ಶಬ್ದಾರ್ಥ ಮಥಿಸಿ ಬಂದ ಬಂಧದ ನವನೀತ
ಘಾ ಚರ್ ಘೋಚರ್.. ಅವಳು ಇದ್ದಕ್ಕಿದ್ದಂತೆ ‘ಹಾಗೆಂದು ಹೇಳುವ ತನಕ ಆತನಿಗೆ ಶಬ್ದವನ್ನು ಕೇಳಿಯೂ ಗೊತ್ತಿರುವುದಿಲ್ಲ. ಏನೊಂದೂ ಗೊತ್ತಾಗದೆ ‘ಘಾಚರ್ ಘೋಚರ್’ ಅಂದರೇನು ಅಂತ ವಿಚಾರಿಸಿದಾಗ, ಅದು ತನ್ನ ತವರುಮನೆಯಲ್ಲಿ ಬಳಕೆಯಾದ ಶಬ್ದವೆಂದೂ, ಸೀರೆಯ ಒಳಗೆ ತೊಡುವ ಪೆಟ್ಟಿಕೋಟ್ನ ಹಗ್ಗವು ಗಂಟಾಗಿ ಗೋಜಲಾದಾಗ ಉದ್ಧರಿಸಿದ ಶಬ್ದ ಹಾಗೇ ಬಳಕೆಗೆ ಬಂತೆಂದೂ, ಅದು ತನ್ನ ತವರು ಮನೆಯವರಿಗೆ ಮಾತ್ರ ಗೊತ್ತಿರುವ ಶಬ್ದವೆಂದೂ ವಿವರಿಸುತ್ತಾಳವಳು, ವಿವೇಕ ಶಾನಭಾಗರ ‘ಘಾಚರ್ ಘೋಚರ್’ ಕಾದಂಬರಿಯಲ್ಲಿ ಬರುವ ಈ ಪದಯುಗ್ಧ ಆ ಕಾದಂಬರಿಗೆ ಶೀರ್ಷಿಕೆಯನ್ನೂ ಒದಗಿಸಿದೆ.
ವಿಶೇಷ ನೋಡಿ. ಯಾರಿಗೂ ಗೊತ್ತಿಲ್ಲದ ಶಬ್ದ ಅದನ್ನು ಪದಗಳಂತಿರುವ ಆ ಶಬ್ದಯುಗಳಕ್ಕೆ ಒಂದು ಅರ್ಥವೂ. ಅರ್ಥಕ್ಕಿಂತ ಹೆಚ್ಚಾಗಿ ಮನೆಮಂದಿಯ ಆಪ್ತ ನಂಟೂ ಇರುತ್ತದೆ. ಹೀಗೆ ಎಷ್ಟೊಂದು ಮನೆಗಳಲ್ಲಿ ಎಷ್ಟೊಂದು ನಂಟುಗಳ ಮಧ್ಯೆ ಅವೆಷ್ಟು ಶಬ್ದಗಳು ಹುಟ್ಟಿ ಬಳಕೆ ಕಳ ಯಲ್ಲಿರುವವೋ… ತರಗತಿಯಲ್ಲಿ ಅಕ್ಕಪಕ್ಕದಲ್ಲಿ ಕೂರುವ ಗೆಳೆಯರವರು. ಕಾರಿಡಾರ್ನಲ್ಲಿ ಹೋಗುವಾಗ ಇದ್ದಕ್ಕಿದ್ದಂತೆ ಇಬ್ಬರಲ್ಲೊಬ್ಬ ಉಸುರುತ್ತಾನೆ. “ಮೊಟ್ಟೆ ಕಣೋ,” ಅನ್ನುತ್ತ ಇಬ್ಬರೂ ಕಾರಿಡಾರ್ನಲ್ಲಿ ಕಣ್ಮರೆಯಾಗುತ್ತಾರೆ. ಅವರು ಕಾಲಿಗೆ ಬುದ್ದಿ ಹೇಳಿದ್ದು ಎದುರಿನಿಂದ ಬರುತ್ತಿದ್ದ ಲೆಕ್ಚರರ್ ಒಬ್ಬರನ್ನು ಕಂಡು! ಆ ಉಪನ್ಯಾಸಕರ ತಲೆಯಲ್ಲಿ ಕೂದಲು ಕಡಿಮೆ, ನೆತ್ತಿ ಭಾಗದಲ್ಲಂತೂ ಪೂರ್ತಿ ನುಣ್ಣಗೆ. ಅದಕ್ಕೆ ಇವರು ಹಾಗೆ ಕರೆಯುತ್ತಿದ್ದರು, ಮತ್ತದು ಅವರಿಗೆ ಮಾತ್ರ ಗೊತ್ತು… ಹೀಗೆ ಕಾಲೇಜುಗಳಲ್ಲಿ ಉಪನ್ಯಾಸಕರಿಗೆ, ಪರಸ್ಪರ ಸಹಪಾಠಿಗಳಿಗೆ ಗುಪ್ತ ನಾಮಗಳನ್ನು ಇಡುವವರೆಷ್ಟೋ, ಕರೆಕರೆದು ಖುಷಿಪಡುವವರೆಷ್ಟೋ. ಕೆಲವೊಮ್ಮೆ ಇಡೀ ತರಗತಿಯೇ ಯಾರಿಗೋ ಒಂದು ಹೆಸರಿಟ್ಟಿರುತ್ತದೆ, ಅದು ಆ ಬ್ಯಾಚ್ಗೆ ಮಾತ್ರ ಸೀಮಿತ. ವಿಶೇಷವೆಂದರೆ, ಹತ್ತೋ ಇಪ್ಪತ್ತೋ ವರ್ಷಗಳು ಕಳೆದ ಬಳಿಕ ಅವರೆಲ್ಲ ಸೇರಿದಾಗ ಈ ಶಬ್ದ ಎಲ್ಲರ ಮುಖದಲ್ಲೂ ಮತ್ತೆ ನಗೆ ಮೂಡಿಸುತ್ತದೆ. ಆಪ್ತ ಲೋಕವೊಂದು ಮತ್ತೆ ತೆರೆದುಕೊಳ್ಳಲು ಕಾರಣವಾಗುತ್ತದೆ.
ಹಾಗೆ ನೋಡಿದರೆ ಪ್ರತಿಯೊಬ್ಬರಲ್ಲೂ ಹೀಗೊಂದು ಖಾಸಗಿ ಪದಕೋಶ ಇದ್ದೇ ಇರುತ್ತದೆ. ಅಮ್ಮ-ಮಗುವಿನದ್ದೇ ಒಂದು ಭಾವಲೋಕ, ಅಲ್ಲಿ ಮುದ್ದಿಗೆಂದು ಸೃಷ್ಟಿಯಾದ ಶಬ್ದ ಅದು ಅವರಿಗಷ್ಟೇ ಸೀಮಿತ. ಕೆಲವೊಮ್ಮೆ ಯಾರೋ ಇನ್ನೊಬ್ಬರೊಂದಿಗೆ ಹಂಚಿಕೊಂಡಿರದ ಒಬ್ಬರ ಮನೋಲೋಕದಲ್ಲಿ ಮಾತ್ರ ಓಡಾಡುವ ಪದಗಳೂ ಇರಬಹುದು. ಮನದಲ್ಲೇ ಯಾರಿಗೋ ಹೆಸರಿಟ್ಟಿರಬಹುದು, ಬೈದುಕೊಳ್ಳಲೊಂದು ಶಬ್ದವಿಟ್ಟು ಸಮಾಧಾನಪಟ್ಟಿರಬಹುದು. ವ್ಯಕ್ತಿಗಳಿಗೇ ಏಕೆ, ವಸ್ತುಗಳಿಗೂ ಇಟ್ಟ ಹೆಸರೊಂದು ಖಾಸಗಿ ಕ್ಷಣದಲ್ಲಿ ಕೋಡ್ವರ್ಡ್ನಂತೆ ಬಳಕೆಯಾಗಬಹುದು, ಒಲವು ಹೇಳಲೊಂದು, ಮುದ್ದಿಗೊಂದು, ಮತ್ತಿನಲಿ ಇನ್ನೊಂದು… ಹೀಗೆ ಗಂಡ- ಹೆಂಡಿರ ನಡುವೆ, ಗೆಳೆಯ-ಗೆಳತಿಯರ ನಡುವೆ, ಅಣ್ಣ- ತಮ್ಮ ಅಕ್ಕ- ತಂಗಿಯರ ನಡುವೆ… ಎಷ್ಟೆಲ್ಲ ಬಂಧಗಳ ನಡುವೆ ಅವರಿಗಷ್ಟೇ ಸೀಮಿತವಾದ ವಿಶಿಷ್ಟ ಶಬ್ದಗಳು ಇರುತ್ತವೋ, ಒಂದು ತಮಾಷೆ ಪ್ರಸಂಗವಿದು: ಒಬ್ಬ ಪುಟ್ಟ ಬಾಲಕನನ್ನು ಅಪ್ಪನೊಂದಿಗೆ ಬೇರೆ ಯಾರದೋ ಮನೆಗೆ ರಾತ್ರಿ ಉಳಕೊಳ್ಳುವ ಕಾರ್ಯಕ್ರಮಕ್ಕೆ: ಅಮ್ಮ ಕಳುಹಿಸುತ್ತಾಳೆ. ಹೀಗೆ ಕಳಿಸುವಾಗ ಅಮ್ಮ ಸೂಚಿಸುತ್ತಾಳೆ. “ರಾತ್ರಿ ಸುಸ್ಸು ಬಂದ್ರೆ ಎಲ್ಲರ ಎದುರಿನಲ್ಲಿ ಹಾಗೆ ಹೇಳೋಡ, ‘ನಂಗೆ ಹಾಡು ಬರ್ತಿದೆ’ ಅನ್ನು.” ಅಂದಿರುತ್ತಾಳೆ. ಅಪ್ಪನಿಗದು ಗೊತ್ತಿರುವುದಿಲ್ಲ ಸರಿ, ನಡುರಾತ್ರಿ ಮಗುವಿಗೆ ಅವಸರವಾಯಿತು. ಅಪ್ಪನನ್ನು ಎಬ್ಬಿಸುತ್ತಾನೆ. ಅಪ್ಪ ಏನೆಂದು ಕೇಳಿದರೆ, “ಹಾಡು ಬರ್ತಿದೆ,” ಅನ್ನುತ್ತಿದೆ ಮಗು. ಮಗುವಿನ ಕಾಟ ತಡೆಯಲಾರದೆ ಅಪ್ಪ “ಸರಿ, ನನ್ನ ಕಿವಿಯಲ್ಲಿ ಹಾಡು,” ಅನ್ನುತ್ತಾನೆ!
ಇದನ್ನೂ ಓದಿ: ಜಿಮ್ ನೈಜ ಹೂಡಿಕೆಗೆ ಪ್ರಾಶಸ್ತ್ಯ, ಭಿನ್ನ ದೃಷ್ಟಿ
ಇಂಥ ಮಾತುಗಳು ಬಳಸುವವರಿಗೆ ಮಾತ್ರ ಮುಖ್ಯ ಮತ್ತು ಅನನ್ಯ. ಹಲವು ಬಾರಿ ಇನ್ನಾರೋ ಕೇಳಿದರೆ ಆ ಶಬ್ದಕ್ಕೆ ಬೇರೇನೋ ಅರ್ಥ ಇರಬಹುದು ಅಥವಾ ಅಂಥ ಗಹನವಾದ ಅರ್ಥ ಇರದೇ ಹೋಗಬಹುದು. ಅವರಿಗದು ಕೆಲವು ಅಕ್ಷರಗಳಿಂದ ಹೆಣೆದ ಬರಿಯ ಶಬ್ದವಷ್ಟೇ. ಆದರೆ, ಅದನ್ನು ಬಳಸುವವರು, ಸೃಷ್ಟಿಸುವವರ ಭಾವಲೋಕದಲ್ಲಿ ಅದಕ್ಕೆ ಒಂದು ವಿಶಿಷ್ಟ ಜಾಗವಿರುತ್ತದೆ. ಆದರೆ, ಈ ಪದಬಳಕೆಯೇ ಯಾರೋ ಒಬ್ಬರಿಂದ ಇನ್ನೊಬ್ಬರಿಗೆ ಹರಡಿ, ಕೊನೆಗೊಂದು ಪ್ರದೇಶಕ್ಕೇ ವ್ಯಾಪಿಸಿ ಅಲ್ಲಿಯ ಭಾಷೆಯನ್ನು – ರೂಪಿಸುವ ಸಾಧ್ಯತೆಯೂ ಇಲ್ಲದಿಲ್ಲ. ದ.