ಸಾಮಾನ್ಯರ ಅಸಾಮಾನ್ಯ ಕಾರ್ಯಕ್ಕೊಂದು ಸೆಲ್ಯೂಟ್!

ಸಾಮಾನ್ಯರ ಅಸಾಮಾನ್ಯ ಕಾರ್ಯಕ್ಕೊಂದು ಸೆಲ್ಯೂಟ್!

ತಾಶಿ ನಾಮ್‌ಗ್ಯಾಲ್. ಈ ಹೆಸರು ಕೇಳಿದವರು ಬಹುಶಃ ಕಡಿಮೆ ಆದರೆ ಭಾರತೀಯ ಸೇನೆಗೆ ಈ ಹೆಸರು ಚಿರಪರಿಚಿತ. ಜಮ್ಮು-ಕಾಶ್ಮೀರದ ಲೇಹ್ ಪ್ರದೇಶದ ಆರ್ಯನ್ ಕಣಿವೆ ಭಾಗದ ಗರ್ಕಾಂವ್ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದ 58 ವರ್ಷ ವಯಸ್ಸಿನ ತಾಶಿ ಈಚೆಗೆ ಕೊನೆಯುಸಿರೆಳೆದರು. ತಾಶಿ ನಾಮ್‌ ಗ್ಯಾಲ್ ಪಾರ್ಥಿವ ಶರೀರಕ್ಕೆ ಸೆಲ್ಯೂಟ್ ಮೂಲಕ ಭಾರತೀಯ ಸೈನಿಕರು ಗೌರವಪೂರ್ವಕ ಅಂತಿಮ ವಿದಾಯ ಹೇಳಿದರು.

‘ತಾಶಿ ನಾಮ್‌ಗ್ಯಾಲ್ ಅವರು ದೇಶಕ್ಕೆ ನೀಡಿದ ಕೊಡುಗೆಗಾಗಿ ಸದಾ ಸ್ಮರಣೀಯರು. ಅವರ ನಿಸ್ವಾರ್ಥ ತ್ಯಾಗ ಎಂದಿಗೂ ನೆನಪಿನಲ್ಲಿರುತ್ತದೆ’ ಎಂದು ಭಾರತೀಯ ಸೇನೆಯ ಫೈರ್ ಆಂಡ್ ಫ್ಲೂರಿ ಕೋರ್ ವಿಭಾಗವು ಹೇಳಿಕೆಯಲ್ಲಿ ತಿಳಿಸಿದೆ. ಇದಲ್ಲದೆ ಅವರ ಕುಟುಂಬಕ್ಕೆ ತಕ್ಷಣ ನೆರವು ಒದಗಿಸಲಾಗಿದೆ; ಮುಂದೆಯೂ ಬೆಂಬಲ ನಿರಂತರವಾಗಿರುತ್ತದೆ ಎಂದೂ ಸೇನೆ ತಿಳಿಸಿದೆ. ಸೇನೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಈ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯಿಸಿ, ತಾಶಿ ಕೊಡುಗೆಯನ್ನು ಕೊಂಡಾಡಿದ್ದರು. ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ತಾಶಿಯನ್ನು ಭೇಟಿಯಾಗಿ, ಸಮಯೋಚಿತ ನಡೆಯನ್ನು ಶ್ಲಾಘಿಸಿದ್ದರು. ತಾಶಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.

