ಸಂವಿಧಾನದ ಶಿರಕ್ಕೆ ಮತ್ತೊಮ್ಮೆ ಕಲ್ಲೆಸೆದ ಕಾಂಗ್ರೆಸ್
ಸಂವಿಧಾನಕ್ಕೆ 75 ವರ್ಷ ಸಂದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಚರ್ಚೆಯನ್ನು ಏರ್ಪಡಿಸಲಾಗಿತ್ತು. ಸಂವಿಧಾನದ ಮಹತ್ವ, ಅದರ ಹಿಂದಿನ ಆಲೋಚನೆಗಳ ಕುರಿತು ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಈ ಸಮಯದಲ್ಲಿ ಡಿಸೆಂಬರ್ 17ರಂದು ಮಾತನಾಡುತ್ತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು, ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿದ್ದ ಅವಮಾನಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದರು. ಕೇವಲ ಅಂಬೇಡ್ಕರ್ ಅವರನ್ನು ಬಾಯಿ ಮಾತಿನಲ್ಲಿ ಸ್ಮರಿಸುವುದರಲ್ಲೇ ಕಾಂಗ್ರೆಸ್ ನಿರತವಾಗಿದೆ. ಆದರೆ ನಿಜವಾಗಿ ಅವರಿಗೆ ಅವಮಾನ ಮಾಡಿದೆ ಎಂದರು. ಅಂಬೇಡ್ಕರ್ ಅವರು ಕೇಂದ್ರ ಮಂತ್ರಿ ಸ್ಥಾನದಿಂದ ರಾಜೀನಾಮೆ ನೀಡುವಂತೆ ಮಾಡಿದ್ದು ಕಾಂಗ್ರೆಸ್, ಹಾಗೆಯೇ, ಅಂಬೇಡ್ಕರ್ ಅವರು ಮಂತ್ರಿಮಂಡಲದಿಂದ ಹೊರನಡೆದರೆ ಯಾವುದೇ ನಷ್ಟ ಆಗುವುದಿಲ್ಲ ಎಂದಿದ್ದೂ ಕಾಂಗ್ರೆಸ್ ಪ್ರಧಾನಿ ನೆಹರೂ ಅವರೇ ಎಂದು ಅಧಿಕೃತ ದಾಖಲೆಗಳಿಂದ ಹೊರತೆಗೆದ ಮಾಹಿತಿಯನ್ನು ನೀಡುತ್ತಿದ್ದರು. ಬಾಯಿಮಾತಿಗೆ ಅಂಬೇಡ್ಕರರ ಧ್ಯಾನ ಮಾಡುತ್ತೀರ ಎನ್ನುವುದನ್ನು ‘ಅಂಬೇಡ್ಕರ್ ಅಂಬೇಡ್ಕರ್ ಹೆಸರನ್ನು (ಬಾಯಿಮಾತಿಗೆ) ಜಪಿಸುವ ಬದಲಿಗೆ ದೇವರ ಹೆಸರು ಜಪಿಸಿದ್ದರೆ (ಶುದ್ಧ ಭಕ್ತಿಯಿಂದ) ಏಳೇಳು ಜನ್ಮಕ್ಕೂ ಸ್ವರ್ಗ ಸಿಗುತ್ತಿತ್ತು’ ಎಂದರು. ಎರಡು ದಿನಗಳ ಕಾಲ ಬಿಜೆಪಿಯಿಂದ ಹೊರಬರುತ್ತಿದ್ದ ಅಸ್ತ್ರಗಳನ್ನು ಎದುರಿಸಲಾಗದೆ ಕಂಗೆಟ್ಟಿದ್ದ ಕಾಂಗ್ರೆಸ್ಗೆ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತಾಯಿತು.
