ಯು ಜಿ ಸಿ ಕರಡು ನಿಯಮಗಳಿಗೆ ವಿರೋಧ ರಾಜ್ಯಗಳ ಅಧಿಕಾರ ಮೊಟಕು ಸಲ್ಲದು

ಯು ಜಿ ಸಿ ಕರಡು ನಿಯಮಗಳಿಗೆ ವಿರೋಧ ರಾಜ್ಯಗಳ ಅಧಿಕಾರ ಮೊಟಕು ಸಲ್ಲದು

ವಿಶ್ವವಿದ್ಯಾಲಯಗಳ ಅನುದಾನ ಆಯೋಗವು (ಯುಜಿಸಿ) ಸಾರ್ವಜನಿಕರಿಂದ ಸಲಹೆ, ಸೂಚನೆ ಕೋರಿ ಈಚೆಗೆ ಪ್ರಕಟಿಸಿರುವ ಕರಡು ನಿಯಮಗಳ ಕುರಿತು ಭಾರಿ ಟೀಕೆ ವ್ಯಕ್ತವಾಗಿದೆ. ಈ ನಿಯಮಗಳು ವಿಶ್ವವಿದ್ಯಾಲಯಗಳ ಸ್ವಾಯತ್ತೆಗೆ, ರಾಜ್ಯಗಳ ಅಧಿಕಾರಕ್ಕೆ ಮತ್ತು ಒಕ್ಕೂಟ ವ್ಯವಸ್ಥೆಯ ತತ್ವಕ್ಕೆ ಅಪಾಯ ತಂದೊಡ್ಡುತ್ತವೆ ಎಂಬ ಆತಂಕವನ್ನು ವ್ಯಕ್ತಪಡಿಸಲಾಗಿದೆ. ಬಿಜೆಪಿಯನ್ನು ರಾಜಕೀಯವಾಗಿ ವಿರೋಧಿಸುವ ಪಕ್ಷಗಳ ಆಡಳಿತ ಇರುವ ಆರು ರಾಜ್ಯಗಳು ಒಂದಾಗಿ ನಿಯಮಗಳನ್ನು ವಿರೋಧಿಸಿವೆ. ನಿಯಮಗಳನ್ನು ಹಿಂಪಡೆಯಬೇಕು ಎಂದು ಅವು ಕೋರಿವೆ. ಕರ್ನಾಟಕ, ಹಿಮಾಚಲ ಪ್ರದೇಶ, ಜಾರ್ಖಂಡ್, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಉನ್ನತ ಶಿಕ್ಷಣ ಸಚಿವರು ಈಚೆಗೆ ಬೆಂಗಳೂರಿನಲ್ಲಿ ಸಭೆ ಸೇರಿ, ನಿಯಮಗಳಿಗೆ ತಮ್ಮ ವಿರೋಧವನ್ನು ವಿವರಿಸುವ 15 ಅಂಶಗಳ ನಿರ್ಣಯವನ್ನು ಅಂಗೀಕರಿಸಿದ್ದಾರೆ.

