ಮಧ್ಯಮ ವರ್ಗದ ಕೈಗೆ ದುಡ್ಡು ಕೊಟ್ಟ ಬಜೆಟ್

ಮಧ್ಯಮ ವರ್ಗದ ಕೈಗೆ ದುಡ್ಡು ಕೊಟ್ಟ ಬಜೆಟ್

ವೈಯಕ್ತಿಕ ಆದಾಯ ತೆರಿಗೆ ಪಾವತಿಸುವ ಜೊತೆಗೆ ಬೆಲೆ ಏರಿಕೆಯ ಬಿಸಿಯನ್ನು ಸಹಿಸಿಕೊಂಡು ಬದುಕಿನ ಬಂಡಿ ಎಳೆಯುತ್ತಿದ್ದ ದೇಶದ ಮಧ್ಯಮ ವರ್ಗದ ಜನರಿಗೆ ಬಜೆಟ್ ನಲ್ಲಿ ದೊಡ್ಡ ಪರಿಹಾರ ಸಿಕ್ಕಿದೆ. ಜನಸಾಮಾನ್ಯರ ಬಹುದಿನಗಳ ಬೇಡಿಕೆಯಾಗಿದ್ದ ಆದಾಯ ತೆರಿಗೆ ಮಿತಿ ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಸಚಿವೆ ನಿರ್ಮಲಾ ಸೀತಾರಾಮ ಪುರಸ್ಕರಿಸಿದ್ದಾರೆ.
ನಾನು ಮಿಡಲ್ ಕ್ಲಾಸ್ಗೆ ಸೇರಿದ್ದೇನೆ. ಅವರ ಕಷ್ಟ ನನಗೆ ಅರ್ಥವಾಗುತ್ತದೆ ಎಂದು ಹಲವು ಪತ್ರಿಕಾಗೋಷ್ಠಿಗಳಲ್ಲಿ ಹೇಳುತ್ತಿದ್ದ ಅವರು, ನಿಜ ಅರ್ಥದಲ್ಲಿ ಈ ಬಾರಿ ಮಧ್ಯಮ ವರ್ಗದವರ ಜೇಬಿಗೆ ಒಂದಷ್ಟು ದುಡ್ಡು ತುಂಬಿಸುವ ಕೆಲಸ ಮಾಡಿದ್ದಾರೆ. ಹೊಸ ತೆರಿಗೆ ಪದ್ಧತಿ ಆಯ್ದುಕೊಳ್ಳುವವರಿಗೆ ವಾರ್ಷಿಕ ರೂ12 ಲಕ್ಷದ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ ಎಂದು ಪ್ರಕಟಿಸಿದ್ದಾರೆ .ಸಂಬಳ ಪಡೆಯುವವರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ರೂ 75,000 ಒಳಗೊಂಡು ತೆರಿಗೆಗೆ ಒಳಪಡದ ಮಿತಿಯನ್ನು ರೂ12.75 ಲಕ್ಷಕ್ಕೆ ಹೆಚ್ಚಿಸಲಾಗಿದೆ .


ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನಸಾಮಾನ್ಯರ ತೆರಿಗೆ ಹೊರೆಯನ್ನು ಕಾಲಕಾಲಕ್ಕೆ ಒಂದಿಷ್ಟು ತಗ್ಗಿಸುತ್ತ ಬಂದಿದೆ ಎನ್ನುವುದನ್ನು ಅಂಕಿ ಅಂಶ ಹೇಳುತ್ತವೆ.2014ರಲ್ಲಿ ಮೊದಲ ಬಾರಿಗೆ ಅಂದಿನ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ತೆರಿಗೆ ರಹಿತ ಸ್ಲಾಬ್ ಮಿತಿಯನ್ನು ರೂ 2 ಲಕ್ಷದಿಂದ ರೂ 2.5 ಲಕ್ಷಕ್ಕೆ ಏರಿಕೆ ಮಾಡಿದ್ದರು. ನಂತರ 2019ರಲ್ಲಿ ತೆರಿಗೆ ರಹಿತ ಆದಾಯದ ಮಿತಿಯನ್ನು Sada 5 ಲಕ್ಷಕ್ಕೆ ಹೆಚ್ಚಿಸಲಾಯಿತು. 2023ರಲ್ಲಿ ಈ ಮಿತಿಯು ರೂ 7 ಲಕ್ಷಕ್ಕೆ ಜಿಗಿಯಿತು.


2024ರಲ್ಲಿ ಕೇಂದ್ರ ಸರ್ಕಾರ ಆದಾಯ ತೆರಿಗೆಯ ಹೊರೆ ಇಳಿಸುವ ಮನಸ್ಸು ಮಾಡಿರಲಿಲ್ಲ. ಬೆಲೆ ಏರಿಕೆಯ ಕಾಲದಲ್ಲಿ ಆದಾಯ ತೆರಿಗೆ ಭಾರ ತಗ್ಗಿಸದ ಸರ್ಕಾರದ ನೀತಿಯು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಸರ್ಕಾರದ ದುಬಾರಿ ತೆರಿಗೆ ನೀತಿಗೆ ಟೀಕೆ ವ್ಯಕ್ತವಾಗಿತ್ತು. ಇದೆಲ್ಲವನ್ನು ಅರಿತಿರುವ ಸರ್ಕಾರ ಕೊನೆಗೂ ಈ ಬಾರಿಯ ಬಜೆಟ್ ನಲ್ಲಿ ಮಾಧ್ಯಮ ವರ್ಗದ ಜನರ ತೆರಿಗೆ ಭಾರ ಕಡಿಮೆ ಮಾಡಿದ್ದಾರೆ.

ಇದನ್ನೂ ಓದಿ:ಪರೀಕ್ಷೆ ಸಮರ ಭೂಮಿಯಿಂದಾಚೆಗೆ…

ಎಷ್ಟು ಇಳಿಯಲಿದೆ ತೆರಿಗೆ ಭಾರ?: ರೂ 12 ಲಕ್ಷಕ್ಕಿಂತ ಹೆಚ್ಚಿನ ಆದಾಯ ಗಳಿಸುವವರಿಗೂ ತೆರಿಗೆ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಆದಾಯ ತೆರಿಗೆ ಸ್ಲ್ಯಾಬ್ ಮಿತಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಹೊಸ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆದಾರ ಎಷ್ಟೇ ಆದಾಯ ಪಡೆದರು ಮೊದಲ ರೂ. ನಾಲ್ಕು ಲಕ್ಷದವರೆಗಿನ ಗಳಿಕೆಗೆ ಯಾವುದೇ ತೆರಿಗೆ ಇರುವುದಿಲ್ಲ .
ಹೊಸ ತೆರಿಗೆ ಸ್ಲ್ಯಾಬ್ ಮಿತಿಗಳ ಘೋಷಣೆಯಿಂದ ರೂ 12 ಲಕ್ಷ ಆದಾಯ ಪಡೆಯುವ ವ್ಯಕ್ತಿಗೆ ರೂ 80000 ,ರೂ 18 ಲಕ್ಷ ಆದಾಯ ವಿರುವ ವ್ಯಕ್ತಿಗೆ ರೂ 70,000 ಮತ್ತು ರೂ 25 ಲಕ್ಷ ಆದಾಯ ಇರುವವರಿಗೆ ರೂ 1.10 ಲಕ್ಷ ತೆರಿಗೆ ಉಳಿತಾಯವಾಗಲಿದೆ .


ಮಧ್ಯಮ ವರ್ಗ ಸ್ನೇಹಿ ತೆರಿಗೆ ನೀತಿಗೆ ಮುನ್ನುಡಿ: ಬಜೆಟ್ ಘೋಷಣೆಗಳಲ್ಲಿ ಸದಾ ನಿರ್ಲಕ್ಷಕ್ಕೆ ಒಳಗಾಗುತ್ತಿದ್ದ ಮಧ್ಯಮ ವರ್ಗದ ಬಗ್ಗೆ ಈ ಬಾರಿಯ ಬಜೆಟ್ ನಲ್ಲಿ ಸಾಕಷ್ಟು ಉಲ್ಲೇಖವಿದೆ. ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಭಾಷಣದ ಐದನೇ ಸಾಲಿನಲ್ಲಿ ಮಧ್ಯಮವರ್ಗದ ಖರೀದಿ ಸಾಮರ್ಥ್ಯ ಹೆಚ್ಚಿಸುವುದು ಬಜೆಟ್ ನ ಮೂಲ ಮಂತ್ರಗಳಲ್ಲಿ ಒಂದಾಗಿದೆ ಎಂದು ಪ್ರಸ್ತಾಪಿಸಲಾಗಿದೆ .


ಆಯವ್ಯಯ ಪ್ರತಿಯಲ್ಲಿ ಒಟ್ಟು ಏಳು ಬಾರಿ ‘ಮಧ್ಯಮ ವರ್ಗ’ ಎನ್ನುವ ಪದ ಬಳಕೆಯಾಗಿದೆ. ಇದೆಲ್ಲದರ ಜೊತೆ ಮುಂದಿನ ವಾರವೇ ಹೊಸ ಆದಾಯ ತೆರಿಗೆ ಮಸೂದೆ ಮಂಡಿಸುವುದಾಗಿ ಹೇಳಿದ್ದಾರೆ. ಮಧ್ಯಮ ವರ್ಗ ಮತ್ತು ಜನಸ್ನೇಹಿ ಆದಾಯ ತೆರಿಗೆ ನೀತಿಗಳನ್ನು ತರುವುದೇ ಇದರ ಉದ್ದೇಶ ಎಂದು ಹೇಳಿದ್ದಾರೆ. ಈ ನಡುವೆ ಆದಾಯ ತೆರಿಗೆ ಭಾರ ಇಳಿಸುವ ಸರ್ಕಾರದ ನಿರ್ಧಾರದಿಂದ ಬೊಕ್ಕಸಕ್ಕೆ ಒಂದು ಲಕ್ಷ ಕೋಟಿ ಹೊರೆ ಬೀಳುತ್ತದೆ. ಅದನ್ನು ಸರ್ಕಾರ ಹೇಗೆ ಭರಿಸಿಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಸದ್ಯದ ಮಟ್ಟಿಗೆ ಮಧ್ಯಮ ವರ್ಗದ ಮಂದಿಗಂತೂ ಈ ಸಲದ ಬಜೆಟ್ ಬಂಪರ್ ಕೊಡುಗೆ ನೀಡಿದೆ.

Leave a Comment