ರ್ಅಮಿತ್ ಷಾ ಅವರು ಈ ಮಾತಿಗಿಂತ ಹಿಂದೆ ಕಾಂಗ್ರೆಸ್ ಬಣ್ಣ ಬಯಲು ಮಾಡಿದ್ದನ್ನು, ನಂತರದಲ್ಲಿ ಬಿಜೆಪಿಯು ಅಂಬೇಡ್ಕರ್ಗೆ ಮಾಡಿದ ಗೌರವ ತರುವ ಕೆಲಸಗಳ ಬಗ್ಗೆ ಹೇಳಿದ್ದನ್ನು ಕತ್ತರಿಸಿ, ತಮಗೆ ಬೇಕಾದಷ್ಟು ವಾಕ್ಯವನ್ನು ಮಾತ್ರ ಕತ್ತರಿಸಿತು. ಬಿಜೆಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ತನ್ನೆಲ್ಲ ಉನ್ನತ ನಾಯಕರ ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡಲು ಆರಂಭಿಸಿತು. ತಾವು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಹಾಗೂ ತಮ್ಮ ಕನಸುಮನಸಿನಲ್ಲೂ ಅಂಬೇಡ್ಕರ್ ಅವರನ್ನು ಅವಮಾನಿಸಿಲ್ಲ ಎಂಬ ದೃಢ ವಿಶ್ವಾಸವಿದ್ದರೂ ಕಾಂಗ್ರೆಸ್ನ ಸುಳ್ಳು ಫ್ಯಾಕ್ಟರಿಯಿಂದ ಜನರು ದಾರಿ ತಪ್ಪಬಾರದು ಎಂಬ ಕಾರಣಕ್ಕೆ ಅಮಿತ್ ಷಾ ಅವರು ಕೂಡಲೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು. ಅಂಬೇಡ್ಕರ್ ಅವರಿಗೆ ಅತ್ಯಂತ ಗೌರವ ನೀಡುವ ಪಕ್ಷದಿಂದ ತಾವು ಬಂದಿರುವುದಾಗಿ ಹೇಳಿದರು. ಸಾಕಷ್ಟು ಜನರು ಇದರಿಂದ ಸ್ಪಷ್ಟತೆ ಪಡೆದುಕೊಂಡರು.
ಆದರೆ ಕಾಂಗ್ರೆಸ್ ಮಾತ್ರ ಈ ವಿಷಯವನ್ನು ಇಲ್ಲಿಗೇ ಬಿಡಲು ತಯಾರಿರಲಿಲ್ಲ. ಡಿಸೆಂಬರ್ 19ರಂದು ಸಂಸತ್ತಿನ ಹೊರಭಾಗದಲ್ಲಿ ಪ್ರತಿಭಟನೆಗೆ ಮುಂದಾಯಿತು. ಎಂದಿಗೂ ಬಿಳಿ ಬಣ್ಣದ ಟಿಷರ್ಟ್ ತೊಟ್ಟು ಬರುವ ರಾಹುಲ್ ಗಾಂಧಿ, ಅಂದು ಮಾತ್ರ ನೀಲಿ ಟಿಷರ್ಟ್ ತೊಟ್ಟು ಬಂದರು. ಆಟಕ್ಕೆ ತಕ್ಕ ವೇಷ ಧರಿಸುವುದನ್ನು ಅವರಿಂದ ಕಲಿಯಬೇಕು. ಅಂಬೇಡ್ಕರ್ ಅವರನ್ನು ಅನುಸರಿಸದಿದ್ದರೂ, ನೀಲಿ ಬಣ್ಣದ ಪರ್ಟ್ ಮೂಲಕ ತಾವೊಬ್ಬ ಅಂಬೇಡ್ಕರ್ ಅನುಯಾಯಿ ಎನ್ನುವಂತೆ ಪೋಸ್ ನೀಡುತ್ತಿದ್ದರು.