ಒಬ್ಬ ಸಾಮಾನ್ಯ ಕುರಿಗಾಹಿಯ ಕುರಿತು ಸೇನೆ ಈ ಬಗೆಯ ಅದರ ಹೊಂದಿರುವುದಕ್ಕೆ ಪ್ರಬಲ ಕಾರಣವಿದೆ. ಗುಡ್ಡಬೆಟ್ಟಗಳಲ್ಲಿ ಓಡಾಡುತ್ತಿದ್ದಾಗ ಏನಾಯಿತು ಎಂದು ತಾಶಿಯೇ ಒಮ್ಮೆ ಹೇಳಿದ್ದರು. ಅವರದೇ ಮಾತುಗಳಲ್ಲಿ ಹೇಳುವುದಾದರೆ- ‘ಕಾಣೆಯಾಗಿದ್ದ ನನ್ನ ಯಾಕ್ ಅನ್ನು ಅರಸುತ್ತ 1999ರ ಮೇ 3ರಂದು ಗೆಳೆಯನ ಜೊತೆ ಜುಬರ್ ಲಾಂಗ್ವಾ ಹಳ್ಳದ ಗುಂಟ ಸುಮಾರು 5 ಕಿಮೀ ಹೋಗಿದ್ದೆ. ನನ್ನ ಬಳಿಯಿದ್ದ ಬೈನಾಕ್ಯುಲರ್ ಮೂಲಕ ಪರ್ವತದ ತುದಿಯನ್ನು ದೃಷ್ಟಿಸುತ್ತಿದ್ದೆ. ಆಗ ಅಚಾನಕ್ಕಾಗಿ, ಪಠಾಣ್ ದಿರಿಸಿನಲ್ಲಿದ್ದ ಕೆಲವರು ಹಾಗೂ ಮಾರುವೇಷದಲ್ಲಿದ್ದ ಪಾಕ್ ಸೈನಿಕರು ಬಂಕರ್ ತೋಡುತ್ತಿದ್ದುದನ್ನು ಗಮನಿಸಿದೆ. ಅವರಲ್ಲಿ ಕೆಲವರು ಶಸ್ತ್ರಧಾರಿಗಳಾಗಿದ್ದರು. ಅವರ ಸಂಖ್ಯೆ ಎಷ್ಟಿತ್ತೆಂದು ಸರಿಯಾಗಿ ತಿಳಿಯಲಿಲ್ಲ. ಆದರೆ ಅವರು ನಿಯಂತ್ರಣ ರೇಖೆಯ ಆಚೆಯಿಂದ ಬಂದವರೆಂಬುದು ಮಾತ್ರ ನನಗೆ ಪಕ್ಕಾ ಆಯಿತು. ಅಲ್ಲಿಂದ ವಾಪಸಾಗಿ ಹತ್ತಿರದ ಸೇನಾ ಠಾಣ್ಯಕ್ಕೆ ಹೋಗಿ ನಾನು ಕಂಡುದನ್ನು ವಿವರಿಸಿದೆ. ಸೇನೆಯವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅತಿಕ್ರಮಣ ಮಾಡಿದವರು ಪಾಕ್ ಸೈನಿಕರೆಂಬುದು ಧೃಡಪಟ್ಟಿತು’.

ಸೇನೆಯ ಅಧಿಕಾರಿಗಳು ಕುರಿಗಾಹಿಯ ಮಾತು ಎಂದು ತಳ್ಳಿಹಾಕದೆ ಕೂಡಲೇ ಪರಿಶೀಲನೆಗೆ ಮುಂದಾಗಿದ್ದರಿಂದ ದೊಡ್ಡ ಷಡ್ಯಂತ್ರ ಬಯಲಾಯಿತು. ಮೇಲಾಧಿಕಾರಿಗಳು ತಳಹಂತದವರ ಮಾತನ್ನು ಗಮನವಿಟ್ಟು ಆಲಿಸಿದಲ್ಲಿ ಪ್ರಯೋಜನವಿದೆ ಎಂಬ ಸಂದೇಶವೂ ಇಲ್ಲಿದೆ. ಕಾರ್ಗಿಲ್ ಅತಿಕ್ರಮಣದ ಭಾಗವಾಗಿ ಪಾಕಿಗಳು ಪರ್ವತ ಪ್ರದೇಶಗಳಲ್ಲಿ ನೆಲೆಯೂರುತ್ತ, ಬಂಕರ್ ತೋಡುವುದು ಇತ್ಯಾದಿ ಕೆಲಸದಲ್ಲಿ ತೊಡಗಿದ್ದರು. ಹೀಗೆ ಒಳನುಸುಳಿದವರು ಪಾಕಿಸ್ತಾನ ಸೈನಿಕರು ಎಂದು ದೃಢಪಟ್ಟ ಕೂಡಲೇ ಭಾರತೀಯ ಸೇನೆಯ ಉನ್ನತಾಧಿಕಾರಿಗಳು ಪ್ರತಿತಂತ್ರ ರೂಪಿಸಿದರು. ದುರ್ಗಮವಾದ ಕಣಿವೆ ಪ್ರದೇಶಗಳಲ್ಲಿ ಕಾರ್ಯಾಚರಣೆ ಬಹು ಕಷ್ಟಕರವಾಗಿತ್ತು. ಮರಾಮೋಸದಿಂದ ಒಳನುಗ್ಗಿದ್ದ ಪಾಕ್ ಸೈನಿಕರು ಅನೇಕ ಪರ್ವತಗಳನ್ನು ಏರಿ ಕುಳಿತಿದ್ದರು. ಅಲ್ಲಿಂದ ಯುದ್ಧ ಮಾಡುವುದು ಅವರಿಗೆ ಸುಲಭವಾಗಿತ್ತು. ಭಾರತೀಯ ಸೈನಿಕರು ಕೆಳಗಡೆಯಿಂದ ಸೆಣಸುತ್ತ ಪರ್ವತದ ಮೇಲೇರಿ ಹೋಗಿ ಅವರನ್ನು ಸದೆಬಡಿಯಬೇಕಿತ್ತು.