ಕ., ಕರಾವಳಿಯ ಕಡೆ ‘ಮೊಟ್ಟೆ’ ಅನ್ನುವ ಶಬ್ದವನ್ನು ಬಳಕೆ ಮಾಡುವ ರೀತಿ ಗಮನಿಸಿ, ಮೊಟ್ಟೆ ಅಂದರೆ ‘ತತ್ತಿ’ ನಿಜ. ಆದರೆ, ‘ಮಡಿಲು’ ಅಪದವನ್ನು ಸೂಚಿಸುವುದಕ್ಕೂ ‘ಮೊಟ್ಟೆ’ ಶಬ್ದವನ್ನೇ ಬಳಸುತ್ತಾರೆ. ಮೊಟ್ಟೆ ಹೇಗಿದ್ದರೂ ಒಳಗೆ ಮರಿಯನ್ನು ಹಾರಿಸಿಕೊಂಡಿರುತ್ತದಲ್ಲ ಹಾಗೆಯೇ ಮನುಷ್ಯರ ಮರಿಗಳನ್ನು ತೋಪಾನವಾಗಿ ಇರಿಸಿಕೊಳ್ಳುವುದಕ್ಕೂ ಇದು ಸೂಕ್ತ ಎಂದು ಮಾರೋ ಮೊದಲು ಬಳಸಿದ್ದಿರಬೇಕು. ಈ ಬಗ್ಗೆ ಲೇಖಕಿ
ವೈದೇಹಿಯವರು ತಮ್ಮ ಕಥೆ ಪಯಣದಲ್ಲಿನ ‘ಹುಡುಗಿ’ಯಲ್ಲಿ ಹೇಳುವುದು ಹೀಗೆ: ‘ಮಡಿಲಿಗೆ ಮೊಟ್ಟ ಎನ್ನುವ ಕನ್ನಡ ನನ್ನ ಕಡೆಯದು. ಮಗುವನ್ನು ಹೀಗೆ ಮೊಟ್ಟೆಯಲ್ಲಿಟ್ಟು ಕೊಂಡು ಪ್ರಯಾಣ ಮಾಡುವ ಆ ಕ್ಷಣಿಕ, ಕ್ಷಿಪ್ರ ಅವಧಿಯಲ್ಲಿಯೇ ತನುವಿಗೂ ಮನುಗೂ ಒದಗಿಬರುವ ಅನುಭವಗಳನ್ನು ಹೇಳಲು, ಇಳಿಯುವ ತಾಣ ಬಂದು ಹೊರಡುವಾಗ ಆ ಒಂದು ಕ್ಷಣಚೂರಿನಲ್ಲಿ ಚೂರು ಗುಡುವ ಕಿಡಿಯುರಿಯನ್ನು ಭಾಷೆಯಲ್ಲಿ’. ನಿಜ, ಭಾವದ ಅಧಿಕ್ಯದ ಮುಂದೆ ಭಾಷೆ ಒಮ್ಮೊಮ್ಮೆ ಸೋಲುತ್ತದೆ. ಆದರೂ, ಪದಪದಕ್ಕೂ ನಮ್ಮ ಭಾವಗಳ ಬಣ್ಣ ಹಚ್ಚಿ ಅದನ್ನು ಶಕ್ತಿಯುತವಾಗಿ ಮಾಡುತ ಬಂದಿರುವುದರಿಂದಲೇ ಭಾಷೆ ರೂಪುಗೊಂಡಿದೆ.
ಹಾಗೆ ನೋಡಿದರೆ ನಾವು ಬಳಸುವ ಭಾಷೆಯ ಸೃಷ್ಟಿಯಾದದ್ದೂ ಹೀಗೆಯೇ ಇರಬೇಕು. ತಮ್ಮತಮ್ಮ ಮನೋಲೋಕದಲ್ಲಿ ಹುಟ್ಟಿದ ಸದ್ದೊಂದನ್ನು ಬಳು, ಇನ್ನೊಬ್ಬರೊಂದಿಗೆ ಸಂವಹಿಸಿದಾಗ ಅವರೂ ಅದನ್ನು ಬಳಸ ತೊಡಗುತ್ತಾರೆ, ಆ ಭಾಷೆಗೆ ಅದೇ ಅರ್ಥ ಎಂಬುದು ಸಂವಹನದ ಸಂದರ್ಭದಲ್ಲಿ ಆರೋಪಿತವಾಗುತ್ತಾ ಹೋಗುತ್ತದೆ. ಈಗ ನಾವು ಬಳಸುವ ಈ ಶಬ್ದಗಳ ಅರ್ಥವೇ ಗೊತ್ತಿಲ್ಲವೆಂಬಂತೆ ಖಾಲಿ ಮನದವರಾಗಿ ನೋಡಿದರೆ ಇವೆಲ್ಲ ಬರಿಯ ಅಕ್ಷರಗಳಷ್ಟೇ ಅನಿಸಿಬಿಡುತ್ತದೆ. ಅನ್ಯಗ್ರಹದಿಂದ ಬಂದವರ ಮುಂದೆ ಕನ್ನಡ ಮಾತಾಡಿದರೆ ಅವರಿಗದು ಬರೇ ಸದ್ದು ಅಷ್ಟೇ ಆಗಿರಬಹುದು ಅಲ್ಲವೇ…
