ರಾಜ್ಯ ಸರ್ಕಾರಕ್ಕೆ ₹10 ಲಕ್ಷ ದಂಡ
ಬೆಂಗಳೂರು:ಪರಿಶಿಷ್ಟ ಜಾತಿಗೆ ಸೇರಿದ ಮಾಲೀಕರಿಂದ ಖರೀದಿ ಮಾಡಿರುವುದಾಗಿ ಸುಳ್ಳು ಕ್ರಯಪತ್ರ ಸೃಷ್ಟಿಸಿಕೊಂಡು ಜಮೀನು ಸ್ವಾಧೀನಕ್ಕೆ ಪಡೆದಿದ್ದ ವ್ಯಕ್ತಿಯೊಬ್ಬರಿಗೆ ₹ 5 ಲಕ್ಷ ದಂಡ ವಿಧಿಸಿರುವ ಹೈಕೋರ್ಟ್, ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿಲ್ಲ ಎಂಬ ಕಾರಣಕ್ಕೆ ರಾಜ್ಯ ಸರ್ಕಾರಕ್ಕೆ ₹10 ಲಕ್ಷ ದಂಡ ವಿಧಿಸಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದ ಬೆಲೆಬಾಳುವ ಎರಡು ಎಕರೆ ಜಮೀನಿನ ವ್ಯಾಜ್ಯ ಪ್ರಕರಣದಲ್ಲಿ ಈ ಆದೇಶ ನೀಡಿರುವ ನ್ಯಾಯಪೀಠ, ‘ಅಕ್ರಮವಾಗಿ ಸ್ವಾಧೀನದಲ್ಲಿ ಇರಿಸಿಕೊಂಡಿರುವ ಜಮೀನನ್ನು ಕೂಡಲೇ ತೆರವುಗೊಳಿಸಬೇಕು’ ಎಂದು ಸುಳ್ಳು ಕ್ರಯಪತ್ರ ಹೊಂದಿರುವ ಅರ್ಜಿದಾರ ಸುರೇಶ್ ಅವರಿಗೆ ಆದೇಶಿಸಿದೆ.
ವ್ಯಾಜ್ಯಕ್ಕೆ ಸಂಬಂಧಿಸಿದಂತೆ, ‘ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗಾಧಿಕಾರಿ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿ ಸದ್ಯ ಜಮೀನಿನ ಸ್ವಾಧೀನ ಹೊಂದಿರುವ ಎಚ್.ಆರ್. ಸುರೇಶ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿಎನ್.ಎಸ್. ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಆ ಅದೇಶ ನೀಡಿದೆ.
ಇದೇ ಜಮೀನನಲ್ಲಿ ವೇಳೆ, ‘ವಿವಾದಿತ ಕಾನೂನುಬದ್ದ ವಾರಸುದಾರರಾದ ಎ.ಜೆ. ಜೇಮ್ಸ್ ಅವರು ನಿರ್ಮಿಸಿದ್ದ ಫಾರ್ಮ್ ಹೌಸ್ಗೆ ಧಕ್ಕೆ ಉಂಟು ಮಾಡಿದ ಘಟನೆಯನ್ನು ಸಂಬಂಧಿಸಿದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೆ ಸೂಕ್ತ ಕ್ರಮ ಜರುಗಿಸುವಲ್ಲಿ ವಿಫಲವಾಗಿದ್ದಾರೆ’ ಎಂಬ ಕಾರಣಕ್ಕಾಗಿ ನ್ಯಾಯಪೀಠ, ರಾಜ್ಯ ಸರ್ಕಾರಕ್ಕೂ ದಂಡ ವಿಧಿಸಿದೆ.
ಪ್ರಕರಣವೇನು?:ಬೆಂಗಳೂರು ಉತ್ತರ ತಾಲ್ಲೂಕು ಜಾಲ ಹೋಬಳಿಯ ಬೆಟ್ಟಹಲಸೂರು ಗ್ರಾಮದಲ್ಲಿನ ಸರ್ವೇ ನಂಬರ್ 376ರಲ್ಲಿರುವ ಎರಡು ಎಕರೆ ಜಮೀನಲ್ಲಿ ಎ.ಜೆ.ಜೇಮ್ಸ್ ಮತ್ತು ಅವರ ಪತ್ನಿ ಅನ್ನಿ ಜೇಮ್ಸ್ ಅವರ
ಹೆಸರಿನಲ್ಲಿ ಒಂದು ಎಕರೆ ಹಾಗೂ ಬಿ.ಎಂ. ಗೋವಿಂದರಾಜು ಮತ್ತು ಬಿ.ಜಿ. ಮುನಿಯಪ್ಪ ಹೆಸರಿನಲ್ಲಿ ಇನ್ನೊಂದು ಎಕರೆ ಸ್ವಾಧೀನ ಹೊಂದಿದ್ದರು.ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಎಚ್.ಆರ್.ಸುರೇಶ್, ‘ಈ ಎರಡು ಎಕರೆ ಜಮೀನನ್ನು ನಾನು ಪರಿಶಿಷ್ಟ ಜಾತಿಗೆ ಸೇರಿದ್ದ ಬೈಲಮ್ಮ ಮತ್ತು ಗೌರಮ್ಮ ಅವರಿಂದ ಖರೀದಿಸಿದ್ದೇನೆ. ಈ ಜಮೀನಿನ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದೆ’ ಎಂದು ಹೇಳಿ ಸುಳ್ಳು ಕ್ರಯಪತ್ರ ಸೃಷ್ಟಿಸಿಕೊಂಡಿದ್ದರು.
