ರೈಲು ನಿಲ್ದಾಣದಲ್ಲಿ ಕಾಲ್ತುಳಿತ ವ್ಯವಸ್ಥೆಯ ಲೋಪಕ್ಕೆ ಕೈಗನ್ನಡಿ

ರೈಲು ನಿಲ್ದಾಣದಲ್ಲಿ ಕಾಲ್ತುಳಿತ ವ್ಯವಸ್ಥೆಯ ಲೋಪಕ್ಕೆ ಕೈಗನ್ನಡಿ

ದೆಹಲಿಯ ಕಾಲ್ತುಳಿತು ಜನದಟ್ಟಣೆಯ ಸಂದರ್ಭಗಳಲ್ಲಿ ಕಟ್ಟೆಚ್ಚರದ ಅಗತ್ಯವನ್ನು ಮತ್ತೊಮ್ಮೆ ಹೇಳುವಂತಿದೆ

ನವದೆಹಲಿಯ ರೈಲು ನಿಲ್ದಾಣದಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿತಕ್ಕೆ ಕಾರಣಗಳು ಏನು ಎಂಬ ವಿಚಾರದಲ್ಲಿ ಹಲವು ವಿವರಣೆಗಳಿವೆ. ಮಹಾ ಕುಂಭಮೇಳದಲ್ಲಿ ಭಾಗಿಯಾಗಲು ಪ್ರಯಾಗರಾಜ್ ಗೆ ತೆರಳುವ ಪ್ರಯಾಣಿಕರು ರೈಲು ನಿಲ್ದಾಣದಲ್ಲಿ ಭಾರಿ ಸಂಖ್ಯೆಯಲ್ಲಿ ಇದ್ದಾಗ ಉಂಟಾದ ಕಾಲ್ತುಳಿತಕ್ಕೆ ಕನಿಷ್ಠ 18 ಮಂದಿ ಬಲಿಯಾಗಿದ್ದಾರೆ. ಈ ದುರ್ಘಟನೆಗೆ ನೀಡಿರುವ ಹಲವು ವಿವರಣೆಗಳ ಪೈಕಿ ಸತ್ಯವು ಯಾವುದೋ ಒಂದು ವಿವರಣೆಯಲ್ಲಿ ಇದ್ದಿರಬಹುದು. ಅಧಿಕಾರಿಗಳು ತೋರಿದ ನಿರ್ಲಕ್ಷ್ಯ ಮುತ್ತು ಜನಜಂಗುಳಿಯನ್ನು ನಿಭಾಯಿಸುವಲ್ಲಿ ಆದ ವೈಪಲ್ಯವು ಪರಿಸ್ಥಿತಿ ವಿಷಮಗೊಳ್ಳುವಂತೆ ಮಾಡಿತು ಎಂಬುದಂತೂ ನಿಜ. ಮೌನಿ ಅಮಾವಾಸ್ಯೆಯ ದಿನ ಪ್ರಯಾಗರಾಜ್ನಲ್ಲಿ ಸಂಭವಿಸಿದ ದುರಂತಕ್ಕೆ ಅಲ್ಲಿ ಜನಜಂಗುಳಿಯನ್ನು ನಿಯಂತ್ರಿಸುತ್ತಿದ್ದವರ ವೈಫಲ್ಯವು ಹೇಗೆ ಕಾರಣವೋ ಅದೇ ರೀತಿಯಲ್ಲಿ ರೈಲು ನಿಲ್ದಾಣದಲ್ಲಿ ಜನ ಜೀವ ಕಳೆದುಕೊಂಡಿದ್ದಕ್ಕೆ ಅಲ್ಲಿನ ಅಧಿಕಾರಿಗಳು ಹೊಣೆ ಆಗಬೇಕಾಗುತ್ತದೆ. ಪ್ರಯಾಣಿಕರಿಗಾಗಿ ನಿರ್ಮಿಸಿರುವ ಮೇಲ್ಸೇತುವೆಯಿಂದ ಕೆಳಕ್ಕೆ ಇಳಿಯುತ್ತಿದ್ದ ಕೆಲವರು ಮುಂದೆ ಇದ್ದವರ ಮೇಲೆ ಬಿದ್ದ ಪರಿಣಾಮವಾಗಿ ಕಾಲ್ತುಳಿತ ಉಂಟಾಯಿತು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಆದರೆ ಈ ವಿವರಣೆಯು ಎಲ್ಲವೂ ದುರದೃಷ್ಟವಶಾತ್ ಆಗಿ ಹೋದವು ಎಂದು ಹೇಳುತ್ತದೆ. ಇದು ಪೂರ್ಣ ಸತ್ಯವನ್ನು ಹೇಳುತ್ತಿಲ್ಲ. ಅಂದು ರೈಲು ನಿಲ್ದಾಣದಲ್ಲಿ ರೈಲುಗಳು ಹೊರಡುವುದು ವಿಳಂಬವಾಗಿತ್ತು, ಟಿಕೆಟ್ ಮಾರಾಟ ಪ್ರಮಾಣವು ಹೆಚ್ಚಳ ಕಂಡಿತ್ತು, ರೈಲ್ವೆ ಪ್ಲಾಟ್ಫಾರ್ಮ್ ಬದಲಾವಣೆ ವಿಚಾರವಾಗಿ ಕೊನೆಯ ಕ್ಷಣದಲ್ಲಿ ಒಂದಿಷ್ಟು ಘೋಷಣೆಗಳನ್ನು ಮಾಡಲಾಗಿತ್ತು ಎಂಬ ದಿಗಳಿವೆ ವರದಿಗಳಿವೆ. ಜನ ಹೆಚ್ಚಿನ ಸಂಖ್ಯೆಯಲ್ಲಿ ನಿಲ್ದಾಣಕ್ಕೆ ಬರುತ್ತಾರೆ ಎಂಬುದನ್ನು ಅಧಿಕಾರಿಗಳು ಮೊದಲೇ ಅಂದಾಜಿಸಬೇಕಿತ್ತು, ಬದಲಿ ವ್ಯವಸ್ಥೆ ಮಾಡಬೇಕಿತ್ತು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿತ್ತು.

