ಹಕ್ಕು ದಕ್ಕಿಸಿದ ‘ಗ್ಯಾರಂಟಿ ‘

ಹಕ್ಕು ದಕ್ಕಿಸಿದ ‘ಗ್ಯಾರಂಟಿ ‘

ಎಲ್ಲಿಯವರೆಗೆ ಬದುಕುವ ಮೂಲಭೂತ ಹಕ್ಕು ಸರ್ವರಿಗೂ ದೊರಕುವುದಿಲ್ಲವೋ ಅಲ್ಲಿಯವರೆಗೆ ತಾತ್ಕಾಲಿಕವಾಗಿ ಆದರೂ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿ ಇರಲೇಬೇಕಾಗುತ್ತದೆ. ಇನ್ನೊಂದೆಡೆ ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಆರ್ಥಿಕವಾಗಿ ಹೊರೆ ಎಣಿಸಬಹುದು. ಆದರೆ, ಅಭಿವೃದ್ಧಿ ಎಂದರೆ ಜನರ ಘನತೆಯ ಬದುಕಿನ ಅಭಿವೃದ್ಧಿಯೂ ಹೌದು ಎನ್ನುವುದನ್ನು ನಾವು ಅರಿತುಕೊಳ್ಳಬೇಕು

ಕಳೆದ ಒಂದಷ್ಟು ವರ್ಷಗಳಿಂದ ಸುಪ್ರೀಂ ಕೋರ್ಟ್ ನವ ಉದಾರವಾದಿ ಬಂಡವಾಳ ಶಾಹಿ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಸಂವಿಧಾನದ ವ್ಯಾಖ್ಯಾನ ಮಾಡುತಿದೆ. ಇಂತಹ ಹೊತ್ತಿನಲ್ಲಿ ದೇಶದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಬಿ .ಆರ್. ಗವಾಯಿ ಅವರು ಫೆ.12ರಂದು ‘ಉಚಿತ ಯೋಜನೆಗಳು ಜನರನ್ನು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಉತ್ತೇಜಿಸುವ ಬದಲು ಪರಾವಲಂಬಿಗಳಾಗಿಸುತ್ತಿಲ್ಲವೇ’ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉಚಿತ ಯೋಜನೆಗಳು ಜನರನ್ನು ಪರಾವಲಂಬಿಗಳಾಗಿಸುತ್ತಿವೆಯೇ ,ಇಲ್ಲವೇ ಎನ್ನುವುದನ್ನು ವಿವೇಚಿಸುವುದು ಈ ಹೊತ್ತಿನ ತುರ್ತಾಗಿದೆ.


ಸಂವಿಧಾನದ 21ನೇ ವಿಧಿ ಈ ದೇಶದ ಪ್ರತಿಯೊಬ್ಬರಿಗೂ ಬದುಕುವ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ನೀಡಿದೆ. ಸಂವಿಧಾನದ ಪ್ರಕಾರ ‘ಬದುಕುವ ಹಕ್ಕು’ ಎಂದರೆ ದುಡಿಯುವ ಹಕ್ಕು, ಸಮಾನ ವೇತನ, ಘನತೆಯಿಂದ ಕೆಲಸ ಮಾಡುವ ವಾತಾವರಣ ,ವ್ಯಕ್ತಿತ್ವ ವಿಕಸನ, ಕೆಲಸದಿಂದ ಸಿಗಬೇಕಾದ ಸ್ವಯಂ ಸಂತೃಪ್ತಿ ಎಂದು ಸರಳವಾಗಿ ಅರ್ಥೈಸಬಹುದು. ಸಂವಿಧಾನದ 21ನೇ ವಿಧಿಯ ಹಿನ್ನೆಲೆಯಲ್ಲಿ ನಮ್ಮ ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಒಮ್ಮೆ ಗಮನಿಸಿದರೆ, ದೇಶದ ಶೇಖಡ 90ರಷ್ಟು ಜನಸಂಖ್ಯೆಯ ಬದುಕುವ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎನ್ನುವ ಅಂಶ ಮನದಟ್ಟಾಗುತ್ತದೆ. ಚುನಾವಣಾ ರಾಜಕಾರಣಗಳನ್ನು ಬದಿಗಿಟ್ಟು ಗ್ಯಾರಂಟಿ ಯೋಜನೆಗಳ ಕುರಿತು ಅವಲೋಕಿಸುವುದಾದರೆ, ಈ ಯೋಜನೆಗಳು ದೇಶದ ಶೇಕಡ 90ರಷ್ಟು ಜನರಿಗೆ ಬದುಕುವ ಹಕ್ಕನ್ನು ತಾತ್ಕಾಲಿಕವಾಗಿ ಯಾರಾದರೂ ಒದಗಿಸುತ್ತಿವೆ ಎನ್ನುವ ವಾದವನ್ನು ಮುಂದಿಡಬಹುದು. ಹಾಗಾಗಿ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಗುರಿಯನ್ನಾಗಿ ಹೊಂದಿರುವ ಯೋಜನೆಗಳನ್ನು ‘ ಉಚಿತ ಯೋಜನೆಗಳು’ ಎಂದು ಸರ್ಕಾರ ಹಾಗೂ ನಾಗರೀಕರು ಕರೆಯುತ್ತಿರುವುದರಲ್ಲೇ ತಾತ್ವಿಕವಾದ ಸಮಸ್ಯೆ ಇದೆ ಎನಿಸುತ್ತಿದೆ.

