ಭಾಷೆ ಬೆಳೆಯಲು ಬೇಕಿರುವುದು ಭಾವುಕ ಆವೇಶವಲ್ಲ, ಅರಿವಿನ ಇಚ್ಛಾ ಶಕ್ತಿಭಾಷಾ ಸಾಮರ್ಥ್ಯ ಮತ್ತು ಅಂಧನಂಬಿಕೆ

ಭಾಷೆ ಬೆಳೆಯಲು ಬೇಕಿರುವುದು ಭಾವುಕ ಆವೇಶವಲ್ಲ, ಅರಿವಿನ ಇಚ್ಛಾ ಶಕ್ತಿ
ಭಾಷಾ ಸಾಮರ್ಥ್ಯ ಮತ್ತು ಅಂಧನಂಬಿಕೆ

ಇಂದಿನ ಶಿಕ್ಷಣದ ಕುರಿತು ಮಾತನಾಡುವ ಸಂದರ್ಭದಲ್ಲಿ ಭಾಷೆಯ ಬಗ್ಗೆ ಪ್ರಸ್ತಾಪಿಸದೆ ಏನನ್ನು ಮಾತನಾಡಲಾಗುವುದಿಲ್ಲ. ಏಕೆಂದರೆ ಭಾಷೆಯ ಬಗ್ಗೆ ಜನಸಾಮಾನ್ಯರಿಗಷ್ಟೇ ಅಲ್ಲ ಶಿಕ್ಷಣ ಪಡೆದವರಲ್ಲೂ ಹೆಚ್ಚಿನವರಲ್ಲಿ ಕೆಲವು ತಪ್ಪು ಕಲ್ಪನೆಗಳಿವೆ .ಭಾಷೆ ಎಂಬುದು ಭಾವ- ಬುದ್ಧಿಯ ಸಂವಹನ ಮಾಧ್ಯಮ ಎಂಬ ಅರಿವಿಗಿಂತ ಭಿನ್ನವಾಗಿ ಭಾಷೆಯೇ ಬುದ್ಧಿವಂತಿಕೆ ಎಂಬ ಕುರುಡು ನಂಬಿಕೆ ಬೇರೂರಿ ಬೆಳೆದಿದೆ .ಈ ನಂಬಿಕೆ ಎಲ್ಲ ಭಾಷೆಗಳ ಬಗ್ಗೆಗೂ ಅಲ್ಲ, ಅದು ಒಂದು ಭಾಷೆಯ ಬಗ್ಗೆ ಅಥವಾ ಕೆಲವು ಭಾಷೆಗಳ ಬಗ್ಗೆ ಮಾತ್ರ ಇರುವ ಅಂಧ ನಂಬಿಕೆ.
ಈಗ ಕನ್ನಡಿಗರಿಗೆ ಸೀಮಿತವಾದ ನೆಲೆಯಲ್ಲಿ ಯೋಚಿಸುವುದಾದರೆ , ಬಹುತೇಕ ಕನ್ನಡಿಗರಿಗೆ ಇಂಗ್ಲಿಷ್ ಬಗ್ಗೆ ಇರುವ ಭಾವನೆ ಅಂತದ್ದು. ಇಂಗ್ಲಿಷ್ ಮಾತನಾಡಿದರೆ ಸಾಕು, ಅವರೆದುರಿಗೆ ಎಂಥ ಪ್ರಬುದ್ಧ ಕನ್ನಡ ಪಂಡಿತನು ಕೀಳರಿಮೆಯಲ್ಲಿ ನರಳುತ್ತಾನೆ. ಇಂಗ್ಲಿಷ್ ಭಾಷೆಯೇ ಬುದ್ದಿವಂತಿಕೆ ಎಂದು ನಂಬಿದ ಅಂಧಶ್ರದ್ದೆಯ ದಾಸ್ಯ ಬುದ್ಧಿಯೇ ಇದಕ್ಕೆ ಕಾರಣ. ಅದೇ ರೀತಿ ಸಂಸ್ಕೃತ ಭಾಷೆಯ ಬಗೆಗೂ ಇಂಥದ್ದೇ ಕೆಲವು ತಪ್ಪು ನಂಬಿಕೆಗಳು ಬೇರೂರಿ ಬೆಳೆದಿವೆ. ಹೀಗಾಗಿ, ಈ ಎರಡು ಭಾಷೆಗಳ ಎದುರಲ್ಲಿ ಬಹುತೇಕ ಕನ್ನಡಿಗರು ಕೀಳರಿ ಮೆಯಲ್ಲಿ ನರಳುತ್ತಾರೆ.


ತಾವು ತಮ್ಮ ನೆಲದ ನುಡಿಯಲ್ಲಿ ಎಷ್ಟೇ ಪರಿಣತಿ ಪಡೆದಿದ್ದರೂ ಅವರ ಎದುರು ನಾಲ್ಕು ಜನ ಇಂಗ್ಲೀಷಿನಲ್ಲಿ ಮಾತನಾಡುವುದಕ್ಕೆ ತೊಡಗಿದರೆ ಸಾಕು ಅವರು ಏನು ಗೊತ್ತಿಲ್ಲದ ಮೂಕ ಪ್ರೇಕ್ಷಕರಂತೆ ನಡೆದುಕೊಳ್ಳುತ್ತಾರೆ. ಇದಕ್ಕೆ ಕನ್ನಡದ ಬಗ್ಗೆ ಅವರಿಗೆ ಇರುವ ಕೀಳರಿಮೆಯ ಭಾವವು ಕಾರಣ. ಇಂಗ್ಲಿಷ್ ಬಗ್ಗೆ ಅವರಿಗಿರುವ Platelets ಭಯವು ಕಾರಣ. ಇದು ಎರಡು ನೆಲೆಗಳಲ್ಲಿ ವಿವರಿಸಿಕೊಳ್ಳಬೇಕಾದ ಸಮಸ್ಯೆ .ಒಂದು,ಜನಸಾಮಾನ್ಯರ ನೆಲೆ. ಇದು ಇಂಗ್ಲಿಷ್ ಗೊತ್ತಿಲ್ಲದ ಕನ್ನಡ ಜನರ ಮನೋ ಅರಿಮೆಯ ಸ್ಥಿತಿ. ಇನ್ನೊಂದು, ಇಂಗ್ಲೀಷ್ ಕಲಿತವರು. ಆ ಮುಖೇನ ಕನ್ನಡದ ಬಗ್ಗೆ ಉಪೇಕ್ಷಿತ ಭಾವ ತಳೆದವರು. ಇಂಗ್ಲಿಷ್ ಭಾಷೆಯೇ ಶ್ರೇಷ್ಠ, ಮಿಕ್ಕೆಲ್ಲವೂ ಗೌಣ ಎಂಬ ಮೇಲರಿಮೆಯ ಅಹಂಕಾರಿ ಅಕ್ಷರ ಜ್ಞಾನಿಗಳು.

ಇಂಥವರಿಂದಾಗಿ ಇಂದು ಶಿಕ್ಷಣ ಕ್ಷೇತ್ರದಲ್ಲಿ ಭಾಷಾ ಕಲಿಕೆ, ಭಾಷಾ ಮಾಧ್ಯಮದಲ್ಲಿ ಶಿಕ್ಷಣ ಬೋಧನೆ ಈ ಬಗ್ಗೆ ಗೊಂದಲಗಳು ಉಂಟಾಗಿವೆ. ಇಂಥ ತಪ್ಪು ಗ್ರಹಿಕೆಯ ಪರಿಣಾಮದಿಂದಾಗಿ ಇಡೀ ಶಿಕ್ಷಣ ಕ್ಷೇತ್ರ ನಾಶವಾಗಿದೆ. ಅನ್ನದ ಭಾಷೆ ಎಂಬ ಪದ ಇತ್ತೀಚೆಗೆ ಹೆಚ್ಚು ಪ್ರಯೋಗದಲ್ಲಿದೆ. ಕನ್ನಡಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ, ಕನ್ನಡ ಅನ್ನದ ಭಾಷೆಯಾಗಬೇಕು ಎನ್ನುತ್ತಾರೆ. ಇಂಗ್ಲಿಷ್ ಈಗಾಗಲೇ ಅನ್ನದ ಭಾಷೆಯಾಗಿದೆ ಎಂಬುದು ಅವರ ವಾದ. ಅಂದರೆ, ಬಿಳಿ ಕಾಲರಿನ ಕೆಲಸ ಗಿಟ್ಟಿಸಿ ಕೊಳ್ಳುವುದಕ್ಕೆ ಇಂಗ್ಲಿಷ್ ಸಮರ್ಥ, ಕನ್ನಡ ಸಮರ್ಥವಲ್ಲ ಎಂಬ ಹಿನ್ನೆಲೆಯಲ್ಲಿ ಈ ಪದ ಪ್ರಯೋಗ ನಡೆದಿದೆ. ಆದರೆ ಇಂಗ್ಲಿಷ್ ಭಾಷೆಯ ಬಳಕೆಯೇ ಇಲ್ಲದಿದ್ದ ಚೀನಾ, ಜಪಾನ್, ಜರ್ಮನಿ ಇಂಥ ದೇಶಗಳಲ್ಲಿ ಜನರ ಅನ್ನದ ಭಾಷೆ ಯಾವುದಿತ್ತು? ಈ ಹಿನ್ನೆಲೆಯಲ್ಲಿ ಯೋಚಿಸಿದರೆ, ಇಂಗ್ಲಿಷ್ ಭಾಷೆ ಮಾತನಾ ಡುವವರು ಮಾತ್ರ ಅನ್ನ ತಿನ್ನುತ್ತಾರೆ, ಮಿಕ್ಕವರು ಊಟವನ್ನೇ ಮಾಡುವುದಿಲ್ಲ ಎಂಬ ಅರ್ಥವೇ?


ಕೆಲವು ಉಪಯೋಗಿ ಹುದ್ದೆಗಳಿಗೆ ನಾವು ಸೃಷ್ಟಿಸಿರುವ ಭಾಷಿಕ ವಾತಾವರಣದ ಕಾರಣದಿಂದಾಗಿ ಭಾಷೆಗಳಿಗೆ ಈ ಬಗೆಯ ಭ್ರಮಾತ್ಮಕ ನಂಟು ಬೆಳೆದಿದೆ. ಭಾಷೆಯ ಬೆಳವಣಿಗೆ ಎಂಬುದು ಜನರ ಇಚ್ಛಾ ಶಕ್ತಿಗೆ ಸಂಬಂಧಿಸಿದುದು. ಸಮೃದ್ಧವಾಗಿ ಬೆಳೆದಿದ್ದ ಸಂಸ್ಕೃತ ಮೃತವಾಗಲು ಅಂದರೆ ಜನರ ಆಡು ಭಾಷೆಯಾಗಿ ಉಳಿಯದೆ ಹೋಗಲು ಕಾರಣ ಅದನ್ನು ಮಾತನಾಡುತ್ತಿದ್ದ ಜನ ಅದಕ್ಕೆ ಹಾಕಿಕೊಂಡ ಮಡಿವಂತಿಕೆ. ಲಿಪಿ ಇಲ್ಲದೆಯೂ ಲಕ್ಷಾಂತರ ಜನರ ಆಡು ಭಾಷೆಯಾಗಿ ತುಳು ಇಂದಿಗೂ ಜೀವಂತವಾಗಿ ಉಳಿಯಲು ಬೆಳೆಯಲು ಕಾರಣ, ಅದನ್ನು ಆಡುವ ಜನರ ಇಚ್ಛಾ ಶಕ್ತಿ. ರಾಜ್ಯ ಭಾಷೆಯಾಗಿ ಬೆಳೆದಿದ್ದ ಕನ್ನಡ ಇಂದು ಅನ್ನದ ಭಾಷೆಯಲ್ಲ ಎಂಬ ಭ್ರಮೆಗೆ ಕಾರಣ, ಅದನ್ನು ಆಡುವ ಜನರ ಇಚ್ಛಾಶಕ್ತಿಯ ಕೊರತೆ.
ಬಾವುಕ ಆವೇಶದಿಂದ ಭಾಷೆ ಬೆಳೆಯುವುದಿಲ್ಲ. ನಮ್ಮ ಬದುಕು, ಪರಂಪರೆ, ಸಂಸ್ಕೃತಿ ಎಂಬ ಅರಿವಿನ ಇಚ್ಛಾಶಕ್ತಿ ಇದ್ದಾಗ ಭಾಷೆ ಕಾಲೋಚಿತವಾಗಿ ಬೆಳೆಯುತ್ತದೆ, ಉಳಿಯುತ್ತದೆ. ಹೀಗಾಗಿ, ಕನ್ನಡದ ಅಳಿವಿಗೆ ಕಾರಣ ಕನ್ನಡಿಗರೇ ವಿನಾ ಅನ್ಯರಲ್ಲ. ಕನ್ನಡಿಗರಿಗೆ ಕನ್ನಡದ ಬಗ್ಗೆ ಇರುವ ತಪ್ಪು ಕಲ್ಪನೆಗಳ ಪರಿಣಾಮದ ಕೀಳರಿಮೆಯೇ ಕಾರಣ. ಇಂಗ್ಲಿಷ್, ಹಿಂದಿ, ಸಂಸ್ಕೃತದ ಬಗ್ಗೆ ಇರುವ ಭ್ರಮಾತ್ಮಕ ಭಾವನೆಯೇ ಕಾರಣ.