ಇದನ್ನೂ ಓದಿ: ಮನೋನಿಗ್ರಹವೇ ಎಲ್ಲಾ ಶಕ್ತಿಗಳ ಆಗರ !

ಒಂದೊಮ್ಮೆ ತಾಶಿ ಪಾಕ್ ಸೈನಿಕರ ಚಲನವಲನವನ್ನು ಗಮನಿಸಿಯೂ ನಿರ್ಲಕ್ಷಿಸಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿತ್ತು. ಸಾಮಾನ್ಯರು ಅಸಾಮಾನ್ಯ ಕೆಲಸಕಾರ್ಯಗಳಿಗೆ ಸಾಕ್ಷಿಯಾಗುವುದು ಎಂದರೆ ಹೀಗೆ, ತಾಶಿಗೆ ಅನುಮಾನ ಬಂದ ಕೂಡಲೇ ಸೇನೆಗೆ ತಿಳಿಸಬೇಕು ಎಂಬ ವಿವೇಕ ಜಾಗೃತವಾಗಿದ್ದರಿಂದ ಅನುಕೂಲವಾಯಿತು. ಜನಸಾಮಾನ್ಯರು ತಮಗೆ ಅರಿವಿದ್ದೋ ಇಲ್ಲದೆಯೋ ಕೆಲವೊಮ್ಮೆ ಅಭೂತಪೂರ್ವ ಕೆಲಸಕ್ಕೆ ಕಾರಣವಾಗುವುದುಂಟು. ನಮ್ಮ ಸ್ವಾತಂತ್ರ್ಯ ಹೋರಾಟವೂ ಹಾಗೇ ಅಲ್ಲವೆ? ಈ ಯಜ್ಞದಲ್ಲಿ ಸಮಿತ್ತುಗಳಾದವರಲ್ಲಿ ಲಕ್ಷಾಂತರ ಮಂದಿ ಅನಾಮಧೇಯರು. ಡಿವಿಜಿಯವರು ಒಂದು ಕಗ್ಗದಲ್ಲಿ ಹೇಳುವಂತೆ- ವನಸುಮದ ಆದರ್ಶದವರು ‘ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ/ ಸೌರಭವ ಸೂಸಿ ನಲವಿಂ ತಾನೆಲೆಯ ಪಿಂತಿರ್ದು/ ದೀನತೆಯ ತೋರಿ ಅಭಿ/ ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ….

‌ಎಷ್ಟೋ ಮಂದಿ ಮನೆಮಠ ತೊರೆದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು; ಜೈಲುವಾಸ, ಆರ್ಥಿಕ ಕಷ್ಟನಷ್ಟಗಳನ್ನು ಅನುಭವಿಸಿದರು.ನಾಯಕನ ಮಾತನ್ನು ಎದೆಗೆ ಇಳಿಸಿಕೊಂಡು ಕೆಲಸ ಮಾಡುವ ಜನರು ಇದ್ದರೆ ಮಾತ್ರ ಯಾವುದೇ ಹೋರಾಟ- ಅಂದೋಲನ ಯಶಸ್ಸಿನ ಹಾದಿಯಲ್ಲಿ ಸಾಗುತ್ತದೆ.
ಕಾರ್ಗಿಲ್ ಸಮರದಲ್ಲಿ ಭಾರತ ನಿರ್ಣಾಯಕ ಜಯ ಸಾಧಿಸಿದ ಕುರುಹಾಗಿ ಪ್ರತಿ ವರ್ಷ ಜುಲೈ 26ನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಲಾಗುತ್ತದೆ. 1999ರಿಂದ ತಾಶಿ ನಾಮ್‌ಗ್ಯಾಲ್ ಅವರನ್ನು ಸೇನೆಯು ವಿಜಯ ದಿವಸ ಆಚರಣೆಗೆ ಆಹ್ವಾನಿಸುತ್ತಿತ್ತು. ಈ ವರ್ಷ ದ್ರಾಸ್‌ನಲ್ಲಿ ನಡೆದ ಕಾರ್ಗಿಲ್ ವಿಜಯದ 25ನೇ ವರ್ಷದ ಕಾರ್ಯಕ್ರಮದಲ್ಲಿ ತಾಶಿ ಭಾಗಿಯಾಗಿದ್ದರು.

