ ಭೇದಭಾವ ಇರುವುದಿಲ್ಲ. ನೆಲದ ಕಾನೂನು ಹಾಗೂ ಸಾಕ್ಷ್ಯಾಧಾರಗಳ ಮೇಲೆ ಮಂದಿರ ತೀರ್ಪು ನೀಡಲಾಗಿದೆ. ‘ದೇವರೇ ನನಗೆ ಪರಿಹಾರ ನೀಡಿದರು’ ಎಂಬ ನನ್ನ ಹೇಳಿಕೆ ಯನ್ನು ತಪ್ಪಾಗಿ ಅಥೈಸಲಾಗಿದೆ. ನನ್ನ ನಂಬಿಕೆ ನನ್ನದು. ಆದರೆ, ನ್ಯಾಯದ ಅಂಗಳದಲ್ಲಿ ಎಲ್ಲರೂ ಸಮಾನರು,” ಎಂದು ತಿಳಿಸಿದರು.
ಮೋದಿ ಸರಕಾರದ ಒತ್ತಡದಲ್ಲಿ ನ್ಯಾಯಾಂಗ ಕೆಲಸ ಮಾಡುತ್ತಿದೆ ಎಂಬ ಆಪಾದನೆ ತಳ್ಳಿ ಹಾಕಿದ ಚಂದ್ರಚೂಡ್, “ನ್ಯಾಯಾಂಗ ಯಾವುದೇ ರಾಜಕೀಯ ಒತ್ತಡಗಳಿಗೆ ಒಳಗಾಗಿಲ್ಲ. ಸರಕಾರದ ಒತ್ತಡಕ್ಕೆ ತಲೆಬಾಗಿ ಕೆಲಸವನ್ನೂ ಮಾಡಿಲ್ಲ. ಕಾನೂನಿನ ನಿಯಮಾನುಸಾರ ಕಾರ್ಯ ನಿರ್ವಹಿಸಿದೆ. ಒಂದು ವರ್ಷದಲ್ಲಿ 21,300 ರಾಜಕೀಯ ನಾಯಕರ ಜಾಮೀನು ಅರ್ಜಿ ಇತ್ಯರ್ಥ ಪಡಿಸಿದೆ. ಇದು ಕಾನೂನು ಸರಿಯಾದ ಹಾದಿಯಲ್ಲಿ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ,” ಎಂದು ತಿಳಿಸಿದರು.
ಅಸಮಾನತೆ ಇಲ್ಲವೇ ಇಲ್ಲ: ”ನ್ಯಾಯಾಂಗ ನೇಮಕಾತಿಯಲ್ಲಿ ಲಿಂಗ ಅಸಮಾನತೆ ತೊಡೆದು ಹಾಕಲು ಕ್ರಮ ವಹಿಸಲಾಗಿದೆ. ಶೇ.50ರಷ್ಟು ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಕೆಲವು ರಾಜ್ಯಗಳಲ್ಲಿ ಪ್ರಮಾಣ ಶೇ.60 ರಿಂದ ಶೇ.70 ರಷ್ಟಿದೆ,” ಎಂದು ತಿಳಿಸಿದರು. ಕೆಲವು ನ್ಯಾಯಮೂರ್ತಿಗಳು ವಂಶಪಾರಂಪರ್ಯವಾಗಿ ನ್ಯಾಯಾಂಗದಲ್ಲಿ ಉನ್ನತ ಅವಕಾಶ ಪಡೆದಿದ್ದಾರೆ ಎಂಬ ಪ್ರಶ್ನೆಗೆ ಖಡಕ್ ಉತ್ತಡ ನೀಡಿದ ಚಂದ್ರಚೂಡ್, ‘ನನ್ನ ತಂದೆ ವೈ.ವಿ.ಚಂದ್ರಚೂಡ್ (1977ರಲ್ಲಿ ಸಿಜೆಐ) ನಾನು ನ್ಯಾಯಾಂಗ ವ್ಯವಸ್ಥೆಯೊಳಗೆ ಇರುವ ತನಕ ಕೋರ್ಟ್ ಅಂಗಳ ಪ್ರವೇಶಿಸಬೇಡವೆಂದು ತಾಕೀತು ಮಾಡಿದ್ದರು. ನಾನೂ ಅದರಂತೆಯೇ ನಡೆದುಕೊಂಡೆ. ಹಾರ್ವಡ್ ವಿವಿಯಲ್ಲಿ ಕಾನೂನು ಅಧ್ಯಯನ ಕೈಗೊಂಡೆ. ಅಪ್ಪ ನಿವೃತ್ತಿಯಾದ ಬಳಿಕವೇ ಕೋರ್ಟ್ ಪ್ರವೇಶಿಸಿದ್ದೆ” ಎಂದು ತಿಳಿಸಿದರು.