ಸಿಪಿಎಂ ಸಮ್ಮೇಳನ ಯಶಸ್ವಿಗೊಳಿಸಲು ಮನವಿ
ಚೇಳೂರು: ತುಮಕೂರಿನಲ್ಲಿ ಭಾನುವಾರದಿಂದ ಆರಂಭವಾಗಲಿರುವ ಸಿಪಿಎಂ 24ನೇ ರಾಜ್ಯ ಸಮ್ಮೇಳನದ ರ್ಯಾಲಿ ಬಹಿರಂಗ ಸಭೆಯ ಪೋಸ್ಟರ್ ಅನ್ನು ತಾಲೂಕು ಸಿಪಿಎಂ ಕಾರ್ಯದರ್ಶಿ ಗೌನೋರುಪಲ್ಲಿ ಬಯ್ಯಾರೆಡ್ಡಿ ಬಿಡುಗಡೆ ಮಾಡಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಮೂರು ದಿನ ಸಮ್ಮೇಳನ ನಡೆಯಲಿದೆ. ಚೇಳೂರು ಭಾಗದಲ್ಲಿ ಶಾಶ್ವತ ನೀರಾವರಿ ಸೌಲಭ್ಯವಿಲ್ಲದೆ ರೈತಾಪಿ ಜನರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಜತೆಗೆ ಕೈಗಾರಿಕೆಗಳೂ ಇಲ್ಲ. ಕೂಲಿ ಮಾಡಿದರಷ್ಟೇ ಜೀವನ. ಹಾಗಾಗಿ ಈ ಭಾಗದಲ್ಲಿ ಕೈಗಾರಿಕೆಗಳನ್ನು ಆರಂಭಿಸಬೇಕು ಎಂಬ ಮತ್ತಿತರ ಬೇಡಿಕೆಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಮೂರು ದಿನ ಸಮ್ಮೇಳನ ನಡೆಯಲಿದೆ. ಮೊದಲ ದಿನ ರ್ಯಾಲಿ ಮತ್ತು ಬಹಿರಂಗ ಸಭೆ ನಡೆಯಲಿದೆ. ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಮಾಚನಪಲ್ಲಿ ಬೈರೆಡ್ಡಿ. ಮಂಜುನಾಥ. ಚಿನ್ನಗಾನಪಲ್ಲಿ ಸಿ.ಜಿ.ಶಿವಣ್ಣ, ಆರ್.ವಿ.ಅಶೋಕ್, ಮುಸ್ತಾಫ್ ಬೇಗ್, ಲಕ್ಷ್ಮೀನಾರಾಯಣ, ಸುಬ್ಬಿರೆಡ್ಡಿ, ಉತ್ತನ್ನ, ಆದಿನಾರಾಯಣ, ಬಿ.ರಾಮಚಂದ್ರ ಮುಂತಾದವರು ಹಾಜರಿದ್ದರು.
ಅಳಿವಿನಂಚಿಗೆ ಬಿದಿರು ಉತ್ಪನ್ನ
ಬೂದಿಕೋಟೆ: ಆಧುನಿಕತೆ ಬೆಳೆದಂತೆ ಬಿದಿರು ಉತ್ಪನ್ನಗಳಿಗೆ ಪರ್ಯಾಯವಾಗಿ ಪ್ಲಾಸ್ಟಿಕ್ ಹಾಗೂ ಇತರೆ ಉತ್ಪನ್ನಗಳ ಬಳಕೆ ಹೆಚ್ಚಾಗುತ್ತಿದ್ದು, ಬಿದಿರಿನ ಉತ್ಪನ್ನಗಳ ಬೇಡಿಕೆ ಕಡಿಮೆ ಆಗುತ್ತಿರುವುದರಿಂದ ಅದನ್ನೇ ನಂಬಿ ಜೀವನ ಬಂಡಿ ಸಾಗಿಸುತ್ತಿದ್ದವರ ಸ್ಥಿತಿ ಅತಂತ್ರವಾಗಿದೆ. ಕೆಲ ಸಮುದಾಯದವರು ಹಲವು ದಶಕಗಳಿಂದ ಬಿದಿರಿನ ಉತ್ಪನ್ನಗಳ ತಯಾರಿಸುತ್ತಾ ಬಂದಿದ್ದಾರೆ.