‌ ಕೊಟ್ಟ ಮಾತಿಗೆ ತಪ್ಪುವುದು ಪಾಕಿಸ್ತಾನದ ಎಂದಿನ ಚಾಳಿ ಎಂಬುದಕ್ಕೆ ಕಾರ್ಗಿಲ್ ಪ್ರಕರಣ ಮತ್ತೊಂದು ನಿದರ್ಶನ. 1999ರ ಫೆಬ್ರವರಿ 21ರಂದು ಭಾರತದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಪಾಕ್ ಪ್ರಧಾನಿ ನವಾಜ್ ಶರೀಫ್ ಅವರು ಲಾಹೋರ್ ಒಪ್ಪಂದಕ್ಕೆ ಅಂಕಿತ ಹಾಕಿದ್ದರು. ಒಂದು ಹೆಜ್ಜೆ ಮುಂದಿಟ್ಟ ವಾಜಪೇಯಿ ಲಾಹೋ‌ರ್ ಗೆ ಬಸ್ ಯಾತ್ರೆಯನ್ನೂ ನಡೆಸಿದರು. ಅವರ ಕವಿಹೃದಯ ಶಾಂತಿಕವನವನ್ನು ಗುನುಗುತ್ತಿತ್ತು. ಅಂತೂ ಭಾರತ-ಪಾಕ್ ನಡುವೆ ಶಾಂತಿ ನೆಲೆಯಾಗಬಹುದು ಎಂಬ ಆಶಾವಾದ ಚಿಗುರಿತ್ತು, ಆದರೆ… ಅದಾದ ಕೆಲವೇ ದಿನಗಳಲ್ಲಿ ಕಾರ್ಗಿಲ್ ಅತಿಕ್ರಮಣದ ಮೂಲಕ ಪಾಕಿಸ್ತಾನದ ನಿಜಬಣ್ಣ ಬಯಲಾಯಿತು. ‘ಕಾರ್ಗಿಲ್ ಪ್ರದೇಶವನ್ನು ನಮ್ಮ ಸೈನಿಕರು ಅತಿಕ್ರಮಿಸುವ ಯೋಜನೆ ನನ್ನ ಗಮನಕ್ಕೆ ಬಂದಿರಲಿಲ್ಲ’ ಎಂದು ಪ್ರಧಾನಿ ನವಾಜ್ ಶರೀಫ್ ಹೇಳಿದ್ದರಾದರೂ, ತಾವು ಈ ವಿಷಯವನ್ನು ಮುಂಚಿತವಾಗಿ ಅವರ ಗಮನಕ್ಕೆ ತಂದಿದ್ದಾಗಿ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ನಂತರ ಹೇಳಿದ್ದರು.

‘ಮಾಡಿದ್ದುಣೋ ಮಹರಾಯ’ ಎಂಬ ಗಾದೆಮಾತು ಪಾಕಿಸ್ತಾನದ ರಾಜಕೀಯ ಮತ್ತು ಸೇನಾ ನಾಯಕರಿಗೂ ಗೊತ್ತಿರಬಹುದು. ಆದರೆ ಅವರು ಇತಿಹಾಸದಿಂದ ಕಲಿಯುವುದು ಕಡಿಮೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ವಿಭಜನೆಯ ಮರುದಿನದಿಂದಲೇ ಭಾರತದ ಮೇಲೆ ಕೆಂಡಕಾರುತ್ತ, ಭಯೋತ್ಪಾದನೆಗೆ ಇಂಬು ನೀಡುತ್ತ ಬಂದಿದೆ ಪಾಕಿಸ್ತಾನ. ಮಾಡಿದ ಕೆಲಸಕ್ಕೆ ಪ್ರತಿಫಲ ಅನುಭವಿಸಲೇಬೇಕು ಎಂಬ ಮಾತಿಗೆ ನಿದರ್ಶನ ಎಂಬಂತೆ, ಅದಕ್ಕೀಗ ಮಡಿಲ ಕೆಂಡ ಸುಡುತ್ತಿರುವುದು ಅನುಭವಕ್ಕೆ ಬರುತ್ತಿದೆ.

