ಶ್ರೀಸಾಮಾನ್ಯ ಮತ್ತು ತೆರಿಗೆ ಲೆಕ್ಕಾಚಾರ

ಆದಾಯ ತೆರಿಗೆಯಲ್ಲಿ ರಿಯಾಯಿತಿ: ನಿರೀಕ್ಷಿತ ಫಲ ಸಿಗುವುದೇ?

ಶ್ರೀಸಾಮಾನ್ಯ ಮತ್ತು ತೆರಿಗೆ ಲೆಕ್ಕಾಚಾರ

ಮಧ್ಯಮ ವರ್ಗದವರನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ ಅನ್ನುವ ಕೂಗು ಇತ್ತೀಚಿನ ದಿನಗಳಲ್ಲಿ ಜೋರಾಗಿ ಕೇಳುತ್ತಿತ್ತು. ಅದಕ್ಕೆ ಸ್ಪಂದನವೋ ಎಂಬಂತೆ 2025-26ನೇ ಸಾಲಿನ ಬಜೆಟ್‌ನಲ್ಲಿ, ವಾರ್ಷಿಕ ₹ 12 ಲಕ್ಷದವರೆಗೆ ಆದಾಯ ಇರುವವರಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ಘೋಷಿಸಲಾಗಿದೆ. ಇದರಿಂದ ಅನುಕೂಲ ಪಡೆದವರು ಸಹಜವಾಗಿಯೇ ಸಂಭ್ರಮಿಸಿದ್ದಾರೆ.

ಹಣಕಾಸು ಸಚಿವರ ಪ್ರಕಾರ, ‘ತೆರಿಗೆ ಕಡಿಮೆಯಾದರೆ ತೆರಿಗೆ ಪಾವತಿದಾರರಲ್ಲಿ ಹಣ ಉಳಿಯುತ್ತದೆ, ಅವರು ಹೆಚ್ಚೆಚ್ಚು ಕೊಳ್ಳುತ್ತಾರೆ, ಬೇಡಿಕೆ ಹೆಚ್ಚುತ್ತದೆ. ಪರಿಣಾಮವಾಗಿ ಉತ್ಪಾದನೆ, ಹೂಡಿಕೆ ಹೆಚ್ಚುತ್ತದೆ. ಆರ್ಥಿಕ ಅಭಿವೃದ್ಧಿಯ ಮುಖ್ಯ ಚಾಲಕಶಕ್ತಿ ಸಕ್ರಿಯಗೊಳ್ಳುತ್ತದೆ’. ಹೂಡಿಕೆಯನ್ನು ಹೆಚ್ಚಿಸುವ ದಿಸೆಯಲ್ಲಿ ಹಲವು ವರ್ಷ ಗಳಿಂದ ಪ್ರಯತ್ನಗಳು ನಡೆಯುತ್ತಲೇ ಇವೆ. ಕೆಲ ವರ್ಷಗಳ ಹಿಂದೆ ಖಾಸಗಿ ಹೂಡಿಕೆಯನ್ನು ಹೆಚ್ಚಿಸುವುದಕ್ಕೆ ಕಾರ್ಪೊರೇಟ್ ತೆರಿಗೆಯಲ್ಲಿ ಕಡಿತ ಮಾಡಲಾಗಿತ್ತು. ಆದರೆ ಅದು ಫಲಕಾರಿಯಾಗಲಿಲ್ಲ. ಬೃಹತ್ ಉದ್ಯಮಿಗಳ ಲಾಭಹೆಚ್ಚಿದರೂ ಅವರು ಹೂಡಿಕೆಯನ್ನು ಹೆಚ್ಚಿಸುವ ಮನಸ್ಸು ಮಾಡಲಿಲ್ಲ. ಈಗ ಆರ್ಥಿಕತೆಯಲ್ಲಿ ಬೇಡಿಕೆಯನ್ನು ಹೆಚ್ಚಿಸುವ ಮೂಲಕ ಖಾಸಗಿ ಹೂಡಿಕೆಯನ್ನು ಹೆಚ್ಚಿಸುವ ಪ್ರಯತ್ನ ನಡೆದಿದೆ. ಮಧ್ಯಮ ವರ್ಗದವರನ್ನು ಒಲಿಸಿಕೊ ಳ್ಳುವ ರಾಜಕೀಯ ಉದ್ದೇಶವೂ ಇದರಲ್ಲಿ ಇದ್ದಿರಬಹುದು.

ಭಾರತದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿರುವ ವರ ಸಂಖ್ಯೆ ಬರೀ 8 ಕೋಟಿ. ಆ ಪೈಕಿ ತೆರಿಗೆ ಕಟ್ಟುವವರ ಸಂಖ್ಯೆ 3.1 ಕೋಟಿ ಮಾತ್ರ. ಹಾಗಾಗಿ ಮೇಲಿನ ಸ್ತರದ ಶೇಕಡ 10ರಷ್ಟು ಶ್ರೀಮಂತರ ಗುಂಪಿಗೆ ಸೇರುವ ಇವರನ್ನು ಮಧ್ಯಮ ವರ್ಗದವರು ಎಂದು ಕರೆಯುವುದು ತಪ್ಪು ಎನ್ನುವುದು ಹಲವರ ಅಭಿಪ್ರಾಯ. ಮಧ್ಯಮ ವರ್ಗದವರು ಎಂದರೆ ಯಾರು ಅನ್ನುವ ಬಗ್ಗೆಯೇ ಸ್ಪಷ್ಟತೆ ಇಲ್ಲ. ಪ್ರತಿ ಕುಟಂಬದಲ್ಲಿ ನಾಲ್ಕು ಜನ ಇರುತ್ತಾರೆ ಅಂದು ಕೊಂಡರೆ ಸರ್ಕಾರದ ಈ ಕ್ರಮದಿಂದ ದೇಶದ ಅತ್ಯಂತ ಶ್ರೀಮಂತರೂ ಸೇರಿದಂತೆ ಸುಮಾರು 12.4 ಕೋಟಿ ಜನರಿಗೆ ಅನುಕೂಲವಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕ ಸಕ್ಕೆ ಆಗುವ ವರಮಾನ ನಷ್ಟ ಸುಮಾರು ₹ 1 ಲಕ್ಷ ಕೋಟಿ.

ಇನ್ನು ಈ ಕ್ರಮದಿಂದ ಒಟ್ಟಾರೆ ಬೇಡಿಕೆಯ ಮೇಲೆ ಎಂತಹ ಪರಿಣಾಮ ಅಗಬಹುದು ಅನ್ನುವುದು ತೆರಿಗೆ ರಿಯಾಯಿತಿಯಿಂದ ಉಳಿತಾಯವಾಗಲಿರುವ ಈ ಒಂದು ಲಕ್ಷ ಕೋಟಿ ರೂಪಾಯಿ ಹೇಗೆ ಬಳಕೆಯಾಗುತ್ತದೆ ಅನ್ನುವುದನ್ನು ಅವಲಂಬಿಸಿರುತ್ತದೆ. ಅಷ್ಟೇ ಅಲ್ಲ, ಉಳಿದವರ ಮೇಲೆ ಈ ಕ್ರಮದಿಂದ ಯಾವ ರೀತಿಯ ಪರಿಣಾಮ ಆಗುತ್ತದೆ ಅನ್ನುವುದು ಮುಖ್ಯವಾಗುತ್ತದೆ.

