ರಂಗಭೂಮಿಗೆ ಘನತೆ ತಂದ ಜುಲೇಖಾ ಬೇಗಂ

ರಂಗಭೂಮಿಗೆ ಘನತೆ ತಂದ ಜುಲೇಖಾ ಬೇಗಂ

ಜುಲೇಖಾ ಬೇಗಂ ವೃತ್ತಿ‌ ರಂಗಭೂಮಿಯ ಅತ್ಯುತ್ತಮ ನಟಿಯರ ಸಾಲಿನಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತೆ. ಕಲಾವಿದೆಯಾಗಿ ರಂಗಭೂಮಿಯಲ್ಲಿ ಇತಿಹಾಸ ನಿರ್ಮಿಸಿದವರು. ಹೆರಿಗೆಯಾಗಿ ಐದನೇ ದಿನವೇ ರಂಗ ಪ್ರವೇಶಿಸಿದ ಧೀಮಂತೆ. ಇದು ಅವರ ಕಾಯಕ ಪ್ರಜ್ಞೆ, ನಿಷ್ಠೆ ,ಬದ್ದತೆಗೆ ಒಂದು ಉದಾಹರಣೆಯಾಷ್ಟೇ . ಅವರ ಉಸಿರೇ ರಂಗಭೂಮಿ .ಬದುಕಿನ ಆಸೆ ಆಕಾಂಕ್ಷೆ ,ಸುಖ ಸಂತಸಗಳನ್ನುತೊರೆದು ಇಡೀ ಜೀವನವನ್ನೇ ರಂಗಭೂಮಿಗೆ ಮೀಸಲಿಟ್ಟವರು ಅವರು .ಅಭಿನಯವೊಂದು ತಪಸ್ಸೆಂದು ಹಗಲು ರಾತ್ರಿ ಅದನ್ನೇ ಜಪಿಸಿದವರು.