ಇದನ್ನೂ ಓದಿ:ತಾನೇ ಸೃಷ್ಠಿಸಿಕೊಂಡ ತೊಡಕುಗಳು ಎಎಪಿ ಸೋಲಿಗೆ ಮುಖ್ಯ ಕಾರಣ


ಈ ಎಲ್ಲಾ ಕಾರಣಗಳಿಂದ ಕನ್ನಡವೂ ಕನ್ನಡ ನಾಡಿನಲ್ಲಿ ಕಳೆದು ಹೋಗುತ್ತಿದೆ. ಶಿಕ್ಷಣದಲ್ಲಿ ಕನ್ನಡ ಉಳಿಯುತ್ತಿಲ್ಲ. ಆಡಳಿತ ಕ್ಷೇತ್ರದಲ್ಲಿ ಕನ್ನಡ ಬೆಳೆಯುತ್ತಿಲ್ಲ .ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೇ ಕನ್ನಡ ಮಾತನಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದಕ್ಕೆಲ್ಲಾ ಕಾರಣ ಕನ್ನಡಿಗರು ಮತ್ತು ಕನ್ನಡದ ಜನಪ್ರತಿನಿಧಿಗಳು ಅರ್ಥಾತ್ ಕರ್ನಾಟಕದ ಸರ್ಕಾರ. ನಮ್ಮ ರಾಜಕಾರಣಿಗಳು ಪಕ್ಷಾತೀತವಾಗಿ ಕರ್ನಾಟಕದಲ್ಲಿ ಕನ್ನಡ ಕಾಣೆಯಾಗುವುದಕ್ಕೆ ಕಾರಣರಾಗಿದ್ದಾರೆ. ಸ್ವಾತಂತ್ರ್ಯೋತರ ಭಾರತದಲ್ಲಿ ಉಚಿತ ಶಿಕ್ಷಣ- ಕಡ್ಡಾಯ ಶಿಕ್ಷಣ ಎಂಬ ಯೋಜನೆ ಪ್ರಾರಂಭವಾಯಿತು. ಆಗ ಹೆಚ್ಚಿನದಾಗಿ ಭಾಷಾವಾರು ಪ್ರಾಂತ ರಚನೆಗಳನ್ನು ಆಧಾರವಾಗಿಟ್ಟು ಪ್ರಾದೇಶಿಕ ಭಾಷೆಗಳಿಗೆ ಶಿಕ್ಷಣದಲ್ಲಿ ಆದ್ಯತೆ ನೀಡಲಾಗಿತ್ತು. ಪ್ರಾದೇಶಿಕ ಭಾಷೆಯಾಗಿ ಪ್ರತಿ ರಾಜ್ಯದಲ್ಲಿಯೂ ಆಯಾ ಪ್ರದೇಶದ ಭಾಷೆಯನ್ನು ಕಲಿಯಲೇಬೇಕಾದ ಭಾಷೆಯಾಗಿ ಕಲಿಸಲಾಗುತ್ತಿತ್ತು. ಕಾರಣ, ಈಗ ಶಿಕ್ಷಣವು ಸರ್ಕಾರಗಳ ಜವಾಬ್ದಾರಿಯಾಗಿತ್ತು. ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಿರಲಿಲ್ಲ. ಇದ್ದರೂ ಆಗಲು ಅವು ಶಿಕ್ಷಣವನ್ನು ಒಂದು ಸೇವಾ ಮನೋಭಾವದಲ್ಲಿ ನಡೆಸುತ್ತಿದ್ದವು. ಆದರೆ ದಿನದಿಂದ ದಿನಕ್ಕೆ ಶಿಕ್ಷಣ ನೀಡುವ ಕರ್ತವ್ಯ ಪ್ರಜ್ಞೆಯಿಂದ ಸರ್ಕಾರಗಳು ಹಿಂದೆ ಸರಿಯಲು ತೊಡಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಬಾಗಿಲು ತೆರೆದವು. ಆಗ ಶಿಕ್ಷಣ ನೀಡುವುದು ಸರ್ಕಾರಗಳ ಕರ್ತವ್ಯ ಎಂಬ ಪ್ರಜ್ಞೆ ಮಾಯವಾಯಿತು. ಉಚಿತ ಶಿಕ್ಷಣ- ಕಡ್ಡಾಯ ಶಿಕ್ಷಣ ಎಂಬ ಯೋಚನೆ ಅರ್ಥ ಕಳೆದುಕೊಂಡಿತು. ಶಿಕ್ಷಣದ ಖಾಸಗೀಕರಣದಿಂದಾಗಿ ಅದೊಂದು ಉದ್ಯಮ ಕ್ಷೇತ್ರವಾಯಿತು.


