ಸಮ್ಮೋಹಗೊಳಿಸುವ ‘ಕಿಂದರಿ’ ರಾಗ

ಸಮ್ಮೋಹಗೊಳಿಸುವ ‘ಕಿಂದರಿ’ ರಾಗ

ರಾಬರ್ಟ್ ಬ್ರೌನಿಂಗ್ಸ್ ಅವರ ‘ದಿ ಪೈಡ್ ಪೈಪರ್ ಆಫ್ ಹ್ಯಾಮ್ಲಿನ್ ಎಂಬ ಕವಿತೆಯನ್ನು ಕವಿ ಕುವೆಂಪು ಬೊಮ್ಮನಹಳ್ಳಿ ಕಿಂದರಿ ಜೋಗಿ ಎಂಬ ಹೆಸರಿನಲ್ಲಿ ಭಾವಾನುವಾದ ಮಾಡಿದ್ದಾರೆ. ಸುಮಧುರ ರಾಗದಲ್ಲಿ ಕಿಂದರಿಯನ್ನು ಬಾರಿಸುತ್ತಾ ಇರಿಗಳನ್ನು ತನ್ನನ್ನು ಹಿಂಬಾಲಿಸುವಂತೆ ಮಾಡುತ್ತಾನೆ.ಹಾಗೇ ಅವುಗಳನ್ನು ಹೊಳೆಯತ್ತ ಕರೆದೊಯ್ದು ಅವು ಅಲ್ಲಿ ಮುಳುಗುವಂತೆ ಮಾಡುತಾನೆ .ಪ್ರಸ್ತುತ ಇಡೀ ದೇಶವೇ ಬೊಮ್ಮನಹಳ್ಳಿಯಂತೆ ಆಗಿದ್ದು, ಜನರೆಲ್ಲರೂ ಕಿಂದರಿ ರಾಗದ ಅಮಲಿನಲ್ಲಿ ಪ್ರಪಾತದಡೆಗೆ ಹೆಜ್ಜೆ ಹಾಕುತ್ತಿದ್ದಾರೆ.

ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಕ್ಷಣದಿಂದ, ಸಾರ್ವಜನಿಕರನ್ನು ಸಮ್ಮೋಹಗೊಳಿಸುವ ಬಗೆಬಗೆಯ ಘೋಷಣೆಗಳ ಮೂಲಕ ಇಂಪಾದ ಕಿಂದರಿ ನಾದ ನುಡಿಸುತ್ತಿದ್ದಾರೆ. ಆಧುನಿಕ ರಾಜಕೀಯ ಕಿಂದರಿ ಜೋಗಿಯಂತೆ ಲಕ್ಷಾಂತರ ಜನರನ್ನು ತಮ್ಮ ಹಿಂದೆ ಕರೆದೊಯ್ಯುತ್ತಿದ್ದಾರೆ. ಯಾವುದೇ ಚುನಾವಣೆ, ಅರ್ಥಿಕ ಬಿಕ್ಕಟ್ಟು ಅಥವಾ ಆಡಳಿತ ವೈಫಲ್ಯವನ್ನು ಹೊಣೆಗಾರಿಕೆಯಿಂದ ಎದುರಿಸದೆ, ಬರೀ ಹೊಸ ಹೊಸ ಘೋಷಣೆಗಳಿಂದ ಜನರ ದಿಕ್ಕು ತಪ್ಪಿಸಿದ್ದಾರೆ.

ವಾಸ್ತವ ಸ್ಥಿತಿ ಹದಗೆಟ್ಟಿರುವಾಗ ಅಮೂರ್ತ ಭವಿಷ್ಯದ ಬಗ್ಗೆ ಭರವಸೆ ನೀಡುವ ‘ಅಚ್ಛೇ ದಿನ್’, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’, ‘ಆತ್ಮನಿರ್ಭರ ಭಾರತ’, ‘ಅಮೃತಕಾಲ’, ‘ವಿಕಸಿತ ಭಾರತ’ ಸೇರಿದಂತೆ ನವರಾಗ ಗಳನ್ನು ಅವರು ನುಡಿಸಿದ್ದಾರೆ. ಆದರೆ, ಆ ಮಹಾನ್ ಪದಗಳು ನೀತಿ ಮಾರ್ಗಸೂಚಿಯಾಗದೆ, ಜನರ ಅತೃಪ್ತಿಯನ್ನು ಮರೆಮಾಚಿ, ಅವರನ್ನು ಹೋರಾಟದ ಮನೋಭಾವದಿಂದ ದೂರವಿರಿಸಲು ವಿನ್ಯಾಸಗೊಳಿಸ ಲಾದ ಸಮ್ಮೋಹನ ತಂತ್ರಗಳಂತೆ ಕಾರ್ಯನಿರ್ವಹಿಸಿವೆ.