ಜುಲೇಖಾ ಬೇಗಂ ಅವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಕನೂರ ಗ್ರಾಮದ ಮಧ್ಯಮ ಕುಟುಂಬವೊಂದರಲ್ಲಿ 1944ರ ಏಪ್ರಿಲ್ 7ರಂದು ಜನಿಸಿದರು. ತಂದೆ ವೀರಪ್ಪ ಹೂಗಾರ ,ತಾಯಿ ಶಿವಬಸಮ್ಮ . ಮನೆ ದೇವರಾದ ಮಲ್ಲಿಕಾರ್ಜುನನ ಮೇಲಿನ ಭಕ್ತಿಯಿಂದಾಗಿ ತಂದೆ -ತಾಯಿ ಅವರಿಗಿಟ್ಟ ಹೆಸರು ಮಲ್ಲಮ್ಮ. ತಮ್ಮ 6ನೇ ವಯಸ್ಸಿನಿಂದಲೇ ಅಭಿನಯದ ಆಸಕ್ತಿ ಹಾಗೂ ಅಭಿರುಯನ್ನು ಮೈಗೂಡಿಸಿಕೊಂಡವರು. ತಂದೆ ತಲೆಗೆ ಸುತ್ತುವ ರೂಮಲನ್ನು ಬಾಲದ ರೀತಿಯಲ್ಲಿ ಮಾಡಿಕೊಂಡು, ಮುಖಕ್ಕೆ ಮಸಿ ಬಳಿದುಕೊಂಡು ,ಹನುಮಂತನ ವೇಷವನ್ನು ಮಾಡಿ ಮನೆಯವರನ್ನೆಲ್ಲ ನಗಿಸುತ್ತಿದ್ದರು. ಆರನೇ ವಯಸ್ಸಿನಲ್ಲೇ ನಾಟಕದತ್ತ ಆಕರ್ಷಿತರಾದ ಮಲ್ಲಮ್ಮ, ತಾಯಿ ಶಿವಬಸಮ್ಮ ಅವರ ಪ್ರೋತ್ಸಾಹದಿಂದ ನ್ಯಾಮತಿಯ ‘ಶ್ರೀ ಮಹೇಶ ನಾಟ್ಯ ಸಂಘ’ ಸೇರಿದರು .ತಂದೆ ವೀರಪ್ಪ ಅವರಿಗೆ ಮಗಳು ನಾಟಕದಲ್ಲಿ ಅಭಿನಯಿಸುವುದು ಇಷ್ಟವಿರಲಿಲ್ಲ. ಸತ್ಯ ಹರಿಶ್ಚಂದ್ರ ನಾಟಕದ ಲೋಹಿತಾಶ್ವ ಟಿಪ್ಪು ಸುಲ್ತಾನ ನಾಟಕದ ಮಗನ ಪಾತ್ರ,ತಾಯಿ ಕರುಳಿನ ದಾಕ್ಷಾಯಿಣಿ, ಮುದುಕನ ಮದುವೆಯಲ್ಲಿ ಮಂದಾಕಿನಿ ಪಾತ್ರಗಳನ್ನು ಎಳೆ ವಯಸ್ಸಿನಲ್ಲಿ ಮಾಡಿ, ಕಂಪನಿಯ ಮಾಲಿಕ ಶಾಂತಣ್ಣನವರ ಅವರಿಂದ ಭೇಷ್ ಎನಿಸಿಕೊಂಡ್ಡಿದರು. ಒಂದನೇ ತರಗತಿ ಓದಿದ ಏಳು ವರ್ಷದ ಪುಟ್ಟ ಬಾಲೆಯ ಸ್ಪಷ್ಟ ಮಾತಿನ ಲಹರಿಯನ್ನು ಮುಕ್ತ ಕಂಠದಿಂದ ಹೊಗಳಿದ ಕಂಪನಿ ಮಾಲಿಕರು, ಮಲ್ಲಮ್ಮ ಹೆಸರಿಗಿಂತ ಸರಸ್ವತಿ ಹೆಸರೇ ಹುಡುಗಿಗೆ ಒಪ್ಪುತ್ತದೆ ಎಂದು ಸರಸ್ವತಿ ಎಂದು ಹೆಸರಿಟ್ಟರು. ಹೀಗೆ ಮಲ್ಲಮ್ಮ ಸರಸ್ವತಿಯಾಗಿ ರಂಗಭೂಮಿಯನ್ನು ಪ್ರವೇಶಿಸಿದರು .

ಇದನ್ನೂ ಓದಿ:- ಹೋರಾಟದ ಶಿಶು ಜನಪದ ಗಾಯಕನಿಗೆ ಅಕ್ಕರೆಯ ಅಭಿನಂದನೆ ಪಿಚ್ಚಳ್ಳಿ ಗೆ ಜನ ಪ್ರೀತಿಯೇ ಅಮೂಲ್ಯ ಪ್ರಶಸ್ತಿ- ಉಮಾಶ್ರೀ

