ವಿಶ್ವವಿದ್ಯಾಲಯ :ಸಂಖ್ಯೆಯಷ್ಟೇ ಮುಖ್ಯವೇ?

ವಿಶ್ವವಿದ್ಯಾಲಯ :ಸಂಖ್ಯೆಯಷ್ಟೇ ಮುಖ್ಯವೇ?

ವ್ಯಾಪಕವಾದ, ಗಹನವಾದ ಅಂತರ್ಶಿಸ್ತೀಯ ಅಧ್ಯಯನಗಳು ನಡೆಯುವ ವಿಶ್ವವಿದ್ಯಾಲಯಗಳು ನಮ್ಮಲ್ಲಿ ಇವೆಯೇ ಎಂದು ಕೇಳಿಕೊಂಡರೆ ನಿರಾಸೆ ಕಟ್ಟಿಟ್ಟ ಬುತ್ತಿ.

ರಾಜ್ಯದಲ್ಲಿ ಈ ಹಿಂದೆ ಇದ್ದ ಸರ್ಕಾರವು ಯಾವ ಪೂರ್ವ ಸಿದ್ಧತೆಯೂ ಇಲ್ಲದೆ ತರಾ ತುರಿಯನ್ನು ಆರಂಭಿಸಿದ 10 ವಿಶ್ವವಿದ್ಯಾಲಯಗಳ ಪೈಕಿ ಒಂಬತ್ತನ್ನು ಮುಚ್ಚಲು ಸಚಿವ ಸಂಪುಟ ಉಪ ಸಮಿತಿ ತೀರ್ಮಾನಿಸಿದೆ ಎಂದು ವರದಿಯಾಗಿದೆ (ಪ್ರ.ವಾ.ಫೆ. 14)ಇದು ಸರಿಯಾದ ನಡೆ.
ಇಂದು ವಿಶ್ವವಿದ್ಯಾಲಯಗಳೆಂದು ನಾವು ಕರೆಯುವ ನಮ್ಮ ಈ ಆಧುನಿಕ ಸಾಲದ ಬೋಧನ- ಶೋಧನ ಸಂಸ್ಥೆಗಳ ತತ್ವವೇನು, ಅವುಗಳ ರೂಪುರೇಷೆ ಮತ್ತು ಸಂರಚನೆ ಎಂಥದ್ದಿರಬೇಕು, ಯಾವೆಲ್ಲ ವಿಷಯಗಳನ್ನು ಯಾವ ಯಾವ ಪರಿ ಪ್ರೇಕ್ಷ್ಯದಲ್ಲಿ ಬೋಧಿಸಬೇಕು, ಶೋಧಿ ಸಬೇಕು ಎಂಬ ಪರಿಕಲ್ಪನೆಗೊಂದು ನಿಖರವಾದ ರೂಪ ಬಂದದ್ದು ಈಗ್ಗೆ 200-250 ವರ್ಷಗಳ ಹಿಂದೆ. ಜಾಗತಿಕ ಮಟ್ಟದಲ್ಲಿ, ಸೆಕ್ಯುಲರ್ ಆದ ಜ್ಞಾನ ವೃದ್ದಿಗೆ ಕೊಡುಗೆಯನ್ನು ಕೊಡುತ್ತಾ ಬಂದಿರುವ ವಿಶ್ವವಿದ್ಯಾಲಯಗಳೆಲ್ಲವೂ ಆ ತತ್ವ, ರೂಪುರೇಷೆ ಮತ್ತು ಸಂರಚನೆಗಳ ಮಾದರಿಯನ್ನು ಶ್ರದ್ಧೆಯಿಂದ ಅಳವಡಿಸಿಕೊಂಡು ಬಂದಿರುವ ಸಂಸ್ಥೆಗಳಾಗಿವೆ.


