ಸಮತೋಲನದ ಮನಸ್ಸು

ಸಮತೋಲನದ ಮನಸ್ಸು

ಮನಸ್ಸು ಇಬ್ಬದಿಯ ಕನ್ನಡಿ. ಮನಸ್ಸು ನಮ್ಮ ವ್ಯಕ್ತಿತ್ವದ ಬಹು ಮುಖ್ಯ ಆಯಾಮ. ಇಡೀ ಜಗತ್ತು ಪ್ರತಿಫಲಿತವಾಗುವುದು ಮತ್ತು ನಾವು ಅದನ್ನು ಕಾಣುವ ಬಗೆ – ಎರಡೂ ಮನಸ್ಸೆಂಬ ಕನ್ನಡಿ- ಯಲ್ಲಿ ಬಿಂಬಿತವಾಗುತ್ತದೆ. ಶಾಂತಿ, ಸಮಾಧಾನ, ಬದುಕಿನ ಸೊಗಸು ಎಲ್ಲವೂ ನಮ್ಮ ಅರಿವಿಗೆ, ಅನುಭವಕ್ಕೆ ಬರುವುದು ಮನಸ್ಸಿನ ಮೂಲಕವೇ. ಹೀಗಾಗಿ ಮಾನಸಿಕ ಆರೋಗ್ಯವೇ ನಮ್ಮ ಜೀವನದ ಸಂತೋಷಗಳಿಗೆ ಬುನಾದಿ.

ಸಮತೋಲನದಲ್ಲಿರುವ ತಕ್ಕಡಿಯು ವಸ್ತು ವನ್ನು ಸರಿಯಾಗಿ ತೂಗುವಂತೆ, ಸಮತೋಲನದಲ್ಲಿರುವ ಮನಸ್ಸು ಮಾತ್ರ ಬದುಕಿನ ಮೌಲ್ಯಗಳನ್ನು ಸರಿಯಾಗಿ ಗ್ರಹಿಸಬಲ್ಲದು. ಆದರೆ ಮನಸ್ಸಿನಲ್ಲಿ ಏಳುವ ರಾಗ-ದ್ವೇಷಗಳು ಸಮತೋಲನವನ್ನು ಕೆಡಿಸುವುದರಿಂದ ಜೀವನದಲ್ಲಿ ಏರುಪೇರು ಗಳನ್ನು ಅನುಭವಿಸು ತ್ತೇವೆ. ಬದುಕಿನ ಬಹು ಮುಖ್ಯ ಪ್ರಚೋದ ಕಗಳಾದ ಹಸಿವು ಭಯ ಮತ್ತು ಕಾಮ. ಅಂದರೆ ಎಲ್ಲ ಬಗೆಯ ಬಯಕೆಗಳು ಮನಸ್ಸಿನಲ್ಲಿ ರಾಗಗಳನ್ನು, ಉಂಟುಮಾಡುತ್ತವೆ.

ಮೂಲಪ್ರಚೋದಕಗಳಿಗಾಗಿ ಮನುಷ್ಯ ಯಾವ ಮಟ್ಟಕ್ಕೂ ಇಳಿಯಬಲ್ಲ. ಹಾಗೆಯೇ ಬದುಕಿನ ಸವಾಲುಗಳು ಒಡ್ಡುವ ಒತ್ತಡಗಳು ವಿಷಾದಕ್ಕೂ, ಮುಂದೆ ಖಿನ್ನತೆಗೂ ದಾರಿ ಮಾಡಿಕೊಡುತ್ತದೆ. ಆನಂದವು ನಮ್ಮ ಮೂಲಸ್ವರೂಪವಾದರೂ ವಿಷಾದವು ಬದುಕಿನ ಸ್ಥಾಯೀಭಾವವಾಗಿ ನಿಲ್ಲಲು ಪ್ರಯತ್ನಿಸುತ್ತದೆ. ಇಡೀ ಜೀವನ ಇದನ್ನು ಮೆಟ್ಟಿ ಸಾರ್ಥಕತೆಯನ್ನು ಕಂಡುಕೊಳ್ಳುವುದೇ ಆಗಿರುತ್ತದೆ. ಯಾರು ಈ ವಿಷಾದವನ್ನು ಗಟ್ಟಿಯಾಗಿ ಮೆಟ್ಟಿ ನಿಲ್ಲುವರೋ ಅವರು ನಿಜವಾದ ಗುಡಾಕೇಶಿಗಳು, ಅಂದರೆ ನಿದ್ರೆಯನ್ನು ಜಯಿಸಿದವರು.

ಪ್ರಜ್ಞೆ ಮತ್ತು ನಿದ್ರೆಯಲ್ಲಿನ ಕನಸು -ಎರಡನ್ನೂ ಹಿಡಿತದಲ್ಲಿಟ್ಟುಕೊಳ್ಳುವ ಅಂತಃಪ್ರಜ್ಞೆ ಒಂದಿದೆ.

