2ನೇ ಸ್ತರದ ನಗರಗಳಿಗೆ ಹೂಡಿಕೆ ವಿಸ್ತರಣೆ

2ನೇ ಸ್ತರದ ನಗರಗಳಿಗೆ ಹೂಡಿಕೆ ವಿಸ್ತರಣೆ

ಬೆಂಗಳೂರು ಮಾಹಿತಿ ತಂತ್ರಜ್ಞಾನ, ಐಟಿ ಆಧಾರಿತ ಸೇವಾ ವಲಯ ಜತೆಗೆ ಬಾಹ್ಯಾಕಾಶ, ರಕ್ಷಣೆ. ಬಯೋಟೆಕ್ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದೆ. ಆಯಾ ಪ್ರದೇಶಗಳ ಸಂಪನ್ಮೂಲ ಸಾಮರ್ಥ್ಯಕ್ಕೆ ಅನುಗುಣವಾಗಿ ಎರಡನೇ ಸ್ತರದ ನಗರಗಳಲ್ಲೂ ಹೂಡಿಕೆ ಉತ್ತೇಜಿಸಿದರೆ ಪ್ರಗತಿ ಸಾಧ್ಯವಾಗಲಿದೆ ಎಂದು ಟರ್ಬೊಸ್ಟಾರ್ಟ್ ಗ್ಲೋಬಲ್ ಸಿಇಒ ವೆಂಕಟ್ ರಾಜು ಅಭಿಪ್ರಾಯಪಟ್ಟರು.

‘ಬೆಳವಣಿಗೆಗೆ ಹೂಡಿಕೆಯ ಮರುಕಲ್ಪನೆ: ಕರ್ನಾಟಕದ ಕನಸು -2030 ಸಾಧಿಸಲು ಪೂರಕ 5 ವಲಯಗಳು’ ಗೋಷ್ಠಿಯಲ್ಲಿ ಮಾತನಾಡಿದ ಅವರು, ”ಪಾರದರ್ಶಕತೆ, ಸ್ಥಿರತೆ ಹಾಗೂ ಮುಂದುವರಿಕೆಯಂಥ ವಾತಾವರಣ ನಿರ್ಮಾಣವಾದಲ್ಲಿ ಉದ್ಯಮಿಗಳು ಹೂಡಿಕೆಗೆ ಮುಂದೆ ಬರುವುದು ನಿಶ್ಚಿತ, ಗ್ಲೋಬಲ್ ಕೆಪಬಲಿಟಿ ಸೆಂಟರ್‌ಗಳ (ಜಿಸಿಸಿ) ಸ್ಥಾಪನೆಗೆ ಒತ್ತು ಕೊಡುವ ಮೂಲಕ ರಾಜ್ಯ ಸರಕಾರ ಉತ್ತಮ ಕೆಲಸ ಮಾಡಿದೆ. ಉತ್ಪಾದನಾ ವಲಯ ಮತ್ತು ಪೂರೈಕೆ ಸರಳಪಳಿ ನಡುವೆ ಸಮತೋಲನ ಸಾಧಿ ಸಬೇಕಿದೆ. ಜಾಗತಿಕವಾಗಿ ಸವಾಲು ಹಾಗೂ ಅವಕಾಶಗಳು ಇದ್ದೇ ಇರುತ್ತವೆ,” ಎಂದರು.

”ದೇಶದ ಪ್ರಗತಿಗೆ ಹಾಗೂ ಬೆಂಗಳೂರಿಗೆ ವಿಶ್ವಮಟ್ಟದಲ್ಲಿ ಹೆಸರು ತಂದುಕೊಡುವಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪಾತ್ರ ದೊಡ್ಡದಿದೆ. ನಮ್ಮಲ್ಲಿ ಈಗ 1700 ಜಿಸಿಸಿ (ಗ್ಲೋಬಲ್ ಕೆಪಬಲಿಟಿ ಸೆಂಟರ್) ಕೇಂದ್ರಗಳಿವೆ. ಭಾರತವು ದೊಡ್ಡ ಮಾರುಕಟ್ಟೆಯಾಗಿರುವುದರಿಂದ ಇದು ಸಾಧ್ಯವಾಗಿದೆ.” ಎಂದು ಕೆಪಿಐಟಿ ಟೆಕ್ನಾಲಜೀಸ್ ಕಂಪನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ ಮೊಹಿತ್ ಕೊಚಾರ್ ಹೇಳಿದರು.

“ಹಸಿರು ಇಂಧನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿ ಹೂಡಿಕೆಗೆ ಹೆಚ್ಚು ಅವಕಾಶಗಳಿವೆ. ಸ್ಪಿಡ್ಡರ್‌ಲೆಂಡ್ ಕಂಪನಿಗಳು ಆಸಕ್ತಿ ತೋರಿವೆ,” ಎಂದು ಉಡುಪಿ ಮೂಲದ ಸ್ವಿಡ್ಕರ್ ಲೆಂಡ್ ಸಂಸದ ಹಾಗೂ ಸ್ವಿಜ್ ಇಂಡಿಯಾ ಪಾರ್ಲಿಮೆಂಟರಿ ಗ್ರೂಪ್ ಅಧ್ಯಕ್ಷ ಎಚ್.ಸಿ.ನಿಕ್ ಗುಗ್ಗರ್ ತಿಳಿಸಿದರು.

“ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆ ವಿಶ್ವಾದ್ಯಂತ ಮುಂಚೂಣಿಯಲ್ಲಿದೆ. ಕರ್ನಾಟಕವು ಹಸಿರು ಇಂಧನ ವಲಯದಲ್ಲಿ ಹೂಡಿಕೆಗೆ ಒತ್ತು ಕೊಟ್ಟಿದೆ. ಈಗಾಗಲೇ ಉದ್ಯಮಿಗಳಾದ ಆನಂದ್ ಮಹೀಂದ್ರಾ, ಸಜ್ಜನ್ ಜಿಂದಾಲ್ ಸೌರಶಕ್ತಿ, ಪವನ ಶಕ್ತಿ ವಲಯದಲ್ಲಿ ಸಾವಿರಾರು ಕೋಟಿ ರೂ. ಹೂಡಿಕೆಯನ್ನು ಘೋಷಿಸಿದ್ದು ಒಳ್ಳೆಯ ಬೆಳವಣಿಗೆಯಾಗಿದೆ.'” ಎಂದು ಐಬಿಸಿ ಸಿಇಒ ಪ್ರಿಯದರ್ಶಿ ಪಾಂಡ ಹೇಳಿದರು.

“ನವೀಕರಿಸಬಹುದಾದ ಇಂಧನದಿಂದ ಉತ್ಪಾದಿಸಿದ ವಿದ್ಯುತ್ ಶಕ್ತಿಯನ್ನು ಸಂಗ್ರಹಿಸುವ ಬ್ಯಾಟರಿ ಮೂಲಸೌಕರ್ಯ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕಿದೆ. ಆಗ ಮಾತ್ರ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಸಮತೋಲನ ಸಾಧಿಸಲು ಸಾಧ್ಯವಾಗಲಿದೆ. ಇದಕ್ಕಾಗಿ ಖಾಸಗಿ ಹೂಡಿಕೆದಾರರನ್ನೂ ಉತ್ತೇಜಿಸಬೇಕಿದೆ.” ಎಂದು ಪಾಂಡ ಅಭಿಪ್ರಾಯ ಪಟ್ಟರು

ಇದನ್ನೂ ಓದಿ:ಜಿಮ್‌ನಿಂದ ಹೊಮ್ಮಿದ ಭರವಸೆ ಬೆಳಕು

3 ವರ್ಷದಲ್ಲಿ ಮಾಧ್ಯಮದಲ್ಲಿ ಬದಲಾವಣೆ

ತಂತ್ರಜ್ಞಾನ ಬಳಕೆಯಿಂದ ಉದ್ಯೋಗ ಕಡಿತವಾಗುತ್ತದೆ ಎಂಬ ವಾದದಲ್ಲಿ ಹುರುಳಿಲ್ಲ, ಬದಲಿಗೆ ತಂತ್ರಜ್ಞಾನದಿಂದ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗ ಲಿದೆ ಎಂದು ಪತ್ರಕರ್ತ ಶೇಖರ್ ಗುಪ್ತಾ ಬುಧವಾರ ಅಭಿಪ್ರಾಯ ಪಟ್ಟರು. ‘ಉದ್ಯಮಶೀಲತೆ ಮತ್ತು ಡಿಜಿಟಲ್ ಆರ್ಥಿಕತೆ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಂತ್ರಜ್ಞಾನದಿಂದ ಒಂದು ಉದ್ಯೋಗ ಕಡಿತವಾದರೆ ಹೊಸ ವಲಯದಲ್ಲಿ ಹಲವು ಉದ್ಯೋಗಗಳು ಸೃಷ್ಟಿಯಾಗಲಿವೆ. ಹಿಂದೆ ಕಂಪ್ಯೂಟರ್‌ಗಳು ಹಾಗೂ ಗೂಗಲ್ ಸರ್ಚ್ ಎಂಜಿನ್ ಬಳಕೆ ಆರಂಭವಾದಾಗ ಮಾಧ್ಯಮ ಸಂಸ್ಥೆಗಳಲ್ಲಿ ಪೂಫ್ ರೀಡರ್‌ಗಳು ಕೆಲಸ ಕಳೆದು ಕೊಂಡರು. ಆದರೆ, ಕಂಪ್ಯೂಟರ್ ಆಧಾರಿತ ಹಲವು ಉದ್ಯೋಗಗಳು ಸೃಷ್ಟಿಯಾದವು. ಹಾಗೆಯೇ ಈಗ ಎಐ, ಗೂಗಲ್ ಟ್ರಾನ್ಸ್‌ಲೇಟ್ ತಂತ್ರಜ್ಞಾನದಿಂದ ಅನುವಾದಕರ ಉದ್ಯೋಗ ಕಡಿತವಾಗಬಹುದೆಂಬ ಆತಂಕ ತಲೆದೋರಿದ್ದರೂ