ಪೂರ್ವ ಅಫ್ಘಾನಿಸ್ತಾನದ ಪ್ರದೇಶವೊಂದರ ಮೇಲೆ ಪಾಕಿಸ್ತಾನ ಸೇನೆ ಈಚೆಗೆ ದಿಢೀರನೆ ವೈಮಾನಿಕ ದಾಳಿ ನಡೆಸಿತು. ಆ ವೇಳೆ 46 ಜನರು ಸಾವನ್ನಪ್ಪಿದರು. ಇವರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಾಲಿಬಾನ್‌ ಸರ್ಕಾರ ಹೇಳಿದೆ. ‘ಇಂಥ ಕೃತ್ಯಗಳು ಮುಂದುವರಿದರೆ ಸುಮ್ಮನೆ ಕೂರುವುದಿಲ್ಲ; ತಕ್ಕ ಉತ್ತರ ನೀಡಬೇಕಾಗುತ್ತದೆ’ ಎಂದು ಅಫ್ಘಾನಿಸ್ತಾನದೆ ತಾಲಿಬಾನ್ ಆಡಳಿತ ಎಚ್ಚರಿಕೆ ನೀಡಿದೆ. ಆದರೆ, ಉಗ್ರರ ನೆಲೆಗಳ ಮೇಲೆ ಈ ದಾಳಿ ನಡೆದಿದೆಯೇ ವಿನಾ ನಾಗರಿಕರನ್ನು ಗುರಿಯಾಗಿಸಿಲ್ಲ ಎಂದು ಪಾಕಿಸ್ತಾನಹೇಳಿಕೊಂಡಿದೆ. ಇದೇನೇ ಇದ್ದರೂ, ಎರಡೂ ದೇಶಗಳ ಮಧ್ಯೆ ಘರ್ಷಣೆ ಹೊಸ ಸ್ವರೂಪ ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ. ತಾಲಿಬಾನ್ ಜನನ ಮತ್ತು ಬೆಳವಣಿಗೆಗೆ ಪಾಕ್ ಕೊಡುಗೆ ದೊಡ್ಡದಿದೆ. ಅದು ಈಗ ಬೇರೊಂದು ಬಗೆಯಲ್ಲಿ ಪಾಕಿಸ್ತಾನಕ್ಕೆ ತಲೆನೋವಾಗಿದೆ.

ಪಾಕಿಸ್ತಾನ-ಅಫ್ಘಾನಿಸ್ತಾನದ ಗಡಿಯಾದ ‘ಡುರಾಂಡ್ ರೇಖೆ’ಗೆ ಮಾನ್ಯತೆ ನೀಡಲು ಅಫ್ಘಾನಿಸ್ತಾನದ ತಾಲಿಬಾನ್, ಸರ್ಕಾರ ಒಪ್ಪುತ್ತಿಲ್ಲ ಹೀಗಾಗಿ ಗಡಿಯಲ್ಲಿ ಹಿಂಸಾಚಾರ, ದಾಳಿ ಮಾಮೂಲು ಎಂಬಂತಾಗಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಎರಡನ್ನೂ ಒಳಗೊಂಡಿರುವ ಏಕೀಕೃತ ಇಸ್ಲಾಮಿಕ್ ರಾಷ್ಟ್ರ ನಿರ್ಮಾಣವಾಗಬೇಕು ಎಂಬುದು ತಾಲಿಬಾನ್ ಪ್ರತಿಪಾದನೆ ಆದರೆ ಪಾಕ್ ಇದನ್ನು ಸುತರಾಂ ಒಪ್ಪುವುದಿಲ್ಲ. ಪಾಕ್ ತಾಲಿಬಾನ್ ಉಗ್ರಗಾಮಿಗಳಿಗೆ ಅಫ್ಘಾನಿಸ್ತಾನ ಆಸರೆ, ನೆಲೆ ಒದಗಿಸಿದೆ ಎಂಬುದು ಪಾಕ್ ಸರ್ಕಾರದ ಆರೋಪ, ಗಾಯದ ಮೇಲೆ ಉಪ್ಪು ಸವರಿದಂತೆ, ತನ್ನ ಆಪ್ತಮಿತ್ರ ಚೀನಾದೊಂದಿಗೆ ತಾಲಿಬಾನ್ ಸಂಬಂಧ ಗಾಢವಾಗುತ್ತಿರುವುದು ಪಾಕಿಸ್ತಾನವನ್ನು ಕೆರಳಿಸಿದೆ. ಅಫ್ಘಾನಿಸ್ತಾನದ ಮೂಲಸೌಕರ್ಯ ಮತ್ತು ನೈಸರ್ಗಿಕ ಸಂಪನ್ಮೂಲ ಕ್ಷೇತ್ರದಲ್ಲಿ ಚೀನಾ ಭರ್ಜರಿ ಹೂಡಿಕೆಗೆ ಮುಂದಾಗಿರುವುದನ್ನು ಪಾಕಿಸ್ತಾನಕ್ಕೆ ಅರಗಿಸಿಕೊಳ್ಳಲಾಗುತ್ತಿಲ್ಲ.