ಇದನ್ನೂ ಓದಿ:‘ಸುಪ್ರೀಂ’ ಕೇಳದ ಪ್ರಶ್ನೆಗಳು


ಭಾರತದಲ್ಲಿ ಶೇಕಡ 40ರಷ್ಟು ಸಂಪತ್ತು ಶೇಕಡ ಒಂದರಷ್ಟು ಜನರ ಬಳಿ ಇದ್ದರೆ, ಶೇಕಡ 50ರಷ್ಟು ಜನಸಂಖ್ಯೆಯ ಒಟ್ಟು ಸಂಪತ್ತು ಶೇಕಡ ಮೂರರಷ್ಟು ಮಾತ್ರ ಅನಾರೋಗ್ಯದ ಕಾರಣದಿಂದ ಪ್ರತಿ ವರ್ಷ ಅಂದಾಜು 6 .3 ಕೋಟಿಯಷ್ಟು ಜನರ ಬದುಕು ಬಡತನದ ರೇಖೆಗಿಂತಲೂ ಕೆಳಮಟ್ಟಕ್ಕೆ ಕುಸಿಯುತ್ತಿದೆ. ಈ ಮಟ್ಟದ ಆರ್ಥಿಕ ಅಸಮಾನತೆ ಇರುವ ನಮ್ಮ ದೇಶದಲ್ಲಿ ಸಂವಿಧಾನದ 21ನೇ ವಿಧಿ ಪ್ರಕಾರ ಪ್ರತಿಯೊಬ್ಬರಿಗೂ ಸಮಾನ ದುಡಿಯುವ ಅವಕಾಶ ಸಿಗಲು ಸಾಧ್ಯವೇ ಎನ್ನುವ ಪ್ರಶ್ನೆಯನ್ನು ಎಲ್ಲರೂ ಕೇಳಿಕೊಳ್ಳಬೇಕಾಗಿದೆ.
ಭಾರತದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜೀವಿತಾವಧಿ ಇತರೆ ಸಮುದಾಯಗಳ ಜೀವಿತಾವಧಿಗಿಂತ ಸುಮಾರು ನಾಲ್ಕರಿಂದ ಆರು ವರ್ಷಗಳಷ್ಟು ಕಡಿಮೆ ಇದ್ದು, ಶೇಕಡ ಆರರಷ್ಟು ವಯಸ್ಕರು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಅಂದಾಜು ಶೇಕಡ ಅರವತ್ತರಷ್ಟು ಮಹಿಳೆಯರು ರಕ್ತಹೀನತೆಯಿಂದ ನರಳುತ್ತಿದ್ದಾರೆ. ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ಪ್ರಕಟಿಸಿರುವ ‘ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ ರಿಪೋರ್ಟ್ -2023’ರ ವರದಿಯ ಪ್ರಕಾರ, 1980ರ ದಶಕದಲ್ಲಿ ಪರಿಶಿಷ್ಟ ಪಂಗಡಗಳ ಸಮುದಾಯದ ಮಹಿಳೆಯರ ಕೆಲಸದಲ್ಲಿ ಭಾಗವಹಿಸುವಿಕೆಯ ದರ (ಡಬ್ಲ್ಯೂ ಪಿ ಆರ್) ಶೇಕಡ 52 ಇತ್ತು. ಅದು 2020ರಲ್ಲಿ ಶೇಕಡ 39.1 ಕ್ಕೆ ಕುಸಿದಿದೆ. ಇದೇ ರೀತಿಯಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯರ ಡಬ್ಲ್ಯೂ ಪಿ ಆರ್ ಶೇಕಡಾ 35.6ರಿಂದ ಶೇಕಡ 26.3ಕ್ಕೆ ಇಳಿಮುಖವಾಗಿದ್ದರೆ, ಹಿಂದುಳಿದ ಸಮುದಾಯದ ಮಹಿಳೆಯರ ಡಬ್ಲ್ಯೂ ಪಿ ಆರ್ ಶೇಕಡಾ 34.4 ಇದ್ದದ್ದು ಶೇಕಡ 25.2ಕ್ಕೆ ಇಳಿದಿದೆ . ಮುಸ್ಲಿಂ ಸಮುದಾಯದ ಮಹಿಳೆಯರ ಡಬ್ಲ್ಯೂ ಪಿ ಆರ್ ಶೇಕಡಾ 16.6ರಿಂದ 16.3ಕ್ಕೆ ಇಳಿದಿದೆ.