3ನೇ ತರಗತಿಯವರೆಗೆ ಕಲಿತು ಶಾಲೆಯಿಂದ ದೂರವಾದ ಸರಸ್ವತಿ ನಂತರದ ದಿನಗಳಲ್ಲಿ ಪಟ್ಟದಕಲ್ಲು ಬಸಯ್ಯನವರ ತಂಡ ಸೇರಿದರು. ಸರಸ್ವತಿ ಅವರೊಳಗಿನ ಕಲಾವಿದೆಯನ್ನು ಕಂಡು ಕಂಪನಿಯವರು ಹೇಮಾರೆಡ್ಡಿ ಮಲ್ಲಮ್ಮ ನಾಟಕದಲ್ಲಿನ ನಾಗಮ್ಮ ಪಾತ್ರ ಸೇರಿಸಿದಂತೆ ಅನೇಕ ಅವಕಾಶಗಳನ್ನು ನೀಡಿದರು.
ಸರಸ್ವತಿ 13ನೇ ವಯಸ್ಸಿನವಳಾದಾಗ ತಂದೆಯವರು ಮಗಳ ಮುಂದಿನ ಭವಿಷ್ಯಕ್ಕೆ ತೊಂದರೆಯಾಗಬಾರದೆಂದು ಮನೆಗೆ ಕರೆದುಕೊಂಡು ಬಂದರು. ಬಟ್ಟೆ ಹೊಲಿಯುಲು ಹೊಲಿಗೆ ಯಂತ್ರವನ್ನು ತಂದುಕೊಟ್ಟರು.ಆಗ ರಂಗಭೂಮಿ ಕಲಾವಿದ ಶೇಕ್ ಚಾಂದ್ ಅವರು ತಮ್ಮ ನಾಟಕ ತಂಡದಲ್ಲಿ ಅಭಿನಯಿಸುವಂತೆ ಸರಸ್ವತಿ ಅವರಲ್ಲಿ ದುಂಬಾಲು ಬಿದ್ದರು.ಅವರುಸರಸ್ವತಿ ತಂದೆಯನ್ನು ಒಪ್ಪಿಸಿ, ಗುಲ್ಬರ್ಗಾದ ತಮ್ಮ ನಾಟಕ ಕಂಪನಿಗೆ ಕರೆದುಕೊಂಡು ಹೋದರು. ನಂತರ ಒಂದು ಸನ್ನಿವೇಶದಲ್ಲಿ ಶೇಕ್ ಚಾಂದ್ ಅವರಿಗೆ ಸರಸ್ವತಿ ಅವರ ಮೇಲೆ ಪ್ರೇಮಾಂಕುರವಾಯಿತು. ಸರಸ್ವತಿಯವರ ಕುಟುಂಬದವರಿಗೆ ಈ ಸುದ್ದಿ ತಿಳಿದು, ಸರಸ್ವತಿಗೆ ಊರಿಗೆ ಬಾ ಎಂದು ಹೇಳಿದರು. ಸ್ವಂತ ನಾಟಕ ಕಂಪನಿ ಹೊಂದಿದ ಶೇಕ್ ಚಾಂದ್ ಅವರನ್ನು ಸರಸ್ವತಿಯವರು ತಮ್ಮ 23ನೇ ವಯಸ್ಸಿನಲ್ಲಿ ಪಾಲಕರ ವಿರೋಧದ ನಡುವೆ ವಿವಾಹವಾದರು.ಅವರಿಬ್ಬರು ಜೋಡಿ ರಂಗಭೂಮಿಯಲ್ಲಿ ಬಹಳ ಜನಪ್ರಿಯತೆ ಗಳಿಸಿತು. ಶೇಕ್ ಚಾಂದ್ ಅವರನ್ನು ಮದುವೆಯಾದ ನಂತರ ಸರಸ್ವತಿಯವರು ‘ಜುಲೇಖಾ ಬೇಗಂ ‘ಆಗಿ ಮರುನಾಮಕರಣ ಹೊಂದಿದರು. ಆದರೆ ಕೇಲವೇ ವರ್ಷಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಶೇಕ್ ಚಾಂದ್ ಅವರ ಕಂಪನಿ ಮುಚ್ಚಲ್ಪಟ್ಟಿತು. ನಂತರ ಇಬ್ಬರೂ ವಿವಿಧ ಕಂಪನಿಗಳಲ್ಲಿ ಅಭಿನಯಿಸ ತೊಡಗಿದರು. ಅವರಿಬ್ಬರೂ ಸ್ವಾಭಿಮಾನದಿಂದ ಬದುಕನ್ನು ನಡೆಸಿದರು.

