ಮೆಲ್ಬರ್ನ್: ಭಾರತ ತಂಡದ ನಾಯಕ ರೋಹಿತ್ ಶರ್ಮ ಮತ್ತು ವೇಗಿ ಆಕಾಶ್ ದೀಪ್ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಪೂರ್ವಭಾವಿಯಾಗಿ ಗಾಯದ ಭೀತಿ ಎದುರಿಸಿದ್ದಾರೆ. ಭಾನುವಾರ ಅಭ್ಯಾಸದ ವೇಳೆ ಇಬ್ಬರೂ ಚೆಂಡೇಟಿನಿಂದ ನೋವು ಅನುಭವಿಸಿದ್ದಾರೆ. ಮೆಲ್ಲೋರ್ನ್ ಕ್ರಿಕೆಟ್ ಗೌಂಡ್ನಲ್ಲಿ (ಎಂಸಿಜಿ) ಹೊರಾಂಗಣ ಅಭ್ಯಾಸದ ವೇಳೆ ಥೋಡೌನ್ ಎದುರಿಸುವಾಗ ರೋಹಿತ್ ಶರ್ಮ ಎಡಮೊಣಕಾಲಿನ ಗಾಯಕ್ಕೊಳಗಾದರೆ, ಆಕಾಶ್ ದೀಪ್ ಕೈಗೆ ಏಟು ಮಾಡಿಕೊಂಡರು.
ಇದನ್ನೂ ಓದಿ:- ಮನೆ ಮನೆಯಲ್ಲೂ ಕನ್ನಡ ಬೆಳಗಲಿ
ಇದರಿಂದಾಗಿ ಬಾರ್ಡರ್-ಗಾವಸ್ಕರ್ ಟ್ರೋಫಿಯ 4ನೇ ಟೆಸ್ಟ್ಗೆ ಕೇವಲ 3 ದಿನ ಬಾಕಿ ಇರುವಾಗ ಭಾರತಕ್ಕೆ ಅವಳಿ ಗಾಯದ ಭೀತಿ ಎದುರಾಗಿದೆ. ಎಡಮೊಣಕಾಲಿಗೆ ಚೆಂಡೇಟು ಬಿದ್ದರೂ ರೋಹಿತ್ ಕೆಲಕಾಲ ಬ್ಯಾಟಿಂಗ್ ಅಭ್ಯಾಸ ಮುಂದುವರಿಸಿದರು. ಸ್ವಲ್ಪ ಸಮಯದ ನಂತರ ಫಿಸಿಯೋಥೆರಪಿಸ್ಟ್ ರಿಂದ ಚಿಕಿತ್ಸೆ ಪಡೆದುಕೊಂಡರು. ಮೊಣಕಾಲಿಗೆ ಐಸಿಬ್ಯಾಗ್ ಸುತ್ತಿ ಚೇರ್ ಮೇಲೆ ಕಾಲನ್ನು ಚಾಚಿ ರೋಹಿತ್ ಕೆಲಕಾಲ ಕುಳಿತುಕೊಂಡಿದ್ದರು. ಆದರೆ ರೋಹಿತ್, ಆಕಾಶ್ ಗಾಯದ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ನಿಂದ ಯಾವುದೇ ಪೂರಕ ಮಾಹಿತಿ ಲಭ್ಯವಾಗಿಲ್ಲ. ಅಭ್ಯಾಸದ ವೇಳೆ ಇಂಥ ಏಟುಗಳು ಸಾಮಾನ್ಯ. ಈ ಬಗ್ಗೆ ಕಳವಳಪಡುವ ಅಗತ್ಯವಿಲ್ಲ ಎಂದು ಆಕಾಶ್ದೀಪ್ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.