25 ವರ್ಷದೊಳಗಿನ ಶೇಕಡ 42ರಷ್ಟು ಪದವೀಧರರು ಈ ದೇಶದಲ್ಲಿ ನಿರುದ್ಯೋಗಿಗಳಾಗಿದ್ದಾರೆ. ನರೇಗಾ ಮತ್ತು ಪಡಿತರ ವ್ಯವಸ್ಥೆ ಶೇಕಡ 50 ಕ್ಕಿಂತ ಹೆಚ್ಚಿನ ಜನರನ್ನು ಬಡತನ ರೇಖೆಗಿಂತ ಕೆಳಗೆ ಹೋಗದಂತೆ ತಡೆದು ನಿಲ್ಲಿಸಿದೆ. ಒಂದು ವೇಳೆ ಎರಡು ಯೋಜನೆಗಳನ್ನು ನಿಲ್ಲಿಸಿದರೆ ರಾತ್ರೋರಾತ್ರಿ ಶೇಕಡಾ 50 ರಷ್ಟು ಜನಸಂಖ್ಯೆ ಬಡತನ ರೇಖೆಗಿಂತ ಕೆಳಗೆ ತಳ್ಳಲ್ಪಡುತ್ತದೆ. ಈ ಅಂಕಿ ಅಂಶಗಳನ್ನು ಒಮ್ಮೆ ಸಾವಧಾನವಾಗಿ ಗಮನಿಸಿದರೆ ದೇಶದ ಶೇಖಡ 90ರಷ್ಟು ಮಂದಿಯನ್ನು ಹೇಗೆ ಅವರ ಮೂಲಭೂತವಾದ ಬದುಕುವ ಹಕ್ಕಿನಿಂದ ವಂಚಿಸಲಾಗುತ್ತಿದೆ ಎನ್ನುವುದು ತಿಳಿಯುತ್ತದೆ. ಈ ಹಿನ್ನೆಲೆಯಲ್ಲಿ ನ್ಯಾ.ಬಿ .ಆರ್. ಗವಾಯಿ ಅವರು ಉಚಿತ ಯೋಜನೆಗಳ ಫಲಾನುಭವಿಗಳನ್ನು ‘ಪರಾವಲಂಬಿಗಳು’ ಎಂದಿರುವುದು ಈ ದೇಶದಲ್ಲಿ ನೈಜ ಪರಾವಲಂಬಿಗಳು ಯಾರು ಎಂಬುದರ ಕುರಿತು ನಮ್ಮನ್ನು ವಿಶ್ಲೇಷಣೆಗೆ ಒಡ್ಡುತ್ತದೆ.