ಆದರೆ ,ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಬೆರಳಣಿಕೆಯ ಕೆಲವನ್ನು ಬಿಟ್ಟರೆ ,ಉಳಿದೆಲ್ಲ ವಿಶ್ವವಿದ್ಯಾಲಯಗಳು ತಮ್ಮಲ್ಲಿನ ವಿದ್ಯಾರ್ಥಿಗಳಿಗೆ ಪ್ರಾಪಂಚಿಕವಾದ ಸ್ಥೂಲ ಮಾಹಿತಿಯನ್ನು ಕೊಟ್ಟು ಅಕ್ಷರಸ್ಥ, ಅರೆ ಬರೆ ಅಕ್ಷರಸ್ಥ ಕೂಲಿಗಳನ್ನು ಸೃಷ್ಟಿಸುವ ದೊಡ್ಡ ಕಾರ್ಖಾನೆಗಳಾಗಿವೆ. ಪದವೀಧರರಿಗೆ ಬರೀ ಸರಳ -ಸರಳೀಕೃತ ಮಾಸ್ತರಿಕೆಯ ಕೆಲಸ ಕೊಟ್ಟು, ಸಂಬಳ ಸಮೇತವಾದ ಜೀವನೋಪಾಯ ಒದಗಿಸುವ ದೊಡ್ಡಿಗಳಾಗಿವೆಯಷ್ಟೇ ವಿನಾ ವಿದ್ಯಾರ್ಥಿಗಳಲ್ಲಿಯಾಗಲಿ, ಅಧ್ಯಾಪನ ವರ್ಗದವರಲ್ಲಿಯಾಗಲಿ ತಾವು ಭೌದ್ದಿಕವಾದ, ಮಾನಸಿಕವಾದ ದೊಡ್ಡ ದರ್ಶನವನ್ನು ಪಡೆಯಬೇಕು. ಅಂಥ ದರ್ಶನವನ್ನು ಪಡೆಯುವುದರತ್ತ ಸಂಶೋಧನೆ ಮಾಡಿ ಲೋಕಕ್ಕೆ ನೀಡಬೇಕು ಎಂಬ ಉತ್ಕಟತೆ ಹಾಗೂ ಶ್ರದ್ಧೆಯನ್ನು ಹುಟ್ಟು ಹಾಕುವ ಅರಿವಿನ ಚಿಲುಮೆಗಳಾಗಿಲ್ಲ.

ಇದನ್ನೂ ಓದಿ:ಪ್ರಧಾನಿ ಮೋದಿ ಅಮೆರಿಕ ಭೇಟಿ ಫಲಿತಾಂಶ ಅರಿಯಲು ತುಸು ಕಾಯಬೇಕು


ನಮ್ಮ ಸರ್ಕಾರಗಳು ಉಗ್ರಾಣ, ಮಾರುಕಟ್ಟೆಗಳನ್ನು ಸ್ಥಾಪಿಸುವುದಕ್ಕಾದರೂ ಕೆಲವು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತವೆ. ಆದರೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವಾಗ ಅಂತಹ ಯಾವ ಪೂರ್ವ ತಯಾರಿಯನ್ನೂ ಮಾಡಿಕೊಳ್ಳುವುದಿಲ್ಲ. ಯಾವುದೋ ಒಂದು ಜನ ವರ್ಗವನ್ನು ಓಲೈಸಲು ಆ ವರ್ಗದವರಿಗೆ ಪ್ರಿಯವಾದ ವಿಷಯವೊಂದಕ್ಕೆ ಮೀಸಲಾದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು, ಅಲ್ಲಿ ತಮ್ಮ ರಾಜಕೀಯದ ಲೆಕ್ಕಾಚಾರಗಳನ್ನು ಒಪ್ಪಿ, ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ವ್ಯಕ್ತಿಗಳನ್ನು ಕುಲಪತಿಯ ಸ್ಥಾನಕ್ಕೂ ಅಧಿಕಾರದ ಬೇರೆ ಬೇರೆ ಸ್ಥಾನ ಗಳಿಗೂ ನೇಮಿಸುವುದು ಹೀಗೆ ಸಾಗಿದೆ ಸರ್ಕಾರಗಳ ಆಟ. ಹಾಗೆ ಶುರುವಾದ ಸಂಸ್ಥೆಗಳಲ್ಲಿ ಕಟ್ಟಡಗಳು, ಬೋಧಿಸುವವರು, ಪ್ರಯೋಗ ಶಾಲೆಗಳು, ಸರಿಯಾದ ಗ್ರಂಥಾಲಯ, ಅಗತ್ಯವಾದ ಬೇರೆ ಸಿಬ್ಬಂದಿ ಇರುವುದಿಲ್ಲ, ಅಧ್ಯಯನಾಂಗಗಳಲ್ಲಿ ವಿದ್ಯಾರ್ಥಿಗಳೂ ಇರುವುದಿಲ್ಲ ಇದು ಇಂದಿನ ನಮ್ಮ ಉನ್ನತ ಶಿಕ್ಷಣದ ದುಃಸ್ಥಿತಿ.