ಬೇರೆ ಬಗೆಯ ಉದ್ಯೋಗಗಳು ಸೃಷ್ಟಿಯಾಗಲಿವೆ, ” ಎಂದು ತಿಳಿಸಿದರು.”ಮುಂದಿನ 3 ವರ್ಷಗಳಲ್ಲಿ ಮಾಧ್ಯಮ ವಲಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಪ್ರಸ್ತುತ ಯಾವುದೇ ಸುದ್ದಿ ಬಹುಬೇಗನೆ ಎಲ್ಲಡೆ ತಲುಪುವ ವ್ಯವಸ್ಥೆ ಇದೆ. ಮಾಧ್ಯಮಗಳ ಬಗ್ಗೆ ಜನರೂ ಹೆಚ್ಚು ಜಾಗೃತರಾಗಿದ್ದಾರೆ. ಮುಂದಿನ ಕೆಲವು ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮ ಆಧಾರಿತ ಸುದ್ದಿ ಜಾಲಗಳಲ್ಲಿ ವ್ಯಾಪಕ ಬದಲಾವಣೆಯಾಗುವ ಸಾಧ್ಯತೆಯಿದೆ. ಈಗ ಗಂಭೀರ ಹಾಗೂ ಸುದೀರ್ಘ ಲೇಖನಗಳನ್ನು ಓದುವವರ ಸಂಖ್ಯೆ ತುಂಬಾ ಕಡಿಮೆ. ಹಾಗೆ ನೋಡಿದರೆ ಪತ್ರಿಕೆಗಳ ಸಂಪಾದಕೀಯವನ್ನು ಓದುವವರ ಸಂಖ್ಯೆ ಶೇ.1ಕ್ಕಿಂತ ಕಡಿಮೆಯಿದೆ. 50ರಿಂದ 100 ಪದಗಳಿರುವ ಚಿಕ್ಕ ಬರಹಗಳು ಜನರನ್ನು ಹೆಚ್ಚು ತಲುಪುತ್ತವೆ,” ಎಂದು ಹೇಳಿದರು. ಉದ್ಯಮಿ ಪ್ರಶಾಂತ್ ಪ್ರಕಾಶ್ ಗೋಷ್ಠಿ ನಿರ್ವಹಿಸಿದರು.
ವಿಪ್ರೋದಿಂದ ₹ 8,೦೦೦ಕೋಟಿಹೂಡಿಕೆ

ವಿಪ್ರೋ-ಜಿಇ ಹೆಲ್ತ್ ಕೇರ್ ಸಂಸ್ಥೆ ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಮುಂದಿನ 5 ವರ್ಷಗಳಲ್ಲಿ ಇನ್ನೂ 8,000 ಕೋಟಿ ರೂ. ಹೂಡಿಕೆ ಮಾಡಲಿದೆ. ಇದು ಕಳೆದ ಎರಡು ದಶಕಗಳಲ್ಲಿ ವಿನಿಯೋಗಿಸಿರುವ 32 ಸಾವಿರ ಕೋಟಿ ರೂ. ಬಂಡವಾಳದ ಮುಂದುವರಿದ ಭಾಗವಾಗಿದೆ ಎಂದು ಕಂಪನಿಯ ದಕ್ಷಿಣ ಏಷ್ಯಾ ವಿಭಾಗದ ಮುಖ್ಯಸ್ಥ ಚೈತನ್ಯ ಸರವಟೆ ಹೇಳಿದ್ದಾರೆ.