ಹತ್ತು ವರ್ಷಗಳಲ್ಲಿ ಈ ದೇಶದ ಬಂಡವಾಳ ಶಾಹಿಗಳ ಸುಮಾರು ರೂ15 ಲಕ್ಷ ಕೋಟಿಗಳಷ್ಟು ಸಾಲವನ್ನು ಮನ್ನಾ ಮಾಡಲಾಗಿದೆ. ಕಾರ್ಪೊರೇಟ್ ಕಂಪನಿಗಳ ತೆರಿಗೆಯನ್ನು ಶೇಕಡ 30 ರಿಂದ ಶೇಕಡ 22ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಒಕ್ಕೂಟ ಸರ್ಕಾರದ ಖಜಾನೆಗೆ ಅಂದಾಜು ರೂ ಒಂದು ಲಕ್ಷ ಕೋಟಿಗಿಂತಲೂ ಅಧಿಕ ಖೋತಾ ಆಗುತ್ತಿದೆ. ವಾಸ್ತವದಲ್ಲಿ ಕಾರ್ಪೊರೇಟ್ ಕಂಪನಿಗಳು ದೇಶದಲ್ಲಿ ಉದ್ಯೋಗಿಗಳನ್ನು ಸೃಷ್ಟಿ ಮಾಡಲಿ ಎನ್ನುವ ಕಾರಣಕ್ಕಾಗಿ ಈ ರೀತಿಯ ತೆರಿಗೆ ವಿನಾಯಿತಿಯನ್ನು ನೀಡಲಾಯಿತು. ಆದರೆ, ಪ್ರಸ್ತುತ ‘ದೇಶದ ಅಭಿವೃದ್ಧಿ’ ಎಂದರೆ ಅದು ‘ನಿರುದ್ಯೋಗದ ಅಭಿವೃದ್ಧಿ’ ಎನ್ನುವಂತಾಗಿದೆ ಎನ್ನುವುದು ಅನೇಕ ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ .ತೆರಿಗೆ ವಿನಾಯಿತಿ ಪಡೆದ ಕಾರ್ಪೊರೇಟ್ ಕಂಪನಿಗಳು ದೇಶದ ಅಭಿವೃದ್ಧಿ ಮಾಡದೇ ವಯಕ್ತಿಕ ಅಭಿವೃದ್ಧಿಯ ಜೊತೆಗೆ ಸಾಲಮನ್ನಾದಂತಹ ವಿಶೇಷ ಸವಲತ್ತುಗಳನ್ನು ಪಡೆದುಕೊಂಡ ಕಾರಣ ಭಾರತದಲ್ಲಿ ಸುಮಾರು ನೂರಕ್ಕೂ ಹೆಚ್ಚು ಶತಕೋಟ್ಯಧಿಪತಿಗಳ ಸೃಷ್ಟಿಯಾಯಿತು. ಈ ಆಧಾರದಲ್ಲಿ ಪರಾವಲಂಬಿಗಳು ಶೇಕಡ ಒಂದರಷ್ಟಿರುವ ಜನಸಂಖ್ಯೆಯೋ ಅಥವಾ ಉಚಿತ ಯೋಜನೆಗಳ ಫಲಾನುಭವಿಗಳಾದ ಶೇ.90ರಷ್ಟಿರುವ ಜನಸಂಖ್ಯೆಯೋ ಎನ್ನುವುದನ್ನು ವಿವೇಚಿಸಬೇಕಿದೆ. ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಇಲ್ಲಿನ ಬಹು ದೊಡ್ಡ ವರ್ಗದ ದುಡಿಯುವ ಹಕ್ಕನ್ನೆ ಕಸಿದುಕೊಳ್ಳುವುದರ ಮೂಲಕ ಪ್ರಜೆಗಳ ಮೂಲಭೂತ ಬದುಕುವ ಹಕ್ಕಿಗೆ ಧಕ್ಕೆ ಉಂಟಾಗಿದೆ. ಒಂದು ವೇಳೆ ಈ ಬಹು ಸಂಖ್ಯಾತ ದುಡಿಯುವ ವರ್ಗ,’ ತಮ್ಮ ಘನತೆಯ ಬದುಕಿಗೆ ಪೂರಕವಾದ ದುಡಿಯುವ ಅವಕಾಶ ಮತ್ತು ವಾತಾವರಣವನ್ನು ಸೃಷ್ಟಿಸದ ಸರ್ಕಾರಗಳು ನಮಗೇಕೆ ಬೇಕು’ ಎನ್ನುವ ತಾತ್ವಿಕ ಪ್ರಶ್ನೆಯನ್ನು ಕೇಳಿಕೊಂಡರೆ ಎಂತಹ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಬಲ್ಲದು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ.