ಇದನ್ನೂ ಓದಿ:ಕಾಂಗ್ರೆಸ್ಸಿಗೆ ಐತಿಹಾಸಿಕ ಅವಕಾಶ!


ದುರ್ಘಟನೆಗೆ ಕಾರಣ ಪತ್ತೆ ಮಾಡಲು ತನಿಖೆಗೆ ಆದೇಶಿಸಲಾಗಿದೆ. ಈ ತನಿಖೆಯು ಪಾರದರ್ಶಕವಾಗಿ ನಡೆಯಬೇಕು, ಲೋಪಗಳಿಗೆ ಹೊಣೆಗಾರರು ಯಾರು ಎಂಬುದನ್ನು ಅದು ಪತ್ತೆ ಮಾಡಬೇಕು. ಆದರೆ ಇಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ರೈಲುಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಮಾರಾಟ ಮಾಡಿದ್ದು ಏಕೆ? ರೈಲು ಹೊರಡುವುದರಲ್ಲಿ ವಿಳಂಬ ಆಗಿತ್ತೇ? ರೈಲು ಇನ್ನೇನು ಹೊರಡಲಿದೆ ಎಂಬ ಹೊತ್ತಿನಲ್ಲಿ ಪ್ಲಾಟ್ಫಾರ್ಮ್ ಬದಲಾವಣೆ ಬಗ್ಗೆ ಘೋಷಣೆ ಮಾಡಿ ಪ್ರಯಾಣಿಕರಲ್ಲಿ ಗೊಂದಲ ಮೂಡಿಸಲಾಯಿತೇ? ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಜನದಟ್ಟಣೆಯನ್ನು ನಿರ್ವಹಿಸುವಾಗ ಪಾಲಿಸಬೇಕಿರುವ ನಿಯಮಗಳು ಇವೆ. ಹಬ್ಬ, ಧಾರ್ಮಿಕ ಕಾರ್ಯಕ್ರಮಗಳಿಗೆ ತೆರಳುವ ಜನರನ್ನು ನಿರ್ವಹಿಸುವುದು ಹೇಗೆ ಎಂಬುದೂ ಈ ನಿಯಮಗಳ ಭಾಗ. ಈ ನಿಯಮಗಳು ದುರ್ಘಟನೆಯ ಸಾಧ್ಯತೆಗಳನ್ನು ವಿವರಿಸಿವೆ. ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದಲ್ಲಿ ಬಹುತೇಕ ದುರ್ಘಟನೆಗಳನ್ನು ತಡೆಯಬಹುದು. ಕುಂಭಮೇಳ ನಡೆಯುತ್ತಿದ್ದ ಸ್ಥಳದಲ್ಲಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಕೆ ಮಾಡಲಾಗಿದೆ. ಕುಂಭಮೇಳಕ್ಕೆ ಸಂಬಂಧಿಸಿದ ಇತರ ಕಡೆಗಳಲ್ಲಿಯೂ ಅದರ ಬಳಕೆ ಹೆಚ್ಚಬೇಕು. ಕುಂಭಮೇಳದ ಸ್ಥಳದಲ್ಲಿ ವ್ಯವಸ್ಥೆಯ ಲೋಪದಿಂದಾಗಿ ಕಾಲ್ತುಳಿತ ಉಂಟಾದ ರೀತಿಯಲ್ಲೇ ರೈಲು ನಿಲ್ದಾಣದಲ್ಲಿಯೂ ಆಗಿದೆ.