ಅನುಕೂಲಸ್ಥರಲ್ಲಿ ತಮ್ಮ ಅವಶ್ಯಕತೆಯನ್ನು ಪೂರೈಸಿ ಕೊಳ್ಳುವುದಕ್ಕೆ ಬೇಕಾಗುವಷ್ಟು ಹಣ ಇರುತ್ತದೆ.ಹಾಗಾಗಿ, ತೆರಿಗೆ ವಿನಾಯಿತಿಯಿಂದ ಮಿಕ್ಕ ಹಣದ ಬಹುಪಾಲು ಉಳಿತಾಯಕ್ಕೆ ಹೋಗುತ್ತದೆ. ಅದೇ ಬಡವರು ಹೆಚ್ಚುವರಿ ದುಡ್ಡು ಸಿಕ್ಕರೆ ಬಹುಪಾಲನ್ನು ಉಳಿತಾಯಕ್ಕೆ ಹೋಗುತ್ತದೆ ಅದೇ ಬಡವರ ಹೆಚ್ಚುವರಿ ದುಡ್ಡು ಸಿಕ್ಕರೆ ಬಹುಪಾಲನ್ನು ಖರ್ಚುಮಾಡುತ್ತಾರೆ. ಈ ತರ್ಕವನ್ನು ಒಪ್ಪಿಕೊಂಡರೆ ತೆರಿಗೆ ವಿನಾಯಿತಿಯಿಂದ ಬೇಡಿಕೆ ಹೆಚ್ಚುವ ಸಾಧ್ಯತೆ ಕಡಿಮೆ. ಒಂದೊಮ್ಮೆ ಹೆಚ್ಚಿದರೂ ಅವರು ಬಹುತೇಕ ಕೊಳ್ಳುವುದು ಆಮದು ಮಾಡಿಕೊಂಡ ಮಾಡಿಕೊಂಡ ಸರಕುಗಳನ್ನು ಅಥವಾ ಬೃಹತ್ ಉದ್ದಿಮೆಗಳ ಉತ್ಪನ್ನಗಳನ್ನು, ಅದರಿಂದ ಸಣ್ಣಕಿರು, ಅನೌಪಚಾರಿಕ ವಲಯಕ್ಕೆ ಬಹುಶಃ ಅನುಕೂಲ ಆಗುವುದಿಲ್ಲ. ಭಾರತದಲ್ಲಿ ನಿಖರವಾದ ಅಂಕಿಅಂಶ ಹಾಗೂ ಸಮೀಕ್ಷೆಗಳ ಕೊರತೆ ಇರುವುದರಿಂದ ಇಂತಹ ಊಹೆಗಳನ್ನಷ್ಟೇ ಮಾಡಬಹುದು.

ಇದನ್ನೂ ಓದಿ:ಜಾಗತಿಕ ಹೂಡಿಕೆದಾರರ ಸಮಾವೇಶ ಒಪ್ಪ೦ದಗಳು ಉದ್ಯಮ ರೂಪ ತಳೆಯಲಿ

ಸರ್ಕಾರದ ಒಟ್ಟು ತೆರಿಗೆ ಸಂಗ್ರಹ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ. ಜಿಎಸ್‌ಟಿ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹವಾಗುತ್ತಿಲ್ಲ. ಒಟ್ಟಾರೆ ತೆರಿಗೆ ಯಲ್ಲಿ ನೇರ ತೆರಿಗೆಯ ಪ್ರಮಾಣ ಅದರಲ್ಲೂ ಕಾರ್ಪೊರೇಟ್ ಆದಾಯ ತೆರಿಗೆಯ ಪ್ರಮಾಣ ಕಡಿಮೆ -ಆಗುತ್ತಿದೆ. ಹೆಚ್ಚುತ್ತಿರುವುದು ವೈಯಕ್ತಿಕ ಆದಾಯ ತೆರಿಗೆ ಪ್ರಮಾಣ. ಸರ್ಕಾರದ ಕ್ರಮದಿಂದಾಗಿ ಅದೂ ಕಡಿಮೆಯಾಗಬಹುದು. ಹಾಗಾಗದೆ ಹಿಂದಿನಷ್ಟೇ ಅಥವಾ ಅದಕ್ಕಿಂತ ಹೆಚ್ಚು ಸಂಗ್ರಹ ಆಗಬೇಕಾದರೆ ಇರುವುದು ಎರಡು ಸಾಧ್ಯತೆಗಳು. ಒಂದು, ವಾರ್ಷಿಕ ₹ 12 ಲಕ್ಷಕ್ಕಿಂತ ಹೆಚ್ಚು ಸಂಪಾದಿಸುತ್ತಿರುವವರ ಸಂಪಾದನೆ ಇನ್ನೂ ಹೆಚ್ಚಬೇಕು. ಇಲ್ಲವೆಂದರೆ ₹ 12 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಪಡೆಯುವವರ ಸಂಖ್ಯೆ ಹೆಚ್ಚಬೇಕು. ಇವೆರಡೂ ಸಾಧ್ಯತೆಗಳು ಕಡಿಮೆ. ಜೊತೆಗೆ ಬೇರೆ ಮೂಲಗಳಿಂದ ಹೆಚ್ಚಿನ ಬಂಡವಾಳ ಸಂಗ್ರಹ ಸಾಧ್ಯತೆಗಳೂ ಕಡಿಮೆ. 2025ರ ಆರ್ಥಿಕ ಸಮೀಕ್ಷೆಯ ಪ್ರಕಾರವೇ ಜಾಗತಿಕ ಬೇಡಿಕೆ ಅಷ್ಟೊಂದು ಆಶಾದಾಯಕವಾಗಿಲ್ಲ. ಹಾಗಾಗಿ ರಫ್ತಾಗಲಿ, ಕಾರ್ಪೊರೇಟ್ ಸಂಸ್ಥೆಗಳಿಂದ ಹೂಡಿಕೆಆಗಲಿ ಹೆಚ್ಚುವ ಸಾಧ್ಯತೆ ಕಡಿಮೆ. ಆಮದು ಸುಂಕವನ್ನು ಹೆಚ್ಚಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಪ್ರಾರಂಭಿಸಿರುವ ವ್ಯಾಪಾರ ಸಮರದ ಪರಿಣಾಮವೂ ನಮ್ಮನ್ನು ಕಾಡಲಿದೆ.