ಇದೇ ವೇಳೆ ಬಿಜೆಪಿ ಸದಸ್ಯರೂ ಅದೇ ಪ್ರದೇಶದಲ್ಲಿ, ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಡಿಸೆಂಬರ್ 19ರಂದು ಕಾಂಗ್ರೆಸ್ ಪಕ್ಷದ ನಿಜವಾದ ಬಣ್ಣ ಬಯಲಾಯಿತು. ಮನುಷ್ಯ ಏನೇ ಮಾಡಿದರೂ ಆತನ ಡಿಎನ್ಎ ಬದಲಾಗುವುದಿಲ್ಲ. ಹಾಗೆಯೇ ಕಾಂಗ್ರೆಸ್ನ ಡಿಎನ್ಎ ಬದಲಾಗಿಲ್ಲ. 1975ರ ತುರ್ತುಪರಿಸ್ಥಿತಿ ಮೂಲಕ ಅಭಿವ್ಯಕ್ತಿಗೊಂಡಿದ್ದ ಡಿಎನ್ಎಯನ್ನು (ಹುಟ್ಟುಗುಣ) 1978ರ ಲೋಕಸಭೆ ಚುನಾವಣೆಯಲ್ಲಿ ಬುದ್ದಿ ಕಲಿಸುವ ಮೂಲಕ ಜನರು ಹುಟ್ಟಡಗಿಸಿದ್ದರು. ಆದರೆ ಡಿಸೆಂಬರ್ 19ರಂದು ಸಂಸತ್ ಆವರಣದಲ್ಲಿ ಆ ಡಿಎನ್ಎ ತನ್ನ ಗುಣವನ್ನು ಮತ್ತೆ ಪ್ರಕಟೀಕರಿಸಿತು.
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕೇಂದ್ರ ಸ್ಥಾನವಾದ ಸಂಸತ್ನ ಅವರಣದಲ್ಲಿ, 54 ವರ್ಷವಾದರೂ ಯುವಕ ಎಂದು ಹೇಳಿಕೊಳ್ಳುವ ರಾಹುಲ್ ಗಾಂಧಿ 65 ವರ್ಷವಾದರೂ ಯುವಕರಂತೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರನ್ನು ತಳ್ಳಿದರು. ಮತ್ತೊಬ್ಬ ಸಂಸದ ಮುಖೇಶ್ ರಜಪೂತ್ ಜತೆಗೆ ಸಾರಂಗಿ ಅವರ ತಲೆಯಿಂದ ರಕ್ತ ಚಿಮ್ಮಿತು. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದರೆ, ಸೌಜನ್ಯಕ್ಕೂ ತಾವು ಮಾಡಿದ್ದು ತಪ್ಪು ಎಂದು ರಾಹುಲ್ ಗಾಂಧಿ ಹೇಳಲಿಲ್ಲ. ಬದಲಿಗೆ, ತಳ್ಳಿದ್ದು ಹೌದು ಎಂದು ದುರಹಂಕಾರದಿಂದ ಹೇಳಿದರು. ಅಷ್ಟೇ ಅಲ್ಲದೆ, ತಮ್ಮ ಮೇಲೆಯೇ ದೈಹಿಕ ಹಲ್ಲೆ ನಡೆದಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.
ಇದನ್ನೂ ಓದಿ: ಸಾಮಾನ್ಯರ ಅಸಾಮಾನ್ಯ ಕಾರ್ಯಕ್ಕೊಂದು ಸೆಲ್ಯೂಟ್!
ಅಂಬೇಡ್ಕರ್ ಅವರನ್ನು ಅನುಸರಿಸುತ್ತೇವೆ ಎನ್ನುವವರು ಮೊದಲು ತಿಳಿಯಬೇಕಾದ್ದು ವಿನಯವನ್ನು. ಅಂಬೇಡ್ಕರರು ಬಾಲ್ಯದಲ್ಲಿ ಸಮಾಜದಿಂದ ಹಾಗೂ ಸಾವಿನ ನಂತರವೂ ಕಾಂಗ್ರೆಸ್ ಪಕ್ಷದಿಂದ ಅವಮಾನ ಎದುರಿಸಿದರು.ಆದರೆ ಅವರು ಎಂದಿಗೂ ಹಿಂಸೆಗೆ ಮುಂದಾದವರಲ್ಲ. ಶಿಕ್ಷಣ, ರಾಜಕೀಯ ಶಕ್ತಿ ಹಾಗೂ ಸಂಘಟನೆ ಮೂಲಕವೇ ತಮ್ಮ ಗುರಿ ಈಡೇರಿಸಿಕೊಳ್ಳುವವರಾಗಿದ್ದರು. యలు ಆದರೆ ಅಂಬೇಡ್ಕರ್ ಅವರ ಅನುಯಾಯಿ ಎಂದುಕೊಳ್ಳುತ್ತ ನೀಲಿ ಟಿಷರ್ಟ್ ಧರಿಸಿ ಬರುವವರಿಗೆ ಅಂಬೇಡ್ಕರರು ಅರ್ಥವಾಗಲಿಲ್ಲ.