ಹಲವು ಸಂಗತಿಗಳ ಬಗ್ಗೆ ಅವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕಕ್ಕೆ, ಬೋಧಕ ಸಿಬ್ಬಂದಿ ನೇಮಕಕ್ಕೆ ಅನುಸರಿಸುವ ವಿಧಾನ, ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವುದು, ಪರೀಕ್ಷೆ ನಡೆಸುವುದು ಹಾಗೂ ಪದವಿ ನೀಡುವುದಕ್ಕೆ ಸಂಬಂಧಿಸಿದ ಕರಡು ನಿಯಮಗಳಿಗೆ ವಿರೋಧ ದಾಖಲಾಗಿದೆ. ಈ ಸಭೆಯಲ್ಲಿ ಪಾಲ್ಗೊಳ್ಳದೆ ಇದ್ದ ಇತರ ಕೆಲವು ರಾಜ್ಯಗಳು ಕೂಡ ನಿಯಮಗಳನ್ನು ವಿರೋಧಿಸಿವೆ. ಪಶ್ಚಿಮ ಬಂಗಾಳ ಸರ್ಕಾರ ನೇಮಕ ಮಾಡಿದ ಸಮಿತಿಯೊಂದು ಈ ನಿಯಮಗಳನ್ನು ವಿರೋಧಿಸಿದೆ. ‘ಇಂಡಿಯಾ’ ಮೈತ್ರಿಕೂಟದ ರಾಜಕೀಯ ಪಕ್ಷಗಳು ಮಾತ್ರವಲ್ಲದೆ, ಬಿಜು ಜನತಾದಳ ಕೂಡ ನಿಯಮವನ್ನು ವಿರೋಧಿಸಿದೆ. ಎನ್ ಡಿಎ ಮೈತ್ರಿಕೂಟದ ಕೆಲವು ಪಕ್ಷಗಳಿಗೆ ಈ ನಿಯಮಗಳು ಸಮಾಧಾನ ತಂದಿಲ್ಲ . ಅಂದರೆ ಕರಡು ನಿಯಮಗಳಿಗೆ ವಿರೋಧವು ವ್ಯಾಪಕವಾಗಿದೆ ಎಂದೇ ಅರ್ಥ.

ಇದನ್ನೂ ಓದಿ:ಮೈಕ್ರೋ ಫೈನಾನ್ಸ್ :ವಸ್ತು ಸ್ಥಿತಿ ಭಿನ್ನ


ಕುಲಪತಿಗಳು ಹಾಗೂ ಬೋಧಕ ಸಿಬ್ಬಂದಿಯ ನೇಮಕಕ್ಕೆ ಸಂಬಂಧಿಸಿದ ನಿಯಮಗಳಿಗೆ ತೀವ್ರ ವಿರೋಧ ಇದೆ. ಕುಲಪತಿಗಳನ್ನು ನೇಮಕ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಂದ ಕಿತ್ತು, ಆ ಅಧಿಕಾರವನ್ನು ರಾಜ್ಯಪಾಲರಿಗೆ ನೀಡುವ ಪ್ರಸ್ತಾವ ಈ ನಿಯಮಗಳಲ್ಲಿ ಇದೆ. ಇದರ ಅರ್ಥ, ಇವರ ನೇಮಕಾತಿ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪೂರ್ಣ ಅಧಿಕಾರ ಇರುತ್ತದೆ. ನಿಯಮಗಳು ಜಾರಿಗೆ ಬಂದರೆ, ವಿಶ್ವವಿದ್ಯಾಲಯಗಳ ಆಡಳಿತವು ಕೇಂದ್ರದ ಕೈ ಸೇರುತ್ತದೆ. ರಾಜ್ಯಗಳ ಮಟ್ಟದಲ್ಲಿ ವಿಶ್ವವಿದ್ಯಾಲಯಗಳನ್ನು ಪ್ರತ್ಯೇಕ ಶಾಸನ ರೂಪಿಸಿ ಸ್ಥಾಪಿಸಲಾಗಿರುತ್ತದೆ, ಆ ವಿಶ್ವವಿದ್ಯಾಲಯಗಳಿಗೆ ರಾಜ್ಯದ ಬೊಕ್ಕಸದಿಂದ ಅನುದಾನ ಸಿಗುತ್ತಿರುತ್ತವೆ. ಅಲ್ಲಿನ ಮೂಲಸೌಕರ್ಯವನ್ನು ರಾಜ್ಯ ಸರ್ಕಾರ ಒದಗಿರುತ್ತದೆ.ಹೀಗಿರುವಾಗ ಇಂತಹ ವಿಶ್ವವಿದ್ಯಾಲಯಗಳ ಆಡಳಿತವನ್ನು ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ವರ್ಗಾಯಿಸುವಂತಹ ನಿಯಮಗಳನ್ನು ಯು ಜಿಸಿ ರೂಪಿಸುವುದು ಸರಿಯಲ್ಲ. ವಿಶ್ವವಿದ್ಯಾಲಯಗಳ ನಡುವೆ ಸಮನ್ವಯ ಸಾಧಿಸುವ ಹಾಗೂ ವಿಶ್ವವಿದ್ಯಾಲಯಗಳ ಗುಣಮಟ್ಟವನ್ನು ನಿರ್ಧರಿಸುವ ಅಧಿಕಾರವೂ ಯುಜಿಸಿಗೆ ಇದೆ. ಆದರೆ ವಿಶ್ವವಿದ್ಯಾಲಯಗಳನ್ನು ಯಾರು ಮುನ್ನಡೆಸಬೇಕು ಎಂಬುದನ್ನು ತೀರ್ಮಾನಿಸುವ ಅಧಿಕಾರ ಅದಕ್ಕೆ ಇಲ್ಲ.