ಇದನ್ನೂ ಓದಿ: ನಾಟ್ಯ ನಿಲ್ಲಿಸಿದ ಉಸ್ತಾದರ ಕೈಬೆರಳುಗಳು

ಅದು ಇಲ್ಲದಾದಾಗ ವಿಷಾದವನ್ನೂ ನೋವನ್ನೂ ಅನುಭವಿಸಬೇಕಾಗುತ್ತದೆ. ಭಗವಂತನ ಆತ್ಮ- ಸಖನಾದ ಅರ್ಜುನನಿಗೇ ವಿಷಾದ ತಪ್ಪಲಿಲ್ಲ ಅಂತಹುದರಲ್ಲಿ ಸಾಮಾನ್ಯರಿಗೆ ಅದು ಬಂದಿಲ್ಲೊಂ- ದು ಕೊರತೆಯ ರೂಪದಲ್ಲಿ ಕಾಡುವುದು ಸಹಜ. ಬೇಕಾದದ್ದು ದೊರೆಯದ ಕಾರಣದಿಂದ, ದೊರೆತ- ದ್ದು ದಕ್ಕದಿರುವ ಕಾರಣದಿಂದ, ದೊರೆತದ್ದು ಸತ- ತವಾಗಿ ಉಳಿಯದಿರುವ ಕಾರಣದಿಂದ ನೋವನ್ನು ಉಂಟುಮಾಡುತ್ತದೆ. ಆದರೆ ನಿಜವಾದ ಜ್ಞಾನಿ ಇದರಿಂದ ವಿಚಲಿತನಾಗುವುದಿಲ್ಲ. ಬದಲಾವಣೆ ಬದುಕಿನ ನಿಯಮ ಎಂದು ಅರಿತಾಗ ಮತ್ತು ಜೀವನವು ಸೌಹಾರ್ದಸೂತ್ರದಲ್ಲಿ ಪೋಣಿತವಾಗಿದೆ ಎಂದು ಗುರುತಿಸುವುದರ ಮೂಲಕ ಸಮಾಧಾ- ನವನ್ನು ಪಡೆಯಬಹುದು. ಧ್ಯಾನ, ಅಳವಾದ ಉಸಿರಾಟ, ಯೋಗ, ಚಾರಣ, ಉತ್ತಮ ಹವ್ಯಾಸಗಳು, ಸಾರ್ವಜನಿಕ ಸೇವೆ ಇವು ಕೂಡನಮ್ಮ ಮನಸ್ಸಿಗೆ ಆಹ್ಲಾದವನ್ನು ತರಬಲ್ಲವು. ಮಾತಿನ ಸುಳ್ಳಿಗಿಂತ ಮೊಗದ ಮೇಲಣ ನಗೆಯ ಸುಳ್ಳುಗಳೆ ಅಧಿಕವಾಗಿವೆ. ಅಧುನಿಕ ಜಗತ್ತಿನಲ್ಲಿ, ಸಂತೋಷವು ಕೃತಕತೆಯ ವೇಷವನ್ನು ತೊಟ್ಟಾಗ ಅದನ್ನು ತೊಟ್ಟವರಿಗೂ ಪುರಸ್ಕರಿಸಿದ. ವರಿಗೂ ನೋವೇ ಹೆಚ್ಚು. ಪರಸ್ಪರ ಸಂಬಂಧಗಳ ಮೇಲೂ ಇದು ಪರಿಣಾಮ ಬೀರುತ್ತದೆ. ಒತ್ತಾಸೆಯ ಕೊರತೆಯೂ ಮನಸ್ಸನ್ನು ದುರ್ಬಲಗೊಳಿಸುತ್ತದೆ. ದೈಹಿಕ ಗಟ್ಟಿತನದಂತೆ ಮಾನಸಿಕ ದೃಢತೆಯೂ ಸಾಧಿತವಾಗಬೇಕು. ಇಲ್ಲವಾದರೆ ಶಾಂತಿ ಮತ್ತು ಸಮಾಧಾನಗಳು ನಮ್ಮಿಂದ ದೂರವಾಗುತ್ತವೆ. ಮಾನಸಿಕ ಅನಾರೋಗ್ಯಕ್ಕೆ ಅನೇಕ ಕಾರಣಗಳು ಇರಬಹುದು. ಆದರೆ ಮನಸ್ಸಿಗೆ ಅನಾರೋಗ್ಯವಾ- ಗಿದೆ ಎಂಬುದನ್ನು ಒಪ್ಪಿಕೊಳ್ಳುವ ಹಂತವೇ ಬಹಳ ಮುಖ್ಯ