ಯಾವಾಗ ಶಿಕ್ಷಣ ಕ್ಷೇತ್ರವು ಉದ್ಯಮ ಕ್ಷೇತ್ರವಾಯಿತೋ ಬಂಡವಾಳ ಹೂಡುವ ಶಕ್ತಿಯುಳ್ಳವರು ಇಲ್ಲಿ ವ್ಯಾಪಾರಕ್ಕೆ ನಿಂತರು. ಅನ್ನದ ಭಾಷೆಯ ಭ್ರಮೆಯಲ್ಲಿ ಭಾಷೆಗಳನ್ನು ವ್ಯಾಪಾರದ ಸರಕಾಗಿಸಿಕೊಂಡರು. ಸಂವಿಧಾನಾತ್ಮಕವಾದ ಶಿಕ್ಷಣ ನೀತಿಯನ್ನೇ ನಾಶ ಮಾಡುತ್ತಾ ನಡೆದರು. ಅವರ ತಾಳಕ್ಕೆ ತಕ್ಕಂತೆ ಸರ್ಕಾರಗಳು ಕುಣಿಯುತ್ತ ಹೋದವು. ಜನರು ಆ ಭ್ರಮೆಯಲ್ಲಿ ತೇಲುತ್ತಾ ಬಲಿಪಶುಗಳಾದರು.


ಇಂದು ಉಳ್ಳವರಿಗೆ ಶಿಕ್ಷಣ, ಬಡವರಿಗೆ ಕೂಲಿ ಬದುಕು ಎಂಬ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ, ಬಹುತ್ವ ಭಾರತದ ಸಂವಿಧಾನಾತ್ಮಕ ಶಿಕ್ಷಣ ನೀತಿಯು ವ್ಯಾಪಾರೀಕರಣದ ಕ್ಷೇತ್ರವಾಗಿದೆ. ಈ ನಡುವೆ ಉತ್ತರ -ದಕ್ಷಿಣ ಎಂಬ ಭೇದೋಪಾಯದಲ್ಲಿ ಕೆಲವೇ ರಾಜ್ಯಗಳಿಗೆ ಸೀಮಿತವಾಗಿದ್ದ ಹಿಂದಿ ಭಾಷೆ ಬೇರೆ ರಾಜ್ಯಗಳಲ್ಲಿರುವ ರಾಜ್ಯ ಭಾಷೆಗಳ ಮೇಲೆ ಅಕ್ರಮಣಕ್ಕೆ ತೊಡಗಿದೆ. ಅದಕ್ಕೆ ಕೇಂದ್ರ ಸರ್ಕಾರದ ನೇರ ಬೆಂಬಲವು ಇದೆ .ಕೇಂದ್ರದ ಸಂಸ್ಥೆಗಳು ನಡೆಸುವ ಪರೀಕ್ಷೆಗಳಿಗೆ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಿರುವುದು, ಹಿಂದಿಯನ್ನು ಮುಂದೆ ತಂದಿರುವುದು, ‘ಹಿಂದಿ ದಿವಸ್’ ಅನ್ನು ರಾಷ್ಟ್ರೀಯ ಆಚರಣೆಯಾಗಿಸಿರುವುದು …ಹೀಗೆ ಒಕ್ಕೂಟ ವ್ಯವಸ್ಥೆಯ ಇಂಥ ಹಲವಾರು ವಿರೋಧಿ ನಿಲುವುಗಳು ಈ ಅಕ್ರಮಣದ ಮುಖಗಳಾಗಿವೆ. ಇದನ್ನು ಪ್ರಶ್ನಿಸುವ ಏಕೈಕ ಮಾರ್ಗ, ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿ ದ್ವಿಭಾಷಾ ನೀತಿಯನ್ನು ಒಪ್ಪಿಕೊಳ್ಳುವುದೇ ಆಗಿದೆ.