ದೇಶವು 2020- 21ರಲ್ಲಿ ಕೋವಿಡ್ ಸಾಂಕ್ರಾಮಿಕದ ಪರಿಣಾಮಗಳನ್ನು ಎದುರಿಸುತ್ತಿದ್ದಾಗ, ಮೋದಿಯವರ ಕಿಂದರಿಯು ಬೇರೆ ರಾಗದತ್ತ ಹೊರಳಿತು. ಭಾರತವು ಸ್ವಾತಂತ್ರ್ಯದ ಶತಮಾನೋತ್ಸವದತ್ತ ಸಾಗುವ ಮುಂದಿನ 25 ವರ್ಷಗಳ ‘ಅಮೃತಕಾಲ’ದ ಬಗ್ಗೆ ಅವರು ಮಾತನಾಡಿದರು. ಅದೊಂದು ಜಾಣತನದ ತಂತ್ರವಾಗಿತ್ತು. ವೈಫಲ್ಯಗಳ ದುಷ್ಪರಿಣಾಮಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವಲ್ಲಿ ಅವರು ಯಶಸ್ವಿಯಾದರು. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಕೇಂದ್ರ ಸರ್ಕಾರದ ವಶೀಕರಣ ತಂತ್ರವಾದ ‘ಥಾಲಿನಾಮಿಕ್ಸ್‌’ನಿಂದಾಗಿ ಥಾಲಿಗೆ (ಒಂದು ತಟ್ಟೆ ಊಟ) ಆಗುವ ಸರಾಸರಿ ವೆಚ್ಚವು ಈ ಒಂದು ದಶಕದಲ್ಲಿ ಶೇ 50 ರಷ್ಟು ಹೆಚ್ಚಾಗಿದೆ. ವಸತಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವಾ ಸಂಬಂಧಿತ ಹಣದುಬ್ಬರ ಏರುತ್ತಲೇ ಇದೆ. ವಸತಿ ಕ್ಷೇತ್ರದಲ್ಲಿ ಬಾಡಿಗೆ ದರವು ಶೇ 12ರಷ್ಟು ಏರಿಕೆಯಾಗಿದೆ. ಆರೋಗ್ಯ ವೆಚ್ಚ ಶೇ 6.5ರಷ್ಟು ಐಹೆಚ್ಚಾಗಿದೆ. ಸೇವಾ ವಲಯದ ಬೆಳವಣಿಗೆಯು ಇದೇ ಜನವರಿಯಲ್ಲಿ ಎರಡು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಭಾರತದಸೇವಾ ವಲಯದ ಖರೀದಿ ಸಾಮರ್ಥ್ಯದ ಸೂಚ್ಯಂಕ (ಪಿಎಂಐ) ಇಳಿದಿದೆ. ಮೋದಿಯವರ ಭ್ರಮಾತ್ಮಕ ಅಮೃತಕಾಲದತ್ತ ಸಾಗುತ್ತಿರುವ ಭಾರತದ ಈ ಸಂದರ್ಭವು ಅಹಿತಕರ ಹಾಗೂ ಕಳವಳಕಾರಿಯಾಗಿದೆ.