ಇನ್ನೂ ತಲೆಗೊಂದು ತೋಕೆಗೊಂದು ಎಂಬಂತೆ ಹುಟ್ಟು ಹಾಕಲಾಗಿರುವ ವಿಷಯವಾರು ವಿಶ್ವವಿದ್ಯಾಲಯಗಳನ್ನು ನೋಡಿ. ಜಾನಪದ, ಸಂಗೀತ ಮತ್ತು ಲಲಿತ ಕಲೆ, ಸಂಸ್ಕೃತ, ಮಹಿಳಾ ಸಂಬಂಧಿತ ಅಧ್ಯಯನ ಇಂತಹ ಒಂದೊಂದು ವಿಷಯಕ್ಕೂ ಸ್ವತಂತ್ರವಾದ ಒಂದೊಂದು ವಿಶ್ವವಿದ್ಯಾಲಯವೇ ಸ್ಥಾಪನೆಗೊಂಡಿರುವುದು ಅಸಂಗತವೋ ಅಸಂಬದ್ಧವೂ ಆಗಿದೆ. ನಮ್ಮಲ್ಲಿ ಯಾಕೆ ಹೀಗಾಗಿದೆ ಎಂದರೆ, ನಮಗೆ ವಿಶ್ವವಿದ್ಯಾಲಯವೆಂದರೆ ಏನು ಎಂಬುದೇ ಇನ್ನೂ ಅರ್ಥ ಆದಂತಿಲ್ಲ. ಒಂದು ವಿಶ್ವವಿದ್ಯಾಲಯವೆಂದರೆ ಆ ಮಾತಿನ ಅಸಲಿ ಅರ್ಥ ಮತ್ತು ಅದರ ತತ್ವ ಹೀಗಿದೆ : ಅಲ್ಲಿ ಜೀವ ,ಭೌತ, ರಸಾಯನ, ಗಣಿತ, ಖಗೋಳ, ಯಂತ್ರ-ತಂತ್ರ, ಭೂಗರ್ಭ ದಂತಹ ಭೌತಿಕ ವಿಜ್ಞಾನಗಳು ಮತ್ತು ಸಮಾಜ, ಸಾಹಿತ್ಯ, ಇತಿಹಾಸ, ಆರ್ಥಿಕ, ರಾಜಕೀಯ, ಮಾನಸಿಕ ,ತತ್ವ ಜ್ಞಾನದಂತಹ ಮಾನವಿಕ ಶಾಸ್ತ್ರಗಳು ಹಾಗೂ ನೃತ್ಯ- ನಾಟಕ ,ಸಂಗೀತ -ಚಿತ್ರಕಲೆಯಂತಹ ಲಲಿತ ಕಲೆಗಳು ಹಾಗೂ ಇಲ್ಲಿ ಹೆಸರಿಸದ ಇನ್ನೆಷ್ಟೋ ವಿಷಯಗಳು ವಿಶಾಲ ವಿಶ್ವದ ಎಲ್ಲವುದರ ಬೋಧನ, ಅಧ್ಯಯನ, ಶೋಧನವು ಒಂದೇ ವಿಶಾಲ ಸಂಸ್ಥೆಯ ಆವರಣದಲ್ಲಿ ಬೇರೆ ಬೇರೆ ವಿಭಾಗಗಳಾಗಿ ನೆಲೆಗೊಂಡಿರಬೇಕು. ಆ ವಿ ಭಾಗಗಳ ನಡುವೆ ಔಪಚಾರಿಕವೋ ಅನೌಪಚಾರಿಕವೋ ಆಗಿರುವ ಕೊಡು-ಕೊಳ್ಳುವಿಕೆ ಮುಕ್ತವಾಗಿ ನಡೆಯುತ್ತಿರಬೇಕು. ವ್ಯಾಪಕವಾದ, ಗಹನವಾದ ‌ ಅಂತರ್ಶಿಸ್ತೀಯ ಅಧ್ಯಯನಗಳು ನಡೆದು, ಅಲ್ಲಿನ ಎಲ್ಲರೂ ಕುವೆಂಪು ಹೇಳುವ ಪೂರ್ಣ ದೃಷ್ಟಿಯನ್ನು ಬೆಳೆಸಿಕೊಳ್ಳಲು ತುಡಿಯುವಂತಾಗಿ, ಅವರಿಂದ ಸಮಾಜದಲ್ಲಿಯೂ ಲೋಕದಲ್ಲಿಯೂ ಪೂರ್ಣ ದೃಷ್ಠಿ ಪಡೆದುಕೊಳ್ಳಲು ಬೇಕಾದ ಆರೋಗ್ಯಪೂರ್ಣ ಅಭಿಲಾಷೆ ನೆಲೆಯೂರ ಬೇಕು.
ಅಂಥ ವಿಶ್ವವಿದ್ಯಾಲಯಗಳು ನಮ್ಮಲ್ಲಿ ಇವೆಯೇ, ಅಂಥವುಗಳನ್ನು ಹುಟ್ಟುಹಾಕಿ, ಪೊರೆಯುವ ಮನಸ್ಸು ನಮ್ಮನ್ನು ಆಳುವವರಿಗೆ ಹೋಗಲಿ, ವಿಶ್ವವಿದ್ಯಾಲಯಗಳಲ್ಲಿನ ಬೋಧಕವರ್ಗದವರಿಗಾದರೂ ಇದೆಯೇ, ಇದ್ದರೆ ಎಷ್ಟು ಜನರಲ್ಲಿ ಎಷ್ಟರಮಟ್ಟಿಗೆ ಇದೆ ಎಂದು ಕೇಳಿಕೊಂಡಾಗಲೆಲ್ಲ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ.