ಖಾಸಗಿ ಶಿಕ್ಷಣ ಸಂಸ್ಥೆಗಳ ಹಿಡಿತದಿಂದ ಶಿಕ್ಷಣವನ್ನು ಬಿಡಿಸಿ ಅದನ್ನು ಉಚಿತ ಶಿಕ್ಷಣ -ಕಡ್ಡಾಯ ಶಿಕ್ಷಣದ ನೈತಿಕ ಹೊಣೆಗಾರಿಕೆಯಾಗಿ ಸರ್ಕಾರಗಳು ಕರ್ತವ್ಯ ನಿರ್ವಹಿಸಬೇಕು. ಪ್ರಜೆಗಳ ಮೂಲಭೂತ ಹಕ್ಕಾಗಿರುವ ಶಿಕ್ಷಣವನ್ನು ನೀಡಲಾಗದ ರಾಜ್ಯ ಸರ್ಕಾರಗಳಾಗಲಿ ಕೇಂದ್ರ ಸರ್ಕಾರವಾಗಲಿ ಯಾರಿಗಾಗಿ ಆಡಳಿತ ನಡೆಸುತ್ತಿವೆ, ಯಾತಕ್ಕಾಗಿ ಆಡಳಿತ ನಡೆಸುತ್ತಿವೆ ಎಂಬ ಮೂಲಭೂತ ಪ್ರಶ್ನೆಗಳು ಏಳುತ್ತಿವೆ. ಒಂದು ಮೂಲಭೂತ ಹಕ್ಕನ್ನು ನೀಡಲಾಗದ ಸರ್ಕಾರಗಳ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ಹೇಳುತ್ತಿದೆ. ಸರ್ಕಾರಗಳು ಪ್ರಜಾಪ್ರಭುತ್ವವಾದಿ ನಿಲುವುಗಳಿಗೆ ಬದ್ದವಾಗಿಲ್ಲದ ಮೇಲೆ ಪ್ರಜಾಪ್ರಭುತ್ವದ ಸರ್ಕಾರಗಳು ಎಂಬ ಹಣೆಪಟ್ಟಿ ಬೇಕೆ? ಶಿಕ್ಷಣ, ಆರೋಗ್ಯ, ಉದ್ಯೋಗ ಎಲ್ಲವೂ ವ್ಯಾಪಾರಿಕರಣದ ಸರಕುಗಳಾದರೆ ಸರ್ಕಾರದ ಹೊಣೆಯ ನೈತಿಕತೆಯನ್ನು ಪ್ರಶ್ನಿಸುವುದು ಪ್ರಜೆಗಳ ಕರ್ತವ್ಯವಲ್ಲವೇ? ಎಲ್ಲಿದೆ ಭೂತ ? ಏನಾಗಿದೆ ವರ್ತಮಾನ ? ಏನಾಗಲಿದೆ ದೇಶ ? ಈ ಪ್ರಶ್ನೆಗಳಿಗೆ ನಾವೆಲ್ಲರೂ ಉತ್ತರದಾಯಿಗಳಲ್ಲವೇ?

Leave a Comment