ಕಾಲ್ತುಳಿತದಂತಹ ದುರ್ಘಟನೆಗಳು ನಡೆದಾಗ ಆರಂಭದಲ್ಲಿ ಅದನ್ನು ನಿರಾಕರಿಸುವ, ನಂತರ ವಿವರಗಳನ್ನು ತಪ್ಪಾಗಿ ನೀಡುವ ಅಧಿಕೃತ ನೀತಿಯೊಂದು ಜಾರಿಯಲ್ಲಿ ಇರುವಂತೆ ಕಾಣುತ್ತಿದೆ. ಇದು ತೀರಾ ದುರದೃಷ್ಟಕರ. ಸಾವಿನ ಸಂಖ್ಯೆಯನ್ನು ತಿಳಿಸುವಾಗ ಸಾಮಾನ್ಯವಾಗಿ ವಾಸ್ತವಕ್ಕಿಂತ ಕಡಿಮೆ ಸಂಖ್ಯೆಯನ್ನು ಹೇಳುವುದಿದೆ. ದುರ್ಘಟನೆಗೆ ಕಾರಣವಾದ ಸಂದರ್ಭವನ್ನು ಸರಿಯಾಗಿ ತಿಳಿಸುತ್ತಿಲ್ಲ. ಇದರಿಂದಾಗಿ ಪರಿಸ್ಥಿತಿಯ ಸೂಕ್ತ ವಿಶ್ಲೇಷಣೆ ಸಾಧ್ಯವಾಗುತ್ತಿಲ್ಲ, ತಪ್ಪು ಮಾಡಿದವರು ಹೊಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ, ಭವಿಷ್ಯದಲ್ಲಿ ಇಂತಹ ದುರ್ಘಟನೆಗಳನ್ನು ತಡೆಯುವ ಸಾಧ್ಯತೆ ಕ್ಷೀಣವಾಗುತ್ತದೆ. ಕುಂಭಮೇಳದಲ್ಲಿ ಕಳೆದ ತಿಂಗಳು ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ನಿಖರ ಸಂಖ್ಯೆ ಈಗಲೂ ಗೊತ್ತಾಗಿಲ್ಲ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಏನನ್ನೋ ಮುಚ್ಚಿಡವ ಯತ್ನ ನಡೆದಿರುವಂತಿದೆ, ತನಿಕಾಧಿಕಾರಿಗಳು ನಿರ್ಣಯಕ್ಕೆ ಬರುವ ಮುನ್ನವೇ ಊಹಾಪೋಹಗಳಿಗೆ ರೆಕ್ಕೆ ಬಂದಿರುವಂತಿದೆ. ಶನಿವಾರ ನಡೆದ ದುರ್ಘಟನೆಯ ವಿಚಾರದಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮ ಹೇಳಿಕೆಯನ್ನು ಕೆಲವೇ ಕ್ಷಣಗಳಲ್ಲಿ ಬದಲಾಯಿಸಿದರು, ‘ಕಾಲ್ತುಳಿತ’ ಎಂಬ ಪದವನ್ನೇ ಕೈಬಿಟ್ಟರು. ಕುಂಭಮೇಳವು ಕೊನೆಗೊಳ್ಳಲು ಇನ್ನೂ ಕೆಲವು ದಿನಗಳು ಬಾಕಿ ಇವೆ, ದೆಹಲಿಯ ಕಾಲ್ತುಳಿತ ಪ್ರಕರಣವು ಕಟ್ಟೆಚ್ಚರದ ಅಗತ್ಯವನ್ನು ಮತ್ತೊಮ್ಮೆ ಹೇಳುವಂತಿದೆ.

Leave a Comment