ಇದನ್ನೂ ಓದಿ:ಅನುದಾನ ಸ್ಥಗಿತದ ಬೆದರಿಕೆ ರಾಜಕಾರಣಕ್ಕೆ ಭಾಷೆಯ ಬಳಕೆ ಬೇಡ

2047ರ ವೇಳೆಗೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುತ್ತೇವೆ ಎಂಬ ಹಗಲುಗನಸಿನ ವ್ಯಾಪಾರ ಶುರು ವಾಗಿದೆ. ಆದರೆ ಇದಕ್ಕೆ ಸ್ಪಷ್ಟ ಮಾರ್ಗಸೂಚಿ ಇಲ್ಲ. ಜಿಡಿಪಿ ಬೆಳವಣಿಗೆಯ ನೈಜ ದರ 2023-24ರಲ್ಲಿ ಶೇ 8.2ರಿಂದ ಶೇ 6.4ಕ್ಕೆ ಇಳಿದಿದೆ. ಇತ್ತೀಚೆಗೆ ಮಂಡಿಸಲಾದ ಬಜೆಟ್ ನಲ್ಲಿ, ವಿತ್ತೀಯ ಕೊರತೆಯು ಶೇಕಡ 4.9ರಿಂದ 4.8ಕ್ಕೆ ಸುಧಾರಿಸಿದೆ ಎಂದು ಹೇಳಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜನರ ದಿಕ್ಕು ತಪ್ಪಿಸಿದ್ದಾರೆ. ವಾಸ್ತವದಲ್ಲಿ ಬಂಡವಾಳ ವೆಚ್ಚವನ್ನು ಕಡಿತಗೊಳಿಸುವ ಮೂಲಕ ಇದನ್ನು ಸಾಧಿಸುವ ತಂತ್ರ ಅವರದ್ದಾಗಿದೆ.

ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಕೃಷಿ, ಗ್ರಾಮೀಣ ಮತ್ತು ನಗರಾಭಿವೃದ್ಧಿಯ ಅನುದಾನಗಳಲ್ಲಿ ಒಟ್ಟಾರೆ ₹1,83,569 ಕೋಟಿ ಮೊತ್ತದ ಗಮನಾರ್ಹ ಕಡಿತ ಮಾಡಲಾಗಿದೆ. ಶೂನ್ಯ ಬಡತನ, ಗುಣಮಟ್ಟದ ಶಿಕ್ಷಣ, ಸಮಗ್ರ ಆರೋಗ್ಯ ರಕ್ಷಣೆ, ಅರ್ಥಪೂರ್ಣ ಉದ್ಯೋಗ, ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಸೇರ್ಪಡೆ ಮತ್ತು ರೈತರ ಯೋಗಕ್ಷೇಮ ಈ ಆರು ತತ್ವಗಳನ್ನು ನಿರ್ಮಲಾ ಅವರು ‘ವಿಕಸಿತ ಭಾರತ’ದ ಪರಿಕಲ್ಪನೆಯಡಿ ಪ್ರಸ್ತಾಪಿಸಿ ದ್ದರು. ಆದರೆ ಬಜೆಟ್‌ನಲ್ಲಿ ಮಾಡಿರುವ ಅನುದಾನದ ಹಂಚಿಕೆ ಮಾತ್ರ ಅವರ ಘೋಷಣೆಗಳ ವಿರುದ್ಧದಿಕ್ಕಿನಲ್ಲಿದೆ.

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಗೆ 13.905 ಕೋಟಿ ಹಾಗೂ ಫಸಲ್ ಬಿಮಾ ಯೋಜನೆಯಡಿ ₹3,621 ಕೋಟಿ ಕಡಿತಗೊಳಿಸಲಾಗಿದೆ. ಲಕ್ಷಾಂತರ ಜನರ ಜೀವನಾಡಿಯಾಗಿ ಕಾರ್ಯನಿರ್ವಹಿಸುವ ‘ನರೇಗಾ’ದ ಅನುದಾನವು ಹಿಂದಿನ ವರ್ಷಕ್ಕಿಂತ ಹೆಚ್ಚಾಗದೆ ₹86,000 ಕೋಟಿಯಷ್ಟೇ ಇದೆ. ಇದರಲ್ಲಿ ಶೇ 20ರಷ್ಟು ಹಿಂದಿನ ವರ್ಷಗಳ ಬಾಕಿಗಳಿಗೇ ಮೀಸಲಾಗಿದೆ. ಶಿಕ್ಷಣ, ಆರೋಗ್ಯ ಮತ್ತು ಸಮಾಜ ಕಲ್ಯಾಣಕ್ಕೆ ಸಂಬಂಧಿಸಿದ ಅನುದಾನದ ಪ್ರಮಾಣ ಕಡಿಮೆಯಾಗಿದೆ. ಕೈಗಾರಿಕಾ ಪುನರುಜ್ಜಿವನದ ಉದ್ದೇಶದಿಂದ ರೂಪಿಸಿದ ಬೃಹತ್ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಬಹುತೇಕ ಘೋಷಣೆಗಳಾಗಿಯೇ ಉಳಿದಿವೆ. ಜಿಡಿಪಿಯ ಶೇ 25ರಷ್ಟು ಪಾಲನ್ನು ಹೊಂದಿರಬೇಕಾದ ತಯಾರಿಕಾ ವಲಯದ ಪ್ರಗತಿಯು 2014ರಲ್ಲಿದ್ದ ಶೇ 15.3ರಿಂದ ಶೇ 12.6ಕ್ಕೆ ಇಳಿ ದಿದೆ. ಇದು 60 ವರ್ಷಗಳಲ್ಲಿ ಅತ್ಯಂತ ಕನಿಷ್ಠ ಪ್ರಮಾಣ. 10 ಕೋಟಿ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಭರವಸೆ

ಆಗಿತ್ತು, ಆದರೆ 2017- 21ರ ನಡುವೆ 2.4 ಕೋಟಿ ಉದ್ಯೋಗ ನಷ್ಟ ಉಂಟಾಗಿದೆ .ಏತನ್ಮಧ್ಯೆ,ಭಾರತದ ಅರ್ಥಿಕತೆಯ ಬೆನ್ನೆಲುಬಾಗಿರುವ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ವಲಯದಲ್ಲ 2020ರಿಂದ 61,000 ಕ್ಕೂ ಹೆಚ್ಚು ಕಂಪನಿಗಳು ಬಾಗಿಲು ಮುಚ್ಚಿವೆ.

ಸ್ಟಾರ್ಟ್‌ಅಪ್ ಇಂಡಿಯಾ ಸೀಡ್ ಫಂಡ್ ಯೋಜನೆಯಡಿ ₹20,000 ಕೋಟಿ ನೆರವಿನ ಭರವಸೆಯ ಹೊರತಾಗಿಯೂ ಬರೀ ₹454 ಕೋಟಿ ವಿತರಿಸಲಾಗಿದೆ. ಮಾನ್ಯತೆ ಪಡೆದ ಶೇ 1.58ರಷ್ಟು ನವೋದ್ಯಮಗಳು ಮಾತ್ರೆ ಸೀಡ್ ಫಂಡ್ ಪ್ರಯೋಜನ ಪಡೆದಿವೆ. ಸ್ಕಿಲ್ ಇಂಡಿಯಾ ಯೋಜನೆಯಡಿ 2015ರಿಂದ ತರಬೇತಿ ಪಡೆದ 1 ಕೋಟಿ ಜನರ ಪೈಕಿ ಶೇ 20ರಷ್ಟು ಮಂದಿ ಮಾತ್ರ ಉದ್ಯೋಗ ಕಂಡುಕೊಂಡಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ. ಭಾರತದಲ್ಲಿ ವಿದೇಶಿ ಹೂಡಿಕೆಯು 12 ವರ್ಷಗಳ ಕನಿಷ್ಠ ಮಟ್ಟವನ್ನು ಮುಟ್ಟಿದೆ.

ಈ ಒಂದು ದಶಕದ ಅವಧಿಯಲ್ಲಿ ಸುಮಾರು 20 ಲಕ್ಷ ಭಾರತೀಯರು ಸ್ವಯಂಪ್ರೇರಣೆಯಿಂದ ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಹಿಂದಿನ ಐದು ವರ್ಷಗಳಲ್ಲಿ 50,000ಕ್ಕೂ ಹೆಚ್ಚು ಉದ್ಯಮಿಗಳು ಬೇಸತ್ತು ದೇಶವನ್ನು ತೊರೆದಿದ್ದಾರೆ. 2023- 24ರ ಅವಧಿಯಲ್ಲಿ, ಉದ್ಯೋಗ ಅರಸುವ ಪ್ರಯತ್ನದಲ್ಲಿ ಅಮೆರಿಕದ ಗಡಿಯನ್ನು ದಾಟಲು ಪ್ರಯತ್ನಿಸುತ್ತಿದ್ದಾಗ, ಗಂಟೆಗೆ ಸುಮಾರು 10 ಭಾರತೀಯರನ್ನು ಬಂಧಿಸಲಾಗಿದೆ. ದೇಶ ತೊರೆಯುವ ಯುವ ಸಮುದಾಯದ ಈ ಪ್ರಯತ್ನವು ಭಾರತದಲ್ಲಿ ಆವರಿಸಿರುವ ಹತಾಶ ಸ್ಥಿತಿಯನ್ನು ಸೂಚಿಸುತ್ತದೆ.

