ತಾನೇ ಸೃಷ್ಠಿಸಿಕೊಂಡ ತೊಡಕುಗಳು ಎಎಪಿ ಸೋಲಿಗೆ ಮುಖ್ಯ ಕಾರಣ
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಕಠಿಣ ಸವಾಲು ಎದುರಿಸುತ್ತಿದೆ ಅಥವ ಅದು ಗೆಲ್ಲುವ ಸಾಧ್ಯತೆಯೇ ಇಲ್ಲ ಎಂದು ಭಾವಿಸಿದ್ದವರು ಕೂಡ ಆ ಪಕ್ಷವು ಈ ರೀತಿಯಲ್ಲಿ ಕುಸಿದು ಹೋಗುತ್ತದೆ ಎಂದು ಅಂದಾಜು ಮಾಡಿರಲಿಕ್ಕಿಲ್ಲ. ಬಿಜೆಪಿಯ ದೊಡ್ಡ ಗೆಲುವು ಕೂಡ ಆಶ್ಚರ್ಯಕರವೇ ಆಗಿದೆ. ಎಎಪಿಯು ತನಗೆ ತಾನೇ ಹಲವು ತೊಡಕುಗಳನ್ನು ಸೃಷ್ಠಿಸಿಕೊಂಡಿತ್ತು. ಭ್ರಷ್ಟಾಚಾರ ವಿರೋಧಿ ನೀತಿಯನ್ನು ಮುಂಚೂಣಿಯಲ್ಲಿ ಇರಿಸಿಕೊಂಡು ಈ ಪಕ್ಷವು ದೆಹಲಿ ರಾಜಕಾರಣವನ್ನು ಪ್ರವೇಶಿಸಿತ್ತು. ರಾಜಕಾರಣಮತ್ತು ಆಡಳಿತವನ್ನು ಶುದ್ಧೀಕರಿಸುವದಾಗಿ ಭರವಸೆ ನೀಡಿತ್ತು . ಅಧಿಕಾರಕ್ಕೆ ಬಂದ ಮೇಲೆ ಜನಕಲ್ಯಾಣದ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿತ್ತು ಮತ್ತು ಅವು ಜನರಿಗೆ ಪ್ರಿಯವೂ ಆಗಿದ್ದವು. ಈ ಪಕ್ಷಕ್ಕೆ ವರ್ಚಸ್ವಿ ನಾಯಕತ್ವ ಇತ್ತು, ಭೂತಕಾಲದ ಹೊರೆಯೇನೂ ಇಲ್ಲದ ಮುಖಂಡರು ಇದ್ದರು.
ಆದರೆ, ಕ್ರಮೇಣ ನೀತಿಯು ಸೊರಗುತ್ತಾ ಹೋಯಿತು, ಆರೋಗ್ಯ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಮಾಡಿದ ಸುಧಾರಣೆಗಳು ಹೊಸ ಯೋಚನೆಗಳು ಇಲ್ಲದೆ ಜಡವಾಗುತ್ತಾ ಹೋದವು. ಕುಡಿಯುವ ನೀರು ಪೂರೈಕೆ, ತ್ಯಾಜ್ಯ ವಿಲೇವಾರಿ ಮತ್ತು ಯಮುನಾ ನದಿ ಸ್ವಚ್ಛಗೊಳಿಸುವಿಕೆಯಂತಹ ವಿಚಾರಗಳಲ್ಲಿ ಎಎಪಿ ನೇತೃತ್ವದ ಸರ್ಕಾರ ಯಶಸ್ಸು ಕಾಣಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಭ್ರಷ್ಟಾಚಾರದ ಆರೋಪಗಳು ಎಎಪಿ ನಾಯಕರ ಬಗ್ಗೆ ಇದ್ದ ವಿಶ್ವಾಸಾರ್ಹತೆಯು ಕುಸಿಯುವಂತೆ ಮಾಡಿದವು.ಕೇಳಿ ಬಂದ ಆರೋಪಗಳು ಸತ್ಯವೇ ಅಥವಾ ಸುಳ್ಳೇ ಎಂಬುದು ಬೇರೆ ವಿಷಯವಾದರೂ ಒಂದು ಜನ ವರ್ಗ ಪಕ್ಷದಿಂದ ದೂರ ಸರಿಯಲು ಅವು ಸಾಕಾದವು. ಅರವಿಂದ ಕೇಜ್ರಿವಾಲ್ ಸೇರಿ ಮುಂಚೂಣಿ ನಾಯಕರು ಜೈಲು ಸೇರಿದ್ದು ಪಕ್ಷದ ಕುಸಿತಕ್ಕೆ ವೇಗ ಕೊಟ್ಟಿತು. ಎ ಎಪಿಗೆ ಪ್ರಾದೇಶಿಕ ಪಕ್ಷ ಒಂದರ ಬೇರುಗಳಾಗಲಿ, ಗಟ್ಟಿಯಾದ ಸಿದ್ದಾಂತವಾಗಲಿ ಇರಲಿಲ್ಲ. ಪಕ್ಷವು ಕೆಲವು ನೀತಿಗಳನ್ನು ಮಾತ್ರ ನೆಚ್ಚಿಕೊಂಡಿತ್ತು ಮತ್ತು ಈ ಬಗ್ಗೆ ಜನರಲ್ಲಿ ಇದ್ಧ ಮನೋಭಾವ ಭಿನ್ನವಾಗಿತ್ತು.
ಈಗ, ಗೆದ್ದಿರುವ ಬಿಜೆಪಿ ಮತ್ತು ಸೋತಿರುವ ಎಎಪಿ ನೆಡುವಣ ಮತ ಪ್ರಮಾಣದ ವ್ಯತ್ಯಾಸ ಶೇಕಡ ಎರಡು ರಷ್ಟು ಮಾತ್ರ, ಆದರೆ ,ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಎಎಪಿ ಕಳೆದುಕೊಂಡಿರುವ ಮತ ಪ್ರಮಾಣ ಸುಮಾರು ಶೇಕಡ ಹತ್ತರಷ್ಟು, ಎರಡು ಪಕ್ಷಗಳ ನಡುವಣ ನೇರ ಹೋರಾಟವಾದ ಕಾರಣಕ್ಕೆ ಬಿಜೆಪಿಯ ಗೆಲುವು ಇನ್ನಷ್ಟು ದೊಡ್ಡದಾಗಿ ಕಾಣಿಸುತ್ತಿದೆ. ಅತ್ಯಂತ ವ್ಯವಸ್ಥಿತವಾದ ಚುನಾವಣಾ ಪ್ರಚಾರವು ಬಿಜೆಪಿಯ ಹೆಗ್ಗುರುತು. ಸಣ್ಣ ಸಣ್ಣ ವಿಚಾರಗಳಿಗೂ ಆ ಪಕ್ಷವು ಆದ್ಯತೆ ನೀಡುತ್ತದೆ. ಜನರನ್ನು ಮೋಡಿ ಮಾಡುವ ನರೇಂದ್ರ ಮೋದಿ ಅವರಂತಹ ವಾಕ್ಪಟುವಿನ ನೆರವು ಆ ಪಕ್ಷಕ್ಕೆ ಇದೆ. ಎಎಪಿ ನೇತೃತ್ವದ ಸರ್ಕಾರದ ಮೇಲೆ ನಿರಂತರವಾಗಿ ಆರೋಪಗಳನ್ನು ಮಾಡುತ್ತಾ ಹಲವು ತಿಂಗಳ ಮೊದಲೇ ಬಿಜೆಪಿ ಚುನಾವಣಾ ಪ್ರಚಾರವನ್ನು ಆರಂಭಿಸಿತ್ತು .
ಇದನ್ನೂ ಓದಿ:ವ್ಯಯಕ್ತಿಕ ದತ್ತಾಂಶ ದುರ್ಬಳಕೆಯು 2010ರಿಂದಲೂ ವ್ಯಾಪಕವಾಗಿ ಅರಿವಿಗೆ ಬಂದಿದೆ
ಜನರ ಮನಮುಟ್ಟುವಂತಹ ವಿಚಾರಗಳನ್ನು ಆ ಪಕ್ಷವೇ ಪ್ರಚಾರಕ್ಕೆ ಬಳಸಿಕೊಂಡಿತ್ತು. ಎಎಪಿ ನೀಡಿದ್ದ ಕೊಡುಗೆಗಳನ್ನು ಇನ್ನಷ್ಟು ಉತ್ತಮ ಪಡಿಸುವ ಭರವಸೆಯನ್ನು ನೀಡಿತು. ಆದಾಯ ತೆರಿಗೆ ವಿನಾಯಿತಿಯಲ್ಲಿ ದೊಡ್ಡಮಟ್ಟದ ಏರಿಕೆಯೂ ಮಧ್ಯಮ ವರ್ಗವೇ ಹೆಚ್ಚಾಗಿರುವ ದೆಹಲಿಯಂತಹ ನಗರದ ಮತದಾರರ ಮೇಲೆ ಪ್ರಭಾವ ಬೀರಿರಬಹುದು. ಎಲ್ಲ ವರ್ಗಗಳ ಜನರನ್ನು ಮೋಡಿ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂಬುದನ್ನು ಫಲಿತಾಂಶ ತೋರಿಸುತ್ತಿದೆ. ಎಎಪಿ ನೇತೃತ್ವದ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ನಿರಂತರವಾಗಿ ಸಂಘರ್ಷ ನಡೆಯುತ್ತಲೇ ಇತ್ತು .ದೆಹಲಿ ಸರ್ಕಾರದ ಕಾರ್ಯ ನಿರ್ವಹಣೆಯೇ ಕಷ್ಟಕರ ಎಂಬ ಸ್ಥಿತಿ ನಿರ್ಮಾಣ ಆಗಿತ್ತು. ಹಾಗಾಗಿ ,ಡಬಲ್ ಎಂಜಿನ್ ಸರ್ಕಾರ ಎಂಬ ಘೋಷಣೆಯು ಜನರ ಮೇಲೆ ಪ್ರಭಾವ ಬೀರಿರುವ ಸಾಧ್ಯತೆಯೂ ಇದೆ.
ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಥಾನವನ್ನು ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ. ಆದರೆ ಆ ಪಕ್ಷ ಗಳಿಸಿದ ಮತ ಪ್ರಮಾಣದಲ್ಲಿ ಸ್ವಲ್ಪ ಏರಿಕೆ ಆಗಿದೆ. ಕಾಂಗ್ರೆಸ್ ಜೊತೆಗೆ ಮೈತ್ರಿ ಸಾಧ್ಯವಾಗಿದ್ದಿದ್ದರೆ ಎಎಪಿಯ ಸ್ಥಿತಿ ಈಗಿರುವುದಕ್ಕಿಂತ ಉತ್ತಮವಾಗಿರುತ್ತಿತ್ತು ಎಂದು ಹೇಳಲಾಗುತ್ತಿದೆ. ಮತದಾರರ ಆಯ್ಕೆಯನ್ನು ಈ ರೀತಿಯ ಲೆಕ್ಕಾಚಾರದ ಮೂಲಕ ಅಳೆಯಲು ಸಾಧ್ಯವಿಲ್ಲ. ಅದೇನೇ ಇದ್ದರೂ ಎಎಪಿಗೆ ನೆರವಾಗುವುದು ಕಾಂಗ್ರೆಸ್ ಪಕ್ಷಕ್ಕೆ ಬೇಕಾಗಿರಲಿಲ್ಲ. ಎಎಪಿಗೆ ಹಾನಿ ಉಂಟು ಮಾಡಿ ಅದರ ಬಲ ಕುಗ್ಗಿಸುವುದು ತನ್ನ ಹಿತಾಸಕ್ತಿಗೆ ಪೂರಕ ಎಂಬ ಭಾವನೆ ಕಾಂಗ್ರೆಸ್ ನಲ್ಲಿ ಇತ್ತು. ಬಿಜೆಪಿ ಏತರ ಪಕ್ಷಗಳ ಕೂಟವಾಗಿರುವ ‘ಇಂಡಿಯಾ’ ಮೇಲೆ ಈ ಫಲಿತಾಂಶದ ಪರಿಣಾಮ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.