ಪ್ರಾದೇಶಿಕವಾಗಿಯೂ ಶಬ್ದಗಳ ಬಳಕೆ ನಮ್ಮಲ್ಲಿ ಭಿನ್ನ ಭಿನ್ನವಾಗಿಯೇ ಇರುತ್ತದಲ್ಲ. ಇದರ ಹಿನ್ನೆಲೆಯೂ ಅದ ಇರಬೇಕು. ದಕ್ಷಿಣ ಕನ್ನಡದವರು ಶಬ್ದವೊಂದಕ್ಕೆ ಆರೋಪಿಸಿದ ಅರ್ಥ ಉತ್ತರ ಕರ್ನಾಟಕಕ್ಕೆ ತಲುವುವಾಗ ಅಲ್ಲಿ ಅದೇ ಶಬ್ದಕ್ಕೆ ಇನ್ನೊಂದು ಅರ್ಥ ಆರೋಪವಾಗಿರುತ್ತದೆ. ಅದಕ್ಕೇ ದಕ್ಷಿಣದ ತಿಂಡಿ’ ಉತ್ತರದವರಿಗೆ ತುರಿಕೆ’. ಕೆಲವೊಮ್ಮೆ ಶಬ್ದಗಳನ್ನು ಆಡುತ್ತ ಆಡುತ್ತ ಅದು ಬದಲಾಗಿ ಇನ್ನೊಂದು ರೂವು ತಳೆಯುವ ಸೋಜಿಗವೂ ಉಂಟು. ‘ಹುಚೂರಾಯ’ ಅನ್ನುತ್ತೇವಲ್ಲ ಹೀಗಂದರೆ ನಿಜವಾಗಿ ಹನುಮಂತನೆಂದರ್ಥ. ಇದರ ಮೂಲ ‘ವೈಚ್ಚರಾಯ’. ಇದು ಬಳಕೆಯಲ್ಲಿ ಬರುತ್ತಾ ಅಪಭ್ರಂಶಕ್ಕೊಳಗಾಗಿ ಹುಚ್ಚರಾಯನಾಯಿತು ಎನ್ನುತ್ತಾರೆ ಭಾಷಾಪಂಡಿತರು. ಗುಂಪೊಂದು ಸೇರಿದಾಗ ಒಬ್ಬರ ಕಿವಿಯಲ್ಲಿ ಏನೋ ಗುಟ್ಟು ಹೇಳಿ ಅದನ್ನು ಒಬ್ಬರಿಂದೊಬ್ಬರು ಕಿವಿಗೆ ಹೇಳುತ್ತ ಸಾಗಿ 1 ಕೊನೆಯವರು ಕೇಳಿಸಿಕೊಂಡ ಶಬ್ದವನ್ನು ಮೊದಲಿನವರಲ್ಲಿ ಹೇಳಿದರೆ ಅದು ಬೇರೆಯೇ ಆಗಿರುತ್ತದಲ್ಲ ಆ ಆಟದ ಹಾಗೆಯೇ ಈ ಪದಗಳ ಓಟದ ಕಥೆಯೂ. ಇಂದು ನಾವು ಬಳಸುವ ಪದಗಳ ಹಿಂದೆ ಯಾರ್ಯಾರು ದಾಟಿಸಿದ ಅರ್ಥದ ರಿಲೆ ಇದೆಯೋ… ಅದು ಎಷ್ಟೆಲ್ಲ ಜನ ತಮ್ಮದೇ ಉಚ್ಚಾರವನ್ನೋ ಅರ್ಥವನ್ನೋ ಭಾವವನ್ನೋ ಆರೋಪಿಸಿದ್ದಾರೋ… ಭಾಷೆಯ ಈ ಪದಪದ ಸೇರಿ ಮಾನವತೆಯ ಎಷ್ಟು ದೊಡ್ಡ ಕೊಂಡಿ ನಿರ್ಮಾಣವಾಗಿದೆಯೋ… ಅದಕ್ಕೇ ಭಾಷೆಯೆಂದರೆ ಮನುಕುಲದ ಕತೆಯೂ ಹೌದು.