ಇದನ್ನೂ ಓದಿ: ದುಡುಕಿನ ನಿರ್ಧಾರ ಕೆಡುಕಿಗೆ ಮಹಾದ್ವಾರ
ನಮ್ಮ ಪೂರ್ವಜರ ಕಾಲದಿಂದಲೂ ಬಿದಿರಿನ ವಸ್ತುಗಳ ಬಳಕೆ ಹೆಚ್ಚಾಗಿತ್ತು. ಕಾಲ ಕ್ರಮೇಣ ಬಿದಿರಿನ ಬಳಕೆ ಕಡಿಮೆಯಾಗಿ ಅಳಿವಿನಂಚಿಗೆ ಬಂದು ತಲುಪಿದೆ. ಆಧುನಿಕತೆ ಬೆಳೆದು ವಿವಿಧ ಬಗೆಯ ವಸ್ತುಗಳು ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಸಿಗುತ್ತಿರುವುದರಿಂದ ಬಿದಿರಿನ ಉತ್ಪನ್ನಗಳನ್ನು ಖರೀದಿಸುವವರ ಸಂಖ್ಯೆ ಇಳಿಮುಖವಾಗಿದೆ. ಈ ಹಿಂದೆ ಬಿದಿರಿನಿಂದ ತಯಾರಿಸಿದ ಬುಟ್ಟಿ, ಬೀಸಣಿಗೆ, ಮಕ್ಕರಿ, ಕೋಳಿ ಪಂಜರ, ಏಣಿ ಸೇರಿ ಹತ್ತಾರು ಬಗೆಯ ವಸ್ತುಗಳನ್ನು ಬಳಕೆ ಮಾಡಲಾಗುತ್ತಿತ್ತು. ಬೇಡಿಕೆಗೆ ತಕ್ಕಂತೆ ತಯಾರಿಸುವವರು ಅಧಿಕ ಪ್ರಮಾಣದಲ್ಲಿದ್ದರು. ಆದರೆ ಆಧುನಿಕ ತಂತ್ರಜ್ಞಾನದ ಪರಿಕರಗಳ ನಡುವೆ ಪೈಪೋಟಿ ನೀಡಲು ಸಾಧ್ಯವಾಗದೇ, ಪಾರಂಪರಿಕವಾಗಿ ಮಾಡಿಕೊಂಡು ಬಂದ ಕುಲಕಸುಬನ್ನು ತೊರೆದು ದಾರಿ ಕಾಣದೇ ಕೂಲಿ ಕೆಲಸದತ್ತ ಮುಖ ಮಾಡುತ್ತಿದ್ದಾರೆ.
ಪರಂಪರೆಗೆ ಮತ್ತು ಕುಲಕಸುಬಿಗೆ ಇಂದಿನ ಯುವಕರು ಸಹ ಆಸಕ್ತಿ ತೋರುತ್ತಿಲ್ಲ. ಬದಲಾಗಿ ಬೆಂಗಳೂರು ಸೇರಿ ಇತರೆ ಪಟ್ಟಣಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಬಿದಿರು ಉತ್ಪನ್ನಗಳಿಗೆ ಈಗ ಬೇಡಿಕೆ ಇಲ್ಲದ ಕಾರಣ ಬೆಲೆಯೂ ಸಹ ಮೊದಲಿನಂತಿಲ್ಲ. ಇದರಿಂದ ದಿನದ ಸಂಪಾದನೆ ಕಡಿಮೆಯಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹಿಂದೇಟು ಹಾಕುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಕುಲಕಸುಬು ತೊರೆದು ಬೇರೆ ಕೆಲಸದ ಕಡೆ ಒಲವು ತೋರಿಸುತ್ತಿದ್ದಾರೆ ಎಂದು ಸಮುದಾಯದ ಮುಖಂಡರ ಆರೋಪವಾಗಿದೆ.ಬಂಗಾರಪೇಟೆ ತಾಲೂಕಿನ ತುಮಟಗೆರೆ ಗ್ರಾಮದಲ್ಲಿ 15 ಕ್ಕೂ ಹೆಚ್ಚಿನ ಕುಟುಂಬಗಳು ಬಿದಿರಿನ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದರು. ಈ ಹಿಂದೆ ರೇಷ್ಮೆ ಸಾಕಾಣಿಕೆಗೆ ಬೇಕಾದಂತಹ ತಟ್ಟೆಗಳನ್ನು ಮತ್ತು ಚಂದರಂಕಿಗಳನ್ನು ಬಿದಿರಿನಲ್ಲಿಯೇ ತಯಾರಿಸುತ್ತಿದ್ದು, ಬೇಡಿಕೆ ಸಹ ಹೆಚ್ಚಾಗಿ ಇರುತ್ತಿತ್ತು. ಅವುಗಳ ಮಾರಾಟದಿಂದ ಉತ್ತಮ ಆದಾಯ ಪಡೆಯುತ್ತಿದ್ದರು. ಅದಕ್ಕೆ ಬೇಕಾದಂತಹ ಬಿದಿರು ಸ್ಥಳೀಯವಾಗಿ ದೊರಕದೆ ಭದ್ರಾವತಿಯಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ದಿನ ಕಳೆದಂತೆ ರೇಷ್ಮೆ ಸಾಕಾಣಿಕೆಯಲ್ಲಿ ಬಿದಿರಿನ ತಟ್ಟೆಗಳು ಮತ್ತು ಚಂದರಂಕಿಗಳು ಮಾಯವಾಗಿ ಆಧುನಿಕ ತಂತ್ರಜ್ಞಾನದಲ್ಲಿ ರೇಷ್ಮೆ ಸಾಕಾಣಿಕೆ ಮಾಡಲಾಗುತ್ತಿದೆ. ಈಗ ಬಿದಿರಿನ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಸಹ ಇಲ್ಲ. ಇದರಿಂದ ಬಹುತೇಕ ಕುಟುಂಬಗಳಿಗೆ ಕೆಲಸ ಮತ್ತು ಆದಾಯ ಇಲ್ಲದೆ ಕುಲಕಸಬು ಬಿಟ್ಟು ಬೇರೆ ಕೆಲಸಗಳಿಗೆ ಮಾರು ಹೋಗಿದ್ದಾರೆ. ಇದರಿಂದ ಬಿದಿರಿನ ಪರಿಕರಗಳ ತಯಾರಿಕಾ ಸಮುದಾಯ ನಶಿಸಿ ಹೋಗುವಂತಾಗಿದೆ.