ಅಮಿತ್ ಷಾ ಅವರ ವಿಚಾರವನ್ನೇ ಮೂಲವಾಗಿಸಿಕೊಂಡು ಕಾಂಗ್ರೆಸ್ ಶಾಸಕರು ಬೆಳಗಾವಿ ಅಧಿವೇಶನದ ಸಮಯದಲ್ಲೂ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ನಂತರ ಸದನದೊಳಕ್ಕೆ ಅಂಬೇಡ್ಕರ್ ಅವರ ಫೋಟೊಗಳನ್ನು ಹಿಡಿದು ಬಂದು ಅಲ್ಲಿಯೂ ಪ್ರದರ್ಶಿಸಿದರು. ಈ ನಡುವೆ ಬಿಜೆಪಿ ಸದಸ್ಯರೂ ವಿಧಾನಮಂಡಲದಲ್ಲಿ ಕಾಂಗ್ರೆಸ್ನ ದುರಾಚಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ವಿಧಾನ ಪರಿಷತ್ನಲ್ಲಿ ಪ್ರತಿಭಟನೆ ವೇಳೆ ಬಿಜೆಪಿ ಹಿರಿಯ ಸದಸ್ಯ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಅವರು ತಮ್ಮ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಆರೋಪ ಮಾಡಿದರು. ಈ ಕುರಿತು ಎರಡೂ ಕಡೆಯ ವಾದ ಆಲಿಸಿದ ಸಭಾಪತಿಯವರು ರೂಲಿಂಗ್ ನೀಡಿದರು. ಮೇಲ್ನೋಟಕ್ಕೆ ಆ ರೀತಿಯ ಯಾವುದೇ ಸಾಕ್ಷ್ಯ ತಮಗೆ ಲಭ್ಯವಾಗಿಲ್ಲ ಎಂದು ಸದಸ್ಯರ ಆತ್ಮಸಾಕ್ಷಿಗೇ ಬಿಟ್ಟುಬಿಟ್ಟರು. ಸದನ ನಡೆಯುತ್ತಿರುವ ಸಮಯದಲ್ಲಿ ಸಭಾಪತಿ ಹಾಗೂ ಸ್ಪೀಕರ್ ರೂಲಿಂಗ್ ಅಂತಿಮ. ತೀರಾ ಮೂಲಭೂತ ಹಕ್ಕಿಗೇ ಧಕ್ಕೆ ಆದ ಸಂದರ್ಭ ಹೊರತುಪಡಿಸಿ ಇಲ್ಲಿನ ಯಾವುದೇ ವಿಚಾರವನ್ನೂ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಇದನ್ನು ಇಲ್ಲಿಗೇ ಬಿಡಲಿಲ್ಲ.
ಸಭಾಪತಿಯವರ ಅನುಮತಿಯನ್ನೂ ಪಡೆಯದೆ, ಎಫ್ಐಆರ್ಸಹ ದಾಖಲಿಸದೆ ಸಿ.ಟಿ. ರವಿ ಅವರನ್ನು ರಾತ್ರೋರಾತ್ರಿ ಬಂಧಿಸಿತು. ರಾತ್ರಿಯಿಡೀ ಸುಮಾರು 500 ಕಿಲೋಮೀಟರ್ ಸುತ್ತಾಡಿಸಲಾಯಿತು.