ಹಾಸನದಲ್ಲಿ ಶೇಕ್ ಚಂದ್ ಅವರ ನಾಟಕದಲ್ಲಿ ಅಭಿನಯಿಸುತ್ತಿರುವ ವೇಳೆ ಬಿದ್ದು, ಆಸ್ಪತ್ರೆ ಸೇರಿದರು‌. ಅವರು ಬೆನ್ನು ಹುರಿಗೆ ತೀವ್ರ ಪೆಟ್ಟು ಬಿದ್ದಿತು .ಒಂದು ವರ್ಷದವರೆಗೆ ಅವರು ಹಾಸಿಗೆಯಲ್ಲೇ ಉಳಿಯಬೇಕಾಯಿತು. ಕಾಯಿಲೆ ಪೀಡಿತ ಪತಿ, ಮೂವರು ಮಕ್ಕಳ ಆರೈಕೆ ಮತ್ತು ಜೀವನ ನಿರ್ವಹಣೆಗಾಗಿ ಜುಲೈಖಾ ಅವರು ಹವ್ಯಾಸ ನಾಟಕಗಳಲ್ಲಿ ಅಭಿನಯಿಸ ತೊಡಗಿದರು. ನಾಟಕಗಳ ಪತ್ರಗಳಿಂದ ಬರುತ್ತಿದ್ದ ಆದಾಯದಿಂದಲೇ ಅವರು ಕುಟುಂಬ ನಿರ್ವಹಿಸಿದರು. ಮೂವರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದರು. ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ಕಿರಿಯಮಗ ಸಿಕಂದರ್ 1997ರಲ್ಲಿ ತೀರಿಕೊಂಡನು .2001ರಲ್ಲಿ ಅಪಘಾತವೊಂದರಲ್ಲಿ ಪತಿ ಶೇಕ್ ಚಂದ್ ಸಾವನ್ನಪ್ಪಿದರು. ಮಡುಗಟ್ಟಿದ ದುಃಖದ ನಡುವೆ ಬದುಕುತ್ತಿರುವಾಗ 2021 ರಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ ಮಗ ಮಹಮ್ಮದ್ ರಫಿ ಕಣ್ಣೆದುರೇ ತೀರಿಕೊಂಡರು. ಇಷ್ಟೆಲ್ಲ ಮಾನಸಿಕ ಯಾತನೆಯ ಮಧ್ಯಯೂ ಜುಲೇಖಾ ಬೇಗಂ ಅವರು ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದು ಬಂದಿದ್ದಾರೆ .ಸದ್ಯ ಜುಲೇಖಾ ಅವರು ಮೈಸೂರಿನಲ್ಲಿ ಅನಿಮೇಷನ್ ನಲ್ಲಿ ತೊಡಗಿಕೊಂಡಿರುವ ಮಗ ಕರೀಂ ಅವರೊಂದಿಗೆ ನೆಲೆಸಿದ್ದಾರೆ .

ಜುಲೇಖಾ ಬೇಗಂ ಅವರ ಪ್ರತಿಭೆಯನ್ನು ಹಲವಾರು ಸಂಘ -ಸಂಸ್ಥೆಗಳು ಗುರುತಿಸಿ ಗೌರವಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ನಾಡಿನ ಸಂಘ -ಸಂಸ್ಥೆಗಳು ಅವರನ್ನು ಗೌರವಿಸಿವೆ. 80 ವಯಸ್ಸಿನ ಅವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿ .’ನನಗೀಗ ವಯಸ್ಸು 80 .ಮೈಯೊಳಗಿನ ಶಕ್ತಿ ಕೊಂಚ ಕಡಿಮೆಯಾಗಿದೆ. ಆದರೆ ಉತ್ಸಾಹ ಕುಂದಿಲ್ಲ. ರಂಗಭೂಮಿಯಲ್ಲಿ ಈಗಲೂ ಅವಕಾಶ ಸಿಕ್ಕರೆ, ಕೊಟ್ಟ ಪಾತ್ರಕ್ಕೆ ಜೀವ ತುಂಬುವೆ. ನಾಟಕ ಪ್ರದರ್ಶಿಸುತ್ತಲೇ ಕೊನೆಯುಸಿರು ಎಳೆಯಲು ಬಯಸುವೆ’ ಎಂದು ಭಾವನಾತ್ಮಕವಾಗಿ ಹೇಳುತ್ತಾರೆ .

Leave a Comment