ಯುಜಿಸಿಯ ಈ ಕರಡು ನಿಯಮಗಳು ಸಂವಿಧಾನ ಹೇಳಿರುವ ಒಕ್ಕೂಟ ವ್ಯವಸ್ಥೆಯ ಸ್ವರೂಪಕ್ಕೆ ಕೂಡ ಧಕ್ಕೆ ತರುವಂತಿವೆ. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದೆ. ಶಿಕ್ಷಣದ ವಿಚಾರದಲ್ಲಿ ರಾಜ್ಯಗಳಿಗೂ ಕಾನೂನು ಬದ್ಧವಾದ ಹಕ್ಕುಗಳು, ಅಧಿಕಾರ ಇವೆ. ಆ ಹಕ್ಕುಗಳು ಮತ್ತು ಅಧಿಕಾರವನ್ನು ಮೊಟಕುಗೊಳಿಸುವುದು ಸರಿಯಲ್ಲ. ರಾಜ್ಯಗಳು ರೂಪಿಸಿದ ಶಾಸನಗಳಿಗಿಂತ ಯುಜಿಸಿ ರೂಪಿಸಿದ ನಿಯಮಗಳಿಗೆ ಹೆಚ್ಚಿನ ಮಹತ್ವ ನೀಡಲು ಆಗುವುದಿಲ್ಲ. ನಿಯಮಗಳಲ್ಲಿ ಇರುವ ಇತರ ಹಲವು ಪ್ರಸ್ತಾವಗಳಿಗೂ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಬೋಧಕ ಸಿಬ್ಬಂದಿಯ ನೇಮಕಕ್ಕೆ ಇರುವ ನಿಯಮಗಳನ್ನು ಬದಲಾಯಿಸಲಾಗಿದೆ. ನೇಮಕಕ್ಕೆ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣ ಆಗಬೇಕು ಎಂಬ ಅಗತ್ಯ ಇರುವುದಿಲ್ಲ. ಬಡ್ತಿ ಕುರಿತ ನಿಯಮಗಳನ್ನು ಬದಲಾಯಿಸುವ ಪ್ರಸ್ತಾವ ಇದೆ. ಉದ್ಯಮಗಳಲ್ಲಿನ ವೃತ್ತಿಪರರನ್ನು ಹಾಗೂ ಸಾರ್ವಜನಿಕ ಆಡಳಿತದಲ್ಲಿ ಅನುಭವ ಹೊಂದಿರುವವರನ್ನು ಕುಲಪತಿ ಮತ್ತು ಬೋಧಕರನ್ನಾಗಿ ನೇಮಕ ಮಾಡಲು ಅವಕಾಶ ಇರುತ್ತದೆ. ಕರಡು ನಿಯಮಗಳು ಅನುಷ್ಠಾನಕ್ಕೆ ಬಂದಲ್ಲಿ ವಿಶ್ವವಿದ್ಯಾಲಯಗಳ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಗಳು ಬರಲಿವೆ. ಆದರೆ ಈ ನಿಯಮಗಳನ್ನು ರಾಜ್ಯಗಳ ಮೇಲೆ ಬಲವಂತದಿಂದ ಹೇರುವುದು ಸರಿಯಲ್ಲ .

Leave a Comment