ರೈಲ್ವೆ ಹಳಿ ಧ್ವಂಸ ತಡೆಗೆ ನಾವೇನು ಮಾಡಲು ಸಾಧ್ಯ?
ದೇಶದ ಜನತೆಗೆ ಒಳ್ಳೆಯ ರೈಲು ಸಂಚಾರ ಸೌಲಭ್ಯ ಒದಗಿಸಬೇಕೆಂಬ ನಿಟ್ಟಿನಲ್ಲಿ ಸರ್ಕಾರ ವಂದೇ ಭಾರತ್ ಎಕ್ಸ್ಪ್ರೆಸ್ನಂತಹ ಉನ್ನತ ದರ್ಜೆಯ ರೈಲುಗಳ ಸಂಖ್ಯೆ ಹೆಚ್ಚು ಮಾಡಿದೆ. ಅವುಗಳನ್ನೇ ಗುರಿಯಾಗಿಟ್ಟುಕೊಂಡು ಇತ್ತೀಚಿನ ವರ್ಷಗಳಲ್ಲಿ ಕೆಲವು ರಾಷ್ಟ್ರವಿರೋಧಿ ಶಕ್ತಿಗಳು ಕಲ್ಲು ಎಸೆಯುವ ಕೃತ್ಯದಲ್ಲಿ ತೊಡಗಿದ್ದವು. ನಮ್ಮೊಳಗಿನ ಈ ಹಿತಶತ್ರುಗಳು ಇಷ್ಟಕ್ಕೆ ತೃಪ್ತರಾದಂತಿಲ್ಲ. ಇದೀಗ ರೈಲ್ವೆ ಹಳಿಗಳ ಮೇಲೆ ಈ ದೇಶದ್ರೋಹಿಗಳ ಕಾಕದೃಷ್ಟಿ ಬಿದ್ದಂತೆ ಕಾಣುತ್ತಿದೆ. ರೈಲ್ವೆ ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್, ಕಲ್ಲುಗಳನ್ನು ಇಡುವ ಕುಕೃತ್ಯಗಳು ದಿನೇದಿನೇ ಹೆಚ್ಚುತ್ತಿವೆ. ಉತ್ತರ ಭಾರತಕ್ಕಷ್ಟೇ ಸೀಮಿತವಾಗಿದ್ದ ಇಂತಹ ಘಟನೆಗಳು ಈಗ ಕರ್ನಾಟಕ, ಕೇರಳ ಸಹಿತ ದಕ್ಷಿಣದ ರಾಜ್ಯಗಳ ಬಾಗಿಲಿಗೂ ಬಂದು ನಿಂತಿದೆ. ಇದರ ಹಿಂದೆ ದೇಶದ ಏಳಿಗೆ ಸಹಿಸದ ಸಮಾಜವಿರೋಧಿ ಶಕ್ತಿಗಳ ದೊಡ್ಡ ಪಡ್ಕಂತ್ರವೇ ನಡೆಯುತ್ತಿದೆಯೋ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಿಸುವುದು ಪ್ರತಿಯೋರ್ವ ನಾಗರಿಕನ ಆದ್ಯ ಕರ್ತವ್ಯ ಎಂದು 1976ರಲ್ಲಿ 42ನೇ ಸಂವಿಧಾನ ತಿದ್ದುಪಡಿಯ ಮೂಲಕ ಸೇರಿಸಲಾದ ನಾಗರಿಕರ ಮೂಲ ಕರ್ತವ್ಯದಲ್ಲಿ ಹೇಳಲಾಗಿದೆ. ಸಂವಿಧಾನ ಅಪಾಯದಲ್ಲಿದೆ ಎನ್ನುವವರೂ ರಾಷ್ಟ್ರವಿರೋಧಿ ಕೃತ್ಯದ ಕುರಿತು ನಮ್ಮ ನಿಲುವು ತಳೆಯುವುದು ಆಶ್ಚರ್ಯವೇ ಸರಿ. ಕೇವಲ ಹಕ್ಕುಗಳ ಕುರಿತು ಅರಿವು ನೀಡುವ ನಾವು ಸಂವಿಧಾನದಲ್ಲಿ ವಿವರಿಸಿರುವ 10 ಮೂಲ ಕರ್ತವ್ಯದ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವುದರಲ್ಲಿ ವಿಫಲರಾಗುತ್ತಿದ್ದೇವೆಯೇ? ದೇಶ ಚೆನ್ನಾಗಿದ್ದರೆ ನಮ್ಮೆಲ್ಲರ ಬದುಕು ಸುಂದರ. ‘ಒಲೆ ಹೊತ್ತಿ ಉರಿದೊಡೆ ನಿಲಲುಬಹುದು, ಧರೆ ಹೊತ್ತಿ ಉರಿದೊಡೆ ನಿಲಲುಬಾರದು’ ಎಂದಿದ್ದಾರೆ ಸರ್ವಜ್ಞ, ದೇಶದ ಅಸ್ತಿತ್ವವೇ ಗಂಡಾಂತರದಲ್ಲಿದ್ದರೆ ನಮ್ಮೆಲ್ಲರ ಬದುಕು ನೆಮ್ಮದಿಯಿಂದ ಕೂಡಿರಲು ಸಾಧ್ಯವಿಲ್ಲ ಎನ್ನುವುದನ್ನು ಪ್ರಪಂಚದಾದ್ಯಂತ ಬೇರೆ ಬೇರೆ ದೇಶಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ನಾವು ಅರಿತುಕೊಳ್ಳಬೇಕು. ದೇಶದ ಆಸ್ತಿ, ಸಂಪತ್ತಿನ ರಕ್ಷಣೆ ಪ್ರತಿಯೋರ್ವ ನಾಗರಿಕನ ಮೂಲ ಕರ್ತವ್ಯ.