‘ಜಗತ್ತಿನ ಅಗತ್ಯಗಳಿಗೆ ಮೇಕ್ ಇನ್ ಇಂಡಿಯಾ ಉಪಕ್ರಮ’ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಬೆಂಗಳೂರಿನ ವೈಟ್ ಫೀಲ್ಡ್‌ ನಲ್ಲಿ ವಿಪ್ರೋ-ಜಿಇ ಕೇವಲ ಕಿಲೋಮೀಟರ್ ಅಂತರದಲ್ಲಿ 4 ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಇಲ್ಲಿ 30ಕ್ಕೂ ಹೆಚ್ಚು ಔಷಧೋತ್ಪನ್ನಗಳನ್ನು ಸಿದ್ಧಪಡಿಸ ಲಾಗುತ್ತಿದೆ. ಜತೆಗೆ 5 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯಿರುವ ಆರ್ ಆ್ಯಂಡ್ ಡಿ ಕೇಂದ್ರವನ್ನೂ ವಿಪ್ರೋ ಹೊಂದಿದೆ. ಸಮಾಜದ ಋಣವನ್ನು ತೀರಿಸುವ ನೈತಿಕ ಹೊಣೆಗಾರಿಕೆ ಅರಿತು ಸರಕಾರದ ಹಲವು ಯೋಜನೆಗಳಲ್ಲೂ ಕಂಪನಿ ಕೈಜೋಡಿಸಿದೆ,” ಎಂದು ಮಾಹಿತಿ ನೀಡಿದರು.
ಬೆಳಗಾವಿ ಜಿಲ್ಲೆಯಲ್ಲಿ ಏರೋ ಸ್ಪೇಸ್ ಕೇಂದ್ರ

ಇದೇ ಗೋಷ್ಠಿಯಲ್ಲಿ ಮಾತನಾಡಿದ ಏಕಸ್ ಕಂಪನಿ ಸಿಇಒ ಅರವಿಂದ್ ಮೆಳ್ಳಿಗೇರಿ, ”ಬೆಳಗಾವಿಯು ದೇಶದ ವೈಮಾಂತರಿಕ್ಷ ವಲಯದ ಕೇಂದ್ರವಾಗಿ ಹೊರಹೊಮ್ಮಿದ್ದು, ಈ ವಲಯದ ಶೇ. 70ರಷ್ಟು ಬಿಡಿಭಾಗಗಳನ್ನು ಪೂರೈಸುತ್ತಿದೆ. ಇವುಗಳ ಗುಣಮಟ್ಟವು ಯಾವುದೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ತಯಾರಾಗುವ ಸಾಧನಗಳಿಗಿಂತ ಕಿಂಚಿತ್ತೂ ಕಡಿಮೆ ಇಲ್ಲ, ಸರಕಾರವು ಮೂಲಸೌಕರ್ಯ ಅಭಿವೃದ್ಧಿಗೆ ಇನ್ನಷ್ಟು ಗಮನ ಹರಿಸಿದರೆ ಇಡೀ ಜಗತ್ತು ಬೆಳಗಾವಿಯತ್ತ ನೋಡುವ ದಿನ ದೂರವಿಲ್ಲ. ದೇಶದಲ್ಲಿ 15 ವರ್ಷಗಳಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ದ್ವಿತೀಯ ಸ್ತರದ ನಗರಗಳಿಗೂ ವಿಮಾನ ಸಂಪರ್ಕ ಸಾಧ್ಯವಾಗಿದೆ. ಏಕಸ್ ಮೂರು ಜಂಟಿ ಸಹಭಾಗಿತ್ವ ಹೊಂದಿದ್ದು, 2 ಮಿಲಿಯನ್ ಗಂಟೆಗಳಷ್ಟು ಅಗಾಧ ಉತ್ಪಾದನಾ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ಚೀನಾಕ್ಕೆ ಹೋಲಿಸಿದರೆ ನಮ್ಮಲ್ಲಿ ವೆಚ್ಚವು ಮೂರನೇ ಒಂದು ಭಾಗದಷ್ಟು ಕಡಿಮೆ ಇದೆ. ಈ ನಿಟ್ಟಿನಲ್ಲಿ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ 5,000 ವೃತ್ತಿಪರರು ಹಗಲಿರುಳೂ ದುಡಿಯುತ್ತಿದ್ದಾರೆ,” ಎಂದು ತಿಳಿಸಿದರು.

Leave a Comment