ಮಾರ್ಗದುದ್ದಕ್ಕೂ ಅಜ್ಞಾತ ವ್ಯಕ್ತಿಯೊಬ್ಬರಿಂದ ಪೊಲೀಸರು ಮೊಬೈಲ್ನಲ್ಲಿ ನಿರ್ದೇಶನ ಪಡೆಯುತ್ತಿದ್ದರು. ಅವರ ಅಣತಿ ಮೇರೆಗೆ ಬೆಟ್ಟ ಗುಡ್ಡ, ಕಲ್ಲು ಕ್ವಾರಿ, ಅರಣ್ಯ ಪ್ರದೇಶಗಳು, ವಿವಿಧ ಪೊಲೀಸ್ ಠಾಣೆಗೆ ಕರೆದೊಯ್ದರು. ಕಾಂಗ್ರೆಸ್ನವರು ನಡೆಸಿದ ಹಲ್ಲೆಯಿಂದ ಸುವರ್ಣ ಸೌಧದಲ್ಲೇ ತಲೆಗೆ ಪೆಟ್ಟಾಗಿದ್ದರೂ ಸಿ.ಟಿ. ರವಿ ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸುವ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ. ಹಾಗಾದರೆ ಪೊಲೀಸರು ಯಾವ ಉದ್ದೇಶ ಹೊಂದಿದ್ದರು?
ಬೆಟ್ಟಗುಡ್ಡ, ಕಲ್ಲು ಕ್ವಾರಿಗಳ ನಡುವೆ ಕರೆದೊಯ್ದು, ತಪ್ಪಿಸಿಕೊಂಡು ಓಡಿಹೋಗುತ್ತಿದ್ದರೆಂದು ಸುಳ್ಳು ಹೇಳಿ ನಕಲಿ ಎನ್ಕೌಂಟರ್ ಮಾಡಲು ಹೊರಟಿದ್ದರೇ ಎಂಬ ಅನುಮಾನ ಬಲವಾಗಿದೆ. ಸಿ.ಟಿ. ರವಿ ಅವರ ಜತೆಗೆ ಬಿಜೆಪಿಯ ಮತ್ತೊಬ್ಬ ಸದಸ್ಯ ಕೇಶವ ಪ್ರಸಾದ್ ನೆರಳಿನಂತೆ ಇರದಿದ್ದರೆ ಏನು ಬೇಕಾದರೂ ಆಗುವ ಸಾಧ್ಯತೆ ಇತ್ತು. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ‘ಪ್ರಕರಣವನ್ನು ಬೇಗ ಮುಕ್ತಾಯಗೊಳಿಸಿ ಎಂದು ಸೂಚಿಸಿದರೂ ಪೊಲೀಸರು ಏಕೆ ಪಾಲಿಸಿಲ್ಲ’ ಎಂದು ಅಚ್ಚರಿಪಟ್ಟಿದ್ದಾರೆ. ‘ಯಾರ ನಿರ್ದೇಶನದ ಮೇರೆಗೆ ಸಿ.ಟಿ. ರವಿ ಅವರನ್ನು ಠಾಣೆಯಿಂದ ಠಾಣೆಗೆ ಸುತ್ತಾಡಿಸಿದ್ದಾರೆ ನನಗೆ ಗೊತ್ತಿಲ್ಲ. ಸಿ.ಟಿ. ರವಿ ಅವರನ್ನು ರಾತ್ರಿಯೇ ಕೋರ್ಟ್ಗೆ ಹಾಜರು ಮಾಡುವಂತೆ ನಾನು ಪೊಲೀಸರಿಗೆ ಹೇಳಿದ್ದೆ. ಬೆಳಗಾವಿ ಪೊಲೀಸರು ಅಷ್ಟು ಮಾಡಿದ್ರೆ ಇಷ್ಟೆಲ್ಲ ಆಗುತ್ತಿರಲಿಲ್ಲ’ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಪೊಲೀಸರ ಮೇಲೆ ಇಷ್ಟೆಲ್ಲ ಒತ್ತಡವನ್ನು ತಂದವರು ಯಾರು ಎನ್ನುವ ವಿಚಾರ ಬಹಿರಂಗವಾಗಬೇಕಿದೆ.