ಮೇಲಿನ ಎಲ್ಲಾ ವಿಚಾರಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಕರ್ನಾಟಕದ ಗ್ಯಾರಂಟಿ ಯೋಜನೆಗಳ ವಿಚಾರಕ್ಕೆ ಬರುವುದಾದರೆ, ಕಳೆದ ಸಾಲಿನ ಕರ್ನಾಟಕ ಸರ್ಕಾರದ ಬಜೆಟ್ ಗಾತ್ರ ರೂ 3.71 ಲಕ್ಷ ಕೋಟಿ .ಇದರಲ್ಲಿ ರೂ1. 20 ಲಕ್ಷ ಕೋಟಿಯನ್ನು ಕಲ್ಯಾಣ ಯೋಜನೆಗಳಿಗೆ ಕಾಯ್ದಿರಿಸಲಾಗಿದೆ. ಗ್ಯಾರೆಂಟಿ ಯೋಜನೆಗಳಿಗೆ ಒದಗಿಸಿದ ರೂ 52 ಸಾವಿರ ಕೋಟಿ ಮೇಲೆ ಹೇಳಿದ ರೂ1.20 ಲಕ್ಷ ಕೋಟಿಯ ಒಳಗೆ ಸೇರಿದೆ. ಇದರ ಅರ್ಥ ಬಜೆಟ್ ನ ಶೇಕಡಾ 32.4ರಷ್ಟು ಹಣವನ್ನು ರಾಜ್ಯ ಸರ್ಕಾರ ಕಲ್ಯಾಣ ಯೋಜನೆಗಳಿಗಾಗಿ ವಿನಿಯೋಗ ಮಾಡುತ್ತಿದೆ .ಇದರಿಂದಾಗಿ ರಾಜ್ಯದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ರೂ 50,000 ದಿಂದ ರೂ 55 ಸಾವಿರದವರೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ದೊರಕುತ್ತಿದೆ. ಅಂದರೆ, ತಿಂಗಳಿಗೆ ಅಂದಾಜು ರೂ 4,000 ದಿಂದ ರೂ.4,500 ದೊರಕುತ್ತಿದೆ.ಶೇ. 90ರಷ್ಟಿರುವ ದುಡಿಯುವ ವರ್ಗದ ಅಭಿವೃದ್ಧಿಗೆ ಗ್ಯಾರಂಟಿ ಯೋಜನೆಗಳನ್ನು ಒಳಗೊಂಡಂತೆ ವಿನಿಯೋಗ ಮಾಡುತ್ತಿರುವುದು ಬಜೆಟ್ ನ ಶೇಕಡ 10 ರಿಂದ ಶೇಕಡ 30ರಷ್ಟು ಮಾತ್ರ. ಮಾನವ ಸಂಪನ್ಮೂಲ ಅಭಿವೃದ್ಧಿ ಕೂಡ ಅಭಿವೃದ್ಧಿಯೇ ಆಗಿರುವುದರಿಂದ ದೇಶದ ಬಹು ಸಂಖ್ಯೆಯ ದುಡಿಯುವ ವರ್ಗ ಅಭಿವೃದ್ಧಿ ಹೊಂದಿದರೆ ಇದೇ ವರ್ಗ ಭವಿಷ್ಯದಲ್ಲಿ ನೂರಾರು ಲಕ್ಷ ಕೋಟಿ ರೂಪಾಯಿಗಳ ಭೌತಿಕ ಅಭಿವೃದ್ಧಿಯನ್ನು ಸೃಷ್ಟಿ ಮಾಡಬಲ್ಲದು.


ಎಲ್ಲಿಯವರೆಗೆ ಬದುಕುವ ಮೂಲಭೂತ ಹಕ್ಕು ಸರ್ವರಿಗೂ ದೊರಕುವುದಿಲ್ಲವೋ ಅಲ್ಲಿಯವರೆಗೆ ತಾತ್ಕಾಲಿಕವಾಗಿಯಾದರೂ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿ ಇರಲೇಬೇಕಾಗುತ್ತದೆ. ಇನ್ನೊಂದೆಡೆ ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಆರ್ಥಿಕವಾಗಿ ಹೊರೆ ಎನಿಸಬಹುದು. ಆದರೆ ಅಭಿವೃದ್ಧಿಯೆಂದರೆ ಜನರ ಘನತೆಯ ಬದುಕಿನ ಅಭಿವೃದ್ಧಿಯೂ ಹೌದು ಎನ್ನುವುದನ್ನು ನಾವು ಅರಿತುಕೊಂಡಾಗ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ‘ಪರಾವಲಂಬಿಗಳಲ್ಲ’; ಬದಲಾಗಿ ಅವರೆಲ್ಲರೂ ತಮ್ಮ ಸಾಂವಿಧಾನಿಕ ‘ಬದುಕುವ ಹಕ್ಕನ್ನು’ ಪಡೆಯುತ್ತಿದ್ದಾರೆ ಎನ್ನುವುದು ಮನದಟ್ಟಾಗುತ್ತದೆ.

Leave a Comment