2007ರಲ್ಲಿ ಅಸ್ತಿತ್ವಕ್ಕೆ ಬಂದ ತೆಹ್ರಡ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಉಗ್ರ ಸಂಘಟನೆ ಪಾಕಿಸ್ತಾನದಲ್ಲಿ ಉಗ್ರ ಕೃತ್ಯಗಳನ್ನು ನಡೆಸುತ್ತಿದೆ. 2021ರಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ ಟಿಟಿಪಿಯ ಶಕ್ತಿ ಹೆಚ್ಚಿದೆ. ಬೈತುಲ್ಲಾ ಮೆಹ್ಮದ್ ಎಂಬಾತ ಇದರ ನೇತೃತ್ವ ವಹಿಸಿದ್ದು, ಸುಮಾರು 35,000 ಸದಸ್ಯರನ್ನು ಹೊಂದಿದೆ ಎಂದು ಇಂಟಲಿಜೆನ್ಸ್ ವರದಿಗಳು ಹೇಳುತ್ತವೆ. ಇದನ್ನು ಪಾಕ್ ತಾಲಿಬಾನ್ ಎಂದೂ ಕರೆಯಲಾಗುತ್ತದೆ. ಅಫ್ಘನ್ ತಾಲಿಬಾನ್‌ನಿಂದ ಪ್ರತ್ಯೇಕಗೊಂಡಿರುವ ಇದು ಪಾಕ್-ಅಫ್ಘಾನಿಸ್ತಾನದ ಗಡಿ ಪ್ರದೇಶಗಳಲ್ಲಿ ನೆಲೆಗಳನ್ನು ಹೊಂದಿದೆ. ಬಹುತೇಕ ಭಯೋತ್ಪಾದಕ ಸಂಘಟನೆಗಳ ಸಿದ್ಧಾಂತದಂತೆ ಪಾಕ್ ‘ತಾಲಿಬಾನ್ ಕೂಡ ಇಸ್ಲಾಮಿಕ್ ಆಡಳಿತ ಸ್ಥಾಪಿಸುವ ಗುರಿಯನ್ನು ಹೊಂದಿದೆ. ಇದರೊಟ್ಟಿಗೆ, ಪಾಕಿಸ್ತಾನದ ಚುನಾಯಿತ ಸರ್ಕಾರವನ್ನು ಉರುಳಿಸುವುದು ಇದರ ಅಜೆಂಡಾದಲ್ಲಿ ಸೇರಿದೆ. ಹೀಗಾಗಿ ಪಾಕ್ ತಾಲಿಬಾನ್ ಸದಸ್ಯರು ಪಾಕಿಸ್ತಾನ ಸೇನೆಯ ಮೇಲೆ ದಾಳಿಗಳನ್ನು ನಡೆಸುತ್ತಿದ್ದಾರೆ. ಇದಲ್ಲದೆ, ರಾಜಕಾರಣಿಗಳು ಸಹ ಅವರ ಟಾರ್ಗೆಟ್, ಈ ಕಾರಣಕ್ಕಾಗಿ ಪಾಕ್ ಸೇನೆ ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ನೆಲೆಗಳ ಮೇಲೆ ಈಚೆಗೆ ದಾಳಿ ನಡೆಸಿದ್ದು.