ನಿಯಮಾವಳಿ ಪ್ರಕಾರ, ಸದನದೊಳಕ್ಕೆ ಎಂದಿಗೂ ಪೊಲೀಸರು ಪ್ರವೇಶಿಸುವಂತಿಲ್ಲ. ಸದನ ನಡೆಯುವ ಅವಧಿಯಲ್ಲಿ ಸದಸ್ಯರಿಗೂ ಸಂಪೂರ್ಣ ಕಾನೂನು ರಕ್ಷಣೆ ಇರುತ್ತದೆ, ಅದನ್ನು ಪೊಲೀಸರೇ ನೀಡಬೇಕು. ಸದನದ ಸಮಯದಲ್ಲಿ, ಸಾಮಾನ್ಯ ಪೊಲೀಸರಿಗೇ ಬಿಳಿ ಸಮವಸ್ತ್ರ ತೊಡಿಸಿ ಮಾರ್ಷಲ್ಗಳನ್ನಾಗಿ ಮಾಡಲಾಗುತ್ತದೆ. ಅವರು ಸದನ ನಡೆಯುವ ಅವಧಿಯುದ್ದಕ್ಕೂ ಸ್ಪೀಕರ್ ಅಥವಾ ಸಭಾಪತಿಯವರ ಆದೇಶವನ್ನಷ್ಟೆ ಪಾಲಿಸುತ್ತಾರೆ. ಇದು ಸಂವಿಧಾನಕರ್ತೃ ಅಂಬೇಡ್ಕರರು ಯೋಚಿಸಿ ಮಾಡಿರುವ ವ್ಯವಸ್ಥೆ. ಸಂಸತ್ ಅಥವಾ ವಿಧಾನ ಮಂಡಲ ಎನ್ನುವುದು ದೇಶದ ಹಾಗೂ ರಾಜ್ಯದ ಅತ್ಯುನ್ನತ ನೀತಿನಿರೂಪಣಾ ಕೇಂದ್ರ. ಇಲ್ಲಿ ಸದಸ್ಯರಿಗೆ ಮುಕ್ತವಾಗಿ ಮಾತನಾಡುವ ಅಧಿಕಾರ ಇರಬೇಕು. ಇಲ್ಲಿನ ಮಾತನ್ನು ಹಿಡಿದುಕೊಂಡು ಯಾರೂ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂದು ನೀತಿ ರೂಪಿಸಿದ್ದಾರೆ. ಹಾಗೊಂದು ವೇಳೆ ಸದನದಲ್ಲಿ ತಪ್ಪು ನಡೆದರೆ ಸ್ಪೀಕರ್ ಅಥವಾ ಸಭಾಪತಿಯವರೇ ನಿರ್ಧಾರ ಮಾಡುತ್ತಾರೆ. ಅವರು ಅನುಮತಿ ನೀಡಿದರೆ ಮಾತ್ರವೇ ಪೊಲೀಸರು ತನಿಖೆ ನಡೆಸಬಹುದಾಗಿದೆ. ಇಷ್ಟೆಲ್ಲ ಇದ್ದರೂ, ಡಾ. ಅಂಬೇಡ್ಕರ್ ಅವರ ಪರ ಇದ್ದೇವೆ ಎಂದು ಹೇಳಿಕೊಳ್ಳುತ್ತಲೇ, ಅಂಬೇಡ್ಕರರು ರಚಿಸಿದ ಸಂವಿಧಾನದ ಅತ್ಯುನ್ನತ ಮೌಲ್ಯವನ್ನು ಕಾಂಗ್ರೆಸ್ ಸರ್ಕಾರ ಗಾಳಿಗೆ ತೂರಿದೆ. ದೆಹಲಿಯಿಂದ ಬೆಳಗಾವಿ ವರೆಗೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆಯುವುದನ್ನೇ ಕಾಂಗ್ರೆಸ್ ಮಾಡುತ್ತಿದೆ. ಸಂವಿಧಾನದ ಶಿರಕ್ಕೆ ಕಾಂಗ್ರೆಸ್ ಮತ್ತೊಮ್ಮೆ ಕಲ್ಲೆಸೆದಿದೆ. 1977ರ ಚುನಾವಣೆಯಂತೆ ಇದಕ್ಕೂ ಉತ್ತರವನ್ನು ಜನರೇ ನೀಡಬೇಕಿದೆ.