ಪ್ರತಿ ವರ್ಷ ಪರೀಕ್ಷೆಯ ಸಮಯದಲ್ಲಿ ಮತ್ತು ಫಲಿತಾಂಶದ ಸಮಯದಲ್ಲಿ ನನ್ನನ್ನು ಕಾಡುವುದು ಮುಂದೆ ತರಗತಿಯ ಹಾಜರಾತಿಯಲ್ಲಿ ಹೆಸರು ಕರೆದಾಗ ವಿದ್ಯಾರ್ಥಿಯೊಬ್ಬ ಇನ್ನಿಲ್ಲವೆಂಬ ಸುದ್ದಿ ಬಾರದಿರಲಿ ಎಂದು. ಒತ್ತಡಗಳನ್ನು ನಿರ್ವಹಿಸುವ ವಿಚಾರದಲ್ಲಿ ಕೆಲವರ ಮನಸ್ಸು ಬಹಳ ಸೂಕ್ಷ್ಮ ಸೂಕ್ಷ್ಮತೆಗೂ ದೌರ್ಬಲ್ಯಕ್ಕೂ ವ್ಯತ್ಯಾಸ ಇದೆ. ವ್ಯಕ್ತಿಯು ಮಾನಸಿಕವಾಗಿ ದುರ್ಬಲ ಎಂದು ಪಟ್ಟ ಕಟ್ಟುವುದು ಸುಲಭ. ಆದರೆ ಆ ವ್ಯಕ್ತಿಯ ಸ್ಥಾನದಲ್ಲಿ ನಿಂತು ಸಮಸ್ಯೆಯನ್ನು ಭಾವಿಸಿದಾಗ ಅದರ ಘೋರ ಪರಿಣಾಮವನ್ನು ಕಂಡುಕೊಂಡಾಗ ಅದರ ಅಗಾಧತೆ ಅರಿವಾಗುವುದು. ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡ ಮಗುವಿನ ಬೇಸರ, ಕಾಲೇಜಿ ನಲ್ಲಿ ಮೊಬೈಲ್ ಕಳೆದುಕೊಂಡ ವಿದ್ಯಾರ್ಥಿಯ ಹತಾಶೆ, ಪ್ರೇಮವೈಫಲ್ಯದಿಂದ ಪಡೆಯುವ ದುಃಖ, ಆತ್ಮೀಯರೊಬ್ಬರ ಅಗಲಿಕೆಯಿಂದ ಉಂಟಾಗುವ ನೋವು – ಇವುಗಳಲ್ಲಿ ಯಾವುದು ಹೆಚ್ಚು ಯಾವುದು ಕಡಿಮೆ ಎಂದು ನಿರ್ಧರಿಸುವುದು ಕಷ್ಟ.

ಬದುಕಿನ ವಿದ್ಯುತ್ ತರಂಗ ಮನುಷ್ಯರಿಂದ ಮನುಷ್ಕರಿಗೆ ವಿದ್ಯುತ್ತು ವಾಹಕಗಳಲ್ಲಿ ಹರಿದಂತೆ ಹರಿದುಹೋಗುತ್ತದೆ. ಆದರೆ ಕೆಲವರಲ್ಲಿ ಅದು ಸಲೀಸಾಗಿ ಪ್ರವಹಿಸಿದರೆ ಮತ್ತೆ ಕೆಲವರಲ್ಲಿ ಪ್ಯೂಸ್ ಸುಟ್ಟಂತೆ ಒಳಗೆ ಕುಸಿತ ಉಂಟಾಗಿ ಮತ್ತೆ ಅವರು ತಮ್ಮನ್ನು ತಾವು ಕಂಡುಕೊಳ್ಳಲು ಬಹಳ ಸಮಯವೇ ಬೇಕಾಗುತ್ತದೆ. ಅಂತಹ ಸಂದರ್ಭ- ದಲ್ಲಿ ಅವರಿಗೆ ನೆರವು ನೀಡಬೇಕು. ಅದು ಅವರ ಸುತ್ತಲಿನ ಜನರ ಜವಾಬ್ದಾರಿ. ಮಿಗಿಲಾಗಿ ನಮ್ಮ ಬಗ್ಗೆಯೂ ನಾವು ಕಾಳಜಿ ತೋರಿಕೊಳ್ಳಬೇಕು. ಪರರನ್ನು ಕ್ಷಮಿಸುವುದು ಎಷ್ಟು ಮುಖ್ಯವೋ ನಮ್ಮನ್ನು ನಾವು ಕ್ಷಮಿಸಿಕೊಳ್ಳುವುದು ಅಷ್ಟೇ ಮುಖ್ಯ. ಪರಸ್ಪರ ಹೊಂದಾಣಿಕೆಯಿಂದಲೂ ಔದಾರ್ಯದಿಂದಲೂ ಬದುಕಬೇಕೆಂಬ ಆಶಯ ನಮ್ಮದಾಗಲಿ.

Leave a Comment