ಭಾರತದ ವಿರುದ್ಧ ನಿರಂತರವಾಗಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತ. ಭಾರತದ ನೆಲದಲ್ಲಿ ವಿಧ್ವಂಸಕ ಚಟುವಟಿಕೆಗಳಿಗೆ ನೆರವು ಒದಗಿಸುವ ಪಾಕಿಸ್ತಾನ ಈಗ ಸ್ವಯಂಕೃತಾಪರಾಧಕ್ಕೆ ತಾನೇ ಬೆಲೆ ತೆರುವ ಸನ್ನಿವೇಶ ಸೃಷ್ಟಿಯಾಗಿದೆ. ಮೊದಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಆ ದೇಶ, ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮತ್ತಷ್ಟು ಸಮಸ್ಯೆಗೆ ಒಳಗಾಗುವುದು ಖಚಿತ ಜಾಗತಿಕ ದೇಶಗಳು ಪಾಕಿಸ್ತಾನಕ್ಕೆ ‘ವಿಫಲ ದೇಶ’ (failed state) ಎಂಬ ಹಣೆಪಟ್ಟಿ ಹಚ್ಚಿವೆ. ಸ್ವಾತಂತ್ರ್ಯ ಲಭಿಸಿದ ಸಮಯದಲ್ಲಿ ಕೆಲ ಪಾಶ್ಚಾತ್ಯ ಪ್ರಭ್ಯತಿಗಳು ವೈವಿಧ್ಯಮಯ ಜನಾಂಗ, ಪ್ರದೇಶ, ಭಾಷೆಗಳನ್ನು ಹೊಂದಿರುವ ಭಾರತ ಒಂದು ದೇಶವಾಗಿ ಬಹುಕಾಲ ಉಳಿಯುವುದಿಲ್ಲ. ಎಂದು ‘ಭವಿಷ್ಯ’ ನುಡಿದಿದ್ದರು. ಪಾಕಿಸ್ತಾನಕ್ಕೆ ಇಂಥ ಸಮಸ್ಯೆ ಇಲ್ಲ ಎಂಬುದು ಅವರ ಅಭಿಮತವಾಗಿತ್ತು. ಆದರೆ ಕಾಲದ ಪರೀಕ್ಷೆಯಲ್ಲಿ ಯಾರು ಏನಾಗಿದ್ದಾರೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಕೊನೇ ಮಾತು: ಸೈನಿಕರ ಕೆಲಸವೇ ಹಾಗೆ. ಸಂಕೀರ್ಣ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಯುದ್ಧ ನಡೆದರೆ ಅದೊಂದು ರೀತಿಯ ಸವಾಲು. ಇನ್ನು ಕೆಲವೊಮ್ಮೆ ಕರ್ತವ್ಯದ ಹಾದಿಯಲ್ಲಿ ಅನಿರೀಕ್ಷಿತ ಅಪಾಯಗಳೂ ಎದುರಾಗುವುದುಂಟು. ಈಚೆಗೆ ಜಮ್ಮು-ಕಾಶ್ಮೀರದ ಪೂಂಬ್‌ನಲ್ಲಿ ಸೇನಾ ವಾಹನ ಕಮರಿಗೆ ಉರುಳಿ ಐವರು ಸೈನಿಕರು ಸಾವನ್ನಪ್ಪಿದ್ದು ಇದಕ್ಕೊಂದು ಉದಾಹರಣೆ. ಆ ಐವರ ಪೈಕಿ ಮೂವರು ಕರ್ನಾಟಕದವರು ಮೊನ್ನೆ ಮೊನ್ನೆ ಮನೆಗೆ ಬಂದುಹೋದ ಮಗ ಇನ್ನೆಂದೂ ಬರುವುದಿಲ್ಲ ಎಂಬುದು ಸಹಿಸಲು ಆಗದ ಸ್ಥಿತಿ ದೇಶಸೇವೆಯ ಕಾಯಕದಲ್ಲಿ ನಮ್ಮ ಸೈನಿಕರು ಹೀಗೆ ಆಕಾಲಿಕವಾಗಿ ಜೀವಚೆಲ್ಲುವುದು ನೋವಿಗೀಡುಮಾಡುವ ಸಂಗತಿ.

Leave a Comment