ಸೋಮೇನಹಳ್ಳಿ ಶಾಲೆಯಲ್ಲಿ ಮಕ್ಕಳ ಸಂತೆ
ಸೊಪ್ಪು ,ತರಕಾರಿ ,ಬೇಲ್ ಪುರಿ, ಬೋಂಡಾ, ಬಜ್ಜಿ ,ಕಾಫಿ ,ಟೀ ಮಾರಾಟ
ಗುಡಿಬಂಡೆ: ಮಕ್ಕಳಲ್ಲಿ ವ್ಯವಹಾರ ಜ್ಞಾನ ಅಭಿವೃದ್ಧಿಗೆ ಮಕ್ಕಳ ಸಂತೆ ಪ್ರೇರಣೆ ನೀಡುತ್ತದೆ ಎಂದು ಮುಖ್ಯ ಶಿಕ್ಷಕ ನಾಗಲಿಂಗಪ್ಪ ತಿಳಿಸಿದರು .
ಸೋಮೇನಹಳ್ಳಿ ಗ್ರಾಮದ ಪಿ ಎಂ ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿದರು .
ಮಕ್ಕಳನ್ನು ಪಠ್ಯಕ್ಕೆ ಸೀಮಿತ ಮಾಡುವುದು ಸರಿಯಲ್ಲ. ಸಮಗ್ರ ಶಿಕ್ಷಣದ ಭಾಗವಾಗಿ ಕ್ರೀಡೆ ,ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ಎಂದರು.
ಮಕ್ಕಳಲ್ಲಿ ವ್ಯವಹಾರ ಕೌಶಲವನ್ನು ವೃದ್ಧಿಸುವುದರ ಜೊತೆಗೆ ಗಣಿತದ ಮೂಲ ಕಲ್ಪನೆಗಳನ್ನು ಮೂಡಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ಶಾಲೆಗಳಲ್ಲಿ ಮಕ್ಕಳ ಸಂತೆ ನಡೆಸಲು ಕಾರ್ಯಕ್ರಮ ರೂಪಿಸಿರುವುದು ಒಳ್ಳೆಯ ನಿರ್ಧಾರ ಎಂದರು.
ಸೋಮೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಮಂಗಳಮ್ಮ ಅಶ್ವತಪ್ಪ ಮಾತನಾಡಿ ,ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜೊತೆಗೆ ಸಹಪಠ್ಯ ಚಟುವಟಿಕೆಗಳನ್ನು ನಡೆಸುವುದರಿಂದ ಅವರ ಬೌದ್ಧಿಕ ಜ್ಞಾನ ವಿಕಾಸ ಮತ್ತು ವ್ಯಕ್ತಿತ್ವ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಪೆರೇಸಂದ್ರ ಠಾಣೆಯ ಸಬ್ ಇನ್ಸ್ಪೆಕ್ಟರ್ ಜಗದೀಶ್ ರೆಡ್ಡಿ ಮಾತನಾಡಿ ಮಕ್ಕಳು ಜೀವನ ನಡೆಸಲು ವ್ಯವಹಾರ ಜ್ಞಾನದ ಅರಿವು ಮೂಡಿಸಬೇಕು. ಪೋಷಕರು ಮಕ್ಕಳನ್ನು ಅಂಗಡಿಗೆ ಕಳುಹಿಸಿದರೆ ವ್ಯಾಪಾರ ಮಾಡಿ ಸಾಮಗ್ರಿ ತರುವ ಶಕ್ತಿ ಬೆಳೆಸಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಉದ್ಯಮಗಳಲ್ಲಿ ವಾಣಿಜ್ಯ ಪದವಿಗೆ ಆದ್ಯತೆ ನೀಡಲಾಗುತ್ತಿದೆ. ಮಕ್ಕಳಲ್ಲಿ ಪ್ರಾಯೋಗಿಕವಾಗಿ ವ್ಯವಹಾರ ಜ್ಞಾನ ಬೆಳೆಸಲು ಮಕ್ಕಳ ಸಂತೆ ನಡೆಸಬೇಕು ಎಂದರು.
ಇದನ್ನೂ ಓದಿ: ಕ್ರಿಕೆಟ್: ‘ ಡಬಲ್ ವಿಶ್ವ ಚಾಂಪಿಯನ್ ಕೋಚ್’ ನೋಷಿನ್
ಸಂತೆಯಲ್ಲಿ ವಿವಿಧ ಬಗೆಯ ಸೊಪ್ಪು, ತರಕಾರಿ ,ಬೇಲ್ ಪುರಿ, ಬೋಂಡಾ, ಬಜ್ಜಿ ,ಕಾಫಿ, ಟೀ ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡಲಾಯಿತು. ಮಕ್ಕಳು ಪೋಷಕರು, ಶಿಕ್ಷಕರು, ಮುಖಂಡರು ಹಾಗೂ ಸಾರ್ವಜನಿಕರಿಗೆ ಮಾರುತ್ತಿದ್ದ ವಸ್ತುಗಳ ವ್ಯಾಪಾರ ನೈಜ ವ್ಯಾಪಾರಸ್ಥರನ್ನು ನಾಚಿಸುವಂತಿತ್ತು. ಪರಸ್ಪರ ಸ್ಪರ್ಧಾ ಮನೋಭಾವದಿಂದ ಮಕ್ಕಳು ನಾವೇ ಹೆಚ್ಚು ವ್ಯಾಪಾರ ಮಾಡಬೇಕು ಎಂಬ ಛಲದಿಂದ ಪೋಷಕರನ್ನು ಕರೆದು ತಮ್ಮ ಅಂಗಡಿಯ ಸಾಮಗ್ರಿ ಖರೀದಿಸಲು ಒತ್ತಾಯಿಸುತ್ತಿದ್ದರು. ಸಂತೆಯಲ್ಲಿ ಮಕ್ಕಳು ತಾವು ಮನೆಯಲ್ಲಿ ಬೆಳೆದು ತಂದಿದ್ದ ತಾಜಾ ತರಕಾರಿಗಳನ್ನು ಉತ್ಸಾಹದಿಂದ ಮಾರಾಟ ಮಾಡುವಲ್ಲಿ ನಿರತರಾಗಿದ್ದು ಕಂಡುಬಂದಿತು.
ಎಸ್ ಡಿ ಏಂ ಸಿ ಅಧ್ಯಕ್ಷ ಕೆ .ಸ್ವರ್ಣ, ಶಾಲೆಯ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು