ಮಸಣ ಕಾರ್ಮಿಕರ ಬೇಡಿಕೆ ಈಡೇರಿಸಲು ಮನವಿ

ಮಸಣ ಕಾರ್ಮಿಕರ ಬೇಡಿಕೆ ಈಡೇರಿಸಲು ಮನವಿ

ಚಿಂತಾಮಣಿ:ಮಸಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಮಸಣ ಕಾರ್ಮಿಕರ ಸಂಘ ಹಾಗೂ ತಮಟೆ ಕಲಾವಿದರ ಸಂಘದ ಪದಾಧಿಕಾರಿಗಳ ನಿಯೋಗವು ಬುಧವಾರ ಪೌರಾಯುಕ್ತ ಜಿ.ಎನ್. ಚಲಪತಿಗೆ ಮನವಿ ಸಲ್ಲಿಸಿತು.
ರಾಜ್ಯದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಮಸಣಗಳಲ್ಲಿ 2.5 ಲಕ್ಷ ದಲಿತ ಕುಟುಂಬಗಳ ಸದಸ್ಯರು ಶವ ಸಂಸ್ಕಾರದ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲ ಸಮುದಾಯಗಳ ಮಸಣಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಶತಮಾನಗಳಿಂದ ಜಾತಿ ತಾರತಮ್ಯ ದೌರ್ಜನ್ಯದ ಭಾಗವಾಗಿ ಸಾರ್ವಜನಿಕ ಸೇವೆಯನ್ನು ಬಿಟ್ಟಿಯಾಗಿ ಮಾಡುವಂತಹ ಬಲವಂತಕ್ಕೆ ಒಳಗಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ ಶಿವನ ಸೇವೆ ಎಂದು ನಂಬಿಸಿ ಬಿಟ್ಟಿಯಾಗಿ ದುಡಿಸಿಕೊಳ್ಳುತ್ತಾ ಬರಲಾಗಿದೆ. ಅಲ್ಲಿ ದೊರೆಯುವ ಸಣ್ಣ ಮೊತ್ತವನ್ನು ಕುಟುಂಬಕ್ಕೆ ಉಪಯೋಗಿಸುವುದು ಪಾಪ ಕೃತ್ಯ ಎಂದು ನಂಬಿಸಿ ಕುಟುಂಬಕ್ಕೆ ಆದಾಯ ಸಿಗದಂತೆ ವಂಚಿಸಲಾಗುತ್ತಿದೆ. ಎಲ್ಲ ಮಸಣ ಕಾರ್ಮಿಕರನ್ನು ನಗರ ಸಭೆಯ ನೌಕರರೆಂದು ಪರಿಗಣಿಸಿ ದೃಢೀಕರಣ ಪತ್ರ ನೀಡಬೇಕು. ಮಸಣ ಕಾರ್ಮಿಕರಿಗೆ ರೋಗ ಹರಡದಂತೆ ಭದ್ರತೆ ವಸ್ತುಗಳಾದ ಸಾಬೂನು, ಮಾಸ್ಕ್, ಸೋಪ್, ಕೈಗೆ ಮತ್ತು ಕಾಲಿಗೆ ಧರಿಸುವ ಗ್ಲೌಸ್ ಹಾಗೂ ಇತರೆ ಸಾಮಗ್ರಿಗಳನ್ನು ನೀಡಬೇಕು ಎಂದು ಒತ್ತಾಯಿಸಲಾಯಿತು.

ಇದನ್ನೂ ಓದಿ: ನರೇಗಾ ಅನುಷ್ಠಾನ: ಶಾಸಕ ಅತೃಪ್ತಿ

ಎಲ್ಲಾ ಮಸಣ ಕಾರ್ಮಿಕರಿಗೆ ಗುಣಿ ತೆಗೆಯಲು ಮತ್ತು ಮುಚ್ಚಲು ಬೇಕಾದ ಸೂಕ್ತ ಸಲಕರಣೆಗಳನ್ನು ಆಯ ನಗರಸಭೆ ಮತ್ತು ಗ್ರಾಮ ಪಂಚಾಯಿತಿ ನೀಡಬೇಕು. ಮಸಣ ಕಾರ್ಮಿಕರಿಗೆ ವಾಸ ಮಾಡಲು ನಿವೇಶನ ಮತ್ತು ಪಕ್ಕಾ ಮನೆಯನ್ನು ನಿರ್ಮಾಣಕ್ಕೆ ರೂ.10 ಲಕ್ಷ ಅನುದಾನ ನೀಡಬೇಕು ಎಂಬ ಬೇಡಿಕೆಗಳುಳ್ಳ ಮನವಿಯನ್ನು ಪೌರಾಯುಕ್ತರಿಗೆ ಸಲ್ಲಿಸಲಾಯಿತು.
ಪೌರಾಯುಕ್ತ ಜಿ.ಎನ್. ಚಲಪತಿ ಮನವಿ ಸ್ವೀಕರಿಸಿ ಕಾನೂನಿನಂತೆ ದೊರೆಯುವ ಸೌಲಭ್ಯಗಳನ್ನು ಒದಗಿಸಿ ಕೊಡುವುದಾಗಿ ಭರವಸೆ ನೀಡಿದರು .

Leave a Comment