ಕರ್ನಾಟಕದಲ್ಲಿ ಇಷ್ಟು ವಿಶ್ವವಿದ್ಯಾಲಯಗಳಿದ್ದರೂ ಕರ್ನಾಟಕದ ಬಗ್ಗೆ, ಕನ್ನಡದ ಬಗ್ಗೆ ಅತ್ಯುತ್ತಮ ಅಧ್ಯಯನಗಳು ಇನ್ನಷ್ಟೇ ನಡೆಯಬೇಕಾಗಿದೆ .ಹಾಗಾಗಿ, ಹೆಚ್ಚು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದಕ್ಕಿಂತ ಇರುವ ವಿಶ್ವವಿದ್ಯಾಲಯಗಳನ್ನು ಬೌತಿಕವಾಗಿ ಮತ್ತು ಭೌದ್ದಿಕವಾಗಿ ಸಶಕ್ತ ಗೊಳಿಸುವುದು, ವಿಶ್ವವಿದ್ಯಾಲಯಗಳ ಸ್ವಾಯತ್ತತೆಗೆ ದಕ್ಕೆ ತಾರದಿರುವುದು, ಶೈಕ್ಷಣಿಕ ಕಾಳಜಿಯುಳ್ಳ ಅಧ್ಯಾಪಕರ ನೇಮಕಾತಿಯಾಗುವಂತೆ ನೋಡಿಕೊಳ್ಳುವುದು ಮುಖ್ಯವಾಗಬೇಕಿದೆ. ಈ ಉಪಕ್ರಮಗಳಿಂದ ಕಲೆ ಸಮಾಜ ವಿಜ್ಞಾನ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಅತ್ಯಂತ ಮಹತ್ವದ ಸಂಶೋಧನೆಗಳು ನಮ್ಮಲ್ಲೇ ನಡೆಯಲು ಸಾಧ್ಯವಿದೆ .ಹೀಗಾಗಿ, ವಿಷಯವಾರು, ಜಿಲ್ಲಾವಾರು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ನಡೆಯನ್ನು ಸರ್ಕಾರ ಇನ್ನಾದರೂ ಕೈ ಬಿಡಲಿ.
ಬಿ.ಕೆ .ಚಂದ್ರಶೇಖರ್ ರಘುನಂದನ, ನಿತ್ಯಾನಂದ ಬಿ. ಶೆಟ್ಟಿ, ಎಚ್. ಎಂ. ಸೋಮಶೇಖರಪ್ಪ, ರಾಜಾರಾಮ ತೋಳ್ಪಾಡಿ, ಡಿ .ಡಾಮಿನಿಕ್

Leave a Comment