ಇದನ್ನೂ ಓದಿ:ಡ್ರಗ್ಸ್: ಮೂಲವೇ ನಾಪತ್ತೆ
‘ನಾನು ಕ್ರಯಪತ್ರ ಹೊಂದಿದ್ದೇನೆ’ ಎಂಬ ಸುಳ್ಳು ದಾಖಲೆಗಳ ಆಧಾರದಲ್ಲಿ ಸುರೇಶ್ ಅವರು, ಈ ಮೊದಲೇ ಜಮೀನನ್ನು ಕಾನೂನುಬದ್ಧವಾಗಿ ಖರೀದಿ ಮಾಡಿ ಸ್ವಾಧೀನ ಹೊಂದಿದ್ದ ಎ.ಜೆ.ಜೇಮ್ಸ್, ಅವರ ಪತ್ನಿ ಅನ್ನಿ ಜೇಮ್ಸ್ ಹಾಗೂ ಬಿ.ಎಂ.ಗೋವಿಂದರಾಜು ಮತ್ತು ಅವರ ಮಕ್ಕಳು ಕಟ್ಟಿಕೊಂಡಿದ್ದ ಫಾರ್ಮ್ ಹೌಸ್ ಅನ್ನು ಧ್ವಂಸಗೊ ಳಿಸಿದ್ದರು. ಅಲ್ಲಿದ್ದ ಜೇಮ್ಸ್ ಹಾಗೂ ಇತರರನ್ನು ಬಲವಂತದಿಂದ ಹೊರಹಾಕಿ ಜಮೀನನ್ನು ಸ್ವಾಧೀನಕ್ಕೆ ಪಡೆದಿದ್ದರು. ಈ ಕುರಿತಂತೆ ಜೇಮ್ಸ್ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿರಲಿಲ್ಲ.
ಏತನ್ಮಧ್ಯೆ, ಕಾನೂನುಬದ್ಧ ಜಮೀನಿನ ವಾರಸುದಾರಿಕೆಗೆ ಸಂಬಂಧಿಸಿದಂತೆ ಎ.ಸಿ ಮತ್ತು ಡಿ.ಸಿಮುಂದಿದ್ದ ಪ್ರಕರಣದ ಅರೆನ್ಯಾಯಿಕ ವಿಚಾರಣೆಯಲ್ಲಿ ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ, ‘ಈ ಜಮೀನು ಕಾನೂನುಬದ್ಧ ವಾರಸುದಾರರಿಗೇ ಸೇರತಕ್ಕದ್ದು’ ಎಂದು ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಸುರೇಶ್, ‘ಎ.ಸಿ ಮತ್ತು ಡಿ.ಸಿ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿದ್ದರು.
ವಿಚಾರಣೆ ನಡೆಸಿದ ನ್ಯಾಯಪೀಠ, ‘ಎಚ್.ಆರ್.ಸುರೇಶ್ ಜಮೀನನ್ನು ಕಾನೂನು ಬಾಹಿರವಾಗಿ ಸ್ವಾಧೀನಕ್ಕೆ ಪಡೆದಿರುವುದು ದಾಖಲೆಗಳಿಂದ ಸಾಬೀತಾಗಿದೆ. ಆದ್ದರಿಂದ, ಅವರನ್ನು ಅಲ್ಲಿಂದ ಕೂಡಲೇ ತೆರವುಗೊಳಿಸಿ, ಕಾನೂನುಬದ್ಧ ವಾರಸುದಾರರಾದ ಪ್ರತಿವಾದಿಗಳ ಸ್ವಾಧೀನಕ್ಕೆ ನೀಡಲು ತಕ್ಕ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ. ‘ಸುರೇಶ್ ₹5 ಲಕ್ಷ ದಂಡವನ್ನು ನಾಲ್ಕು ವಾರಗಳ ಒಳಗಾಗಿ ಪಾವತಿ ಮಾಡಬೇಕು’ ಎಂದೂ ತಾಕೀತು ಮಾಡಿದೆ.
‘ಹೈಕೋರ್ಟ್ ನೀಡಿರುವ ಈ ಆದೇಶಕ್ಕೆ ಅನುಗುಣವಾಗಿ ಜಿಲ್ಲಾಧಿಕಾರಿ ಕೈಗೊಳ್ಳುವ ಮುಂದಿನ ಕ್ರಮಗಳನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಬೇಕು’ ಎಂದು ಸೂಚಿಸಿರುವ ನ್ಯಾಯಪೀಠ, ಪ್ರಕರಣವನ್ನು ವಿಚಾರಣೆಗಾಗಿ ಇದೇ 24ಕ್ಕೆ ಮರು ನಿಗದಿಗೊಳಿಸಬೇಕು ಎಂದು ಆದೇಶಿಸಿದೆ.