ಇದರ ನಡುವೆ ವಿತ್ತೀಯ ಕೊರತೆಯನ್ನು ಅಂದರೆ ಒಟ್ಟು ಖರ್ಚು ಹಾಗೂ ವರಮಾನದ ನಡುವಿನ ಅಂತರ ವನ್ನು ತಗ್ಗಿಸುವ ನೀತಿಗೆ ಸರ್ಕಾರ ಬದ್ಧವಾಗಿದೆ. ಈ ವರ್ಷ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 4.8ರಿಂದ 4.4ಕ್ಕೆ ಇಳಿಸಲು ನಿರ್ಧರಿಸಿದೆ. ಹಾಗಾಗಿ, ಸರ್ಕಾರಕ್ಕೆ ವರಮಾನವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಆಗದಿ ದ್ದರೆ ಖರ್ಚಿನಲ್ಲಿ ಕಡಿತ ಮಾಡಿಕೊಳ್ಳುವುದು ಅನಿವಾರ್ಯ ಆಗುತ್ತದೆ. ಸಾಮಾನ್ಯವಾಗಿ ಇಂತಹ ಸಮಯದಲ್ಲಿ ಹೊಡೆತ ಬೀಳುವುದೇ ಬಡವರಿಗೆ ದೊರೆಯುತ್ತಿರುವ ಸೇವೆಗಳಿಗೆ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳಿಗೆ. ಪ್ರತಿ ಬಜೆಟ್‌ನಲ್ಲೂ ಈ ಮೊತ್ತದಲ್ಲಿ ಕಡಿತ ಆಗುತ್ತಿರುವುದನ್ನುಗಮನಿಸಬಹುದು. ಅಷ್ಟೇ ಅಲ್ಲ, ಬಜೆಟ್‌ನಲ್ಲಿ ಘೋಷಿಸಿದ ಮೊತ್ತವನ್ನೂ ವಾಸ್ತವದಲ್ಲಿ ಖರ್ಚು ಮಾಡುತ್ತಿಲ್ಲ.