ಭಾರತದ ಅತಿದೊಡ್ಡ ಭ್ರಷ್ಟಾಚಾರ ಹಗರಣವೆಂದರೆ ಅಪಾರದರ್ಶಕ ಚುನಾವಣಾ ಬಾಂಡ್. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ತನಿಖೆಯನ್ನು ಎದುರಿಸು ತಿದ್ದ, ವಿರೋಧ ಪಕ್ಷಗಳಿಗೆ ಸೇರಿದ 23 ಮಂದಿ ನಾಯಕರು ಬಿಜೆಪಿ ಸೇರಿದ ನಂತರ ತನಿಖೆಯಿಂದ ವಿನಾಯಿತಿ ಪಡೆದಿದ್ದಾರೆ. 2024ರ ಜಾಗತಿಕ ಭ್ರಷ್ಟಾಚಾರ ಗ್ರಹಿಕೆಯ ಸೂಚ್ಯಂಕದಲ್ಲಿ (ಸಿಪಿಐ) ಭಾರತವು 180 ದೇಶಗಳ ಪೈಕಿ 96ನೇ ಸ್ಥಾನದಲ್ಲಿದೆ. ಇದು ಪಾರದರ್ಶಕತೆ ಮತ್ತು ಹೊಣೆಗಾರಿಕೆಯಲ್ಲಿನ ಲೋಪವನ್ನು ಸೂಚಿಸುತ್ತದೆ.

ಇದಲ್ಲದೆ ಕೇಂದ್ರ ಸರ್ಕಾರವು ರಾಜ್ಯಗಳ ಹಕ್ಕು ಗಳನ್ನು ಮೊಟಕುಗೊಳಿಸುತ್ತಿದೆ. ಕರ್ನಾಟಕವು ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಕೊಡುವ ರಾಜ್ಯವಾಗಿದ್ದರೂ ತೆರಿಗೆ ಹಂಚಿಕೆಯಲ್ಲಿ ಅದಕ್ಕೆ ಸಮರ್ಪಕವಾದ ಪಾಲು ಸಿಗುತ್ತಿಲ್ಲ. ಅದನ್ನು ಕರ್ನಾಟಕ ವಿರೋಧಿಸಿದಾಗ ‘ಸಣ್ಣತನ’ ಎಂದು ತಳ್ಳಿಹಾಕಲಾಯಿತು. ಪ್ರಜಾಪ್ರಭುತ್ವದ ಆಧಾರ ಸ್ತಂಭ ಆಗಿದ್ದ ಒಕ್ಕೂಟ ವ್ಯವಸ್ಥೆಯು ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆಯಿಂದಾಗಿ ದುರ್ಬಲವಾಗುತ್ತಿದೆ. ಅಪ್ರಸ್ತುತವಾದ ಬೃಹತ್ ಘೋಷಣೆಗಳಿಂದ ಜನರನ್ನು ಆಕರ್ಷಿಸುವ ಮೂಲಕ ಕಿಂದರಿ ಜೋಗಿಯ ಪಾತ್ರವನ್ನು ಮೋದಿ ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಇಂತಹ ಘೋಷಣೆ ಗಳಿಂದ ನಾವು ಎಷ್ಟು ಕಾಲ ಮಂತ್ರಮುಗ್ಧ ರಾಗಿರುತ್ತೇವೆಯೋ ಅಷ್ಟರಮಟ್ಟಿಗೆ ನಾವು ಪ್ರಪಾತದ ಅಂಚಿನತ್ತ ಸಾಗುತ್ತೇವೆ.

ಕಿಂದರಿ ರಾಗ ಆಕರ್ಷಕವಾಗಿದೆ. ಆದರೆ ಅದು ಸಮೂಹ ಸಮ್ಮೋಹನಕ್ಕಷ್ಟೇ ಸೀಮಿತವಾಗಿದೆ. ತಡ ಆಗುವ ಮುನ್ನ ಭಾರತೀಯರು ಈ ಭ್ರಮೆಯಿಂದ ಮುಕ್ತರಾಗಬೇಕಿರುವುದು ಇಂದಿನ ತುರ್ತು ಅಗತ್ಯ.

Leave a Comment