ಇದನ್ನೂ ಓದಿ:ಭಾರತ-ಅಮೆರಿಕ ಸಹಯೋಗದಲ್ಲಿ ಹೊಸ ಶಕೆ
ದೇಶ ರಕ್ಷಣಿ ಕೇವಲ ಸೈನಿಕರು, ಪೊಲೀಸರ ಜವಾಬ್ದಾರಿ ಎಂದು ಸಾಮಾನ್ಯ ನಾಗರಿಕರು ಸುಮ್ಮನೆ ಕುಳಿತುಕೊಳ್ಳುವ ಕಾಲ ಇದಲ್ಲ. ಕೆಲವು ವರ್ಷಗಳ ಹಿಂದೆ ಮುಂಬೈ ಮೇಲೆ ಪಾಕಿಸ್ತಾನದ ಕಡೆಯಿಂದ ಸಮುದ್ರ ಮಾರ್ಗದ ಮೂಲಕ ದಾಳಿ ನಡೆದಾಗ ನಾವು ಕರಾವಳಿ ರಕ್ಷಣೆ ಕುರಿತು ಜಾಗೃತರಾದೆವು. ಇದೀಗ ಅಂತಹದೇ ಮತ್ತೊಂದು ಸಂಕಷ್ಟ ನಮಗೆ ಎದುರಾಗಿದೆ. ಭಾರತೀಯ ರೈಲ್ವೆ ವಿಶಾಲ ಹಳಿಗಳ ನೆಟ್ವರ್ಕ್ ಹೊಂದಿದೆ. ಲಕ್ಷಾಂತರ ಜನ ಪ್ರತಿನಿತ್ಯ ರೈಲು ಯಾತ್ರೆ ಮಾಡುತ್ತಾರೆ. ಅವರ ಸುರಕ್ಷೆ ರೈಲ್ವೆಯ ಜವಾಬ್ದಾರಿ ಹೌದಾದರೂ ಸಾಮಾನ್ಯ ನಾಗರಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕಾದ ಪ್ರಮೇಯ ಈಗ ಬಂದಿದೆ.
ಪ್ರತಿಯೊಂದು ರೈಲ್ವೆ ಸ್ಟೇಷನ್ ವ್ಯಾಪ್ತಿಯಲ್ಲಿ ವಾಸಿಸುವ ನಾಗರಿಕರು ಸ್ವಯಂಪ್ರೇರಿತರಾಗಿ ಸಣ್ಣ ಸಣ್ಣ ತಂಡ ರಚಿಸಿಕೊಳ್ಳುವಂತಾಗಬೇಕು. ಮತ್ತು ಆ ಸ್ವಯಂಸೇವಕರು ರೈಲ್ವೆ ಹಳಿಗಳ ನಿಗಾ ಇಡಬೇಕು. ಅನಪೇಕ್ಷಿತ ವಿದ್ಯಮಾನಗಳ ಕುರಿತು ಸಕಾಲದಲ್ಲಿ ಇಲಾಖೆಗೆ ಮಾಹಿತಿ ನೀಡಬೇಕು. ಇದರಿಂದ ಸಂಭಾವ್ಯ ಅಪಘಾತಗಳನ್ನು ತಪ್ಪಿಸಬಹುದು. ನೂರಾರು ಅಮಾಯಕರ ಸಾವು-ನೋವು ತಪ್ಪಿಸಬಹುದು. ಇಂತಹ ಪ್ರಯತ್ನ ಕರ್ನಾಟಕದಿಂದಲೇ ಪ್ರಾರಂಭವಾಗಲಿ. ದೇಶದ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳು ಇನ್ನೂ ಅಪಾಯಕಾರಿ. ಬಲಿಷ್ಠ ರಕ್ಷಣಾ ಪಡೆಯ ಜತೆಯಲ್ಲಿ ಜಾಗೃತ ನಾಗರಿಕರಿದ್ದಾಗ ಮಾತ್ರ ದೇಶ ಸುರಕ್ಷಿತ ಎನ್ನುವುದನ್ನು ಮರೆಯದಿರೋಣ.