ಕಳೆದ ವರ್ಷದ ಬಜೆಟ್‌ನಲ್ಲಿ ಈ ಬಾಬ್ರಿಗೆ ಘೋಷಿಸಿದ್ದ ಮೊತ್ತದಲ್ಲಿ 1 ಲಕ್ಷ ಕೋಟಿಯಷ್ಟನ್ನು ಅಂತಿಮವಾಗಿ ಕಡಿತ ಮಾಡಲಾಗಿದೆ. ಕಡಿತವಾಗಿರುವುದೆಲ್ಲಾ ಜನ ಸಾಮಾನ್ಯರಿಗೆ ಅನುಕೂಲವಾಗುತ್ತಿದ್ದ ಗ್ರಾಮೀಣ ಅಭಿವೃದ್ಧಿ, ನಗರಾಭಿವೃದ್ಧಿ, ಶಿಕ್ಷಣ, ಕೃಷಿ, ಆಹಾರ ಸಬ್ಸಿಡಿ, ಆರೋಗ್ಯ ಇಂತಹ ಬಾಬುಗಳಲ್ಲೇ. ಈ ವರ್ಷದ ಬಜೆಟ್‌ನಲ್ಲಿ ಈ ಯೋಜನೆಗಳಿಗೆ ನಿಗದಿಪಡಿಸಿರುವ ಮೊತ್ತದಲ್ಲಿ ಇನ್ನೂ ಕಡಿತವಾಗಿದೆ. ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡರೆ, ಒಟ್ಟು ಜಿಡಿಪಿಗೆ ಹೋಲಿಸಿ ನೋಡಿದರೆ ಕಡಿತ ಹೆಚ್ಚು ಢಾಳಾಗಿ ಕಾಣಿಸುತ್ತದೆ. ಈ ವರ್ಷವೂ ಇದನ್ನು ಪೂರ್ಣವಾಗಿ ಬಳಸದೇ ಇರುವ ಸಾಧ್ಯತೆ ಇದೆ. ಅಂದರೆ ಪ್ರತಿವರ್ಷ ಸಬಲರಿಗೆ ರಿಯಾಯಿತಿ ನೀಡುವುದಕ್ಕೆ ಸಾಮಾನ್ಯರ ಸೌಲಭ್ಯದಲ್ಲಿ ಕಡಿತ ಮಾಡ ಲಾಗುತ್ತಿದೆ. ಹಿಂದೆ ಕಾರ್ಪೊರೇಟ್ ತೆರಿಗೆಯಲ್ಲಿ ಕಡಿತ ಮಾಡಿದಾಗಲೂ ಹೀಗೆಯೇ ಆಗಿತ್ತು. ಇದರಿಂದ ಸಾಮಾನ್ಯರ ಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಅಷ್ಟೇ ಅಲ್ಲ, ಸರ್ಕಾರದ ನೀತಿಯಿಂದ ನಿರೀಕ್ಷಿತ ಫಲವೂ ಸಿಗುವುದಿಲ್ಲ.

ಯಾವುದೇ ನೀತಿಯು ಬಹುಸಂಖ್ಯಾತ ಸಾಮಾನ್ಯರ ಒಳಿತನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಭಾರತ ಜಗತ್ತಿನ ಐದನೇ ಅತಿಶ್ರೀಮಂತ ರಾಷ್ಟ್ರವಾಗಿ ಬೆಳೆದರೂ ಜನಸಾಮಾನ್ಯರ ಸ್ಥಿತಿಯಲ್ಲಿ ಸುಧಾರಣೆಯಾಗಿಲ್ಲ. ಆರ್ಥಿಕ ಸಮೀಕ್ಷೆಯೇ ಹೇಳುವಂತೆ ಸ್ವ-ಉದ್ಯೋಗಿಗಳ ನೈಜ ಆದಾಯದಲ್ಲಿ, ನೌಕರರ ಸಂಬಳದಲ್ಲಿ ಇಳಿಕೆ ಆಗಿದೆ.ಜೊತೆ ಪದಾರ್ಥಗಳ ಬೆಲೆ ತೀವ್ರವಾಗಿ ಏರುತ್ತಿದೆ. ಸರ್ಕಾರವು ಕಲ್ಯಾಣ ಕಾರ್ಯಕ್ರಮಗಳಲ್ಲಿ ಕಡಿತ ಮಾಡಿದರೆ ಅವರ ಕೊಳ್ಳುವ ಶಕ್ತಿ ಇನ್ನಷ್ಟು ಕಡಿಮೆಯಾಗುತ್ತದೆ. ಅವರು ಸಾಮಾನ್ಯವಾಗಿ ಬಳಸುತ್ತಿದ್ದ ಪದಾರ್ಥಗಳ ಬೇಡಿಕೆ ಹಾಗೂ ಉತ್ಪಾದನೆಗೆ ಹೊಡೆತ ಬೀಳುತ್ತದೆ. ಅಂದರೆ ಅನೌಪಚಾರಿಕ ಕ್ಷೇತ್ರಗಳ ಉತ್ಪಾದನೆಗೆ ಇನ್ನಷ್ಟು ಹೊಡೆತ ಬೀಳುತ್ತದೆ.

ಬೃಹತ್ ಉದ್ದಿಮೆಗಳ ಲಾಭ ಒಂದೇ ಸಮ ಏರುತ್ತಿ ದ್ದರೂ ಅವರ ತೆರಿಗೆಯಲ್ಲಿ ಕಡಿತ ಮಾಡಿದರೂ ಅವರು ಹೂಡಿಕೆಯನ್ನು ಹೆಚ್ಚಿಸುವ ಯೋಚನೆ ಮಾಡಲಿಲ್ಲ. ತೆರಿಗೆ ಸಂಗ್ರಹದಲ್ಲಿ ಕಾರ್ಪೊರೇಟ್ ತೆರಿಗೆಯ ಪಾಲು ಇಳಿಯುತ್ತಲೇ ಇದೆ. ಅದರ ಭಾರವೆಲ್ಲಾ ಬಹುಸಂಖ್ಯಾತ ಸಾಮಾನ್ಯರ ಮೇಲೆ ಬೀಳುತ್ತಿದೆ. ಅವರನ್ನು ಆರ್ಥಿಕವಾಗಿ ಇನ್ನಷ್ಟು ಸಂಕಷ್ಟಕ್ಕೆ ದೂಡುವ ಬದಲು ಸರ್ಕಾರ ತನ್ನ ಮಾರ್ಗವನ್ನು ಬದಲಿಸಿಕೊಂಡು ಬೃಹತ್ ಉದ್ಯಮಿಗಳ ಮೇಲಿನ ತೆರಿಗೆಯನ್ನು ಕ್ರಮೇಣ ಏರಿಸುವ ಕಡೆ ಗಮನ ಕೊಡಬೇಕು. ಹಾಗೆಯೇ ತೆರಿಗೆ ಕಡಿತ ಮಾಡುವ ಮೂಲಕ ಬೇಡಿಕೆಯನ್ನು ಹೆಚ್ಚಿಸುವ ಯೋಜನೆ ಇದ್ದರೆ ಬಹುಪಾಲು ಜನರಿಗೆ ಅನುಕೂಲವಾಗುವ ಜಿಎಸ್‌ಟಿ ಅಂತಹ ತೆರಿಗೆಯಲ್ಲಿ ಕಡಿತ ಮಾಡುವುದು ಹೆಚ್ಚು ಪರಿ ಣಾಮಕಾರಿ ಆಗಬಹುದು. ಬಹುಸಂಖ್ಯಾತರ ಅಭಿವೃದ್ಧಿ ಯಿಂದಷ್ಟೆ ಎಲ್ಲಾ ಕ್ಷೇತ್ರಗಳ ಸಮತೋಲಿತ ಅಭಿವೃದ್ಧಿ ಸಾಧ್ಯ. ಸರ್ಕಾರಗಳು ಯೋಜನೆಗಳನ್ನು, ನೀತಿಗಳನ್ನು ನಿಖರ ವಾದ ಅಂಕಿಅಂಶಗಳನ್ನು ಆಧರಿಸಿ, ಅಧ್ಯಯನಗಳನ್ನು ನಡೆಸುತ್ತಾ ಪರೀಕ್ಷಿಸಿಕೊಳ್ಳುತ್ತಾ ಮುನ್ನಡೆಯಬೇಕಾಗಿದೆ. ಇಲ್ಲದಿದ್ದರೆ ಜೋರುಧ್ವನಿಯ ಪ್ರಬಲ ಶಕ್ತಿಗಳ ಹಿತಾಸಕ್ತಿಯನ್ನೇ ಗಮನಿಸುತ್ತಾ, ಧ್ವನಿ ಅಡಗಿದವರನ್ನು ಕಡೆಗಣಿಸುತ್ತಾ ಸಾಗುವ ಹಾದಿಯನ್ನೇ ಸವೆಸುತ್ತಿರುತ್ತೇವೆ

Leave a Comment